Thursday, April 26, 2018

ಒಂದು ಊರಿನ ಕಥೆ - 11 (ಹೊಕ್ಕಳಿಕೆ)


ಭಾವನವರು ಹೇಳಿದ ಗಣಪತಿಯ ಕಥೆ
ಭಾದ್ರಪದ ಶುಕ್ಲ ಚೌತಿಯ ದಿನ ಪ್ರತಿ ವರ್ಷವೂ ಮಣ್ಣಿನಲ್ಲಿ ಮಾಡಿದ ಗಣಪತಿಯ ವಿಗ್ರಹವನ್ನು ಪ್ರತಿ ಮನೆಗಳಲ್ಲೂ ಇಟ್ಟು  ಪೂಜೆ ಮಾಡುವ ಪದ್ಧತಿ ನಮ್ಮ ದೇಶದ ಹಲವು ಭಾಗಗಳಲ್ಲಿ  ಪ್ರಾಚೀನ ಕಾಲದಲ್ಲಿಂದಲೂ  ನಡೆದು ಬಂದಿದೆ. ಹಾಗೆಯೇ ಆಮೇಲೆ ಮಣ್ಣಿನ ಮೂರ್ತಿಯನ್ನು ಕೆರೆ, ಕೊಳ , ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡುವುದೂ ನಡೆದು ಬಂದ ಸಂಪ್ರದಾಯ. ಆದರೆ ಪದ್ಧತಿ ಹೇಗೆ ಪ್ರಾರಂಭವಾಯಿತೆನ್ನುವ ಬಗ್ಗೆ ಯಾವ ಪುರಾಣಗಳಲ್ಲೂ ಹೇಳಿದ ಹಾಗೆ ಕಾಣುವುದಿಲ್ಲ. ಪದ್ಧತಿಯ ಮೂಲ ಯಾವುದೆನ್ನುವ ಬಗ್ಗೆ ಒಂದು ಕಥೆಯನ್ನು ನಮ್ಮ ಭಾವನವರು ಮಹಾಭಾರತದ ಒಂದು ಪ್ರಸಂಗವನ್ನಾಧಾರಿಸಿ ಹೇಳುತ್ತಿದ್ದರಂತೆ. ನನಗೆ ಕಥೆಯನ್ನು ಹೇಳಿದ್ದು ನನ್ನ ತಮ್ಮ ಶ್ರೀನಿವಾಸ.

ಪಾಂಡವರ ಕುರುಕ್ಷೇತ್ರ ಯುದ್ಧದ ಗೆಲುವಿನೊಂದಿಗೆ ಭಾರತ ದೇಶದಲ್ಲಿ ಸಂಪೂರ್ಣ ಶಾಂತಿಯುತ ವಾತಾವರಣ ಉಂಟಾಯಿತು. ಅದೇ ವೇಳೆಗೆ ಪಾಂಡವರಿಗೆ ತಮ್ಮ ವಿಜಯದ ನೆನಪಿಗಾಗಿ ಒಂದು ದೊಡ್ಡ ಸಮಾರಂಭವನ್ನು ಏರ್ಪಾಡು  ಮಾಡಬೇಕೆಂಬ ಉತ್ಸಾಹ ಬಂತು. ಬಗ್ಗೆ ಚರ್ಚೆ ಮಾಡಲು ತಮ್ಮ ವಿಜಯದ ರೂವಾರಿಯಾದ ಭಗವಾನ್ ಶ್ರೀಕೃಷ್ಣನನ್ನು ಒಮ್ಮೆ ಹಸ್ತಿನಾಪುರಕ್ಕೆ ಬರುವಂತೆ ಆಹ್ವಾನಿಸಿದರು. ಕೃಷ್ಣನ ಸಲಹೆಯಂತೆ ಒಂದು ಮಹಾ ಯಜ್ಞವನ್ನು ಮಾಡುವುದೆಂದು ಮತ್ತು ಅದಕ್ಕಾಗಿ ಭಾರತದ ಎಲ್ಲಾ ರಾಜರನ್ನೂ ಅವರ ಕುಟುಂಬ ಸಮೇತರಾಗಿ ಬರುವಂತೆ ಅಹ್ವಾನ ಕಳಿಸುವುದೆಂದೂ ತೀರ್ಮಾನಿಸಲಾಯಿತು. ಮಾಮೂಲಿನಂತೆ ಯಜ್ಞದ ಆರಂಭದ ಮೊದಲು ವಿಘ್ನರಾಜ ಗಣಪತಿಯನ್ನು ಪೂಜಿಸುವುದೆಂದೂ ತೀರ್ಮಾನಿಸಲಾಯಿತು.

ಅದೇ ವೇಳೆ ಶ್ರೀಕೃಷ್ಣನಿಂದ ಒಂದು ಅಮೂಲ್ಯ ಸಲಹೆ ಪಾಂಡವರಿಗೆ ಬಂತು. ಸಲಹೆ ಇಷ್ಟೇ. ಗಣರಾಯನ ವಿಗ್ರಹದ ಪೂಜೆಗೆ ಬದಲಾಗಿ ಅವನನ್ನೇ ಏಕೆ ಸ್ವತಃ ಬರುವಂತೆ ಅಹ್ವಾನ ಕಳುಹಿಸಿ ಪ್ರತ್ಯಕ್ಷ ಪೂಜೆ ಮಾಡಬಾರದೆಂದು. ಸಲಹೆ ಪಾಂಡವರಿಗೆ ತುಂಬಾ ಮೆಚ್ಚಿಗೆಯಾಯಿತು. ಅವರು ಸ್ವಲ್ಪವೂ ತಡಮಾಡದೆ ನಕುಲ-ಸಹದೇವರ ಜೋಡಿಯನ್ನು ಗಣೇಶನಿಗೆ ಅಹ್ವಾನ ನೀಡಲು ಕೈಲಾಸ ಪರ್ವತಕ್ಕೆ ಕಳಿಸಿದರು. ಗಣೇಶನಿಂದ ಒಪ್ಪಿಗೆಯೂ ಸಿಕ್ಕಿತು. ಅವನು ಕೂಡಲೇ ತನ್ನ ವಾಹನವಾದ ಮೂಷಿಕರಾಯನನ್ನು ಕರೆದು ಯಜ್ಞದ ದಿನ ಸಮಯಕ್ಕೆ ಸರಿಯಾಗಿ ತನ್ನನ್ನು ಹಸ್ತಿನಾಪುರಕ್ಕೆ ಒಯ್ಯುವ ಜವಾಬ್ಧಾರಿಯನ್ನು ಒಪ್ಪಿಸಿದನು.

ಯಜ್ಞದ ದಿನ ಹಸ್ತಿನಾಪುರವನ್ನೆಲ್ಲಾ ಅಲಂಕರಿಸಲಾಯಿತು. ರಾಜ ಮಹಾರಾಜರೆಲ್ಲರ ಆಗಮನವಾಯಿತು. ಮಹರ್ಷಿಗಳು ಯಜ್ಞ ಕುಂಡವನ್ನು ತಯಾರು ಮಾಡಿ ಬೇಕಾದ ಸಾಮಾಗ್ರಿಗಳನ್ನೆಲ್ಲಾ ಶಾಸ್ತ್ರಾನುಸಾರ ಜೋಡಿಸಿದರು. ಯಜ್ಞದ ವೇಳೆಯೂ ಸಮೀಪವಾಗತೊಡಗಿತು. ಆಗ ಇದ್ದಕ್ಕಿದ್ದಂತೆ ಪಾಂಡವರಿಗೆ ಮೊದಲ ಪೂಜೆಗೊಳ್ಳಬೇಕಾದ ಗಣಪತಿಯೇ ಇನ್ನೂ ಆಗಮಿಸಿಲ್ಲವೆಂಬ ವಿಷಯ ಗಮನಕ್ಕೆ ಬಂತು. ಎಲ್ಲರ ಗಮನ ವಿಘ್ನೇಶನ ಪ್ರತ್ಯಕ್ಷ ಪೂಜೆ ಮಾಡುವಂತೆ ಸಲಹೆ ನೀಡಿದ್ದ ಶ್ರೀಕೃಷ್ಣನತ್ತ ಹೋಯಿತು. ಆದರೆ ಸ್ವತಃ  ಕೃಷ್ಣನಿಗೆ ಕೂಡಾ ವಿನಾಯಕನ ಗೈರು ಹಾಜರಿಯ ಕಾರಣದ   ಅರಿವಿರಲಿಲ್ಲ.

ಸಂಪೂರ್ಣ ಗಾಬರಿಗೊಂಡ  ಪಾಂಡವರು ಶ್ರೀಕೃಷ್ಣ ಪರಮಾತ್ಮನೇ ತಮ್ಮ ಸಮಸ್ಯೆಯನ್ನು ಪರಿಹರಿಸ ಬೇಕೆಂದು ಬೇಡಿಕೊಂಡರು. ಶ್ರೀಕೃಷ್ಣನ ಕೈಯಲ್ಲಿ ಆಗದ ಕೆಲಸವುಂಟೇ? ಸ್ವಲ್ಪವೂ ತಡಮಾಡದೇ ಯಜ್ಞಶಾಲೆಯಿಂದ ಹೊರಗೆ ಹೋದ ಕೃಷ್ಣ ಐದು ನಿಮಿಷದೊಳಗೆ ಗಣೇಶನ ಕೈ ಹಿಡಿದುಕೊಂಡು ನಗೆಮೊಗದಿಂದ ವಾಪಾಸ್ ಆಗಮಿಸಿಬಿಟ್ಟ!

ಗಣೇಶನ ಆಗಮನದ ನಂತರ ಮುನಿವರ್ಯರು ಅವನನ್ನು ಪೀಠದಲ್ಲಿ ಕೂರಿಸಿ ಶಾಸ್ತ್ರೋಕ್ತ ಪೂಜೆಗೆ ಪ್ರಾರಂಭಿಸಿದರು. ಪೂಜೆಯೇನೂ ಸಾಂಗೋಪಸಾಂಗವಾಗಿ ನೆರವೇರತೊಡಗಿತು. ಆದರೆ ಅಷ್ಟರಲ್ಲೇ ಯಾರೂ ಎಣಿಸದಂತ ಸಂಗತಿಯೊಂದು ಜರುಗಿತು. ಎಲ್ಲರಿಗೂ ಆಶ್ಚರ್ಯವಾಗುವಂತೆ ಯಜ್ಞ ಶಾಲೆಯೊಳಗೆ ಇನ್ನೋರ್ವ ಗಣೇಶನ ಆಗಮನವಾಯಿತು! ಮಾತ್ರವಲ್ಲ ಹೊಸ ಗಣೇಶನ ಆಗಮನವಾಗುತ್ತಿದ್ದಂತೆ ಪೀಠದ ಮೇಲೆ ಪೂಜೆಗೊಳ್ಳುತ್ತಿದ್ದ ಗಣರಾಯ ಅದೃಶ್ಯನಾಗಿಬಿಟ್ಟ! ಸ್ವಲ್ಪ ಕಾಲ ಯಜ್ಞಶಾಲೆಯಲ್ಲಿ ತುಂಬಾ ಗಲಿಬಿಲಿಯ ವಾತಾವರಣ ಉಂಟಾಯಿತು. ಆದರೆ ಶ್ರೀಕೃಷ್ಣನ ಸಲಹೆಯಂತೆ ಹೊಸದಾಗಿ ಆಗಮಿಸಿದ ಗಣೇಶನನ್ನು ಪೀಠದಲ್ಲಿ ಕೂರಿಸಿ ಪೂಜೆ ಮುಗಿಸುವುದರಿಂದ ಪರಿಸ್ಥಿತಿ ಶಾಂತ ಸ್ಥಿತಿಗೆ ಬಂತು. ನಂತರ ಯಜ್ಞ ಯಾವುದೇ ವಿಘ್ನಗಳಿಲ್ಲದೇ ಶಾಸ್ತ್ರೋಕ್ತವಾಗಿ ನೆರವೇರಿತು.

ಗಣೇಶನಿಗೆ ಶ್ರೀಕೃಷ್ಣನೇ ತಾನು ಬರುವುದು ತಡವಾದ್ದರಿಂದ ಪೂಜೆಗಾಗಿ ಇನ್ನೊಬ್ಬ ಗಣೇಶನನ್ನು ಸೃಷ್ಟಿ ಮಾಡಿರಬೇಕೆಂದು ಅನುಮಾನವಿತ್ತು. ಅವನು ಬರಲು ತಡವಾಗುವುದಕ್ಕೆ ಕಾರಣ ಅವನ ಮೂಷಿಕ ವಾಹನ. ಅದಕ್ಕೆ ಮೊದಲೇ ಸಮಯಕ್ಕೆ ಸರಿಯಾಗಿ ಬರಬೇಕೆಂದು ಗಣೇಶನ ಆಜ್ಞೆಯಿದ್ದರೂ ಅದನ್ನು ಮರೆತು ತನ್ನ ಬಿಲದಲ್ಲಿ ಹಾಯಾಗಿ ನಿದ್ರಿಸುತ್ತಿತ್ತಂತೆ! ಅದಕ್ಕೆ ಎಚ್ಚರವಾದುದು ಗಣೇಶ ಜೋರಾಗಿ ಕರೆದ ನಂತರವೇ! ಆದರೆ ಆಗ ಕಾಲ ಮೀರಿ ಹೋಗಿತ್ತು. ಗಣೇಶನ ಕುತೂಹಲವನ್ನು ಶ್ರೀಕೃಷ್ಣನೇ ಪರಿಹಾರ ಮಾಡಿದ. ಅವನು ತಾನು ನಿರ್ವಾಹವಿಲ್ಲದೆ ಪೂಜೆ ತಡವಾಗದಂತೆ  ಇನ್ನೊಬ್ಬ ಗಣೇಶನನ್ನು ಸೃಷ್ಟಿ ಮಾಡಿದ್ದಾಗಿ ಒಪ್ಪಿಕೊಂಡ. ಇಬ್ಬರೂ ಕೂಡಿ ಪ್ರಸಂಗದ ಬಗ್ಗೆ ಪಾಂಡವರಿಗೆ ವಿವರಣೆ ನೀಡಿ ಅವರ ಕುತೂಹಲವನ್ನು ಪರಿಹರಿಸಿದರು. ಯಜ್ಞ ಪೀಠದಲ್ಲಿ ಇಬ್ಬರು ಗಣನಾಯಕರ ಆಗಮನ ಹೀಗೆ ಸಮಸ್ತರಿಗೂ ಒಂದು ಮರೆಯಲಾರದ ಪ್ರಸಂಗವಾಗಿ ಪರಿಣಮಿಸಿತು.

ಪ್ರಸಂಗದ ನೆನಪು ಸದಾ ಕಾಲವೂ ಉಳಿಯಬೇಕೆಂದು ಶ್ರೀಕೃಷ್ಣನೇ ತೀರ್ಮಾನಿಸಿದ. ಅದಕ್ಕಾಗಿ ಅವನು ಅಲ್ಲಿ ಸೇರಿದ ರಾಜ ಮಹಾರಾಜರಿಗೆ ಮತ್ತು ಇತರ  ಮಹಾನುಭಾವರಿಗೆ ಒಂದು ಸಲಹೆ ನೀಡಿದ. ಅದರಂತೆ ಪ್ರತಿ ವರ್ಷದ ಭಾದ್ರಪದ ಶುಕ್ಲ ಚೌತಿಯ ದಿನ ಸಮಸ್ತರೂ ತಮ್ಮ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡತಕ್ಕದ್ದು. ಹಾಗೂ ನಂತರ ಮೂರ್ತಿಯನ್ನು ಕೆರೆ, ಕೊಳ , ನದಿ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡುವುದು.  ಶ್ರೀಕೃಷ್ಣನ ಸಲಹೆಗೆ ಗಣೇಶನ ಸಂಪೂರ್ಣ ಒಪ್ಪಿಗೆ ದೊರೆಯಿತು. ಅವನು ತಾನು ತನ್ನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಎಲ್ಲಾ ಮನೆಗಳಲ್ಲೂ  ಹಾಜರಾಗಿ ಮನೆಯವರನ್ನೆಲ್ಲಾ ಆಶೀರ್ವದಿಸುವುದಾಗಿ ಒಪ್ಪಿಗೆ ನೀಡಿದ.

ವಿಚಿತ್ರವೆಂದರೆ ಅತ್ಯಂತ ಕುತೂಹಲಕಾರಿಯಾದ ಪ್ರಸಂಗ ವ್ಯಾಸ ಮಹರ್ಷಿ ವಿರಚಿತ ಮೂಲ ಮಹಾಭಾರತ ಕಥೆಯಲ್ಲೆಲ್ಲೂ ಬಂದಂತಿಲ್ಲ. ಇನ್ನೂ ವಿಚಿತ್ರವೆಂದರೆ ವ್ಯಾಸ ಮಹರ್ಷಿಗಳು ಮೂಲ ಮಹಾಭಾರತವನ್ನು ಸ್ವತಃ ಗಣೇಶನ ಹಸ್ತದಲ್ಲೇ ಬರವಣಿಗೆ ಮಾಡಿಸಿದ್ದರು. ಅವನು ವ್ಯಾಸರಿಗೆ ಪ್ರಸಂಗವನ್ನು ಕಥೆಯಲ್ಲಿ ಸೇರಿಸುವಂತೆ ಸಲಹೆ ಮಾಡಬಹುದಿತ್ತಲ್ಲವೇ ಎನ್ನುವ ಪ್ರಶ್ನೆಬಂದೇ  ಬರುತ್ತದೆ. ನಮ್ಮ ಭಾವನವರ ಪ್ರಕಾರ ಗಣೇಶ ತುಂಬಾ ಸಂಕೋಚ ಮತ್ತು ನಾಚಿಕೆ ಸ್ವಭಾವದ ವ್ಯಕ್ತಿ. ಅವನಿಗೆ ಆತ್ಮ ಪ್ರತಿಷ್ಠೆ ಲವಲೇಶವೂ ಇರಲಿಲ್ಲ. ಅಲ್ಲದೇ ವ್ಯಾಸ ಮಹರ್ಷಿಗಳು ಬರವಣಿಗೆ ಮಾಡಿಸುತ್ತಿರುವಾಗ ಮಧ್ಯೆ ತಲೆ ಹಾಕುವುದು ರಸಾಭಾಸವಾಗುತ್ತಿತ್ತು! ಜೈ ಗಣೇಶ!
----ಮುಂದುವರಿಯುವುದು ---

Wednesday, April 18, 2018

ಒಂದು ಊರಿನ ಕಥೆ - 10 (ಹೊಕ್ಕಳಿಕೆ)


ಸಂಬಂಧಿಕರ ಸಾಲ
ಭಾವನವರ ಲೆಖ್ಖದ ಪುಸ್ತಕದಲ್ಲಿ ಸೇರಿದ್ದಹೋಕು’ ಸಾಲಗಳು ಮುಖ್ಯವಾಗಿ ಅವರ ಸಂಬಂಧಿಕರಿಗೆ ಕೊಟ್ಟ ಸಾಲಗಳು. ಅವುಗಳಲ್ಲಿ ಹೆಚ್ಚಿನವು ವಾಪಾಸ್ ಬರುವ ಯಾವುದೇ ಸೂಚನೆಗಳಿರಲಿಲ್ಲ. ಆದರೆ ಸಂಬಂಧಿಗಳಿಗೆ ಭಾವನವರ ಮನೆಯಲ್ಲಿ ನಡೆಯುತ್ತಿದ್ದ ವಿಶೇಷ ಸಮಾರಂಭಗಳಿಗೆ ಬರುವಾಗ ಯಾವುದೇ ಮುಜುಗರವಿರುತ್ತಿರಲಿಲ್ಲ. ಅಲ್ಲದೇ ಅವರಿಗೆ ಭಾವನವರು ಯಾರನ್ನೂ ನೇರವಾಗಿ ಸಾಲ ತೀರಿಸಬೇಕೆಂದು ಹೇಳುವುದಿಲ್ಲವೆಂಬ ಧೈರ್ಯವೂ ಇತ್ತು. ಆದರೆ ಸಮಾರಂಭ ಮುಗಿದು ನೆಂಟರೆಲ್ಲಾ ಹೊರಡಲು ತಯಾರಾಗಿ ಕಾಫಿ ಕುಡಿಯುತ್ತಿರುವಾಗ ಅವರು ಭಾವನ ಒಂದು ಭಾಷಣವನ್ನು ಸಾಮಾನ್ಯವಾಗಿ ಕೇಳಲೇ ಬೇಕಾಗಿತ್ತು. ಅದರ ಸಾರಾಂಶ ಇಷ್ಟೇ. ಸಂಬಂಧಿಗಳಾದರೂ ಕೂಡ ಸಾಲ ತೀರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಸರಿಯಲ್ಲ. ಸ್ವಲ್ಪ ಸ್ವಲ್ಪವಾಗಿಯಾದರೂ ತೀರಿಸುವ ಪ್ರಯತ್ನ ಮಾಡಲೇ ಬೇಕು. ಭಾವನವರ ಮಾತು ಮುಗಿಯುವಷ್ಟರಲ್ಲಿ ಒಂದಿಬ್ಬರು ಬೇಗಬೇಗನೆ ಕಾಫಿ ಮುಗಿಸಿ ಅಂಗಳಕ್ಕಿಳಿದು ಬಿಡುತ್ತಿದ್ದರು. ಅವರು ಸಾಲಗಾರರ ಲಿಸ್ಟಿಗೆ ಸೇರಿದ್ದರೆಂದು ಅವರ ನಡೆಯಿಂದಲೇ ಗೊತ್ತಾಗುತ್ತಿತ್ತು!
ನಮ್ಮಣ್ಣನ ಎಮ್ಮೆ ಸಾಲ
ನಮ್ಮ ಸಂಸಾರದ ಹಣಕಾಸಿನ ಪರಿಸ್ಥಿತಿ ದಿನಗಳಲ್ಲಿ ತುಂಬಾ ಕಷ್ಟಕರವಾಗಿರುತ್ತಿತ್ತು. ರುಕ್ಮಿಣಕ್ಕನ ಮದುವೆಯಾದ ನಂತರ ಅಣ್ಣನ ಮದುವೆಯ ಖರ್ಚೂ ಸೇರಿ ಸ್ಥಿತಿ ಇನ್ನೂ ಬಿಗಡಾಯಿಸಿ ಬಿಟ್ಟಿತ್ತು. ಆದರೂ ಯಾವೊತ್ತೂ ಭಾವನವರಿಂದ ಸಾಲ ಮಾಡಿರಲಿಲ್ಲ. ಆದರೆ ನನ್ನ ಕಣ್ಣ ಮುಂದೆಯೇ ಅಂತಹ ಪರಿಸ್ಥಿತಿ ಬಂದು ಬಿಟ್ಟಿತು. ನಾನು ಆಗ ಬೇಸಿಗೆ ರಜೆಯಲ್ಲಿ ಅಡೇಖಂಡಿಯಲ್ಲೇ  ಇದ್ದೆ. ನಮ್ಮ ಮನೆಯ ಎಮ್ಮೆಯೊಂದು ಆಗ ತಾನೇ ಕರು ಹಾಕಿ ಚೆನ್ನಾಗಿ ಹಾಲು ಕೊಡುತ್ತಿತ್ತು. ಅದೆಷ್ಟೆಂದರೆ ಪೂರ್ತಿ ಸಂಸಾರಕ್ಕೆ ಸಾಕಾಗುವಷ್ಟು. ಒಂದು ದಿನ ಯಥಾ ಪ್ರಕಾರ ಅದನ್ನು ಮೇವಿಗೆ ಬಿಡಲಾಗಿತ್ತು. ಸುಮಾರು ಮಧ್ಯಾಹ್ನ ಮೂರು ಘಂಟೆಗೆ ಒಂದು ವರ್ತಮಾನ ಬಂತು. ನಮ್ಮ ಎಮ್ಮೆ ಅಮ್ಮನ ತವರುಮನೆ ಮೊದಲಮನೆಯ ಮೇಲಿದ್ದ ರಸ್ತೆಯಿಂದ ಕೆಳಗಿನ ಪ್ರಪಾತಕ್ಕೆ ಬಿದ್ದು ಬಿಟ್ಟಿತ್ತು. ರಸ್ತೆಯ ಕೆಳಭಾಗದಲ್ಲಿ ಬೆಳೆದ ಹುಲ್ಲನ್ನು ತಿನ್ನುವ ಭರದಲ್ಲಿ ಅದರ ಕಾಲು ಜಾರಿ ಹೊಂಡಕ್ಕೆ ಬಿದ್ದಿತ್ತು. ಬಿದ್ದ ಭರಾಟೆಗೆ ಅದರ ಕಾಲುಗಳು ಮುರಿದು ಹೋಗಿದ್ದವು. ನಾನು ಅಮ್ಮನೊಡನೆ ಸ್ಥಳಕ್ಕೆ ಓಡಿಹೋದೆ. ಅಮ್ಮನ ಪ್ರೀತಿಯ ಎಮ್ಮೆಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅಮ್ಮನನ್ನು ನೋಡುತ್ತಾ ಎಮ್ಮೆಯ ಕಣ್ಣಿನಲ್ಲಿ ನೀರು ಹರಿದು ಬರತೊಡಗಿತು. ಇಷ್ಟು ವರ್ಷಗಳು ಕಳೆದ ಮೇಲೂ ದೃಶ್ಯವನ್ನು ನೆನಸಿಕೊಂಡು ನನ್ನ ಕಣ್ಣಲ್ಲಿ ಹನಿಗಳು ಉದುರುತ್ತಿವೆ. ಮೂಕ ಪ್ರಾಣಿಯ ನರಳುವಿಕೆ ಮತ್ತು ಅಮ್ಮನಮೇಲಿದ್ದ ಅದರ ಪ್ರೀತಿ ವರ್ಣಿಸಲಸದಳವಾಗಿತ್ತು. 

ಊರಿನವರೆಲ್ಲಾ ಸೇರಿ ಎಮ್ಮೆಯನ್ನೇನೋ ನಮ್ಮ ಮನೆಗೆ ಹೊತ್ತು ತಲುಪಿಸಿದರು. ಆದರೆ ಅದು ಹೆಚ್ಚು ದಿನ ಬದುಕಲಿಲ್ಲ. ಹಾಲಿನ ಕೊರತೆ ನೀಗಿಸಲು ಇನ್ನೊಂದು ಎಮ್ಮೆ ಕೊಳ್ಳಬೇಕಾಯಿತು. ವೇಳೆಗೆ ಸರಿಯಾಗಿ ನಮ್ಮ ಕೆಳಗಿನ ಮನೆಯಲ್ಲಿ ಎರಡು ಎಮ್ಮೆಗಳು ಕರು ಹಾಕಿದ್ದರಿಂದ ಒಂದನ್ನು ಮಾರಬೇಕೆಂದಿದ್ದರು. ಅದರಲ್ಲಿ ಒಂದರ ಬೆಲೆ ೨೦೦ ರೂಪಾಯಿ ಎಂದು ನಿಗದಿ ಮಾಡಿ ನಾವು ಕೊಳ್ಳುವುದೆಂದು ತೀರ್ಮಾನವಾಯಿತು. ಅಣ್ಣ ಸ್ವತಃ ಹೊಕ್ಕಳಿಕೆಗೆ ಹೋಗಿ ಭಾವನಿಂದ ೨೦೦ ರೂಪಾಯಿ ಸಾಲ ತಂದ. ಅದನ್ನು ಆಮೇಲೆ ಹಿಂತಿರುಗಿಸಿದನೇ ಎಂಬುದು ನನಗೆ ತಿಳಿಯಲಿಲ್ಲ.
ಭಾವನವರ ನ್ಯೂಸ್ ಪೇಪರ್ ಸ್ಕೀಮ್ !
ಭಾವನವರು ಮನೆಯ ಅಗತ್ಯಗಳಿಗೆ ಧಾರಾಳವಾಗಿ ಹಣ ಖರ್ಚು ಮಾಡುತ್ತಿದ್ದರು. ಆದರೆ ಹಣವನ್ನು ಯಾವುದೇ ಕಾರಣಕ್ಕೂ ವ್ಯರ್ಥವಾಗಿ ಖರ್ಚು ಮಾಡುತ್ತಿರಲಿಲ್ಲ. ಹಾಗೆಯೇ ಹಣವನ್ನು ಎಲ್ಲೆಲ್ಲಿ ಉಳಿತಾಯ ಮಾಡಬಹುದಾಗಿತ್ತೋ ಅಲ್ಲಲ್ಲಿ ಮಾಡಿಯೇ ಬಿಡುತ್ತಿದ್ದರು. ದಿನಗಳಲ್ಲಿ ಹೊಕ್ಕಳಿಕೆಗೆ ಕನ್ನಡ ವರ್ತಮಾನ ಪತ್ರಿಕೆಗಳು ಗಡಿಕಲ್ಲಿನ ಗುಂಡಾ ನಾಯಕ್ ಎಂಬುವರ ಅಂಗಡಿಯಿಂದ ಬರುತ್ತಿದ್ದವು. ಬೆಂಗಳೂರಿನಿಂದ ಬಂದ ಪತ್ರಿಕೆಗಳು ಸಾಮಾನ್ಯವಾಗಿ ಪ್ರತಿದಿನ ಗಂಟೆಯ ವೇಳೆಗೆ ಹೊಕ್ಕಳಿಕೆ ತಲುಪುತ್ತಿದ್ದವು. ನನಗಾದ ಆಶ್ಚರ್ಯವೆಂದರೆ ಭಾವನವರ ಮನೆಯ ಪ್ರಜಾವಾಣಿ ಮಾತ್ರ ಯಾವಾಗಲೂ ಒಂದು ದಿನ ತಡವಾಗಿ ತಲುಪುತ್ತಿತ್ತು.  ಜವಾಹರ್ಲಾಲ್ ನೆಹರು ಅವರು ದೇಶದ ಪ್ರಧಾನಿಯಾಗಿದ್ದ ಹಾಗೂ ಬಿ ಡಿ ಜತ್ತಿಯವರು ಮೈಸೂರಿನ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಯಾವುದೇ ಕೆಟ್ಟ ಅಥವಾ ಕುತೂಹಲಕಾರಿ ಹಾಗೂ ಪ್ರಚೋದನಕಾರಿ ವರ್ತಮಾನಗಳು ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಬರುತ್ತಿರಲಿಲ್ಲ.  ಆದ್ದರಿಂದ ವರ್ತಮಾನ ಪತ್ರಿಕೆಗಳನ್ನು ಅದೇ ದಿನ ಓದುವುದಕ್ಕೂ ಅಥವಾ ಮಾರನೇ ದಿನ ಓದುವುದಕ್ಕೂ ಹೆಚ್ಚು ವ್ಯತ್ಯಾಸ ಇರುತ್ತಿರಲಿಲ್ಲ!

ಇದೇ ಕಾರಣಕ್ಕಾಗಿ ಭಾವನವರು ಗುಂಡಾ ನಾಯಕರೊಡನೆ ಒಂದು ವಿಶೇಷ ಒಪ್ಪಂದ ಮಾಡಿಕೊಂಡಿದ್ದರು. ಗುಂಡಾ ನಾಯಕರು ಪ್ರಜಾವಾಣಿಯ ಒಂದು ಕಾಪಿಯನ್ನು ಅವರ ಮನೆಯಲ್ಲಿ  ಓದಲು ಕೊಳ್ಳುತ್ತಿದ್ದರು. ಭಾವನವರೊಂದಿಗೆ ಆದ  ಒಪ್ಪಂದದ ಪ್ರಕಾರ ಅವರು ಪತ್ರಿಕೆಯನ್ನು ಮಾರನೇ ದಿನ ಬಾವನವರಿಗೆ ತಲುಪಿಸುತ್ತಿದ್ದರು. ಭಾವನವರು ಪತ್ರಿಕೆಯ ಅರ್ಧ ಬೆಲೆಯನ್ನು ತಿಂಗಳ ಕೊನೆಯಲ್ಲಿ ಗುಂಡಾ ನಾಯಕರಿಗೆ ಕೊಡುತ್ತಿದ್ದರು. ಉಳಿದ ಅರ್ಧ ಬೆಲೆ ಗುಂಡಾ ನಾಯಕರ ಪಾಲಿಗೆ ಹೋಗುತ್ತಿತ್ತು. ಇದು ಇಬ್ಬರಿಗೂ ಒಂದು ಬಗೆಯ ೫೦:೫೦ ಡಬಲ್ ಬೆನಿಫಿಟ್ ಸ್ಕೀಮ್ ಆಗಿತ್ತು. ಗುಂಡಾ ನಾಯಕರಿಗೆ ಪತ್ರಿಕೆಯನ್ನು ಅದೇ ದಿನ ಓದುವ ಸೌಕರ್ಯವಾದರೆ, ಬಾವನವರಿಗೆ ಮಾರನೇ ದಿನ ಓದುವುದರಲ್ಲಿ ಏನೂ ಕೊರತೆ ಕಾಣುತ್ತಿರಲಿಲ್ಲ. ಅಲ್ಲದೇ ಹಳೆಯ ಪತ್ರಿಕೆಗಳನ್ನು ತೂಕಕ್ಕೆ ಮಾರುವ ಬೆನಿಫಿಟ್ ಅವರದ್ದಾಗಿತ್ತು!
೧೦೦% ಪಕ್ಕಾ ತೂಕ!
ವರ್ತಮಾನ ಪತ್ರಿಕೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣ ಕೂಡಾ ತುಂಬಾ ತಮಾಷೆಯದ್ದಾಗಿದೆ. ಇದನ್ನು ನನಗೆ ಹೇಳಿದ್ದು ನನ್ನ ತಮ್ಮ ಶ್ರೀನಿವಾಸ. ಅವನೂ ಕೂಡಾ ಮೂರು ವರ್ಷ ಅಕ್ಕನ  ಮನೆಯಲ್ಲಿದ್ದು ಗಡಿಕಲ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ.

ಒಂದು ಬಾರಿ ಹಳೇ ಪೇಪರ್ ಕೊಳ್ಳುವವನು ತನ್ನ ತಕ್ಕಡಿಯೊಡನೆ ಭಾವನ ಮನೆಗೆ ಬಂದಿದ್ದ. ಅವನ ಮುಂದೆ ಹಳೇ ಪತ್ರಿಕೆಗಳ ರಾಶಿ ಹಾಕಲಾಯಿತು. ಅವನು ತಕ್ಕಡಿಯಲ್ಲಿ ತೂಕ ಮಾಡಿ ಮಾಡಿ ಒಂದು ಕಡೆ ಪೇರಿಸ ತೊಡಗಿದ. ಕಟ್ಟಕಡೆಯ ತಕ್ಕಡಿ ತೂಕದಲ್ಲಿ  ಅವನ ಪ್ರಕಾರ ಇನ್ನೊಂದು ಪೇಪರ್ ಹಾಕಬಹುದಾದಷ್ಟು ತೂಕ ಕಡಿಮೆ ಇತ್ತು. ಅವನು ಇನ್ನೊಂದು ಪೇಪರ್ ಇರುವುದೇ ಎಂದು ಕೇಳಿದ. ಸಮಯಕ್ಕೆ (ಸಂಜೆ ಸುಮಾರು ಗಂಟೆ)  ಸರಿಯಾಗಿ ಹುಡುಗನೊಬ್ಬ ಆಗತಾನೆ  ಗಡಿಕಲ್ ನಿಂದ ಬಂದ ದಿನದ ಪೇಪರ್ ಭಾವನವರ ಕೈಗಿತ್ತ. ಅದನ್ನು ಮನೆಯಲ್ಲಿ ಯಾರೂ ಓದಿರಲಿಲ್ಲ. ಭಾವನವರು ಹಿಂದು ಮುಂದು ನೋಡದೆ ಅದನ್ನು ತಕ್ಕಡಿಯಲ್ಲಿಟ್ಟು ಬಿಟ್ಟರು! ಪೇಪರ್ ವ್ಯಾಪಾರಿ ಕೂಡಾ ಯಾವ ಸಂಕೋಚವಿಲ್ಲದೇ ತೂಕ ಸರಿಯಾಯಿತೆಂದು ಹೇಳಿ ಅದನ್ನು ರಾಶಿಗೆ ಸೇರಿಸಿ ಬಿಟ್ಟ!
----ಮುಂದುವರಿಯುವುದು ---

Friday, April 6, 2018

ಒಂದು ಊರಿನ ಕಥೆ - 9 (ಹೊಕ್ಕಳಿಕೆ)


ನಮ್ಮ ಭಾವನ ಮನೆ ಆಡಳಿತ
ನಮ್ಮ ಭಾವನವರಷ್ಟು ಶಿಸ್ತಿನ  ಜೀವನವನ್ನು ನಡೆಸಿದವರನ್ನು ನಾನು ಪ್ರಾಯಶಃ ಬೇರೆಲ್ಲೂ ನೋಡಲಿಲ್ಲ. ಹಣದ ವ್ಯವಹಾರವಿರಲಿ, ಮನೆಯ ನಿತ್ಯ ಕಾರ್ಯಗಳಿರಲಿ, ಪೂಜೆ ಪುನಸ್ಕಾರಗಳಿರಲಿ, ಸಾರ್ವಜನಿಕ ವ್ಯವಹಾರಗಳಿರಲಿ ಅಥವಾ ಇತರೆ ಯಾವುದೇ ಕಾರ್ಯಕ್ರಮಗಳಿರಲಿ ಅವೆಲ್ಲವನ್ನೂ ತುಂಬಾ ಕ್ರಮಬದ್ಧವಾಗಿ ನಡೆಸುತ್ತಿದ್ದರು. ಅವರ ಜೀವನ ಶೈಲಿ ಬೇರೆಯವರಿಗಿಂತ ತುಂಬಾ ವಿಭಿನ್ನವಾಗಿತ್ತು. ಎಷ್ಟೇ ಬೇಸರವಾದರೂ ಅವರು ಯಾರನ್ನೂ ನೇರವಾಗಿ ಬೈದವರೇ ಅಲ್ಲ. ಯಾರಿಗಾದರೂ ಏನಾದರೂ ಹೇಳಬೇಕಾದರೆ ಅದನ್ನು ಪರೋಕ್ಷವಾಗಿ ಹೇಳುವುದೇ ಅವರಿಗೆ ರೂಢಿಯಾಗಿತ್ತು. ವಿಚಿತ್ರವೆಂದರೆ ಅಕ್ಕನಿಗೆ ಕೂಡಾ ಅವರು ನೇರವಾಗಿ ಏನೂ ಹೇಳುತ್ತಿರಲಿಲ್ಲ. ಉದಾಹರಣೆಗೆ "ನೀನು ಈ ದಿನ ಬದನೆ ಕಾಯಿ ಹುಳಿ  ಮಾಡು" ಎಂದು ಹೇಳಬೇಕಾದರೆ, "ಇವೊತ್ತು ಬದನೆ ಕಾಯಿ ಹುಳಿ ಮಾಡಿದರೆ ಚೆನ್ನಾಗಿತ್ತು" ಎಂದು ಮಾತ್ರಾ ಹೇಳುತ್ತಿದ್ದರು. ಅದು ಅಕ್ಕನಿಗೆ ಹೇಳಿದ್ದೆಂದು ಅವಳು ತಿಳಿದುಕೊಳ್ಳಬೇಕಿತ್ತು! ಅಕ್ಕನಿಗೆ ಅದು ಎಷ್ಟು ರೂಢಿಯಾಗಿತ್ತೆಂದರೆ ಅವಳು ಕೂಡಾ ಅದಕ್ಕೆ ಪರೋಕ್ಷವಾಗಿಯೇ ಉತ್ತರಿಸುತ್ತಿದ್ದಳು!
ಭಾವನ ಅಡಿಗೆ ಕೌಶಲ್ಯ
ಅಕ್ಕ ತಿಂಗಳ ರಜೆ ಹಾಕಿದಾಗ ನಮಗೆ ಭಾವನವರ ಅಡಿಗೆ ರುಚಿ ನೋಡುವ ಅವಕಾಶ ಸಿಗುತ್ತಿತ್ತು. ಉಳಿದಂತೆ ಅಡಿಗೆಯಲ್ಲಿ ತಲೆಹಾಕದಿದ್ದರೂ, ಅವರಿಗೆ ರುಚಿ ರುಚಿಯಾದ ಪದಾರ್ಥಗಳನ್ನು (ಮೇಲೋಗರ) ಮಾಡುವ ಕಲೆ ಸಾಧಿಸಿತ್ತು. ನಾನು ಮತ್ತು ಮಂಜಪ್ಪ ಅವರಿಗೆ ಸ್ವಲ್ಪ ಸಹಾಯ ಮಾಡಲು ನೋಡುತ್ತಿದ್ದೆವು. ನನಗೆ ಕಾವಲಿಯ ಮೇಲೆ ದೋಸೆ ಮಾಡಲು ಬರುತ್ತಿತ್ತು. ಹಾಗೆಯೇ ಪಾತ್ರೆ ತೊಳೆಯುವುದರಲ್ಲೂ ಆಸಕ್ತಿ  ಇತ್ತು. ನಾನು ಅವೆರಡು ಕೆಲಸ ಮಾಡುತ್ತಿದ್ದೆ. ಆದರೆ ಅಕ್ಕ ನಾಲ್ಕನೆಯ ದಿನ ಸ್ನಾನ ಮಾಡಿ ಬರುವಾಗ ನನಗೊಂದು ಸಮಸ್ಯೆ ಇತ್ತು. ಏಕೆಂದರೆ ಭಾವ ದಿನ ಅಕ್ಕಿ ಗಂಜಿ ಕಂಪಲ್ಸರಿ ಎಂದು ರೂಲ್ ಮಾಡಿದ್ದರು. ಆದಿನ ಬೇರೇನೂ ತಿಂಡಿ ಮಾಡುವ ಪ್ರಶ್ನೆಯೇ ಇರಲಿಲ್ಲ. ನನಗೆ ಹುಟ್ಟಿನಿಂದ ಗಂಜಿಯ ಮೇಲೆ ದ್ವೇಷ ಇತ್ತು. ಆದರೆ ನಿರ್ವಾಹವಿಲ್ಲದೆ ಅದನ್ನು ನುಂಗಬೇಕಾಗಿತ್ತು!

ಅಡಿಗೆಯ ಸಾಮಾನುಗಳ ಬಗ್ಗೆ ಅಕ್ಕ ಚಿಂತಿಸಲೇ ಬೇಕಾಗಿರಲಿಲ್ಲ. ಅವುಗಳ ಸಪ್ಲೈ ಮತ್ತು ಜೋಡಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಭಾವನವರೇ ಹೊತ್ತಿದ್ದರು. ಯಾವುದೇ ಸಾಮಾನು ಖಾಲಿಯಾಗುವುದರೊಳಗೆ ಇನ್ನಷ್ಟು ಬಂದು ಡಬ್ಬದೊಳಗೆ ಸೇರಿ ಬಿಡುತ್ತಿತ್ತು.. ಮಹಡಿಯ ಮೇಲಿನ ಕೋಣೆಯೊಂದು ಸ್ಟೋರ್ ರೂಮ್ ಆಗಿತ್ತು. ಅಲ್ಲಿಂದ ಕಾಲಕಾಲಕ್ಕೆ ಸಾಮಾನುಗಳು ಅಡಿಗೆ ಮನೆಗೆ ಪ್ರವೇಶ ಮಾಡುತ್ತಿದ್ದವು! ಸ್ಟೋರ್ ರೂಮಿಗೆ ಕೊಪ್ಪದ ಸಂತೆಯಿಂದ ಗಾಡಿಯಲ್ಲಿ ಸಾಮಾನುಗಳು ಬರುತ್ತಿದ್ದವು.
ಭಾವನವರ ಜೀವನೋತ್ಸಾಹ
ಭಾವನವರಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಮೊದ ಮೊದಲು ನಮ್ಮ ಮನೆಗೆ ಬರುವಾಗ ಜೊತೆಯಲ್ಲಿ ಅವರ ಅಕ್ಕಂದಿರ ಯಾರಾದರೂ ಗಂಡು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದರು. ಹಾಗೆ ಬಂದವರಲ್ಲಿ ಫಣಿಯಪ್ಪಯ್ಯನವರ ಮಗ ಪದ್ಮನಾಭ, ಆಲ್ಮನೆಯ ಗಿರಿಜಮ್ಮನವರ ಎರಡನೇ ಮಗ ಪದ್ಮನಾಭ ಮತ್ತು ನರ್ಜಿಯ ಬೆಳ್ಳಯ್ಯನವರ ಒಬ್ಬ ಮಗ ಸೇರಿದ್ದರು. ನಮ್ಮೂರಿನ ತೋಟದಲ್ಲಿದ್ದ ಕೆರೆಗಳೂ ಮತ್ತು ಅಲ್ಲಿ ಬೆಳೆಯುತ್ತಿದ್ದ ಬೇರೆ ಬೇರೆ ಬೆಳೆಗಳ ಬಗ್ಗೆ ಭಾವನವರಿಗೆ ತುಂಬಾ ಆಸಕ್ತಿ ಇತ್ತು. ಆಗ ಹೊಕ್ಕಳಿಕೆ ತೋಟಗಳಲ್ಲಿ ನಮ್ಮೂರಿನಂತೆ ವೀಳ್ಯದೆಲೆ ಬೆಳೆಯುತ್ತಿರಲಿಲ್ಲ. ಆದರೆ ಭಾವ ನಮ್ಮ ತಂದೆಯವರಿಂದ ಅದರ ಬಳ್ಳಿಗಳನ್ನು ತೆಗೆದುಕೊಂಡು ಹೋಗಿ ಅವರ ಮನೆಯ ತೋಟದ ಭಾವಿಯ ಸುತ್ತಲಿದ್ದ ಮರಗಳಿಗೆ ಬೆಳೆಸಿ ಹಬ್ಬಿಸಿ ಬಿಟ್ಟರು. ಅದು ಎಷ್ಟು ಚೆನ್ನಾಗಿ ಬಂತೆಂದರೆ ನಾನು ಅವರ ಮನೆಗೆ ಓದಲು ಹೋದಾಗ ತೋಟದಲ್ಲಿ ಬೆಳೆದ ಎಲೆಗಳನ್ನು ಅಂಗಡಿಗೆ ಸಪ್ಲೈ ಮಾಡಲಾರಂಭಿಸಿದ್ದರು!
ಕೆಲಸದ ಆಳುಗಳು
ಭಾವನವರ ಜಮೀನುಗಳಲ್ಲಿ ಕೆಲಸ ಮಾಡಲು ಕೆಲಸಗಾರರ ಕೆಲವು ಸಂಸಾರಗಳು ಇದ್ದವು.  ಹಾಗೆಯೇ ಗಾಡಿ ಹೊಡೆಯುವ ವಿಶೇಷ ಕೆಲಸಕ್ಕೆ ನಕ್ರನನ್ನು  ನೇಮಕ ಮಾಡಲಾಗಿತ್ತು. ಬೆಳಿಗ್ಗೆ ಅವರು ಕೆಲಸಕ್ಕೆ ಬಂದಾಗ ಅವರಿಗೆಲ್ಲಾ ಎಲೆ ಅಡಿಕೆ ಸುಣ್ಣ ಮತ್ತು ಹೊಗೆಸೊಪ್ಪು ಕೊಡುವ ಪದ್ಧತಿ ಇತ್ತು. ಆಳುಗಳಿಗೆ ದಿನದ ಸಂಬಳ ಎಷ್ಟೆಂದು  ನಿಗದಿ ಮಾಡಲಾಗಿತ್ತು. ಹೆಣ್ಣಾಳುಗಳಿಗೆ ಸ್ವಲ್ಪ ಕಡಿಮೆ ಸಂಬಳ ಇತ್ತು. ಕೆಲಸ ಮುಗಿಸಿ ಹೋಗುವಾಗ ಆಳಿಗೊಂದು ಸೇರು ಅಕ್ಕಿ ಅಳೆದು ಕೊಡಲಾಗುತ್ತಿತ್ತು. ಹಾಗೆಯೇ ಅವರ ಕೈಮೇಲೆ ಒಂದು "ಉಂಡಿಗೆ" ಇಡಲಾಗುತ್ತಿತ್ತು. ಉಂಡಿಗೆ ಎನ್ನುವುದು ಭಾವನವರ  ಹೆಸರಿನ ರಬ್ಬರ್ ಸ್ಟ್ಯಾಂಪ್ ಒತ್ತಿದ್ದ ಒಂದು ಪೇಪರ್ ಟೋಕನ್. ತಿಂಗಳ ಕೊನೆಯಲ್ಲಿ ಒಬ್ಬ ಅಳು ಎಷ್ಟು ಉಂಡಿಗೆ ಹೊಂದಿದ್ದನೋ ಅಷ್ಟು ದಿನ ಅವನು ಕೆಲಸ ಮಾಡಿದ್ದ ಎಂದು ಲೆಖ್ಖ. ಅದರ ಪ್ರಕಾರ ಅವನಿಗೆ ನಿಗಧಿಯಾದ ರೇಟಿನಲ್ಲಿ ಸಂಬಳ ಲೆಖ್ಖ ಮಾಡಿ ಕೊಡಲಾಗುತ್ತಿತ್ತು. ಕೆಲವರು ಸಂಬಳವನ್ನು ಪೂರ್ತಿ ತೆಗೆದು ಕೊಳ್ಳದೇ ಹಾಗೆಯೆ ನಿಲ್ಲಿಸಿ ವರ್ಷಕ್ಕೊಮ್ಮೆ ಊರಿಗೆ ಹೋಗುವಾಗ ಲೆಖ್ಖ ಮಾಡಿಸಿ ತೆಗೆದುಕೊಂಡು ಹೋಗುತ್ತಿದ್ದರು.
ಭಾವನವರ ಲೇವಾದೇವಿ ವ್ಯವಹಾರ
ಭಾವನವರ ಹಣಕಾಸಿನ ವ್ಯವಹಾರ ಆಸ್ತಿ ಪಾಲಾದ ನಂತರ ಮೊದಲಿನಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಜೋರಾಗಿಯೇ  ನಡೆಯುತ್ತಿತ್ತು. ದಿನಗಳಲ್ಲಿ ಊರಿನವರು ಗದ್ದೆಯನ್ನು ಹೆಚ್ಚಾಗಿ ಗೇಣಿಗೆ ಕೊಡುತ್ತಿದ್ದರು. ಕೆಲವರು ಮಾತ್ರ ಸ್ವಲ್ಪ ಗದ್ದೆಯನ್ನು ಸ್ವಂತಕ್ಕೆ ಬೇಸಾಯ ಮಾಡುತ್ತಿದ್ದರು. ಗೇಣಿದಾರರಿಗೆ ಸಾಗುವಳಿ ಸಮಯದಲ್ಲಿ ಸಾಮಾನ್ಯವಾಗಿ ನಗದು ಹಣ ಇರುತ್ತಿರಲಿಲ್ಲ. ಅವರು ಸಾಲಮಾಡಿಯೇ ಬೇಸಾಯ ಮಾಡುವ ಪರಿಸ್ಥಿತಿ ಇರುತ್ತಿತ್ತು. ಭಾವನವರು ಇಂತಹ ರೈತರಿಗೆ ಬೆಳೆ ಸಾಲ ಕೊಡುತ್ತಿದ್ದರು. ಬೆಳೆ ಕೈಗೆ ಬಂದ  ಮೇಲೆ ರೈತರು ಅವರು ಬೆಳೆದ ಭತ್ತವನ್ನು ನಿಗದಿಯಾದ ಬೆಲೆಗೆ ಬಾವನವರಿಗೆ ಮಾರಿ ಸಾಲ ಚುಕ್ತಾ ಮಾಡುತ್ತಿದ್ದರು.

ಒಕ್ಕಲಾಟದ ಸಮಯದಲ್ಲಿ ನಕ್ರನ ಗಾಡಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಗಾಡಿಯಲ್ಲಿ ತಂದ  ಭತ್ತವನ್ನು ಅಳೆದು ಕೊಟ್ಟಿಗೆಯಲ್ಲಿದ್ದ ದೊಡ್ಡ ಪಣತಗಳಲ್ಲಿ ಸುರಿಯಲಾಗುತ್ತಿತ್ತು. ಸಾಮಾನ್ಯವಾಗಿ ಒಕ್ಕಲಾಟದ ಸಮಯದಲ್ಲಿ ಭತ್ತದ ಬೆಲೆ ಕಡಿಮೆ ಇರುತ್ತಿತ್ತು. ಆದರೆ ರೈತರಿಗೆ ಹಣದ ಅವಶ್ಯಕತೆ ಇದ್ದರಿಂದ ಮಾರಾಟ ಮಾಡಲೇ ಬೇಕಾಗುತ್ತಿತ್ತು. ಭಾವನವರು ಮಾರ್ಕೆಟ್ ರೇಟಿಗಿಂತ ಸ್ವಲ್ಪ ಜಾಸ್ತಿಯೇ ಕೊಡುತ್ತಿದ್ದರಿಂದ ಕೆಲವು ರೈತರು ಅವರಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿದ್ದರು. ಭಾವನವರು ಸಾಲಕ್ಕೆ ಹಾಕುತ್ತಿದ್ದ ಬಡ್ಡಿಯೂ ತುಂಬಾ ಕಡಿಮೆ ಇರುತ್ತಿತ್ತು.

ಮುಂದೆ ಮಾರ್ಕೆಟ್ ರೇಟ್ ಏರಿದ ಮೇಲೆ ಭಾವನವರು ಭತ್ತವನ್ನು ದಿನಗಳಲ್ಲಿ ಸಾಮಾನ್ಯವಾಗಿ ನರಸಿಂಹರಾಜಪುರದಿಂದ ಬರುತ್ತಿದ್ದ ದೊಡ್ಡ ದೊಡ್ಡ ಅಕ್ಕಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ವ್ಯಾಪಾರಿಗಳಲ್ಲಿ ತಿಮ್ಮಪ್ಪಯ್ಯನವರ ತಮ್ಮ ವಾಸುದೇವಯ್ಯನೂ ಒಬ್ಬರಾಗಿದ್ದರು. ದೊಡ್ಡ ದೊಡ್ಡ ಲಾರಿಗಳು ಮನೆ ಅಂಗಳಕ್ಕೆ ಬಂದು ಭತ್ತವನ್ನು ಲೋಡ್ ಮಾಡಿ ಕೊಂಡೊಯ್ಯುತ್ತಿದ್ದವು.
ಚಿನ್ನದ ಸಾಲ ಮತ್ತು ಕೈಸಾಲ
ಕೇವಲ ನಂಬಿಕಸ್ಥರಿಗೆ ಮಾತ್ರಾ ಚಿನ್ನದ ಮೇಲೆ  ಸಾಲ ಕೊಡಲಾಗುತ್ತಿತ್ತು. ಸಾಮಾನ್ಯವಾಗಿ ಅದರ ಮೇಲಿನ ಬಡ್ಡಿ ಸ್ವಲ್ಪ ಜಾಸ್ತಿ ಇರುತ್ತಿತ್ತು. ಇನ್ನು ಕೈಸಾಲಕ್ಕೆ ಯಾವುದೇ ಬಡ್ಡಿ ಇರುತ್ತಿರಲಿಲ್ಲ. ಅದನ್ನು ಪಡೆಯಲು ಊರಿನ ಕೆಲವು ಮಂದಿ ಮಾತ್ರಾ ತೀರಾ ಅವಶ್ಯವಾಗಿದ್ದಾಗ ಬರುತ್ತಿದ್ದರು. ಅದರಲ್ಲಿ ಹೊಸಮನೆ ತಿಮ್ಮಪ್ಪಯ್ಯನವರೂ ಒಬ್ಬರು. ಅದರಲ್ಲಿ ಅವರದ್ದೊಂದು ಕ್ರಮವಿತ್ತು. ಸಾಲ ತೆಗೆದುಕೊಳ್ಳಲು ನನ್ನ ಭಾವ ಶ್ರೀನಿವಾಸಯ್ಯ ಅಥವಾ ಅವರ ತಮ್ಮ ವಿಶ್ವನಾಥ ಬರುತ್ತಿದ್ದರು. ಆದರೆ ಅದನ್ನು ಹಿಂದಿರುಗಿಸಲು ಯಾವಾಗಲೂ ತಿಮ್ಮಪ್ಪಯ್ಯನವರೇ ಸ್ವತಃ ಬರುತ್ತಿದ್ದರು. ಇನ್ನು ಅವರ ಅಳಿಯ ರಾಮಯ್ಯನವರದ್ದು ಇನ್ನೊಂದು ಬಗೆಯ ಸಾಲ. ಅದು ಕೈಸಾಲವಲ್ಲ. ನಂಬಿಕೆಯ ಸಾಲ. ಭಾವನವರ ಬಡ್ಡಿ ದರ ಕಡಿಮೆಯಿದ್ದರಿಂದ ರಾಮಯ್ಯನವರು ಅವರಿಂದ ಸಾಲ ಪಡೆದು ಬೇರೆಯವರಿಗೆ ಹೆಚ್ಚಿನ ಬಡ್ಡಿಗೆ ಸಾಲ ಕೊಡುತ್ತಿದ್ದರಂತೆ!  ಇನ್ನು ಗಣೇಶಯ್ಯನವರೂ ಆಗಾಗ ಭಾವನಿಂದ ಕೈಸಾಲ ತೆಗೆದು ಕೊಳ್ಳುತ್ತಿದ್ದರು. ಭಾವನವರು ಅವರ ಮಗ ಮಂಜಪ್ಪನಿಗೂ ಸಾಲ ಕೊಡುವುದು ಮತ್ತು ಅದರ ಲೆಖ್ಖ ಬರೆಯುವ ಟ್ರೈನಿಂಗ್  ಕೊಟ್ಟಿದ್ದರು. ಆದರೆ ಮಂಜಪ್ಪನೂ ಮುಂದೆ ಅದರ ಬಳಕೆ ಮಾಡಿದನೇ ಎಂಬುದು ನನಗೆ ಗೊತ್ತಿಲ್ಲ.
ಸಾಲಗಾರರ ಕಾಟ ಮತ್ತು ಅಕ್ಕನ ಗೋಳಾಟ!
ಹಿಂದಿನ ಅನುಭವದ ಮೇಲೆ ಭಾವ ಕೆಲವು ಹಳೆ ಸಾಲಗಾರರಿಗೆ ಹೊಸ ಸಾಲ ಕೊಡಲು ನಿರಾಕರಿಸುತ್ತಿದ್ದರು. ಅವರ ಲೆಖ್ಖದ ಪುಸ್ತಕಗಳಲ್ಲಿ ಹಳೆ ಸಾಲಗಾರರ ವ್ಯವಹಾರದ ಪೂರ್ಣ ವಿವರಗಳಿರುತ್ತಿದ್ದವು. ಅವರು ಅದನ್ನು ಅವರ ಮುಖಕ್ಕೆ ಚಾಚಿ ಏಕೆ ಹೊಸ ಸಾಲ ಸಾಧ್ಯವಿಲ್ಲವೆಂದು ವಿವರಿಸುತ್ತಿದ್ದರು. ಆದರೆ ಅವರಲ್ಲಿ ಕೆಲವರು ಜಪ್ಪಯ್ಯ ಎಂದರೂ ಕೂತಲ್ಲಿಂದ ಎದ್ದು ಹೋಗುತ್ತಿರಲಿಲ್ಲ. ಮೊದಮೊದಲು ಅಕ್ಕ ಅಂತಹವರಿಗೂ ಕಾಫಿ ಕೊಡುತ್ತಿದ್ದಳು. ಆದರೆ ಅವರು ಭಾವನಿಗೆ ಕಾಫಿ, ತಿಂಡಿ ಮತ್ತು ಊಟಕ್ಕೂ ಎದ್ದು ಹೋಗದಂತೆ ಸತಾಯಿಸುವುದನ್ನು ಕಂಡು ಅಕ್ಕನಿಗೆ ಕೋಪ ತಡೆಯಲಾಗುತ್ತಿರಲಿಲ್ಲ. ಎಷ್ಟೋ ಬಾರಿ ಭಾವನವರನ್ನು ಒಳಗೆ ಕರೆದು ಅಂತಹ ನಕ್ಷತ್ರಿಕರನ್ನು ಹೇಗಾದರೂ ಬೇಗನೆ ಮನೆಯಿಂದ ತೊಲಗಿಸ ಬೇಕೆಂದು ಹೇಳುತ್ತಿದ್ದಳು. ಆದರೆ ಬಾವನವರಿಗೆ ಅಷ್ಟು ನಿಷ್ಠುರ ಸ್ವಭಾವ ಬಾರದೇ ಹೋಯಿತು. ಹಾಗಾಗಿ ಕೆಲವು ನಕ್ಷತ್ರಿಕರು ಕೊನೆಗೂ ಸಾಲ ಪಡೆದು ಹೋದದ್ದನ್ನು ನಾನು ಕಂಡಿದ್ದೆ. ಆದರೆ ಆಮೇಲೆ ಅವರು  ಸಾಲ ತೀರಿಸಿದರೇ ಎಂದು ನನಗೆ ಗೊತ್ತಾಗಲಿಲ್ಲ. ಇಂತಹ ಒಬ್ಬ ನಕ್ಷತ್ರಿಕ ಸಾಲ ಕೊನೆಗೂ ಸಿಗದಿದ್ದಾಗ ಭಾವನವರ ವಾಚನ್ನೇ ಕದ್ದುಕೊಂಡು ಹೋಗಿಬಿಟ್ಟ! ಆದರೆ ಯಾವುದೇ ಸಾಕ್ಷಿ ಇಲ್ಲದ್ದರಿಂದ ಅವನಿಗೆ ಏನೂ ಮಾಡಲಾಗಲಿಲ್ಲ.
----ಮುಂದುವರಿಯುವುದು ---