Thursday, February 15, 2024

ನಮ್ಮ ಕಾಲದ ಪಠ್ಯಪುಸ್ತಕಗಳು ಅಧ್ಯಾಯ ೪




ನಮ್ಮ ಮೂರನೇ ತರಗತಿಯ ಪುಸ್ತಕದಲ್ಲಿದ್ದ ಒಂದು ಪದ್ಯ ನಮಗೆ ತುಂಬಾ ಆಸಕ್ತಿದಾಯಕವಾಗಿತ್ತು. ನಮ್ಮ ಮೇಲೆ ಅದೆಷ್ಟು ಪರಿಣಾಮ ಬೀರಿತ್ತೆಂದರೆ, ಈಗಲೂ ಕೂಡ ಅದರ ಪ್ರತಿಯೊಂದು ಸಾಲುಗಳು ನೆನಪಿಗೆ ಬರುತ್ತಿವೆ. ಮಾರ್ನವಮಿಯ ಪದಗಳು ಎಂಬ ಈ ಪದ್ಯವನ್ನು ಅಶ್ವಯುಜ ಮಾಸದಲ್ಲಿ ಬರುವ ನವರಾತ್ರಿಯ ಮಹಾನವಮಿಯಂದು ಒಂದು ಹುಡುಗರ ತಂಡ ಮನೆಮನೆಗೂ ಹೋಗಿ ಹಾಡುತ್ತದೆ. ಮನೆಯ ಯಜಮಾನನನ್ನು ತುಂಬಾ ಪ್ರೀತಿಯಿಂದ ವಿವಿಧ ರೀತಿಯಲ್ಲಿ ಹರಸುತ್ತಾ ಈ ತಂಡವು ಅವನಿಂದ ತಿಂಡಿ ಮತ್ತು ಬಟ್ಟೆ, ಇತ್ಯಾದಿಗಳನ್ನು ಬೇಡುತ್ತದೆ. ವಿಶೇಷವೆಂದರೆ, ಈ ಪದ್ಯ ತುಂಬಾ ಕುತೂಹಲಕಾರಿಯಾಗಿ ಮುಕ್ತಾಯಗೊಳ್ಳುತ್ತದೆ. ಕೊನೆಯ ಸಾಲುಗಳು, ಎಷ್ಟೊಂದು ಕೇಳಿಕೊಂಡರೂ ಉಡುಗೊರೆ ಕೊಡಲಿಚ್ಛಿಸದ ಲೋಭಿಗೆ ಅನ್ವಯವಾಗಿ ನಮಗೆ ನಗೆ ತರಿಸುತ್ತವೆ.

ಮಾರ್ನವಮಿಯ ಪದಗಳು

ಆಶ್ವಯುಜ ಶುದ್ಧ ಮಾರ್ನವಮಿ ಬರಲೆಂದು

ಶಾಶ್ವತದಿ ಹರಸಿದೆವು ಬಾಲಕರು ಬಂದು

ಈಶ ನಿಮಗತ್ಯದಿಕ ಸುಖವ ಕೊಡಲೆಂದು

ಲೇಸಾಗಿ ಹರಸಿದೆವು ಬಾಲಕರು ಬಂದು 


ಆಯುರಾರೋಗ್ಯಗಳು ನಿಮಗಾಗಲೆಂದು

ಶ್ರೇಯಸ್ಸು ಸಂಪತ್ತು ಹೆಚ್ಚುತಿರಲೆಂದು

ಆಯತದಿ ಜಗದೊಡೆಯನೊಲವಾಗಲೆಂದು

ಪ್ರೀಯದಿಂ ಹರಸಿದೆವು ಬಾಲಕರು ಬಂದು


ಧನ ಕನಕ ವಸ್ತು ವಾಹನವಾಗಲೆಂದು

ಕನಕ ದಂಡಿಗೆ ಚೌರಿ ನಿಮಗಾಗಲೆಂದು

ದಿನ ದಿನಕೆ ರಾಜ ಮನ್ನಣೆ ಹೆಚ್ಚಲೆಂದು

ಅನುದಿನವು ಹರಸಿದೆವು ಬಾಲಕರು ಬಂದು


ಛತ್ರಿ ಚಾಮರ ತೇಜಿ ನಿಮಗಾಗಲೆಂದು

ಅರ್ತಿಯಿಂ ಮಾಲಕುಮಿ ನಿಮಗೊಲಿಯಲೆಂದು

ಪುತ್ರಪೌತ್ರರು ನಿಮಗೆ ಹೆಚ್ಚುತಿರಲೆಂದು

ಅರ್ಥಿಯಿಂ ಹರಸಿದೆವು ಬಾಲಕರು ಬಂದು


ಹರಕೆಯನ್ನು ಕೇಳಿ ಹರುಷವ ಮಾಡಿ ನಮಗೆ

ತರಿಸಿಕೊಡಿ ಹಚ್ಚಡವ ನಮ್ಮಯ್ಯಗಳಿಗೆ

ಬೆರೆಸಿಕೊಡಿ ಕಡಲೆಯನು ಬೆಲ್ಲವನು ನಮಗೆ

ಸರಸತಿಯ ಕರುಣವುಂಟಾಗಿರಲಿ ನಿಮಗೆ


ಅಳಿಯನುಡುಗರೆಯೆಲ್ಲ ಮುನಿದು ಕೇಳುವರೇ?

ಹಳೆಯ ಸಂಬಳವೆಲ್ಲ ನಿಂತು ಕೇಳುವರೇ?

ಹಳೆಸಾಲವೆಲ್ಲಾ ಹಗಲಿರುಳು ಕಾಡುವರೇ?

ಮಲಿನಮನ ಮಾಡಿದರೆ ಕೀರ್ತಿ ಗಳಿಸುವರೇ?


ಇಂದು ನಾಳೆಗಳೆಂಬ ಸಂದೇಹ ಬೇಡಿ

ಬಂದ ಬವಣೆಗೆ ಕೊಡುವದುಚಿತಗಳ ನೀಡಿ

ಹಿಂದುಳಿದ ಕಡಬಡ್ಡಿಯಲ್ಲ ನಮಗೀಗ

ಮುಂದಾಗಿ ಹಚ್ಚಡವ ತರಿಸಿಕೊಡಿ ಬೇಗ


ಕೊಟ್ಟಿರಿಸಿ ಕೇಳಬಂದವರಲ್ಲ ನಾವು

ಬಿಟ್ಟಿ ಬಿಡಾರವಾ ತೆಗೆಯೆನ್ನದಿರಿ ನೀವು

ದಟ್ಟ ಲೋಭಿಯ ಬಳಿಗೆ ಬರಲಿಲ್ಲ ನಾವು

ಕೊಟ್ಟು ನಮಗುಡುಗೊರೆಯ ಕಳಿಸಿಕೊಡಿ ನೀವು


ಕೊಡದ ಲೋಭಿಯನು ಕೊಂಡಾಡಿ ಫಲವೇನು?

ದೃಢವಿಲ್ಲದವರುಗಳ ಬೇಡಿ ಫಲವೇನು?

ಜಡದೇಹಿಗಳಿಗೆ ಜಯವೆಂದು ಫಲವೇನು?

ಕೊಡದ ಲೋಭಿಯ ಗಂಡ ಕಲಿಕರ್ಣ ನೀನು!

ಸುಭಾಷಿತಗಳು

ನಮ್ಮ ಪುಸ್ತಕದ ಕೊನೆಯ ಪದ್ಯ ಕೂಡ ತುಂಬಾ ಆಸಕ್ತಿದಾಯಕವಾಗಿತ್ತು. ಅದರಲ್ಲಿ ಕನ್ನಡದ ಸುಭಾಷಿತಗಳು ಎಂಬ ಸಂಕಲನದಿಂದ ಆಯ್ದ ಕೆಲವು ನುಡಿಮುತ್ತುಗಳಿದ್ದುವು. ಮುಖ್ಯವಾಗಿ ತಂದೆಯೊಬ್ಬನು ಮಕ್ಕಳಿಗೆ ಚಿಕ್ಕಂದಿನಲ್ಲಿ ಸೂಕ್ತ ವಿದ್ಯೆಗಳನ್ನು ತಿಳಿಸಿಕೊಡುವ ಜವಾಬ್ದಾರಿಯ ಬಗ್ಗೆ ಅವುಗಳಲ್ಲಿ ವಿವರಣೆ ನೀಡಲಾಗಿತ್ತು. ನನಗೆ ಕೆಲವು ಸಾಲುಗಳು ಮಾತ್ರ ನೆನಪಿಗೆ ಬರುತ್ತಿವೆ.

ಮಕ್ಕಳಿಗೆ ತಂದೆ ಬಾಲ್ಯದೊಳ್

ಅಕ್ಕರ ವಿದ್ಯೆಗಳ ನರಿಪದಿರ್ದೊಡೆ ಕೊಂದಂ

ಲಕ್ಕ ಧನಮಿರಲು ಕೆಡಗುಂ

ಚಿಕ್ಕಂದಿನ ವಿದ್ಯೆ ಪೊರಗು ಚೂಡಾರತ್ನ


ಕಿರಿದಾದ ವಿದ್ಯೆಯಾಗಲಿ ಮೆರೆವುದು ತನ್ನಲ್ಲಿ

ಗುಣಗಳಿದ್ದೊಡೆ ಮತ್ತಾ

ಒರತೆಯ ನೀರಾದೊಡೆ ತಾಮ್

ಬರನಂ  ಪಿಂಗಿಸದೆ ಸುಗುಣ ರತ್ನಾ ಕರಾಂಡ

------------------------ಮುಂದುವರಿಯುವುದು -------------------

 

ನಮ್ಮ ಕಾಲದ ಪಠ್ಯಪುಸ್ತಕಗಳು ಅಧ್ಯಾಯ ೩





 


ನಮ್ಮ ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿ ರಾಮಾಯಣದ ಕಥೆಯನ್ನು  ಬೇರೆ ಬೇರೆ ಪಾಠಗಳ  ಮೂಲಕ ತಿಳಿಸಿದ್ದರೆ, ಮೂರನೇ ತರಗತಿಯ ಪುಸ್ತಕದಲ್ಲಿ ಅದೇ ರೀತಿ ಮಹಾಭಾರತದ ಕಥೆಯನ್ನು ತಿಳಿಸಲಾಗಿತ್ತು. ನಮಗೆ ತುಂಬಾ ಆಸಕ್ತಿದಾಯಕವಾದ ಪಾಠವೆಂದರೆ ಪಾಂಡವರು ಅರಗಿನಮನೆಯಿಂದ ತಪ್ಪಿಸಿಕೊಂಡು ಹೋದುದು. ಅತ್ಯಂತ ಬಲಾಢ್ಯ ಭೀಮಸೇನನು  ತನ್ನ ತಾಯಿ ಕುಂತಿ ಮತ್ತು ಉಳಿದ ಪಾಂಡವರನ್ನು ಹೆಗಲಮೇಲೆ ಕೂರಿಸಿಕೊಂಡು ಹೋಗುತ್ತಿರುವ ಚಿತ್ರ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತಿದೆ. ಅದೇ ರೀತಿ ಭೀಮಸೇನನು   ಕೀಚಕ ಮತ್ತು ಬಕಾಸುರನನ್ನು ಕೊಂದ ಪಾಠಗಳೂ ನಮಗೆ ಅತ್ಯಾಕರ್ಷಕವಾಗಿದ್ದವು.

ಜಂಬದ ಕೋಳಿ

ಈ ಪಠ್ಯಪುಸ್ತಕದಲ್ಲಿ ಇದ್ದ ಕಥೆಗಳಲ್ಲಿ ನಮಗೆ ತುಂಬಾ ಇಷ್ಟವಾದ ತಮಾಷೆಯ ಕಥೆಯೊಂದಿತ್ತು. ಅದರ ಹೆಸರು ಜಂಬದ ಕೋಳಿ.

ಅದೊಂದು ಚಿಕ್ಕ ಹಳ್ಳಿ. ಅಲ್ಲಿ ಹಿರಿಯ ವಯಸ್ಸಿನ ಹೆಂಗಸೊಬ್ಬಳು ಒಂಟಿಯಾಗಿ ಒಂದು ಚಿಕ್ಕ ಮನೆಯಲ್ಲಿ ಕೋಳಿಯೊಂದನ್ನು ಸಾಕಿಕೊಂಡು ವಾಸಿಸುತ್ತಿರುತ್ತಾಳೆ.  ಅವಳ ಮುಖ್ಯ ಆಸ್ತಿ ಎಂದರೆ ಒಂದು ಅಗ್ಗಿಷ್ಟಿಕೆ. ಇದ್ದಿಲಿನ ಬೆಂಕಿ ಇರುವ ಆ ಅಗ್ಗಿಷ್ಟಿಕೆ ದಿನದ ೨೪ ಗಂಟೆಯೂ ಉರಿಯನ್ನು ಹೊಂದಿರುತ್ತದೆ. ಬೆಂಕಿಪೊಟ್ಟಣವನ್ನು ಕಾಣದ ಆ ಕಾಲದಲ್ಲಿ, ಊರಿನವರೆಲ್ಲಾ  ಬೆಳಿಗ್ಗೆ ಅಜ್ಜಿಯ ಕೋಳಿ ಕೂಗಿದೊಡನೇ ಮೇಲೆದ್ದು ಅವಳ ಮನೆಗೆ ಬಂದು ಅಗ್ಗಿಷ್ಟಿಕೆಯಿಂದ ಬೆಂಕಿಯನ್ನೊಯ್ಯುವುದು ಮಾಮೂಲಾಗಿಬಿಟ್ಟಿರುತ್ತದೆ. ಸ್ವಲ್ಪ ಸಮಯದ ನಂತರ ಅಜ್ಜಿಗೊಂದು ಯೋಚನೆ ಬರುತ್ತದೆ. ತನ್ನ ಕೋಳಿ ಪ್ರತಿ ದಿನ ಬೆಳಿಗ್ಗೆ ಕೋ! ಕೋ!ಎಂದು ಕೂಗದಿದ್ದರೆ ಊರಿನಲ್ಲಿ ಬೆಳಗಾಗುವುದೇ ಇಲ್ಲ! ಮಾತ್ರವಲ್ಲ. ತನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ದೊರೆಯದಿದ್ದರೆ ಊರಿನಲ್ಲಿ ಯಾರೂ ಅಡಿಗೆ ಮಾಡುವಂತೆಯೇ ಇಲ್ಲ! ಹಾಗೆ  ಯೋಚಿಸಿದಂತೇ ಅಜ್ಜಿಯ ತಲೆಗೆ ಜಂಬವೇರಿಹೋಗುತ್ತದೆ. ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವಂತಾಗುತ್ತದೆ. ಹಾಗೆಯೇ ಒಂದು ಕುಹಕ ಬುದ್ಧಿಯೂ ಹೊಳೆಯುತ್ತದೆ. ತಾನೊಂದು ದಿನ ಊರಿನಲ್ಲಿರದಿದ್ದರೆ, ಊರಿನ ಚಟುವಟಿಕೆ ಸಂಪೂರ್ಣ ನಿಲುಗಡೆಯಾಗಿಬಿಡುವುದೆಂದು ಅವಳಿಗನಿಸುತ್ತದೆ.

ಆ ದಿನ ಸಂಜೆ ಅಜ್ಜಿ ತನ್ನ ಕೋಳಿ ಮತ್ತು ಅಗ್ಗಿಷ್ಟಿಕೆಯೊಡನೆ ಹತ್ತಿರದ ಕಾಡೊಂದಕ್ಕೆ ಹೋಗಿ ಇಡೀ ರಾತ್ರಿ ಮತ್ತೊಂದು ದಿನ ಅಲ್ಲಿಯೇ ಕಳೆಯುತ್ತಾಳೆ . ಮಾರನೇ ದಿನ ಸಂಜೆಯ ವೇಳೆಗೆ ಊರಿಗೆ ಹಿಂದಿರುಗುತ್ತಾಳೆ. ದಾರಿಯಲ್ಲಿ ಅವಳಿಗೆ ತನ್ನ ಊರಿನವನೇ ಆದ ರಂಗಣ್ಣ ಎನ್ನುವವನು ಕಣ್ಣಿಗೆ ಬೀಳುತ್ತಾನೆ. ಅವರ ನಡುವೆ ಕೆಳಗಿನ ಸಂಭಾಷಣೆ ನಡೆಯುತ್ತದೆ:

ರಂಗಣ್ಣ: ನಿನ್ನ ಕೋಳಿ ಮತ್ತು ಅಗ್ಗಿಷ್ಟಿಕೆಯೊಡನೆ ಎಲ್ಲಿಗೆ ಹೋಗಿದ್ದೆ, ಅಜ್ಜಿ?

ಅಜ್ಜಿ: ಅದಿರಲಿ. ರಂಗಣ್ಣ, ನೆನ್ನೆ ಮತ್ತು ಈ ದಿನ ಬೆಳಿಗ್ಗೆ ಊರಿನಲ್ಲಿ ಏನು ನಡೆಯಿತು ಹೇಳು.

ರಂಗಣ್ಣ:  ಎಲ್ಲಾ ಮಾಮೂಲಾಗಿಯೇ ಇತ್ತಲ್ಲ. ನೀನೇಕೆ ಹಾಗೆ ಕೇಳುತ್ತಿರುವೆ?

ಅಜ್ಜಿ: ನಿಜವೇ ರಂಗಣ್ಣ? ಊರಿನಲ್ಲಿ ಎಂದಿನಂತೆ ಬೆಳಗಾಗಿ ಮಾಮೂಲಿನಂತೆ ಅಡಿಗೆ ಮಾಡಲು ಸಾಧ್ಯವಾಯಿತೇ?

ರಂಗಣ್ಣ:  ಹೌದು. ನಿನಗೇಕೆ ಅನುಮಾನ, ಅಜ್ಜಿ?

ಅಜ್ಜಿ: ಇಲ್ಲ. ನನ್ನ ಕೋಳಿ ಕೂಗದೇ ಊರಿನಲ್ಲಿ ಬೆಳಗಾಗಿ, ಮತ್ತು ನನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ತೆಗೆದುಕೊಳ್ಳದೇ ಊರಿನಲ್ಲಿನ ಜನರು ಅಡಿಗೆ ಮಾಡಲು ಸಾಧ್ಯವಾಯಿತೆಂದು ನಾನು ಖಂಡಿತವಾಗಿ ನಂಬಲಾರೆ.

ರಂಗಣ್ಣ: ಒಹೋ! ನನಗೀಗ ಗೊತ್ತಾಯಿತು. ನೀನೊಬ್ಬ ಜಂಬದ ಕೋಳಿ ಎಂದು! ನಿನ್ನ ಪ್ರಕಾರ ನಿನ್ನ ಕೋಳಿ ಕೂಗದೇ ಊರಿನಲ್ಲಿ ಸೂರ್ಯ ಉದಯಿಸಲಾರ ಮತ್ತು ನಿನ್ನ ಅಗ್ಗಿಷ್ಟಿಕೆಯಿಂದ ಬೆಂಕಿ ದೊರೆಯದಿದ್ದರೆ, ಊರಿನ ಅಡಿಗೆಮನೆಗಳಲ್ಲಿ ಬೆಂಕಿ ಉರಿಯಲಾರದು, ಅಲ್ಲವೇ? ಇಲ್ಲಿ ಕೇಳು. ನಿನ್ನ ಕೋಳಿಯ ಕೂಗಿಗೆ ಕಾಯದೇ ಸೂರ್ಯ ಮಾಮೂಲಿನಂತೆ ಉದಯಿಸಿದ ಮತ್ತು ಕೆಲವರು ಮಾತ್ರ ಏಳುವುದು ಸ್ವಲ್ಪ ತಡವಾಗಿರಬಹುದು ಅಷ್ಟೇ.

ಅಜ್ಜಿ:  ಆದರೆ ಅವರಿಗೆ ಬೆಂಕಿಯಂತೂ ದೊರೆತಿರಲಿಕ್ಕಿಲ್ಲ, ಅಲ್ಲವೇ?

ರಂಗಣ್ಣ: ಒಹೋ! ನೀನು ಪುನಃ ತಪ್ಪು ತಿಳಿದಿರುವೆ. ಊರಿನವರೆಲ್ಲಾ ಕಮ್ಮಾರನ ಬಳಿ ಹೋಗಿ ಅವನ ಅಗ್ಗಿಷ್ಟಿಕೆಯಿಂದ ಬೆಂಕಿ ತೆಗೆದುಕೊಂಡರು, ಅಷ್ಟೇ.

ಅಜ್ಜಿ: ನೀನು ಹೇಳುವುದು ನಿಜವೇ? ನನಗೆ ನಂಬಲಾಗುತ್ತಿಲ್ಲ.

ರಂಗಣ್ಣ: ನಿನ್ನ ಜಂಬಕ್ಕೆ ಮಿತಿಯಿಲ್ಲ. ನೀನಿಲ್ಲದಿದ್ದರೆ ಇಡೀ ಊರಿನ ಚಟುವಟಿಕೆಗಳು ನಿಂತು ಹೋಗುವವು ಎಂಬುದು ಕೇವಲ ನಿನ್ನ ಭ್ರಮೆ ಅಷ್ಟೇ.

ಕಥೆ ಇಲ್ಲಿಗೆ ಮುಕ್ತಾಯವಾಗುತ್ತದೆ. ಆದರೆ ನಮಗೆ ಇಂದಿಗೂ ಅಜ್ಜಿ (ಜಂಬದ ಕೋಳಿ) ತನ್ನ ಕೋಳಿ ಮತ್ತು ಅಗ್ಗಿಷ್ಟಿಕೆ ಕೈಯಲ್ಲಿ ಹಿಡಿದು ರಂಗಣ್ಣನೊಡನೆ ಮಾತನಾಡುತ್ತಿರುವ ದೃಶ್ಯ ಕಣ್ಣ ಮುಂದೆ ಕಟ್ಟಿದಂತಿದೆ.

ಪಂಚತಂತ್ರ ಕಥೆಗಳು

ಇನ್ನುಳಿದ ಪಾಠಗಳಲ್ಲಿ ಅತ್ಯಂತ ಆಕರ್ಷಕವಾಗಿದ್ದುದು ಪಂಚತಂತ್ರ ಕಥೆಗಳ ಮೂಲ ಕಥೆ. ಪ್ರಾಯಶಃ ನಮ್ಮ ದೇಶದ ಬೇರಾವ ಪ್ರಾಣಿಕಥೆಗಳೂ ಪಂಚತಂತ್ರದ ನೀತಿ ಕಥೆಗಳಷ್ಟು ಪ್ರಸಿದ್ಧಿ ಪಡೆದಿಲ್ಲ. ಈ ಕಥೆಯಲ್ಲಿ ಚಕ್ರವರ್ತಿಯೊಬ್ಬನಿಗೆ ತನ್ನ ಗಂಡುಮಕ್ಕಳು ವಿದ್ಯಾಭ್ಯಾಸ ಮಾಡದೇ ಪೋಲಿಗಳಾಗುತ್ತಿರುವುದು  ತುಂಬಾ ಚಿಂತೆ ಉಂಟುಮಾಡುತ್ತದೆ. ಅವರನ್ನು ದಾರಿಗೆ ತರುವ ಸಕಲ ಪ್ರಯತ್ನಗಳೂ ವ್ಯರ್ಥವಾದಾಗ ರಾಜನು ಅವರನ್ನು ಆಸ್ಥಾನ ವಿದ್ವಾಂಸನಾದ ವಿಷ್ಣುಶರ್ಮನ ವಶಕ್ಕೆ ಕೊಡುತ್ತಾನೆ.

ಶರ್ಮನು ಅವರನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಅವರಿಗೆ ತನ್ನದೇ ಆದ ಹೊಸ ಮಾರ್ಗದಲ್ಲಿ ಪ್ರಾಣಿಕಥೆಗಳನ್ನು ಹೇಳುವುದರ  ಮೂಲಕ ವಿದ್ಯೆ ಕಲಿಸತೊಡಗುತ್ತಾನೆ. ಆ ಕಥೆಗಳು ರಾಜಕುಮಾರರಿಗೆ ಎಷ್ಟೊಂದು ಆಸಕ್ತಿದಾಯಕವಾದುವೆಂದರೆ ಅವರು ಅವುಗಳನ್ನು ಗಮನವಿಟ್ಟು ಕೇಳಿ ಬೇಗನೆ ಬುದ್ಧಿವಂತರಾಗಿ ಹೊರಹೊಮ್ಮುತ್ತಾರೆ. ಪ್ರಾಣಿಗಳ ಕಥೆಗಳಾದರೂ ಕೂಡ ಪಂಚತಂತ್ರ ಕಥೆಗಳು ರಾಜಕೀಯ ಜಾಣ್ಮೆ ಮತ್ತು ಸಾಮಾಜಿಕ ಚಟುವಟಿಕೆಗಳ ಬಗೆಗಿನ ಅತ್ಯಮೂಲ್ಯ ನೀತಿಕಥೆಗಳಾಗಿರುತ್ತವೆ.

ಪಂಚತಂತ್ರದಲ್ಲಿ ಐದು ಮುಖ್ಯಕಥೆಗಳಿರುತ್ತವೆ. ೧. ಮಿತ್ರಭೇಧ . ೨. ಮಿತ್ರಲಾಭ  ೩. ಕಾಕೋಲೂಕೀಯ. ೪. ಲಬ್ಧಪ್ರಣಾಶ ಮತ್ತು ೫. ಅಪರೀಕ್ಷಿತಕಾರಕ. ಈ ಐದು ಮುಖ್ಯಕಥೆಗಳಲ್ಲೂ ತುಂಬಾ ನೀತಿಯುತವಾದ ಅನೇಕ ಉಪಕಥೆಗಳೂ ಸೇರಿರುತ್ತವೆ. ನಮ್ಮ ಪಾಠದಲ್ಲಿ ಪಂಚತಂತ್ರದ ಮೂಲಕಥೆ ಇದ್ದುದೇನೋ ನಿಜ. ಆದರೆ ನಾವು ಅದರ ಎಲ್ಲಾ ಕಥೆಗಳನ್ನು ಓದಲು ಹಲವು ವರ್ಷ ಕಾಯಬೇಕಾಯಿತು. ಮುಂದೆ ನಾವು ಚಂದಮಾಮದಲ್ಲಿ ನವಗಿರಿನಂದ ಅವರು ಪದ್ಯರೂಪದಲ್ಲಿ ಬಲು ಸುಂದರವಾಗಿ ಬರೆದ ಎಲ್ಲಾ ಕಥೆಗಳನ್ನು ಓದಿ ಆನಂದಿಸಿದೆವು.

ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ

ನಮಗಿದ್ದ ಪದ್ಯಗಳಲ್ಲಿ ನಮಗೆ ಅತ್ಯಂತ ಇಷ್ಟವಾದದ್ದೆಂದರೆ ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ. ಈ ಪದ್ಯವನ್ನು ಬೇರೆ ಬೇರೆ ಪಾಠಗಳಲ್ಲಿ ಕೊಡಲಾಗಿತ್ತು ಮತ್ತು ಕಟ್ಟಕಡೆಗೆ ಅರ್ಬುಧಾ ಎಂಬ ಹುಲಿಯು ಪಶ್ಚತ್ತಾಪಪಟ್ಟು ಪುಣ್ಯಕೋಟಿಯ ಎದುರಿಗೇ ಬೆಟ್ಟದಿಂದ ಪ್ರಪಾತಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದರೊಡನೆ ಕಥೆ ಮುಕ್ತಾಯಗೊಳ್ಳುತ್ತದೆ. ಈ ಕಥೆಯು ಎಲ್ಲಾ  ಕನ್ನಡಿಗರಿಗೂ ತಿಳಿದಿರುವ ಅತಿ ಮೆಚ್ಚಿನ ಕಥೆ. ನಮ್ಮ ಪುಸ್ತಕದಲ್ಲಿ ಅದನ್ನು ಸಂಕ್ಷಿಪ್ತಗೊಳಿಸಲಾಗಿತ್ತು. ಆದರೆ ನಾವು ನಮ್ಮ ಅಣ್ಣ ತಂದ ಒಂದು ಅಪರೂಪದ ಪುಸ್ತಕದಲ್ಲಿ ಸಂಪೂರ್ಣ ಕೃತಿಯನ್ನು ಓದಿದುದು ನೆನಪಿದೆ. ಅಲ್ಲದೇ  ಆ ಕಾಲದಲ್ಲಿ ನಮ್ಮೂರಿನಲ್ಲಿ ಹುಲಿಗಳ  ಕಾಟ ಅತಿಯಾಗಿದ್ದು, ಎಷ್ಟೋ ನಮ್ಮ ಪ್ರೀತಿಯ ಹಸುಗಳು ಅವುಗಳಿಗೆ ಬಲಿಯಾದದ್ದು ನಮಗೆ ತಿಳಿದಿತ್ತು.

------------------ಮುಂದುವರಿಯುವುದು----------------------------


Wednesday, August 9, 2023




 

ನಮ್ಮ ಕಾಲದ ಪಠ್ಯಪುಸ್ತಕಗಳು

ಅಧ್ಯಾಯ

ನಮ್ಮ ೨ನೇ ತರಗತಿಯ ಕನ್ನಡ ಪಠ್ಯಪುಸ್ತಕ

ನಾನು ನಮ್ಮ ೨ನೇ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಗಳನ್ನು ನೆನಪು ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ,  ನನಗಿಂತ ಎರಡು ವರ್ಷ ಹಿರಿಯನಾದ ನನ್ನ ಅಣ್ಣ ಲಕ್ಷ್ಮೀನಾರಾಯಣ (ಪುಟ್ಟಣ್ಣ), ತಾನೂ ಅದೇ ಪುಸ್ತಕವನ್ನು ಓದಿದ್ದು, ತನಗೆ ಎಲ್ಲಾ ಪಾಠಗಳ ಹೆಸರು ಇನ್ನೂ ನೆನಪಿನಲ್ಲಿದೆಯೆಂದು ಹೇಳಿ ಮುಂದೆ ಕಾಣುವ ಅವುಗಳ ಪಟ್ಟಿಯನ್ನೇ ಕಳುಹಿಸಿದ:

೧. ಶ್ರೀರಾಮ ದೇವರು ೨. ಗುಡಿಗಳು ೩. ಕಾಗೆ ಮತ್ತು ನರಿ ೪.ನರಿ ಮತ್ತು ದ್ರಾಕ್ಷಿ ೫. ನರಿಯ ಯುಕ್ತಿ ೬. ಹೂವಾಡಗಿತ್ತಿ ೭.ಸಿಂಹ ಮತ್ತು ಇಲಿ ೮.ತೋಳ ಮತ್ತು ಕುರಿಮರಿ ೯.ಕಷ್ಟಪಟ್ಟರೆ ಫಲವುಂಟು ೧೦. ಹೋತ ಮತ್ತು ಸಿಂಹ ೧೧.ನಮ್ಮ ಹಳ್ಳಿ ೧೨. ನಕಲಿಯ ಶ್ಯಾಮ  ೧೩.ದೊರೆ ಮತ್ತು ಅಪರಾಧಿ ೧೪. ತಾಯಿ ೧೫.ಪಟ್ಟದ ಆನೆಯ ಕಥೆ ೧೬.ಹೊಲ ೧೭.ಹಾವಿನ ಹಾಡು ೧೮.ದಶರಥನ ಮಕ್ಕಳು ೧೯. ಗದ್ದೆ ೨೦.ಸೀತಾ ಪರಿಣಯ ೨೧.ಸಂತಮ್ಮಣ್ಣ ೨೨.ಶ್ರೀರಾಮನು ಕಾಡಿಗೆ ಹೊರಟದ್ದು ೨೩.ಶ್ರೀರಾಮ ಮತ್ತು ಭರತ ೨೪.ಮಾದರಿ ಹಳ್ಳಿ

ಶ್ರೀರಾಮ ದೇವರು

ಈ ಪುಸ್ತಕದಲ್ಲಿ ಮೊದಲ ಬಾರಿ ನಮಗೆ ರಾಮಾಯಣವನ್ನು ಪಾಠವಾಗಿ ಇಡಲಾಗಿತ್ತು. ಕಥೆಯನ್ನು ಮುಂದಿನ ಕೆಲವು ಪಾಠಗಳಲ್ಲಿ ಮುಂದುವರಿಸಿ ಶ್ರೀರಾಮ ಮತ್ತು ಭರತ ಎಂಬ ಪ್ರಸಂಗವನ್ನು ಕೊನೆಯ ಪಾಠವಾಗಿ ಇಡಲಾಗಿತ್ತು. ಆದರೆ ಈ ಪಾಠಗಳನ್ನು ಬೇರೆ ಪಾಠಗಳ ಮಧ್ಯೆ  ಮಧ್ಯೆ  ಸೇರಿಸಿ ಮುಂದುವರಿಸಲಾಗಿತ್ತು. ಕಥೆಯನ್ನು ತುಂಬಾ ಸರಳ ರೀತಿಯಲ್ಲಿ ಬರೆಯಲಾಗಿತ್ತು.

ಕಾಗೆ ಮತ್ತು ನರಿ

 ಪುಸ್ತಕದ ಹಲವು ಪಾಠಗಳು ಈಸೋಪನ ನೀತಿ ಕಥೆಗಳಿಂದ ಆಯ್ದ ಕಥೆಗಳಾಗಿದ್ದವು ಮತ್ತು ನಮಗೆ ತುಂಬಾ ಆಸಕ್ತಿದಾಯಕವಾಗಿ ಬರೆಯಲ್ಪಟ್ಟಿದ್ದವು. ಅವುಗಳಲ್ಲಿ ಮೊದಲಿನದೇ ಕಾಗೆ ಮತ್ತು ನರಿ ಎಂಬ ಪಾಠ. ಕಥೆಯಲ್ಲಿ ಕಾಗೆಯು ನರಿಯ ಹೊಗಳಿಕೆಯ ಮಾತುಗಳಿಗೆ ಮಾರು ಹೋಗಿ ತಾನು ತುಂಬಾ ಚೆನ್ನಾಗಿ ಹಾಡಬಲ್ಲೆನೆಂದು ನಂಬಿ ಕಾಕಾ ಎಂದು  ಹಾಡತೊಡಗುತ್ತದೆ. ಆಗ ಅದರ  ಬಾಯಲ್ಲಿದ್ದ ಮಾಂಸದ ತುಂಡು ಕೆಳಗೆ ಬೀಳುತ್ತದೆ.  ನರಿ ಅದೆನ್ನೆತ್ತಿಕೊಂಡು ಓಡಿಹೋಗುತ್ತದೆ. ಕಥೆಯ ನೀತಿ ಏನೆಂದರೆ ನಾವೆಂದೂ ಪರರ ಹೊಗಳಿಕೆಗೆ ಈಡಾಗಿ ಮೋಸಹೋಗಬಾರದೆಂದು. ಕಾಗೆ ತನ್ನದು ಕರ್ಕಶ ಸ್ವರವೆಂದು ಅರಿತಿದ್ದರೂ ನರಿಯ ಹೊಗಳಿಕೆಗೆ ನಂಬಿ ಮೋಸಹೋಗುತ್ತದೆ.

ತೋಳ ಮತ್ತು ಕುರಿಮರಿ

ತೋಳ ಮತ್ತು ಕುರಿಮರಿ ಇನ್ನೊಂದು ಆಸಕ್ತಿದಾಯಕ ಕಥೆಯಾಗಿತ್ತು. ಕಥೆಯ ಆರಂಭದಲ್ಲಿ ತೋಳ ಮತ್ತು ಕುರಿಮರಿ ಎರಡೂ ಒಂದು ಹಳ್ಳದಲ್ಲಿ ನೀರು ಕುಡಿಯುತ್ತಿರುತ್ತವೆ. ತೋಳ ಹಳ್ಳದ ಮೇಲ್ಭಾಗದಲ್ಲಿ ನೀರು ಕುಡಿಯುತ್ತಿದ್ದರೆ,  ಕುರಿಮರಿ ಸ್ವಲ್ಪ ಕೆಳ ಭಾಗದಲ್ಲಿ ಕುಡಿಯುತ್ತಿರುತ್ತದೆ. ಇದ್ದಕ್ಕಿದ್ದಂತೆಯೇ ತೋಳ ತಾನು ಕುರಿಮರಿಯ ಎಂಜಲು ನೀರು ಕುಡಿಯುವುದಿಲ್ಲವೆಂದೂ, ಆದ್ದರಿಂದ ಅದು ನೀರು ಕುಡಿಯುವುದನ್ನು ನಿಲ್ಲಿಸಬೇಕೆಂದೂ ಜೋರಾಗಿ ಹೇಳುತ್ತದೆ. ಆದರೆ ಕುರಿಮರಿ ತಾನು ಹಳ್ಳದ ಕೆಳಭಾಗದಲ್ಲಿ ನೀರು ಕುಡಿಯುತ್ತಿರುವುದರಿಂದ ಅದು ಎಂಜಲಾಗುವ ಪ್ರಶ್ನೆಯೇ ಇಲ್ಲವೆನ್ನುತ್ತದೆ. ತೋಳ ಹಾಗಿದ್ದರೆ ಅದು ಹಿಂದಿನ ಬಾರಿ ಇರಬೇಕು ಎನ್ನುತ್ತದೆ. ಆದರೆ ಕುರಿಮರಿ ತಾನು ಮೊದಲ ಬಾರಿ ಆ ಹಳ್ಳದ ನೀರನ್ನು ಕುಡಿಯಲು ಬಂದಿರುವುದಾಗಿ ಹೇಳುತ್ತದೆ.  ಆದರೆ ತೋಳ ಒಪ್ಪುವುದಿಲ್ಲ. ಏಕೆಂದರೆ ಅದು ಕುರಿಮರಿಯ ಮೇಲೆ ಆಕ್ರಮಣ ಮಾಡಲು ಕಾರಣ ಹುಡುಕುತ್ತಿತ್ತು ಅಷ್ಟೇ. ಅದು ಹಾಗಿದ್ದರೆ ಅದು ಅದರ ಅಮ್ಮನೋ  ಅಪ್ಪನೋ  ಆಗಿರಬೇಕು ಎಂದು ಹೇಳುತ್ತಾ ಕುರಿಮರಿಯ ಮೇಲೆ ಎಗರಿ ಅದನ್ನು ಕೊಂದು ಎತ್ತಿಕೊಂಡು ಹೋಗುತ್ತದೆ. ಕಥೆಯ ನೀತಿ ಏನೆಂದರೆ, ಈ ಪ್ರಪಂಚದಲ್ಲಿ ಬಲಾಢ್ಯ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೂ ದುರ್ಬಲರ ಮೇಲೆ ಆಕ್ರಮಣ ಮಾಡುತ್ತಾರೆ.

ನಕಲಿಯ ಶ್ಯಾಮ 

ಇನ್ನೊಂದು ತುಂಬಾ ತಮಾಷೆಯ ಕಥೆಯೆಂದರೆ ನಕಲಿಯ ಶ್ಯಾಮನದು. ಶ್ಯಾಮ ರಾಜನೊಬ್ಬನ ಆಸ್ಥಾನದಲ್ಲಿ ವಿದೂಷಕನಾಗಿರುತ್ತಾನೆ. ಅವನ ಕರ್ತವ್ಯಗಳೆಂದರೆ ರಾಜನ ಆಸ್ಥಾನದಲ್ಲಿ ಆಗಾಗ ಹಾಸ್ಯ, ಲೇವಡಿ ಮತ್ತು ಗೇಲಿ ಮುಂತಾದವುಗಳಿಂದ ತಮಾಷೆ ಪ್ರಸಂಗಗಳನ್ನುಂಟು ಮಾಡುವುದು. ಅವನು ಯಾವಾಗಲೂ ರಾಜನ ಸಂಗಡವೇ ಇರುತ್ತಾನೆ. ಆದರೆ ಅವನ ವೃತ್ತಿ ಸ್ವಲ್ಪ ಅಪಾಯಕರವೇ ಆಗಿರುವುದು. ಏಕೆಂದರೆ ಅವನು ಮಾಡುವ ಯಾವುದಾದರೂ ತಮಾಷೆಗಳು ರಾಜನಿಗೆ ಇಷ್ಟವಾಗದಿದ್ದರೆ, ರಾಜನು ಅವನಿಗೆ ಶಿಕ್ಷೆ ವಿಧಿಸುವ ಸಾಧ್ಯತೆ ಇರುವುದು. ಒಂದು ದಿನ ಶಾಮನು ಮಾಡಿದ ಹಾಸ್ಯವೊಂದು ರಾಜನಿಗೆ ತುಂಬಾ ಕೋಪ ತರುತ್ತದೆ. ಅದೆಷ್ಟೆಂದರೆ ಅವನು ಶಾಮನಿಗೆ ಇನ್ನು ಮುಂದೆ ಅವನು ರಾಜನಿಗೆ ಮುಖವನ್ನೂ ತೋರಿಸಬಾರದೆಂದು ಆಜ್ಞಾಪಿಸುತ್ತಾನೆ!

ಆ ಸಂಜೆ ಶಾಮನು ತುಂಬಾ ಚಿಂತಿತನಾಗಿ ಮನೆ ಸೇರುತ್ತಾನೆ. ರಾಜನ ಆಜ್ಞೆಯಂತೆ ಅವನು ಇನ್ನು ಮುಂದೆ ಆಸ್ಥಾನದಲ್ಲಿ ಮುಖವನ್ನೇ ತೋರಿಸುವಂತಿಲ್ಲ. ಅದನ್ನೇ ಯೋಚಿಸುತ್ತಾ ಅವನು ಮಡಕೆಯೊಂದರಿಂದ ನೀರನ್ನು ಲೋಟದಲ್ಲಿ ಬಗ್ಗಿಸಿ ಕುಡಿಯತೊಡಗುತ್ತಾನೆ. ಆಗ ಇದ್ದಕ್ಕಿದ್ದಂತೇ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಕೂಡಲೇ ಅವನು ಕೂಡಲೇ ಮಾರುಕಟ್ಟೆಗೆ ಹೋಗಿ ಮಡಿಕೆಯೊಂದನ್ನು ಖರೀದಿಸಿ ಮನೆಗೆ ತರುತ್ತಾನೆ. ಮಾರನೇ ದಿನ ರಾಜನಿಗೆ ಆಸ್ಥಾನದಲ್ಲಿ ಮಡಿಕೆಯೊಂದನ್ನು ಮುಖಕ್ಕೆ ಮುಚ್ಚಿಕೊಂಡ ಒಬ್ಬ ವ್ಯಕ್ತಿ ಕಾಣಿಸುತ್ತಾನೆ. ಆ ಮಡಿಕೆಗೆ ಎರಡು ತೂತುಗಳಿದ್ದು ಅದರ ಮೂಲಕ ವ್ಯಕ್ತಿಯು ಹೊರಗೆ ನೋಡುವಂತಿರುತ್ತದೆ. ರಾಜನಿಗೆ ವ್ಯಕ್ತಿಯ ಗುರುತು ಗೊತ್ತಾಗುವುದಿಲ್ಲ. ಅವನು ಮಂತ್ರಿಗೆ ಆ ವ್ಯಕ್ತಿ ಯಾರು ಮತ್ತು ಅವನು ಏಕೆ ಮುಖಕ್ಕೆ ಮಡಿಕೆ ಮುಚ್ಚಿಕೊಂಡಿದ್ದಾನೆಂದು ಪ್ರಶ್ನಿಸುತ್ತಾನೆ. ಮಂತ್ರಿಯು ಅದು ಬೇರಾರೂ ಅಲ್ಲ,  ಅವನು ವಿದೂಷಕ ಶಾಮನೇ ಎಂದು ಹೇಳಿ, ಅವನು ರಾಜನ ಆಜ್ಞೆಯಂತೆ ಆಸ್ಥಾನದಲ್ಲಿ ಮುಖ ತೋರದಂತೆ ಮಾಡಿಕೊಂಡಿದ್ದಾನೆಂದು ತಿಳಿಸುತ್ತಾನೆ. ರಾಜನಿಗೆ ನಕಲಿ ಶಾಮನ ಬುದ್ಧಿವಂತಿಕೆ ಮತ್ತು ತಮಾಷೆ ತುಂಬಾ ನಗೆತರುತ್ತದೆ. ಅವನು ಶಾಮನಿಗೆ ಕ್ಷಮಾಪಣೆ ಕೊಟ್ಟು ಮಡಿಕೆಯನ್ನು ಮುಖದಿಂದ ತೆಗೆಯುವಂತೆ ಹೇಳುತ್ತಾನೆ. 

ನನಗೆ ನೆನಪಿರುವಂತೆ ನಮ್ಮ ಎರಡನೇ ತರಗತಿಯಲ್ಲೂ ಒಂದೇ ಪಠ್ಯಪುಸ್ತಕವಿತ್ತು. ಆದರೆ ನಾವು ಕಾಪಿ ಪುಸ್ತವೊಂದರಲ್ಲಿ ಕಾಪಿ ಬರೆಯಬೇಕಾಗಿತ್ತು.  ನನಗೆ ತಿಳಿದಂತೆ ಕಾಪಿ ಎಂಬ ಇಂಗ್ಲಿಷ್ ಪದಕ್ಕೆ ಸಮನಾದ ಕನ್ನಡ ಪದ ದೊರೆಯದಿದ್ದರಿಂದ, ಕಾಪಿಪುಸ್ತಕ ಎಂಬ ಹೆಸರೇ ಅದಕ್ಕಿತ್ತು. ನಮ್ಮ ಪಠ್ಯಪುಸ್ತಕ ನಮಗೆ ಓದನ್ನು ಮತ್ತು ತಿಳುವಳಿಕೆಯನ್ನು ಬೆಳೆಸಿದರೆ, ಕಾಪಿಪುಸ್ತಕ ನಮ್ಮ ಕೈಬರವಣಿಗೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿತ್ತು. ಪುಸ್ತಕದಲ್ಲಿ ರಾಮಾಯಣದ ಕಥೆಯನ್ನು ತುಂಬಾ ಒತ್ತಕ್ಷರಗಳ ಮೂಲಕ ರಚಿಸಲಾಗಿತ್ತು. ನನಗೆ ನೆನಪಿಗೆ ಬರುವ ಕೆಲವು ಸಾಲುಗಳು ಕೆಳಕಂಡಂತಿವೆ:

ಶುದ್ಧ ಬ್ರಹ್ಮ ಪರಾತ್ಪರ ರಾಮ

ಕಾಲಾತ್ಮಕ ಪರಮೇಶ್ವರ ರಾಮ

ಲೀಲಾ ಕಲ್ಪಿತ ಜಗದಭಿ ರಾಮ

ಕೌಶಿಕ ಮುನಿ ಸಂರಕ್ಷಿತ ರಾಮ

ಬ್ರಹ್ಮಾದ್ಯಮರ ಪ್ರಾರ್ಥಿತ ರಾಮ

ಚಂಡ ಕಿರಣ ಕುಲ ಮಂಡನ ರಾಮ

ಕೃತ ವೈವಾಹಿಕ ಕೌತುಕ ರಾಮ

ಭಾರ್ಗವ ದರ್ಪ ವಿನಾಶನ ರಾಮ

ಶ್ರೀಮದಹಲ್ಯೋದ್ದಾರಕ ರಾಮ

ಗೌತಮ ಮುನಿ ಸಂಪೂಜಿತ ರಾಮ

ಸುರಗುಣ ವರಮುನಿ ಪ್ರಾರ್ಥಿತ ರಾಮ

ಅವನೀಕಾಮಿನಿ ಕಾಮಿತ  ರಾಮ

ರಾಖಾಚಂದ್ರ ಸಮಾಗಮ ರಾಮ

ಪಿತೃವಾಕ್ಯ ಪರಿಪಾಲಕ ರಾಮ

ಕಾಪಿಪುಸ್ತಕ ಬರವಣಿಗೆ ನಮ್ಮ ಚಿಕ್ಕ ವಯಸ್ಸಿಗೆ ಸ್ವಲ್ಪ ಕಷ್ಟಸಾಧ್ಯವಾಗಿತ್ತು. ಆದರೆ ಪುಸ್ತಕದಲ್ಲಿದ್ದುದನ್ನು ಸಂಪೂರ್ಣವಾಗಿ ಬರೆದು ಮುಗಿಸಿದ ಮೇಲೆ ನಮ್ಮ ಮಾತೃಭಾಷೆಯ ಬರವಣಿಗೆಯಲ್ಲಿ ನಾವು ತುಂಬಾ ಉತ್ತಮ ಮಟ್ಟವನ್ನು ತಲುಪಿದ್ದರಲ್ಲಿ ಅನುಮಾನವೇ ಇರಲಿಲ್ಲ.

----------------ಮುಂದುವರಿಯುವುದು-----------------------


Friday, February 25, 2022

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೧



 

ಇಂದಿನ ಕಾಲದ ಶಾಲೆಯ ಪಠ್ಯಪುಸ್ತಕಗಳು ಹೇಗಿರುವವೆಂಬುವ ಬಗ್ಗೆ ನಮಗೆ ಕೊಂಚವೂ ಅರಿವಿಲ್ಲವೆಂಬುದು ನಿಜ. ಆದರೆ ಆಶ್ಚರ್ಯವೆಂದರೆ ಮೊನ್ನೆ ನಾನು ನಮ್ಮ ಕಾಲದ ಪಠ್ಯಪುಸ್ತಕಗಳ ಬಗ್ಗೆ ಯೋಚಿಸುತ್ತಿರುವಾಗ ನನಗೆ ನಮ್ಮ ಒಂದನೇ ತರಗತಿಯ ಪಾಠಗಳೂ ನೆನಪಿಗೆ ಬಂದವು! ಮಾತ್ರವಲ್ಲ. ಆಗಿನ ಪಠ್ಯಪುಸ್ತಕಗಳನ್ನು ರಚಿಸಲು ನೇಮಕವಾದ ಸಮಿತಿಯ ಅಧ್ಯಕ್ಷರು ಮತ್ತು ಕೆಲವು ಸದಸ್ಯರ ಹೆಸರುಗಳೂ ನೆನಪಿಗೆ ಬಂದುವು. ಸಮಿತಿಗೆ ನಾವು ಚಿರ ಋಣಿಗಳಾಗಿದ್ದೇವೆಂದು ಹೇಳಲೇ ಬೇಕು. ಏಕೆಂದರೆ ನಮ್ಮ ಪಾಠಗಳನ್ನು ಮತ್ತು ಪದ್ಯಗಳನ್ನು ಎಷ್ಟು ಚೆನ್ನಾಗಿ ರಚಿಸಲಾಗಿತ್ತೆಂದರೆ, ನಾವು ಅವುಗಳನ್ನು ಪುನಃ ಪುನಃ ಓದಿ ಸಂತಸ ಪಡುತ್ತಿದ್ದುದು ನೆನಪಿಗೆ ಬರುತ್ತಿದೆ. ಇಷ್ಟಲ್ಲದೇ ಕಾಲದ ವಿದ್ಯಾರ್ಥಿಗಳಾದ ನಮಗೆ ಪುಸ್ತಕಗಳ ಹೊರೆಯನ್ನು ಹೊತ್ತು ಶಾಲೆಗೆ ಹೋಗುವ ಅವಶ್ಯಕತೆ ಇರಲಿಲ್ಲ. ಒಂದು ಮತ್ತು ಎರಡನೇ ತರಗತಿಗೆ ನಾವು ಕೇವಲ ಸ್ಲೇಟು, ಬಳಪ ಮತ್ತು ಒಂದು ಪಠ್ಯಪುಸ್ತಕವನ್ನು ಕೈಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು. ನಮ್ಮ ಪಠ್ಯಪುಸ್ತಕಗಳನ್ನು ರಚಿಸಲು ನೇಮಕವಾದ ಸಮಿತಿಯು ಕೆಳಕಂಡಂತಿತ್ತು:

ಶ್ರೀ ಎಂ ಆರ್ ಶ್ರೀನಿವಾಸಮೂರ್ತಿ (ಅಧ್ಯಕ್ಷರು)

ಶ್ರೀ ಕೆ ಎಸ್ ಧರಣೇಂದ್ರಯ್ಯ (ಸದಸ್ಯರು)

ಶ್ರೀ ಎನ್ ಎಸ್ ವೀರಪ್ಪ (ಸದಸ್ಯರು)

ಶ್ರೀ ಎನ್ ಲಿಂಗಣ್ಣಯ್ಯ (ಸದಸ್ಯರು)

ಹೆಚ್ಚಿನ ಸದಸ್ಯರು ಬಿ., ಬಿ. ಟಿ. ಪದವೀಧರರಾಗಿದ್ದರು. ಶ್ರೀ ಎನ್.ಎಸ್.ಹಿರಣ್ಣಯ್ಯ ಅವರು ಆಗ ಸಾರ್ವಜನಿಕ ಶಿಕ್ಷಣದ ನಿರ್ದೇಶಕರಾಗಿದ್ದರು. ಅವರ ನಂತರ .ಸಿ.ದೇವೇಗೌಡ ಅವರು ನಿರ್ದೇಶಕರಾಗಿ ನೇಮಕವಾದರು.

ಬಹು ದೊಡ್ಡ ವಿದ್ವಾಂಸರಾದ ಎಂ ಆರ್ ಶ್ರೀನಿವಾಸಮೂರ್ತಿಯವರು ಒಬ್ಬ ಸೃಜನಶೀಲ ಬರಹಗಾರರೂ ಆಗಿದ್ದರು. ಮೈಸೂರು ವಿದ್ಯಾ ಇಲಾಖೆಯಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದವರಾಗಿದ್ದರು. ಅವರ ಅತ್ಯುತ್ತಮ ಬರಹಗಳಲ್ಲೊಂದಾದ "ರಂಗಣ್ಣನ ಕನಸಿನ ದಿನಗಳು" ಒಂದು ಅನನ್ಯ ಬರಹವಾಗಿದ್ದು ಶಾಲಾ ಇನ್ಸ್ಪೆಕ್ಟರ್ ಒಬ್ಬನ ಅನುಭವಗಳನ್ನೊಳಗೊಂಡಿದೆ. ಅವರೊಬ್ಬ ವೀರಶೈವ ಸಾಹಿತ್ಯದ ತಜ್ಞರೂ ಆಗಿದ್ದರು.  ಅಲ್ಲದೇ ೧೯೫೦ನೇ ಇಸವಿಯಲ್ಲಿ ಶೋಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.

ನಮ್ಮ ಒಂದನೇ ತರಗತಿಯ ಮೊದಲ ಪಾಠ ತುಂಬಾ ಆಕರ್ಷಕವಾಗಿಯೇ ಇತ್ತೆಂದು ಹೇಳಲೇ ಬೇಕು. ಪಾಠದಲ್ಲಿದ್ದ ಪದಗಳು ನಮ್ಮ ಅಂದಿನ ಬಾಲ್ಯ ಮನೋವೃತ್ತಿಗೆ ಪೂರಕವಾಗೇ ಇದ್ದವು. ಅವುಗಳೆಂದರೆ: . ಆಟ . ಊಟ . ಓಟ ಮತ್ತು . ಪಾಠ. ಆಗ ನಮ್ಮಆಸಕ್ತಿ ಮತ್ತು  ಗಮನವೆಲ್ಲಾ ಮೊದಲ ಮೂರು ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ನಾಲ್ಕನೇ ವಿಷಯವಾದ ಪಾಠದತ್ತ ಸೆಳೆಯುವುದೇ ಉದ್ದೇಶವಾಗಿತ್ತು. ನಮ್ಮ ಮೊದಲ ಪಾಠಗಳು ಕಾಗುಣಿತ ಮತ್ತು ಒತ್ತಾಕ್ಷರಗಳಿಲ್ಲದೇ ಓದಲು ಮತ್ತು ಬರೆಯಲು ಸುಗಮವಾಗಿದ್ದವು. ಆದರೆ ಮುಂದಿನ ಪಾಠಗಳಲ್ಲಿ  ಅವುಗಳಿಂದ ಕೂಡಿದ ಪದಗಳನ್ನು ಪ್ರಾಸಬದ್ಧವಾಗಿ ಪದ್ಯ ರೂಪದಲ್ಲಿ ಬರೆಯಲಾಗಿದ್ದು ನಾವು ಅವುಗಳನ್ನು ತುಂಬಾ ಆಸಕ್ತಿ ಮತ್ತು ಖುಷಿಯಿಂದ ಓದುತ್ತಿದ್ದೆವು. ಅಲ್ಲದೇ ಪದ್ಯಗಳಿಗೆ ತಕ್ಕ ಚಿತ್ರಗಳನ್ನು ಪಕ್ಕದಲ್ಲೇ ಜೋಡಿಸಿದ್ದರಿಂದ ನಮ್ಮ ಉತ್ಸಾಹ ಮೇರೆ ಮೀರಿರುತ್ತೆಂದೂ ನೆನಪಿಗೆ ಬರುತ್ತಿದೆ.

ನನ್ನ ನೆನಪಿಗೆ ಬರುವ ಕೆಲವು ಚಿಕ್ಕ ಪದ್ಯಗಳು:

ಒತ್ತು

ಅಕ್ಕಾ  ಅಕ್ಕಾ

ಚೆಕ್ಕುಲಿ ಚಿಕ್ಕಿಲಿ

ಅಕ್ಕಿಯ ದೋಸೆ

ಮುಕ್ಕೇ ಮುಕ್ಕಿತು

ಒಕ್ಕಲ ಮಕ್ಕಳು

ಉಕ್ಕೆಯ ಹೊಡೆದರು

ಪಕ್ಕನೆ ಬೆಳೆದು

ನಕ್ಕಿತು ಭೂಮಿ

ಒತ್ತು

ಗುಡ್ಡದ ಮೇಲೆ

ರೆಡ್ಡಿಯ ಮದುವೆ

ಬಾಯಿಗೆ ಲಡ್ಡು

ಜೇಬಿಗೆ ದುಡ್ಡು

ಬೆಂಕಿಯ ಕಡ್ಡಿ

ಕಡ್ಡಿಯ ಪೊಟ್ಟಣ

ಬುಡ್ಡಿಯ ದೀಪ

ಗಡ್ಡಾ ಜೋಕೆ

 

ಗೆಣಸಿನ ಗೆಡ್ಡೆ

ಹೆಗಲಿಗೆ ಅಡ್ಡೆ

ಆಲೂ ಗೆಡ್ಡೆ

ಗುಡ್ಡೆ ಮಾಡು

ಒತ್ತು

ಉಯ್ಯಾಲೆ ಮೇಲೆ

 ನಾಮದ ಅಯ್ಯ

 ಕುಯ್ಯುವ ದೋಟಿಗೆ

ಸುಯ್ಯುವ ಹಣ್ಣು

ಸುಯ್ಯುವ ಗಾಳಿಗೆ

ಬಾಯಿಗೆ ಮಣ್ಣು

ಅಯ್ಯೋ ಅಣ್ಣ

ಸಭ್ಯರ ಮಾತು

ಅಯ್ಯೋ ಪಾಪ

ಪುಣ್ಯದ ಮಾತು

ಶಕಾರದ ಪದಗಳು

ಶನಿವಾರ ಶಾಮರಾಯ ಶಿವನ ಗುಡಿ ಶೀಲವಂತ ಅದು ಪಶು ಅವನು ಶೂರ ರಾಜಶೇಖರ ಶೈಲ ಶೋಕ ಶಂಕರ

ನಮ್ಮ ಒಂದನೇ ತರಗತಿಯ ಕೊನೆಯ ಪಾಠ ಪ್ರೊಫೆಸರ್  ಜಿ ಪಿ ರಾಜರತ್ನಂ ಅವರು ಬರೆದ ಜಂಬದ ಕೋಳಿ ಎಂಬ ಪ್ರಸಿದ್ಧ ಕವನವಾಗಿತ್ತು. ನನಗೆ ಇಂದಿಗೂ ನೆನಪಿರುವಂತೆ ಪದ್ಯ ಕೆಳಕಂಡಂತಿತ್ತು:

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು

ಸನಿದಪ ಮಗರಿಸ ಊದಿದನು

ತನಗೇ ತುತ್ತೂರಿ ಇದೆಯೆಂದು

ಬೇರಾರಿಗೂ ಅದು ಇಲ್ಲೆಂದು

ಕಸ್ತೂರಿ ನಡೆದನು ಬೀದಿಯಲಿ

ಜಂಬದ ಕೋಳಿಯ ರೀತಿಯಲಿ

ತುತ್ತೂರಿ ಊದುತ ಕೊಳದ ಬಳಿ

ನಡೆದನು ಕಸ್ತೂರಿ ಸಂಜೆಯಲಿ

ಜಾರಿತು ನೀರಿಗೆ ತುತ್ತೂರಿ

ಗಂಟಲು ಕಟ್ಟಿತು ನೀರೂರಿ

ಬಣ್ಣವು ನೀರಿನ ಪಾಲಾಯ್ತು

ಬಣ್ಣದ ತುತ್ತೂರಿ ಬೋಳಾಯ್ತು

ಜಂಬದ ಕೋಳಿಗೆ ಗೋಳಾಯ್ತು!

-----------------------------ಮುಂದುವರಿಯುವುದು-------------------------------------