Friday, April 6, 2018

ಒಂದು ಊರಿನ ಕಥೆ - 9 (ಹೊಕ್ಕಳಿಕೆ)


ನಮ್ಮ ಭಾವನ ಮನೆ ಆಡಳಿತ
ನಮ್ಮ ಭಾವನವರಷ್ಟು ಶಿಸ್ತಿನ  ಜೀವನವನ್ನು ನಡೆಸಿದವರನ್ನು ನಾನು ಪ್ರಾಯಶಃ ಬೇರೆಲ್ಲೂ ನೋಡಲಿಲ್ಲ. ಹಣದ ವ್ಯವಹಾರವಿರಲಿ, ಮನೆಯ ನಿತ್ಯ ಕಾರ್ಯಗಳಿರಲಿ, ಪೂಜೆ ಪುನಸ್ಕಾರಗಳಿರಲಿ, ಸಾರ್ವಜನಿಕ ವ್ಯವಹಾರಗಳಿರಲಿ ಅಥವಾ ಇತರೆ ಯಾವುದೇ ಕಾರ್ಯಕ್ರಮಗಳಿರಲಿ ಅವೆಲ್ಲವನ್ನೂ ತುಂಬಾ ಕ್ರಮಬದ್ಧವಾಗಿ ನಡೆಸುತ್ತಿದ್ದರು. ಅವರ ಜೀವನ ಶೈಲಿ ಬೇರೆಯವರಿಗಿಂತ ತುಂಬಾ ವಿಭಿನ್ನವಾಗಿತ್ತು. ಎಷ್ಟೇ ಬೇಸರವಾದರೂ ಅವರು ಯಾರನ್ನೂ ನೇರವಾಗಿ ಬೈದವರೇ ಅಲ್ಲ. ಯಾರಿಗಾದರೂ ಏನಾದರೂ ಹೇಳಬೇಕಾದರೆ ಅದನ್ನು ಪರೋಕ್ಷವಾಗಿ ಹೇಳುವುದೇ ಅವರಿಗೆ ರೂಢಿಯಾಗಿತ್ತು. ವಿಚಿತ್ರವೆಂದರೆ ಅಕ್ಕನಿಗೆ ಕೂಡಾ ಅವರು ನೇರವಾಗಿ ಏನೂ ಹೇಳುತ್ತಿರಲಿಲ್ಲ. ಉದಾಹರಣೆಗೆ "ನೀನು ಈ ದಿನ ಬದನೆ ಕಾಯಿ ಹುಳಿ  ಮಾಡು" ಎಂದು ಹೇಳಬೇಕಾದರೆ, "ಇವೊತ್ತು ಬದನೆ ಕಾಯಿ ಹುಳಿ ಮಾಡಿದರೆ ಚೆನ್ನಾಗಿತ್ತು" ಎಂದು ಮಾತ್ರಾ ಹೇಳುತ್ತಿದ್ದರು. ಅದು ಅಕ್ಕನಿಗೆ ಹೇಳಿದ್ದೆಂದು ಅವಳು ತಿಳಿದುಕೊಳ್ಳಬೇಕಿತ್ತು! ಅಕ್ಕನಿಗೆ ಅದು ಎಷ್ಟು ರೂಢಿಯಾಗಿತ್ತೆಂದರೆ ಅವಳು ಕೂಡಾ ಅದಕ್ಕೆ ಪರೋಕ್ಷವಾಗಿಯೇ ಉತ್ತರಿಸುತ್ತಿದ್ದಳು!
ಭಾವನ ಅಡಿಗೆ ಕೌಶಲ್ಯ
ಅಕ್ಕ ತಿಂಗಳ ರಜೆ ಹಾಕಿದಾಗ ನಮಗೆ ಭಾವನವರ ಅಡಿಗೆ ರುಚಿ ನೋಡುವ ಅವಕಾಶ ಸಿಗುತ್ತಿತ್ತು. ಉಳಿದಂತೆ ಅಡಿಗೆಯಲ್ಲಿ ತಲೆಹಾಕದಿದ್ದರೂ, ಅವರಿಗೆ ರುಚಿ ರುಚಿಯಾದ ಪದಾರ್ಥಗಳನ್ನು (ಮೇಲೋಗರ) ಮಾಡುವ ಕಲೆ ಸಾಧಿಸಿತ್ತು. ನಾನು ಮತ್ತು ಮಂಜಪ್ಪ ಅವರಿಗೆ ಸ್ವಲ್ಪ ಸಹಾಯ ಮಾಡಲು ನೋಡುತ್ತಿದ್ದೆವು. ನನಗೆ ಕಾವಲಿಯ ಮೇಲೆ ದೋಸೆ ಮಾಡಲು ಬರುತ್ತಿತ್ತು. ಹಾಗೆಯೇ ಪಾತ್ರೆ ತೊಳೆಯುವುದರಲ್ಲೂ ಆಸಕ್ತಿ  ಇತ್ತು. ನಾನು ಅವೆರಡು ಕೆಲಸ ಮಾಡುತ್ತಿದ್ದೆ. ಆದರೆ ಅಕ್ಕ ನಾಲ್ಕನೆಯ ದಿನ ಸ್ನಾನ ಮಾಡಿ ಬರುವಾಗ ನನಗೊಂದು ಸಮಸ್ಯೆ ಇತ್ತು. ಏಕೆಂದರೆ ಭಾವ ದಿನ ಅಕ್ಕಿ ಗಂಜಿ ಕಂಪಲ್ಸರಿ ಎಂದು ರೂಲ್ ಮಾಡಿದ್ದರು. ಆದಿನ ಬೇರೇನೂ ತಿಂಡಿ ಮಾಡುವ ಪ್ರಶ್ನೆಯೇ ಇರಲಿಲ್ಲ. ನನಗೆ ಹುಟ್ಟಿನಿಂದ ಗಂಜಿಯ ಮೇಲೆ ದ್ವೇಷ ಇತ್ತು. ಆದರೆ ನಿರ್ವಾಹವಿಲ್ಲದೆ ಅದನ್ನು ನುಂಗಬೇಕಾಗಿತ್ತು!

ಅಡಿಗೆಯ ಸಾಮಾನುಗಳ ಬಗ್ಗೆ ಅಕ್ಕ ಚಿಂತಿಸಲೇ ಬೇಕಾಗಿರಲಿಲ್ಲ. ಅವುಗಳ ಸಪ್ಲೈ ಮತ್ತು ಜೋಡಣೆಗಳ ಸಂಪೂರ್ಣ ಜವಾಬ್ದಾರಿಯನ್ನು ಭಾವನವರೇ ಹೊತ್ತಿದ್ದರು. ಯಾವುದೇ ಸಾಮಾನು ಖಾಲಿಯಾಗುವುದರೊಳಗೆ ಇನ್ನಷ್ಟು ಬಂದು ಡಬ್ಬದೊಳಗೆ ಸೇರಿ ಬಿಡುತ್ತಿತ್ತು.. ಮಹಡಿಯ ಮೇಲಿನ ಕೋಣೆಯೊಂದು ಸ್ಟೋರ್ ರೂಮ್ ಆಗಿತ್ತು. ಅಲ್ಲಿಂದ ಕಾಲಕಾಲಕ್ಕೆ ಸಾಮಾನುಗಳು ಅಡಿಗೆ ಮನೆಗೆ ಪ್ರವೇಶ ಮಾಡುತ್ತಿದ್ದವು! ಸ್ಟೋರ್ ರೂಮಿಗೆ ಕೊಪ್ಪದ ಸಂತೆಯಿಂದ ಗಾಡಿಯಲ್ಲಿ ಸಾಮಾನುಗಳು ಬರುತ್ತಿದ್ದವು.
ಭಾವನವರ ಜೀವನೋತ್ಸಾಹ
ಭಾವನವರಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಮೊದ ಮೊದಲು ನಮ್ಮ ಮನೆಗೆ ಬರುವಾಗ ಜೊತೆಯಲ್ಲಿ ಅವರ ಅಕ್ಕಂದಿರ ಯಾರಾದರೂ ಗಂಡು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದರು. ಹಾಗೆ ಬಂದವರಲ್ಲಿ ಫಣಿಯಪ್ಪಯ್ಯನವರ ಮಗ ಪದ್ಮನಾಭ, ಆಲ್ಮನೆಯ ಗಿರಿಜಮ್ಮನವರ ಎರಡನೇ ಮಗ ಪದ್ಮನಾಭ ಮತ್ತು ನರ್ಜಿಯ ಬೆಳ್ಳಯ್ಯನವರ ಒಬ್ಬ ಮಗ ಸೇರಿದ್ದರು. ನಮ್ಮೂರಿನ ತೋಟದಲ್ಲಿದ್ದ ಕೆರೆಗಳೂ ಮತ್ತು ಅಲ್ಲಿ ಬೆಳೆಯುತ್ತಿದ್ದ ಬೇರೆ ಬೇರೆ ಬೆಳೆಗಳ ಬಗ್ಗೆ ಭಾವನವರಿಗೆ ತುಂಬಾ ಆಸಕ್ತಿ ಇತ್ತು. ಆಗ ಹೊಕ್ಕಳಿಕೆ ತೋಟಗಳಲ್ಲಿ ನಮ್ಮೂರಿನಂತೆ ವೀಳ್ಯದೆಲೆ ಬೆಳೆಯುತ್ತಿರಲಿಲ್ಲ. ಆದರೆ ಭಾವ ನಮ್ಮ ತಂದೆಯವರಿಂದ ಅದರ ಬಳ್ಳಿಗಳನ್ನು ತೆಗೆದುಕೊಂಡು ಹೋಗಿ ಅವರ ಮನೆಯ ತೋಟದ ಭಾವಿಯ ಸುತ್ತಲಿದ್ದ ಮರಗಳಿಗೆ ಬೆಳೆಸಿ ಹಬ್ಬಿಸಿ ಬಿಟ್ಟರು. ಅದು ಎಷ್ಟು ಚೆನ್ನಾಗಿ ಬಂತೆಂದರೆ ನಾನು ಅವರ ಮನೆಗೆ ಓದಲು ಹೋದಾಗ ತೋಟದಲ್ಲಿ ಬೆಳೆದ ಎಲೆಗಳನ್ನು ಅಂಗಡಿಗೆ ಸಪ್ಲೈ ಮಾಡಲಾರಂಭಿಸಿದ್ದರು!
ಕೆಲಸದ ಆಳುಗಳು
ಭಾವನವರ ಜಮೀನುಗಳಲ್ಲಿ ಕೆಲಸ ಮಾಡಲು ಕೆಲಸಗಾರರ ಕೆಲವು ಸಂಸಾರಗಳು ಇದ್ದವು.  ಹಾಗೆಯೇ ಗಾಡಿ ಹೊಡೆಯುವ ವಿಶೇಷ ಕೆಲಸಕ್ಕೆ ನಕ್ರನನ್ನು  ನೇಮಕ ಮಾಡಲಾಗಿತ್ತು. ಬೆಳಿಗ್ಗೆ ಅವರು ಕೆಲಸಕ್ಕೆ ಬಂದಾಗ ಅವರಿಗೆಲ್ಲಾ ಎಲೆ ಅಡಿಕೆ ಸುಣ್ಣ ಮತ್ತು ಹೊಗೆಸೊಪ್ಪು ಕೊಡುವ ಪದ್ಧತಿ ಇತ್ತು. ಆಳುಗಳಿಗೆ ದಿನದ ಸಂಬಳ ಎಷ್ಟೆಂದು  ನಿಗದಿ ಮಾಡಲಾಗಿತ್ತು. ಹೆಣ್ಣಾಳುಗಳಿಗೆ ಸ್ವಲ್ಪ ಕಡಿಮೆ ಸಂಬಳ ಇತ್ತು. ಕೆಲಸ ಮುಗಿಸಿ ಹೋಗುವಾಗ ಆಳಿಗೊಂದು ಸೇರು ಅಕ್ಕಿ ಅಳೆದು ಕೊಡಲಾಗುತ್ತಿತ್ತು. ಹಾಗೆಯೇ ಅವರ ಕೈಮೇಲೆ ಒಂದು "ಉಂಡಿಗೆ" ಇಡಲಾಗುತ್ತಿತ್ತು. ಉಂಡಿಗೆ ಎನ್ನುವುದು ಭಾವನವರ  ಹೆಸರಿನ ರಬ್ಬರ್ ಸ್ಟ್ಯಾಂಪ್ ಒತ್ತಿದ್ದ ಒಂದು ಪೇಪರ್ ಟೋಕನ್. ತಿಂಗಳ ಕೊನೆಯಲ್ಲಿ ಒಬ್ಬ ಅಳು ಎಷ್ಟು ಉಂಡಿಗೆ ಹೊಂದಿದ್ದನೋ ಅಷ್ಟು ದಿನ ಅವನು ಕೆಲಸ ಮಾಡಿದ್ದ ಎಂದು ಲೆಖ್ಖ. ಅದರ ಪ್ರಕಾರ ಅವನಿಗೆ ನಿಗಧಿಯಾದ ರೇಟಿನಲ್ಲಿ ಸಂಬಳ ಲೆಖ್ಖ ಮಾಡಿ ಕೊಡಲಾಗುತ್ತಿತ್ತು. ಕೆಲವರು ಸಂಬಳವನ್ನು ಪೂರ್ತಿ ತೆಗೆದು ಕೊಳ್ಳದೇ ಹಾಗೆಯೆ ನಿಲ್ಲಿಸಿ ವರ್ಷಕ್ಕೊಮ್ಮೆ ಊರಿಗೆ ಹೋಗುವಾಗ ಲೆಖ್ಖ ಮಾಡಿಸಿ ತೆಗೆದುಕೊಂಡು ಹೋಗುತ್ತಿದ್ದರು.
ಭಾವನವರ ಲೇವಾದೇವಿ ವ್ಯವಹಾರ
ಭಾವನವರ ಹಣಕಾಸಿನ ವ್ಯವಹಾರ ಆಸ್ತಿ ಪಾಲಾದ ನಂತರ ಮೊದಲಿನಷ್ಟಲ್ಲದಿದ್ದರೂ ತಕ್ಕಮಟ್ಟಿಗೆ ಜೋರಾಗಿಯೇ  ನಡೆಯುತ್ತಿತ್ತು. ದಿನಗಳಲ್ಲಿ ಊರಿನವರು ಗದ್ದೆಯನ್ನು ಹೆಚ್ಚಾಗಿ ಗೇಣಿಗೆ ಕೊಡುತ್ತಿದ್ದರು. ಕೆಲವರು ಮಾತ್ರ ಸ್ವಲ್ಪ ಗದ್ದೆಯನ್ನು ಸ್ವಂತಕ್ಕೆ ಬೇಸಾಯ ಮಾಡುತ್ತಿದ್ದರು. ಗೇಣಿದಾರರಿಗೆ ಸಾಗುವಳಿ ಸಮಯದಲ್ಲಿ ಸಾಮಾನ್ಯವಾಗಿ ನಗದು ಹಣ ಇರುತ್ತಿರಲಿಲ್ಲ. ಅವರು ಸಾಲಮಾಡಿಯೇ ಬೇಸಾಯ ಮಾಡುವ ಪರಿಸ್ಥಿತಿ ಇರುತ್ತಿತ್ತು. ಭಾವನವರು ಇಂತಹ ರೈತರಿಗೆ ಬೆಳೆ ಸಾಲ ಕೊಡುತ್ತಿದ್ದರು. ಬೆಳೆ ಕೈಗೆ ಬಂದ  ಮೇಲೆ ರೈತರು ಅವರು ಬೆಳೆದ ಭತ್ತವನ್ನು ನಿಗದಿಯಾದ ಬೆಲೆಗೆ ಬಾವನವರಿಗೆ ಮಾರಿ ಸಾಲ ಚುಕ್ತಾ ಮಾಡುತ್ತಿದ್ದರು.

ಒಕ್ಕಲಾಟದ ಸಮಯದಲ್ಲಿ ನಕ್ರನ ಗಾಡಿಗೆ ಪುರುಸೊತ್ತೇ ಇರುತ್ತಿರಲಿಲ್ಲ. ಗಾಡಿಯಲ್ಲಿ ತಂದ  ಭತ್ತವನ್ನು ಅಳೆದು ಕೊಟ್ಟಿಗೆಯಲ್ಲಿದ್ದ ದೊಡ್ಡ ಪಣತಗಳಲ್ಲಿ ಸುರಿಯಲಾಗುತ್ತಿತ್ತು. ಸಾಮಾನ್ಯವಾಗಿ ಒಕ್ಕಲಾಟದ ಸಮಯದಲ್ಲಿ ಭತ್ತದ ಬೆಲೆ ಕಡಿಮೆ ಇರುತ್ತಿತ್ತು. ಆದರೆ ರೈತರಿಗೆ ಹಣದ ಅವಶ್ಯಕತೆ ಇದ್ದರಿಂದ ಮಾರಾಟ ಮಾಡಲೇ ಬೇಕಾಗುತ್ತಿತ್ತು. ಭಾವನವರು ಮಾರ್ಕೆಟ್ ರೇಟಿಗಿಂತ ಸ್ವಲ್ಪ ಜಾಸ್ತಿಯೇ ಕೊಡುತ್ತಿದ್ದರಿಂದ ಕೆಲವು ರೈತರು ಅವರಿಗೆ ಒತ್ತಾಯಪೂರ್ವಕವಾಗಿ ಮಾರಾಟ ಮಾಡುತ್ತಿದ್ದರು. ಭಾವನವರು ಸಾಲಕ್ಕೆ ಹಾಕುತ್ತಿದ್ದ ಬಡ್ಡಿಯೂ ತುಂಬಾ ಕಡಿಮೆ ಇರುತ್ತಿತ್ತು.

ಮುಂದೆ ಮಾರ್ಕೆಟ್ ರೇಟ್ ಏರಿದ ಮೇಲೆ ಭಾವನವರು ಭತ್ತವನ್ನು ದಿನಗಳಲ್ಲಿ ಸಾಮಾನ್ಯವಾಗಿ ನರಸಿಂಹರಾಜಪುರದಿಂದ ಬರುತ್ತಿದ್ದ ದೊಡ್ಡ ದೊಡ್ಡ ಅಕ್ಕಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು. ವ್ಯಾಪಾರಿಗಳಲ್ಲಿ ತಿಮ್ಮಪ್ಪಯ್ಯನವರ ತಮ್ಮ ವಾಸುದೇವಯ್ಯನೂ ಒಬ್ಬರಾಗಿದ್ದರು. ದೊಡ್ಡ ದೊಡ್ಡ ಲಾರಿಗಳು ಮನೆ ಅಂಗಳಕ್ಕೆ ಬಂದು ಭತ್ತವನ್ನು ಲೋಡ್ ಮಾಡಿ ಕೊಂಡೊಯ್ಯುತ್ತಿದ್ದವು.
ಚಿನ್ನದ ಸಾಲ ಮತ್ತು ಕೈಸಾಲ
ಕೇವಲ ನಂಬಿಕಸ್ಥರಿಗೆ ಮಾತ್ರಾ ಚಿನ್ನದ ಮೇಲೆ  ಸಾಲ ಕೊಡಲಾಗುತ್ತಿತ್ತು. ಸಾಮಾನ್ಯವಾಗಿ ಅದರ ಮೇಲಿನ ಬಡ್ಡಿ ಸ್ವಲ್ಪ ಜಾಸ್ತಿ ಇರುತ್ತಿತ್ತು. ಇನ್ನು ಕೈಸಾಲಕ್ಕೆ ಯಾವುದೇ ಬಡ್ಡಿ ಇರುತ್ತಿರಲಿಲ್ಲ. ಅದನ್ನು ಪಡೆಯಲು ಊರಿನ ಕೆಲವು ಮಂದಿ ಮಾತ್ರಾ ತೀರಾ ಅವಶ್ಯವಾಗಿದ್ದಾಗ ಬರುತ್ತಿದ್ದರು. ಅದರಲ್ಲಿ ಹೊಸಮನೆ ತಿಮ್ಮಪ್ಪಯ್ಯನವರೂ ಒಬ್ಬರು. ಅದರಲ್ಲಿ ಅವರದ್ದೊಂದು ಕ್ರಮವಿತ್ತು. ಸಾಲ ತೆಗೆದುಕೊಳ್ಳಲು ನನ್ನ ಭಾವ ಶ್ರೀನಿವಾಸಯ್ಯ ಅಥವಾ ಅವರ ತಮ್ಮ ವಿಶ್ವನಾಥ ಬರುತ್ತಿದ್ದರು. ಆದರೆ ಅದನ್ನು ಹಿಂದಿರುಗಿಸಲು ಯಾವಾಗಲೂ ತಿಮ್ಮಪ್ಪಯ್ಯನವರೇ ಸ್ವತಃ ಬರುತ್ತಿದ್ದರು. ಇನ್ನು ಅವರ ಅಳಿಯ ರಾಮಯ್ಯನವರದ್ದು ಇನ್ನೊಂದು ಬಗೆಯ ಸಾಲ. ಅದು ಕೈಸಾಲವಲ್ಲ. ನಂಬಿಕೆಯ ಸಾಲ. ಭಾವನವರ ಬಡ್ಡಿ ದರ ಕಡಿಮೆಯಿದ್ದರಿಂದ ರಾಮಯ್ಯನವರು ಅವರಿಂದ ಸಾಲ ಪಡೆದು ಬೇರೆಯವರಿಗೆ ಹೆಚ್ಚಿನ ಬಡ್ಡಿಗೆ ಸಾಲ ಕೊಡುತ್ತಿದ್ದರಂತೆ!  ಇನ್ನು ಗಣೇಶಯ್ಯನವರೂ ಆಗಾಗ ಭಾವನಿಂದ ಕೈಸಾಲ ತೆಗೆದು ಕೊಳ್ಳುತ್ತಿದ್ದರು. ಭಾವನವರು ಅವರ ಮಗ ಮಂಜಪ್ಪನಿಗೂ ಸಾಲ ಕೊಡುವುದು ಮತ್ತು ಅದರ ಲೆಖ್ಖ ಬರೆಯುವ ಟ್ರೈನಿಂಗ್  ಕೊಟ್ಟಿದ್ದರು. ಆದರೆ ಮಂಜಪ್ಪನೂ ಮುಂದೆ ಅದರ ಬಳಕೆ ಮಾಡಿದನೇ ಎಂಬುದು ನನಗೆ ಗೊತ್ತಿಲ್ಲ.
ಸಾಲಗಾರರ ಕಾಟ ಮತ್ತು ಅಕ್ಕನ ಗೋಳಾಟ!
ಹಿಂದಿನ ಅನುಭವದ ಮೇಲೆ ಭಾವ ಕೆಲವು ಹಳೆ ಸಾಲಗಾರರಿಗೆ ಹೊಸ ಸಾಲ ಕೊಡಲು ನಿರಾಕರಿಸುತ್ತಿದ್ದರು. ಅವರ ಲೆಖ್ಖದ ಪುಸ್ತಕಗಳಲ್ಲಿ ಹಳೆ ಸಾಲಗಾರರ ವ್ಯವಹಾರದ ಪೂರ್ಣ ವಿವರಗಳಿರುತ್ತಿದ್ದವು. ಅವರು ಅದನ್ನು ಅವರ ಮುಖಕ್ಕೆ ಚಾಚಿ ಏಕೆ ಹೊಸ ಸಾಲ ಸಾಧ್ಯವಿಲ್ಲವೆಂದು ವಿವರಿಸುತ್ತಿದ್ದರು. ಆದರೆ ಅವರಲ್ಲಿ ಕೆಲವರು ಜಪ್ಪಯ್ಯ ಎಂದರೂ ಕೂತಲ್ಲಿಂದ ಎದ್ದು ಹೋಗುತ್ತಿರಲಿಲ್ಲ. ಮೊದಮೊದಲು ಅಕ್ಕ ಅಂತಹವರಿಗೂ ಕಾಫಿ ಕೊಡುತ್ತಿದ್ದಳು. ಆದರೆ ಅವರು ಭಾವನಿಗೆ ಕಾಫಿ, ತಿಂಡಿ ಮತ್ತು ಊಟಕ್ಕೂ ಎದ್ದು ಹೋಗದಂತೆ ಸತಾಯಿಸುವುದನ್ನು ಕಂಡು ಅಕ್ಕನಿಗೆ ಕೋಪ ತಡೆಯಲಾಗುತ್ತಿರಲಿಲ್ಲ. ಎಷ್ಟೋ ಬಾರಿ ಭಾವನವರನ್ನು ಒಳಗೆ ಕರೆದು ಅಂತಹ ನಕ್ಷತ್ರಿಕರನ್ನು ಹೇಗಾದರೂ ಬೇಗನೆ ಮನೆಯಿಂದ ತೊಲಗಿಸ ಬೇಕೆಂದು ಹೇಳುತ್ತಿದ್ದಳು. ಆದರೆ ಬಾವನವರಿಗೆ ಅಷ್ಟು ನಿಷ್ಠುರ ಸ್ವಭಾವ ಬಾರದೇ ಹೋಯಿತು. ಹಾಗಾಗಿ ಕೆಲವು ನಕ್ಷತ್ರಿಕರು ಕೊನೆಗೂ ಸಾಲ ಪಡೆದು ಹೋದದ್ದನ್ನು ನಾನು ಕಂಡಿದ್ದೆ. ಆದರೆ ಆಮೇಲೆ ಅವರು  ಸಾಲ ತೀರಿಸಿದರೇ ಎಂದು ನನಗೆ ಗೊತ್ತಾಗಲಿಲ್ಲ. ಇಂತಹ ಒಬ್ಬ ನಕ್ಷತ್ರಿಕ ಸಾಲ ಕೊನೆಗೂ ಸಿಗದಿದ್ದಾಗ ಭಾವನವರ ವಾಚನ್ನೇ ಕದ್ದುಕೊಂಡು ಹೋಗಿಬಿಟ್ಟ! ಆದರೆ ಯಾವುದೇ ಸಾಕ್ಷಿ ಇಲ್ಲದ್ದರಿಂದ ಅವನಿಗೆ ಏನೂ ಮಾಡಲಾಗಲಿಲ್ಲ.
----ಮುಂದುವರಿಯುವುದು ---

No comments: