Wednesday, January 29, 2020

ಬಾಲ್ಯ ಕಾಲದ ನೆನಪುಗಳು – ೫೫


ಇಂಗ್ಲಿಷ್ ಮೀಡಿಯಂನಲ್ಲಿ ಓದಲು ಅದೃಷ್ಟ ಪಡೆದ ನಮ್ಮ ತರಗತಿಯ ಸುಮಾರು ೪೦ ವಿದ್ಯಾರ್ಥಿಗಳು ತರಗತಿಯ ನಾಲ್ಕು ವಿಭಾಗಗಳಲ್ಲಿ ಮೊದಲನೆಯದಾದ ಸೆಕ್ಷನ್ ನಲ್ಲಿ ಸೇರಿಸಲ್ಪಟ್ಟೆವು. ನಮಗೆ ಸೂರ್ಯನಾರಾಯಣ ರಾವ್ (SSR) ಅವರನ್ನು ಕ್ಲಾಸ್ ಟೀಚರ್ ಆಗಿ ಪಡೆಯುವ ಅದೃಷ್ಟವೂ ದೊರೆಯಿತು. ಆದರೆ ನಮಗೆ ಶ್ರೀನಿವಾಸ ಅಡಿಗರಿಂದ ಹಿಂದಿ ಪಾಠ ಹೇಳಿಸಿಕೊಳ್ಳುವ ಅದೃಷ್ಟ ದೊರೆಯಲಿಲ್ಲ. ಬದಲಿಗೆ ಅದೇ ವರ್ಷ ಹೊಸದಾಗಿ ಬಂದ ಟಿ ಆರ್ ಪಾಂಡುರಂಗ ನಮಗೆ ಹಿಂದಿ ಕ್ಲಾಸ್ ತೆಗೆದುಕೊಳ್ಳ ತೊಡಗಿದರು. ನಮ್ಮ ಶಾಲೆಯ ಹೆಡ್ಮಾಸ್ಟರ್ (HM) ಶ್ರೀನಿವಾಸಮೂರ್ತಿಯವರು ತುಂಬಾ ಓವರ್ ಕ್ವಾಲಿಫೈಡ್ ಆಗಿದ್ದರು. ಅವರು ತಮ್ಮ ಹೆಸರ ಮುಂದೆ ಎಂ . ಎಂ ಕಾಂ ಎಂ ಎಡ್ ಜೋಡಿಸಿಕೊಂಡಿದ್ದರು. ನಮ್ಮ ಶಾಲೆಯಲ್ಲಿ ಪ್ರಾಯಶಃ ಬೇರೆ ಯಾವ ಹೈಸ್ಕೂಲಿನಲ್ಲೂ ಇರದ ಕಾಮರ್ಸ್ ಸಬ್ಜೆಕ್ಟ್ ಇದ್ದ ಪ್ರತ್ಯೇಕ ವಿಭಾಗವಿತ್ತು. ಸೆಕ್ಷನ್ನಿಗೆ ನಮ್ಮ ಹೆಡ್ ಮಾಸ್ಟರ್ ಅಲ್ಲದೇ ಎಸ್ ರಾಮರಾವ್ (SR) ಎಂಬ ಬಿ ಕಾಂ ಓದಿದ ಮೇಷ್ಟರಿದ್ದರು. ಅಲ್ಲದೇ ಇನ್ನೊಬ್ಬ ಪ್ರಸ್ಡಿದ್ಧಿ ಪಡೆದ ಮೇಷ್ಟರಾದ ಆರ್ ವಿ ಶ್ರೀನರಸಿಂಹಯ್ಯ (RVS) ಬಿ ಎಸ್ ಸಿ, ಬಿ ಕಾಂ, ಬಿ ಎಡ್ ಪದವಿ ಹೊಂದಿದ್ದರು. ದುರ್ಗಿಗುಡಿಯಲ್ಲೇ ವಾಸ  ಮಾಡುತ್ತಿದ್ದ RVS ಅವರ ವಿಶೇಷವೆಂದರೆ ಅವರ ತಲೆಯಲ್ಲಿದ್ದ ಜುಟ್ಟನ್ನು ಕಪ್ಪು ಟೋಪಿಯಿಂದ ಮುಚ್ಚಿ ಕೋಟು ಮತ್ತು ಟೈ ಧರಿಸಿ ಗತ್ತಾಗಿ ಶಾಲೆಗೆ ಬರುವುದು!
ಮೂಲೆಗೆ ಬಿದ್ದ ಸಂಸ್ಕೃತ ಮತ್ತು ಅದರ ಮೇಷ್ಟ್ರು
ನಮಗೆ ಸೆಕೆಂಡ್ ಲ್ಯಾಂಗ್ವೇಜಿಗೆ ಕನ್ನಡ ಮತ್ತು ಸಂಸ್ಕೃತ ಆಪ್ಷನ್ ಇತ್ತು. ಸಂಸ್ಕೃತ ಒಂದು ಸ್ಕೋರಿಂಗ್ ಸಬ್ಜೆಕ್ಟ್ ಆದ್ದರಿಂದ ನಾನು ಅದಕ್ಕೆ ಸೇರಿಕೊಂಡೆ. ಆದರೆ ನಮ್ಮ ಶಾಲೆಯಲ್ಲಿ ಸಂಸ್ಕೃತ ಮತ್ತು ಅದರ ಮೇಷ್ಟರಿಗೆ ಯಾವುದೇ ಬೆಲೆಯಿರಲಿಲ್ಲ. ಶಾಲೆಯಿಂದ ಹೊರಗಿದ್ದ ಆಡಿಟೋರಿಯಂ ಹತ್ತಿರವಿದ್ದ ಒಂದು ಶೆಡ್ಡಿನಲ್ಲಿ ನಂಜುಂಡ ಶಾಸ್ತ್ರಿ ಎಂಬ ವಯಸ್ಸಾದ ಪಾರ್ಟ್-ಟೈಮ್ ಮೇಸ್ಟರು ತರಗತಿ ನಡೆಸುತ್ತಿದ್ದರು. ಅವರ ತಿಂಗಳ ಸಂಬಳ ೩೦ ರೂಪಾಯಿ ಮಾತ್ರಾ! ಅಲ್ಲದೇ ಅವರಿಗೆ ಟೀಚರ್ಸ್ ರೂಮಿಗೂ ಪ್ರವೇಶವಿರಲಿಲ್ಲ. ಶಾಸ್ತ್ರಿಗಳ ತಮ್ಮ ಶೃಂಗೇಶ್ವರ ಶಾಸ್ತ್ರಿ ಅವರು ಶೃಂಗೇರಿಯಲ್ಲಿ ವಾಸಮಾಡುತ್ತಾ ಹರಿಕಥಾ ವಿದ್ವಾಂಸರಾಗಿ ಪ್ರಸಿದ್ಧಿ ಪಡೆದಿದ್ದರು. ದುರ್ಗಿಗುಡಿಯಲ್ಲಿ ಒಂದು ಸಣ್ಣ ಮನೆಯಲ್ಲಿ ವಾಸಮಾಡುತ್ತಿದ್ದ ನಂಜುಂಡ ಶಾಸ್ತ್ರಿ ಅವರಿಗೆ ಮಕ್ಕಳಿರಲಿಲ್ಲ. ಮಾತ್ರವಲ್ಲ ಅವರ ಹೆಂಡತಿಗೆ ಬುದ್ಧಿ ಭ್ರಮಣೆಯಾಗಿದ್ದಿತು. ಮುಂದೆ ನನಗೆ ತಿಳಿದು ಬಂದಂತೆ ಅವರ ಕಷ್ಟ ಹೇಳ ತೀರದಾಗಿತ್ತು. ಆದರೆ ಶಾಸ್ತ್ರಿಗಳ ಕೃಪೆಯಿಂದ ನನಗೆ ಸಂಸ್ಕೃತ ಸಬ್ಜೆಕ್ಟ್ ಒಂದು ಅದೃಷ್ಟವನ್ನೇ ತಂದಿತು. ಬಗ್ಗೆ ಮುಂದೆ ಬರೆಯುತ್ತೇನೆ.
ಸುಂದರ ಮೂರ್ತಿ ಖಜಾನೆ ಕೃಷ್ಣಮೂರ್ತಿ!
ಸಂಸ್ಕೃತ ಎಷ್ಟು ಮೂಲೆ ಸೇರಿತ್ತೋ ಅಷ್ಟೇ ಮೇಲೇರಿತ್ತು ನ್ಯಾಷನಲ್ ಹೈಸ್ಕೂಲಿನ ಬಯಾಲಜಿ ಸಬ್ಜೆಕ್ಟ್. ಅದಕ್ಕೆ ಕಾರಣ ಅದರ ಮೇಷ್ಟ್ರು ಖಜಾನೆ ಕೃಷ್ಣಮೂರ್ತಿಯವರು (KKM). ಕೆ ಕೆ ಎಂ ಅವರು ನಾನು ನೋಡಿದ ಮೇಷ್ಟರುಗಳಲ್ಲೇ ಅತ್ಯಂತ ಸ್ಪುರದ್ರೂಪಿ ಹಾಗೂ ಪ್ರತಿಭಾವಂತ ವ್ಯಕ್ತಿಯಾಗಿದ್ದರು. ಅತ್ಯಂತ ಆಕರ್ಷಕವಾಗಿ ಡ್ರೆಸ್ ಮಾಡಿ ಟೈ ಕಟ್ಟಿ ಅಷ್ಟೇ ಸ್ಟೈಲಾಗಿ ಇಂಗ್ಲೀಷಿನಲ್ಲಿ ಬಯಾಲಜಿ ಪಾಠ ಮಾಡುತ್ತಿದ್ದ ಕೆ ಕೆ ಎಂ ಅವರ ವ್ಯಕ್ತಿತ್ವ ಇಂದಿಗೂ ನನ್ನ ಕಣ್ಣ ಮುಂದೆ ಹಚ್ಚ ಹಸುರಾಗಿದೆ. ಅವರ ಇಂಗ್ಲಿಷ್ ಭಾಷೆಯ ಮೇಲಿನ ಕಮ್ಯಾಂಡ್ ಹಾಗೂ ಬಯಾಲಜಿ ಸಬ್ಜೆಕ್ಟ್ ಪಾಠ ಮಾಡುತ್ತಿದ್ದ ರೀತಿ ಅದ್ಭುತವಾಗಿತ್ತು. ಅವರು ಖ್ಯಾತ ನಾಟಕಕಾರ ಟಿ ಪಿ ಕೈಲಾಸಂ ಅವರ ನಾಟಕಗಳನ್ನು ರಂಗದ ಮೇಲೆ ಅದ್ಭುತವಾಗಿ ಆಡಿಸುತ್ತಿದ್ದರು ಮತ್ತು ನಟಿಸುತ್ತಿದ್ದರು. ಹಾಗೆಯೇ ಏಕಪಾತ್ರಾಭಿನಯದಲ್ಲೂ ಎತ್ತಿದ ಕೈ ಆಗಿದ್ದರು. ನಮ್ಮಶಾಲೆಯ ವಾರ್ಷಿಕೋತ್ಸವದಲ್ಲಿ ಅವರು ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಕೊಟ್ಟು ನಾಟಕಗಳನ್ನು ಹಾಗೂ ಪಿ ನಯ್ಯರ್ ಅವರ ಹಿಂದಿ ಸಿನೆಮಾಗಳ ಕವ್ವಾಲಿ ಹಾಡುಗಳನ್ನು ಹಾಡಿಸುತ್ತಿದ್ದ ಸಂಭ್ರಮಗಳನ್ನು ಎಂದೂ ಮರೆಯುವಂತಿಲ್ಲ.
ಕೆ ಕೆ ಎಂ ಅವರ ಶ್ರೀ ಕೃಷ್ಣ ಲೀಲಾ!
ಕೆ ಕೆ ಎಂ  ಅವರ ವ್ಯಕ್ತಿತ್ವದ ಇನ್ನೊಂದು ಮುಖವೂ ಅಷ್ಟೇ ಆಕರ್ಷಕವಾಗಿತ್ತೆಂದು ಹೇಳಲೇ ಬೇಕು. ಅವರ ಸ್ಪುರದ್ರೂಪಿ ಹಾಗೂ ಪ್ರತಿಭಾವಂತ ವ್ಯಕ್ತಿತ್ವ ಆಗಿನ ತರುಣಿಯರನ್ನು ಆಕರ್ಷಿಸುತ್ತಿದ್ದರಲ್ಲೇನು ಆಶ್ಚರ್ಯವಿರಲಿಲ್ಲ. ಹಾಗೆಂದು ಅದೇನು ಒನ್-ವೇ ಟ್ರಾಫಿಕ್ ಕೂಡ ಆಗಿರಲಿಲ್ಲ! ಕೆ ಕೆ ಎಂ  ಅವರೂ ಕೂಡಾ ಆ ಆಕರ್ಷಣೆಗೆ ಸೂಕ್ತ ಪ್ರತಿಕ್ರಿಯೆ ಕೊಡುತ್ತಿದ್ದಿರಬೇಕು. ಪರಿಣಾಮವಾಗಿ ಅವರ ಪ್ರಣಯ ಪ್ರಸಂಗಗಳ ವಿವಿಧ ಕಥೆಗಳು ಶಾಲೆಯಲ್ಲಿ ಹರಡುತ್ತಲೇ ಇದ್ದವು. ನಾವೇ ಎಷ್ಟೋ ಬಾರಿ ಮೇಷ್ಟರು ನಮಗೆ ಪಾಠ ಮಾಡುತ್ತಿದ್ದಾಗ ಸುಂದರ ತರುಣಿಯರು ಶಾಲೆಗೆ ಬಂದು ಟೀಚರ್ಸ್ ರೂಮಿನಲ್ಲಿ ಅವರಿಗಾಗಿ ಕಾಯುತ್ತಿದ್ದನ್ನು ನೋಡಿದ್ದೆವು.  ಅದು ನಮ್ಮ ಹೆಡ್ಮಾಸ್ಟರಿಗೇನು ಇಷ್ಟದ ವಿಷಯವಾಗಿರಲಿಲ್ಲ. ಆದರೆ ನಮ್ಮ ಸಂಸ್ಕೃತ ಮೇಷ್ಟರನ್ನು ಟೀಚರ್ಸ್ ರೂಮಿಗೆ ಬರಲು ಅವಕಾಶ ನೀಡದ ಅವರಿಗೆ ಈ ಸುಂದರ ಪುರುಷ ಕೆ ಕೆ ಎಂ  ಅವರನ್ನು ನೋಡಲು ಬರುತ್ತಿದ್ದ ಸುಂದರ ಸ್ತ್ರೀಯರಿಗೆ ಪ್ರವೇಶ ನಿರಾಕರಿಸಲಾಗಲೇ ಇಲ್ಲ! ಜೈ ಶ್ರೀಕೃಷ್ಣ!
ವಿದ್ವಾನ್ ಕೆ ವೆಂಕಟರಮಣ ಭಟ್ಟ (KVB)
ಕೆ ವೆಂಕಟರಮಣ ಭಟ್ಟ (KVB) ಅವರು ಅತ್ಯಂತ ಪಾಂಡಿತ್ಯಪೂರ್ಣ ಕನ್ನಡ ವಿದ್ವಾಂಸರಾಗಿದ್ದರು. ಮೈಸೂರು ಪೇಟ, ಕೋಟು ಮತ್ತು ಕಚ್ಚೆ ಪಂಚೆ ಧರಿಸಿ ಶಾಲೆಗೆ ಬರುತ್ತಿದ್ದ ಮೇಷ್ಟರು ಅಷ್ಟೇ ವಿಶಿಷ್ಟವಾಗಿ ಕನ್ನಡ ಬೋಧನೆ ಮಾಡುವುದಕ್ಕೆ ಹೆಸರು ಪಡೆದಿದ್ದರು. ಅವರ ವ್ಯಕ್ತಿತ್ವ ಮತ್ತು ಉಡುಗೆ ಪ್ರಸಿದ್ಧ ಕನ್ನಡ ಸಾಹಿತಿ ಬಿ ಎಂ ಶ್ರೀಕಂಠಯ್ಯನವರನ್ನು ಹೋಲುತ್ತಿತ್ತು. ನನಗೆ ಅವರ ಕೈಯಲ್ಲಿ ಕನ್ನಡ ಪಾಠ ಹೇಳಿಸಿಕೊಳ್ಳಲಾಗಲಿಲ್ಲವೆಂಬ ಕೊರತೆ ಇಂದಿಗೂ ಮರೆಯಲಾಗುತ್ತಿಲ್ಲ. ನಮ್ಮ ಇನ್ನೊಬ್ಬ ಸೈನ್ಸ್ ಮೇಷ್ಟ್ರಾದ ಟಿ ಎಸ್ ರಾಮ್ ಕುಮಾರ್ (TSR)  ಎಂ ಎಸ್ ಸಿ ಪದವೀಧರರಾಗಿದ್ದರು. ತುಂಬಾ ಸ್ಟೈಲಾಗಿ ಡ್ರೆಸ್  ಮಾಡುತ್ತಿದ್ದ TSR ಅಷ್ಟೇ ಚೆನ್ನಾಗಿ ಹಾಗೂ ಸ್ವಾರಸ್ಯವಾಗಿ ಪಾಠ ಮಾಡುತ್ತಿದ್ದರು. ಅವರಿಗೆ ಇಂಗ್ಲಿಷ್ ಸಿನೆಮಾಗಳ ಕಥೆಯನ್ನು ಸ್ವಾರಸ್ಯವಾಗಿ ಹೇಳುವ ಕಲೆ ಸಾಧಿಸಿತ್ತು. ಆಗ ವಿನಾಯಕ ಟಾಕೀಸಿನಲ್ಲಿ ಸೈಕೋ (Psycho) ಎಂಬ ಇಂಗ್ಲಿಷ್ ಸಿನಿಮಾ ಬಂದಿತ್ತು. ಆ ಸಿನಿಮಾದ ಭಯಾನಕ ಕಥೆಯನ್ನು ಎಷ್ಟು ಚೆನ್ನಾಗಿ ಹೇಳಿದರೆಂದರೆ ನಮಗೆ ಕ್ಲಾಸ್ ರೂಮಿನಲ್ಲೇ ನಡುಕ ಬರುವಂತಾಯಿತು!
ನಮ್ಮ ಶಾಲೆಯ ವಿದ್ಯಾರ್ಥಿಗಳ ವಿಕೃತ ಸೃಜನಶೀಲತೆ (Creativity)!
ನಮ್ಮ ಶಾಲೆಯಲ್ಲಿ ಎಲ್ಲಾ ಮೇಷ್ಟರುಗಳನ್ನೂ ಅವರ ಇನಿಶಿಯಲ್ಸ್ ಮೂಲಕ ಹೆಸರಿಸಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳು ಆ ಇನಿಶಿಯಲ್ಸ್ ಗಳನ್ನು ತಮ್ಮದೇ ಆದ ರೀತಿಯಲ್ಲಿ ಆಯಾ ಮೇಷ್ಟರ ಸ್ವಭಾವ ಅಥವಾ ಸ್ವರೂಪದ ಆಧಾರದ ಮೇಲೆ ವಿಸ್ತರಿಸುತ್ತಿದ್ದರು. ಉದಾಹರಣೆಗೆ ಎ ಮಂಜಪ್ಪ (AM) ಎಂಬ ಮೇಷ್ಟ್ರು ಎಂ ಎ, ಎಂ ಎಡ್ ಪದವೀಧರರಾಗಿದ್ದರು. ತುಂಬಾ ದಢೂತಿ (ಸ್ಥೂಲಕಾಯ) ವ್ಯಕ್ತಿತ್ವ ಹೊಂದಿದ್ದ ಅವರನ್ನು "ಆನೆ ಮರಿ" ಎಂದು ಹೇಳಲಾಗುತ್ತಿತ್ತು! (ಆಮೇಲೆ AM ಅವರು ನ್ಯಾಷನಲ್ ಬಿ ಎಡ್ ಕಾಲೇಜಿನ ಪ್ರಥಮ ಪ್ರಿನ್ಸಿಪಾಲ್ ಆದರು.) ನಮ್ಮ ಹೊಸ ಹಿಂದಿ ಮೇಷ್ಟರು ಟಿ ಆರ್ ಪಾಂಡುರಂಗ (TRPR) ಪಾಠ ಮಾಡುತ್ತಿದ್ದ ರೀತಿ ಏನೂ ಹಿಡಿಸದ್ದರಿಂದ ಅವರಿಗೆ "ಟರ್ ಪುರ್” ಎಂದು ಕರೆಯಲಾಗುತ್ತಿತ್ತು. ಇನ್ನು ಕೆಲವು ಹೆಸರುಗಳು ತುಂಬಾ "ಹಾನಿಕಾರಕ"ವಾಗಿದ್ದವು. ಎ ಎಸ್ ಮಾಧವ ರಾವ್ (ASM) ಎಂಬ ಮೇಷ್ಟರ ಒಂದು ತುಟಿ ಸೀಳಿದ್ದರಿಂದ ಅವರಿಗೆ “ಅರ್ಧ ಸೊಟ್ಟೆ ಮಾಧವ ರಾವ್” ಎಂದು ಕರೆದರೆ, ನಮ್ಮ ಹೆಡ್ ಮೇಷ್ಟರ (HM) ತಲೆಯಲ್ಲಿ ಆಗಾಗ ಕಾಣುತ್ತಿದ್ದ ಗಾಯಗಳನ್ನು ಗಮನಿಸಿ ಅವರಿಗೆ "ಹುಳುಕು ಮಂಡೆ" ಎಂದು ಕರೆಯಲಾಗುತ್ತಿತ್ತು!
-------- ಮುಂದುವರಿಯುವುದು------

No comments: