Thursday, June 8, 2017

ನನ್ನ ಬಾಲ್ಯ


ಅಧ್ಯಾಯ ೨೭
ಸೋಮವಾರ ಬೆಳಿಗ್ಗೆ ನಾನು ನಾರ್ವೆ ಮಿಡ್ಲ್ ಸ್ಕೂಲ್ ಒಳಗೆ ಮೊದಲ ಬಾರಿಗೆ ಕಾಲಿಟ್ಟೆ. ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳ ಸಂಖ್ಯೆ ನಮ್ಮ ಶಾಲೆಯ ಒಟ್ಟಿನ ಸಂಖ್ಯೆಗಿಂತ ಜಾಸ್ತಿ ಇತ್ತು. ಮೊದಲೇ ಹೇಳಿದಂತೆ ಹೆಡ್ ಮಾಸ್ಟರ್ ಹಿರಣ್ಣಯ್ಯನವರೇ ನನಗೆ ಇಂಗ್ಲಿಷ್  ಟೆಕ್ಸ್ಟ್ ಪುಸ್ತಕದ ಮೌಖಿಕ ಪರೀಕ್ಷೆ ಮಾಡುವರಿದ್ದರು . ಒಬ್ಬೊಬ್ಬರಾಗಿ ವಿದ್ಯಾರ್ಥಿಗಳನ್ನು ಒಳಗೆ ಕರೆದು ಪರಿಕ್ಷೆ ಮಾಡಲು ಪ್ರಾರಂಭಿಸಿದರು. ನಾನು ಪ್ರೈವೇಟ್ ಸ್ಟೂಡೆಂಟ್ ಆಗಿದ್ದರಿಂದ ನನ್ನನ್ನು ಎಲ್ಲರಿಗಿಂತ ಕೊನೆಯಲ್ಲಿ ಕರೆಯಲಾಯಿತು. ನಾನು ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸರಾಗವಾಗಿ ಉತ್ತರ ಕೊಟ್ಟುಬಿಟ್ಟೆ. ಆದರೆ ಅವರ ಕೊನೆಯ ಪ್ರಶ್ನೆ ನನ್ನನ್ನು  ಸಂಧಿಗ್ದದಲ್ಲಿ  ಸಿಕ್ಕಿಸಿತು. ಅವರು ತಮ್ಮ ಕೈಯಲ್ಲಿ ಕಟ್ಟಿದ್ದ ವಾಚನ್ನು ತೋರಿಸಿ "ವಾಟ್  ಈಸ್ ದಿಸ್?" ( What is this?) ಎಂದು ಕೇಳಿದರು. ವಾಚ್ ಎನ್ನುವ ಪದ ನನ್ನ ಇಂಗ್ಲಿಷ್ ಪುಸ್ತಕದಲ್ಲೆಲ್ಲೂ ಬಂದಿರಲಿಲ್ಲ. ನಾವು ನಿತ್ಯದ ಬಳಕೆಯಲ್ಲಿ ವಾಚ್ ಎಂಬ ಪದವನ್ನು ಬಳಸುತ್ತಿದ್ದರಿಂದ ಅದು ಕನ್ನಡ ಪದವೇ ಎಂದು ತಿಳಿದು ಬಿಟ್ಟಿದ್ದೆ. ನಾನು ವಾಚ್ ಪದಕ್ಕೆ ಸರಿಯಾದ ಇಂಗ್ಲಿಷ್ ಪದ ನನಗೆ ಗೊತ್ತಿಲ್ಲವೆಂದು ಹೇಳಿಬಿಟ್ಟೆ. ಹಿರಣ್ಣಯ್ಯನವರು ನಕ್ಕು ಅದು ಇಂಗ್ಲಿಷ್ ಪದವೇ ಎಂದು ಹೇಳಿ ನನ್ನ ಪರೀಕ್ಷೆ ಮುಗಿಸಿದರು.

ಅಂದು ಸಂಜೆ ಹಿರಣ್ಣಯ್ಯನವರು ಮೇಷ್ಟರಿಗೆ ಒಂದು ಸಂದೇಶವನ್ನು ಕಳಿಸಿದರು. ಅದರ ಪ್ರಕಾರ ಪರೀಕ್ಷೆಯಲ್ಲಿ ನನಗೆ ಎಲ್ಲರಿಗಿಂತ ಅಧಿಕ ಅಂಕಗಳನ್ನು  ಕೊಟ್ಟಿದ್ದರು. ಉಳಿದ ವಿದ್ಯಾರ್ಥಿಗಳಲ್ಲಿ ಯಾರೂ ನನ್ನ  ಮಟ್ಟದ ಅಂಕಗಳನ್ನು ಪಡೆದಿರಲಿಲ್ಲ. ಅದೊಂದು ದೊಡ್ಡ ಸಮಾಚಾರವಾಗಿ ಹೋಯಿತು. ಅಗ್ರಹಾರದಲ್ಲಿ ಎಲ್ಲರೂ ನನ್ನನ್ನು ಮತ್ತು ಮೇಷ್ಟರನ್ನು ಹೊಗಳ ತೊಡಗಿದರು. ಮೇಷ್ಟರ ಅಮ್ಮ ಸಂಭ್ರಮದಿಂದ ರಾತ್ರಿ ಊಟದೊಡನೆ ಪಾಯಸವನ್ನೂ ಮಾಡಿಬಿಟ್ಟರು. ನನ್ನ ಸಂತೋಷಕ್ಕೆ ಮಿಗಿಲೇ ಇರಲಿಲ್ಲ. ಮುಂದೆರಡು ದಿನದಲ್ಲಿ ನಡೆದ ಕನ್ನಡ ಮತ್ತು ಅಂಕ ಗಣಿತದ ಪರೀಕ್ಷೆಯಲ್ಲೂ ನಾನು ಚೆನ್ನಾಗಿಯೇ ಉತ್ತರಗಳನ್ನು ಕೊಟ್ಟೆ.

ಆದರೆ ನನ್ನ ಸಮಸ್ಯೆ ಆಮೇಲಿನ ಪರೀಕ್ಷೆಗಳಾದ ಭೂಗೋಳ ಮತ್ತು ಚರಿತ್ರೆಯಲ್ಲಿತ್ತು. ನಾನು ಮೊದಲೇ  ಹೇಳಿದಂತೆ ಪುಸ್ತಕಗಳ ಪಾಠವನ್ನು ನಾನು ಕಣ್ಣಿನಲ್ಲೂ ನೋಡಿರಲಿಲ್ಲ. ಏಕೆಂದರೆ ನನಗೆ ಪುಸ್ತಕಗಳು ದೊರೆತೇ ಇರಲಿಲ್ಲ. ನಾನು ಇಂದು ಹಿಂತಿರುಗಿ ನೋಡುವಾಗ ನನಗೆ ನನ್ನ ಮೇಷ್ಟರು ಪುಸ್ತಕಗಳನ್ನು ಒಮ್ಮೆಯೂ  ಕಣ್ಣಾರೆ ನೋಡದೇ ಹೇಗೆ ಪರೀಕ್ಷೆಗೆ ಹೋಗೆಂದು ಹೇಳಿದರೆಂದು ಆಶ್ಚರ್ಯವಾಗುತ್ತದೆ. ಅದಿರಲಿ. ಅಂದು ನಾನು ಶಾಲೆಯೊಳಗೆ ಹೋದಾಗ ನನ್ನ ಮನಸ್ಸಿನ ತುಂಬಾ ಪ್ರಶ್ನೆಗಳೇ ತುಂಬಿ ಹೋಗಿದ್ದವು. ಮೇಷ್ಟರು ಕೇಳಬಹುದಾದ ಪ್ರಶ್ನೆಗಳಿಗೆ ನನ್ನ ತಲೆಯಲ್ಲಿ ಯಾವುದೇ ಉತ್ತರಗಳಿರಲಿಲ್ಲ.

ದಿನ ಬೆಳಿಗ್ಗೆ ಭೂಗೋಳ ಮತ್ತು ಮದ್ಯಾಹ್ನದ ನಂತರ ಚರಿತ್ರೆಯ ಪರೀಕ್ಷೆ ಇತ್ತು. ಹುಸೇನ್ ಸಾಬ್ ಎಂಬ ಮೇಷ್ಟರು  ಒಂದು ಕೊಠಡಿಯೊಳಗೆ ಕುಳಿತು ಒಬ್ಬೊಬ್ಬರನ್ನಾಗಿ ಕರೆದು ಪರೀಕ್ಷೆ ಮಾಡಲಾರಂಭಿಸಿದರು. ನನ್ನ ಸರದಿ ಕೊನೆಯಲ್ಲಿತ್ತು. ಅಷ್ಟು ಹೊತ್ತಿಗೆ ಇಡೀ ಶಾಲೆಯಲ್ಲಿ ಒಂದು ಸಮಾಚಾರ ಹರಡಿತ್ತು. ಅದೆಂದರೆ ಯಾವನೋ ಒಬ್ಬ ಪ್ರೈವೇಟ್ ವಿದ್ಯಾರ್ಥಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ ಗಳಿಸಿ ಇದುವರೆಗಿನ ಪರೀಕ್ಷೆಯಲ್ಲಿ ತರಗತಿಗೇ ಪ್ರಥಮನಾಗಿರುವನಂತೆ. ನಾನು ಕಾತುರದಿಂದ ನನ್ನ ಸರದಿಗಾಗಿ ಕಾಯುತ್ತಿರುವಾಗ ಮೂರು ಜನ ಹಿರಿಯ ವಿದ್ಯಾರ್ಥಿಗಳು (ಎಂಟನೇ ತರಗತಿಯವರು) ನನ್ನನ್ನು ನೋಡಲು ಬಂದರು. ಅವರು ನನ್ನನ್ನು ಅಭಿನಂದಿಸಿ ಭೂಗೋಳದಲ್ಲಿ ನನ್ನ ತಯಾರಿ ಹೇಗಿರುವುದೆಂದು ಕೇಳಿದರುನಾನು ಅವರಿಗೆ ನನ್ನ ಪರಿಸ್ಥಿತಿಯನ್ನು ತಿಳಿಸಿದೆ. ಅವರಿಗೆ ನಾನು ಪುಸ್ತಕವನ್ನೇ ನೋಡಿಲ್ಲವೆಂದು ಹೇಳಿದ್ದನ್ನು ನಂಬಲಾಗಲಿಲ್ಲ. ಅವರು ಸ್ವಲ್ಪ ಹೊತ್ತು ಹೊರಗೆ ಹೋಗಿ ಪುನಃ ನನ್ನ ಹತ್ತಿರ  ಬಂದರು. ಅವರ ಕೈಯಲ್ಲಿ ಭೂಗೋಳ ಪುಸ್ತಕವಿತ್ತು. ಅವರು ತಮ್ಮ ಪ್ಲಾನ್ ಏನೆಂದು ನನಗೆ ತಿಳಿಸಿದರು.

ಅದರ ಪ್ರಕಾರ ಅವರಲ್ಲೊಬ್ಬನು ಪರೀಕ್ಷೆ ನಡೆಯುತ್ತಿದ್ದ ರೂಮಿಗೆ ಹೋಗಿ ಮೇಷ್ಟರು ಯಾವ ಯಾವ  ಪ್ರಶ್ನೆಗಳನ್ನು ಕೇಳುತ್ತಾರೆಂದು ತಿಳಿದು ಬರುವುದು. ಹಿರಿಯ ವಿದ್ಯಾರ್ಥಿ ಆದ್ದರಿಂದ ಮೇಷ್ಟರು ಅವನು ಅಲ್ಲಿಗೆ ಹೋದುದಕ್ಕೆ ಅಡ್ಡಿ ಮಾಡುವ ಪ್ರಶ್ನೆ ಇರಲಿಲ್ಲ. ಅವನು ತಿಳಿದು ಬಂದ  ಪ್ರಶ್ನೆಗಳಿಗೆ ಉಳಿದಿಬ್ಬರು ನನ್ನನ್ನು ತಯಾರಿ ಮಾಡುವುದು. ಹಾಗೆ ಹೋದ ವಿದ್ಯಾರ್ಥಿ ಸ್ವಲ್ಪ ಸಮಯದಲ್ಲಿ ಹಿಂತಿರುಗಿ ಬಂದ. ಮೊದಲ ಪ್ರಶ್ನೆ ಭಾರತದ ಮೇಲ್ಮೆ ಲಕ್ಷಣಗಳು ಯಾವುವು ಎಂದಿತ್ತು. ನನ್ನನ್ನು ಬಗ್ಗೆ ಕೇಳಿದಾಗ ನಾನು ಪದಗಳನ್ನು ಮೊದಲ ಬಾರಿಗೆ ಕೇಳಿದ್ದಾಗಿ ಹೇಳಿದೆ! ಆಗ ಅವರು ನನಗೆ ಭಾರತದ ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವ ದಿಕ್ಕಿನಲ್ಲಿ ಏನಿರುವುದೆಂದು ಕೇಳಿದರು. ನಾನು ಕೂಡಲೇ ಹಿಮಾಲಯ ಪರ್ವತ, ಹಿಂದೂ ಮಹಾಸಾಗರ , ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎಂದು ಹೇಳಿದೆ. ಅವರು ಕೂಡಲೇ ನಾನು ಅಷ್ಟು ಉತ್ತರ ಕೊಟ್ಟರೆ ಸಾಕೆಂದು ತಿಳಿಸಿದರು. ಅದೇ ರೀತಿಯಲ್ಲಿ ಸುಮಾರು ೧೦ ಪ್ರಶ್ನೆಗಳಿಗೆ ನನ್ನಿಂದ ಉತ್ತರ ಬರುವಂತೆ ತಯಾರಿ ಮಾಡಿದರು. ನಾನು ಬಾಯಿಪಾಠ ಮಾಡುವುದರಲ್ಲಿ ನಿಸ್ಸೀಮನಾಗಿದ್ದೆ. ಹಾಗಾಗಿ ನನಗೆ ಉತ್ತರಗಳನ್ನು ನೆನಪಿಟ್ಟು ಕೊಳ್ಳುವುದು ಕಷ್ಟವಾಗಲಿಲ್ಲ. ನನ್ನ ಸರದಿ ಬಂದಾಗ ನಾನು ಪೂರ್ಣ ಉತ್ಸಾಹದಲ್ಲಿದ್ದೆ. ಮೇಷ್ಟರು ಕೇಳಿದ ಪ್ರಶ್ನೆಗಳಿಗೆ ನನ್ನಿಂದ ಪಟಪಟನೆ ಉತ್ತರಗಳು ದೊರೆತವು. ಅವರಿಂದ ಅಭಿನಂದನೆ ಪಡೆದು ನಾನು ಊಟಕ್ಕೆ ಮನೆಗೆ ಹಿಂದಿರುಗಿದೆ.

ನಾನು ನನ್ನ ಹತ್ತಿರ ಚರಿತ್ರೆ ಪುಸ್ತಕವೂ ಇಲ್ಲವೆಂದು ಹೇಳಿದ್ದರಿಂದ ಅದೇ ಮೂರು ವಿದ್ಯಾರ್ಥಿಗಳು ಮದ್ಯಾಹ್ನದ ನಂತರದ ನನ್ನ ಪರೀಕ್ಷೆಗೆ ಕೂಡ ಸಹಾಯ ಮಾಡಿದರುನಾನು ಯಥಾ ಪ್ರಕಾರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಭೇಷ್ ಎನ್ನಿಸಿಕೊಂಡೆ. ನನಗೆ ಮೂರು ವಿದ್ಯಾರ್ಥಿಗಳಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂದು ಹೊಳೆಯಲೇ ಇಲ್ಲ. ನಾನು ಮೇಷ್ಟರಿಗೆ ವಿಷಯ ತಿಳಿಸಿದಾಗ ಅವರಿಗೂ ನಂಬಲಾಗಲಿಲ್ಲ. ಆದರೆ ಹೆಡ್ ಮಾಸ್ಟರ್ ಅವರು ನಾನು ಎಲ್ಲ ವಿಷಯಗಳಲ್ಲೂ (subjects) ತರಗತಿಗೆ ಪ್ರಥಮನಾಗಿ ಬಂದಿದ್ದೇನೆಂದು ಹೇಳಿದ ಮೇಲೆ ನಾನು ಹೇಳಿದ್ದು ಸತ್ಯವೆಂದು ಅವರಿಗೆ ಮನವರಿಕೆಯಾಯಿತು .

ಇಂದು ನಾನು ನನ್ನ ನೆನಪಿನ ಅಂಗಳದ ಪುಟಗಳನ್ನು  ತಿರುವಿ  ನೋಡುವಾಗ  ನನಗೆ ನನ್ನ ಪರಿಚಯ ಸ್ವಲ್ಪವೂ ಇರದ ಮೂರು ವಿದ್ಯಾರ್ಥಿಗಳು ಏಕೆ ಹಾಗೆ ನಂಬಲಾರದ ರೀತಿಯ ಸಹಾಯ ಮಾಡಿದರೆಂದು ಅರ್ಥವಾಗುತ್ತಿಲ್ಲ. ಅವರನ್ನು ನಾನು ಪುನಃ ಎಂದೂ ಭೇಟಿ ಮಾಡುವ ಸಂದರ್ಭ ಬರಲಿಲ್ಲ. ಇಂದಿನ ಸೀನಿಯರ್ ವಿದ್ಯಾರ್ಥಿಗಳು ಕಿರಿಯ ವಿದ್ಯಾಥಿಗಳನ್ನು ಗೋಳು ಹೊಯ್ದು ಕೊಳ್ಳುವ ಕಥೆಗಳು ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಆದರೆ  ಮೂರು ವಿದ್ಯಾರ್ಥಿಗಳು ನನ್ನ ಪಾಲಿಗೆ ದೇವತೆಗಳಂತೆ ಅವತರಿಸಿ ಮಾಡಿದ  ಸಹಾಯವನ್ನು ನಾನು ಎಂದಿಗೂ  ಮರೆಯಲಾರೆ. ಪ್ರಾಯಶಃ ಇಂತಹ ದೇವತೆಗಳು ಪ್ರತಿಯೊಬ್ಬರ ಜೀವಮಾನದಲ್ಲೂ ಒಮ್ಮೆ ಬರುತ್ತಾರೆ. ಆದರೆ ಅವರ ಸಹಾಯ ಹಿಂತಿರುಗಿಸುವಂತದ್ದಲ್ಲ  .  ಕೇವಲ ನೆನಪಿಡುವಂತಹವು.
----ಮುಂದುವರಿಯುವುದು ---



Tuesday, June 6, 2017

ನನ್ನ ಬಾಲ್ಯ

ಅಧ್ಯಾಯ ೨೬
ವಜ್ರಾದಪಿ ಕಠೋರಾನಿ
 ಮೃದೂನಿ ಕುಸುಮಾದಪಿ
ಲೋಕೋತ್ತರಣಾಮ್ ಚೇತಾಂಸಿ
ಕೋನು ವಿಜ್ಞಾತುಮರ್ಹಸಿ?
(ಅವರ ಮನಸ್ಸು ವಜ್ರಕ್ಕಿಂತ ಕಠಿಣ
ಕುಸುಮಕ್ಕಿಂತ  ಮೃದು
ಮಹಾತ್ಮರ ಮನಸ್ಸಿನಲ್ಲಿರುವುದನ್ನು
ಯಾರು ಕಲ್ಪಿಸಬಲ್ಲರು?)
ನಾನು ಮಾರನೇ ದಿನ ಶಾಲೆಗೆ ಹೋದಾಗ ನನ್ನ ಮನಸ್ಸು ಹೇಗಿತ್ತೆಂದು ನೀವು ಕಲ್ಪಿಸಿಕೊಳ್ಳಬಹುದು. ವಿಶ್ವೇಶ್ವರಯ್ಯನವರಿಂದ ನಾನು ತುಂಬಾ ಬೈಗುಳ ಅಥವಾ ಬುದ್ಧಿವಾದವನ್ನು ನಿರೀಕ್ಷಿಸಿದ್ದೆ. ಆದರೆ ಅವರು ಹಿಂದಿನ ದಿನದ ಪ್ರಸಂಗದ ಬಗ್ಗೆ ಯಾವ ಮಾತನ್ನೂ ಆಡದೇ ಮಾಮೂಲಿನಂತೆ ನನ್ನ ಪಾಠವನ್ನು ಮುಂದುವರಿಸಿದರು. ನಾನು ಅಣ್ಣನ ಪತ್ರ ಅವರಿಗೆ ಕೊಟ್ಟಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರು ಹಿಂದಿನ ದಿನ ಏನೂ ನಡೆದಿಲ್ಲ ಎಂಬ ರೀತಿಯಲ್ಲಿ ವರ್ತಿಸಿದರು. ಆಮೇಲೆ ಒಮ್ಮೆ ಅವರು ನಮ್ಮ ಮನೆಗೆ ಬಂದಾಗ ಅಣ್ಣ ಆ ವಿಚಾರ ಎತ್ತಿದಾಗ ಕೂಡಾ ಎನೂ ನಡೆದೇ ಇಲ್ಲದಂತೆ ವರ್ತಿಸಿದರು. ಆದರೆ ಅದರಲ್ಲಿ ಶ್ರೀನಿವಾಸಯ್ಯನವರ ಪಾತ್ರ ಏನೂ ಇರಲಿಲ್ಲವೆಂದು ಸ್ಪಷ್ಟಪಡಿಸಿದರು. ಅಲ್ಲಿಗೆ ಆ ಪ್ರಸಂಗ ಮುಕ್ತಾಯ  ಕಂಡಿತು.

ವಿಶ್ವೇಶ್ವರಯ್ಯನವರು ನನಗೆ ಸಮಾರಂಭಗಳಲ್ಲಿ ಭಾಷಣ ಮಾಡುವುದು, ಡ್ರಿಲ್ ಮಾಡುವುದು, ಕಬಡ್ಡಿ ಆಡುವುದು, ಇತ್ಯಾದಿ ಚಟುವಟಿಗೆಗಳನ್ನು ಕಲಿಸಿದರು. ಶಾಲೆಗೆ ಯಾವುದೇ ಮಹನೀಯರು ಬಂದಾಗ ನನ್ನನ್ನು ಮಾದರಿ ವಿದ್ಯಾರ್ಥಿ ಎಂದು ಪರಿಚಯ ಮಾಡಿಸುತ್ತಿದ್ದರು. ಶಾಲೆಯ ಸಮಾರಂಭಗಳಿಗೆ ಚಂದಾ  ವಸೂಲು ಮಾಡಲು ಬೇರೆ ಬೇರೆ ಮನೆಗಳಿಗೆ ಕಳಿಸುತ್ತಿದ್ದರು. ನನಗೆ ಈ ಬಗೆಯ ಚಟುವಟಿಕೆಗಳು ತುಂಬಾ ಸಂತೋಷ ಕೊಡುತ್ತಿದ್ದವು.

ನಾನು  ನಾರ್ವೆ ಮಿಡ್ಲ್ ಸ್ಕೂಲ್ ನಲ್ಲಿ ಐದನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಪ್ರೈವೇಟ್ ವಿದ್ಯಾರ್ಥಿಯಾಗಿ ಹೋಗಬೇಕೆಂದು ಮೊದಲೇ ತೀರ್ಮಾನವಾಗಿತ್ತು. ವಿಶ್ವೇಶ್ವರಯ್ಯನವರು  ಅಲ್ಲಿನ ಹೆಡ್ ಮಾಸ್ಟರ್ ಅವರೊಡನೆ ಆ ಬಗ್ಗೆ ಮಾತನಾಡಿದ್ದರು. ನನಗೆ ಚರಿತ್ರೆ ಮತ್ತು ಭೂಗೋಳ ಬಿಟ್ಟು ಉಳಿದ ಪಾಠಗಳನ್ನೆಲ್ಲಾ ಮೇಷ್ಟರು ಮಾಡಿ ಮುಗಿಸಿದ್ದರು. ನಾನು ಪರೀಕ್ಷೆಯ ಬಗ್ಗೆ ಹೆಚ್ಚು ಚಿಂತಿಸಬಾರದೆಂದು ಮೇಷ್ಟರು ಹೇಳಿದ್ದರು. ಆದರೂ "ಹಳ್ಳಿ ಹುಡುಗನಾದ" ನನಗೆ ನಾರ್ವೆಯಂತಹ ಊರಿನಲ್ಲಿ ಬೇರೆ ಮೇಷ್ಟರಿಂದ ಪರೀಕ್ಷೆ ಮಾಡಿಸಿಕೊಳ್ಳಲು ಖಂಡಿತವಾಗಿ ಭಯವಿತ್ತು. ನಾನು ಬೇರೆ ಯಾರಾದರೂ ಮೇಷ್ಟರ ಪರೀಕ್ಷೆಗೆ ಒಮ್ಮೆ ಒಳಗಾದರೆ ನನ್ನ  ಭಯ ಕಡಿಮೆಯಾಗುವುದೆಂದು ನನಗೆ ಅನಿಸುತ್ತಿತ್ತು. ಅದಕ್ಕೊಂದು ಅವಕಾಶವೂ ಕೂಡಿ ಬಂತು.

ಮೇಷ್ಟರಿಗೆ ಒಂದು ದಿನ ನಮ್ಮೂರಿನ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹುರುಳಿಹಕ್ಲು ಲಕ್ಷ್ಮೀನಾರಾಯಣ ರಾವ್ ಅವರ ಮನೆಗೆ ಹೋಗಬೇಕಾದ ಪ್ರಸಂಗ ಬಂತು. ಅವರು ತಮ್ಮೊಟ್ಟಿಗೆ ನನ್ನನ್ನೂ ಕರೆದುಕೊಂಡು ಹೋದರು. ಮಾತುಕತೆ ಮುಗಿಯುವಾಗ ರಾತ್ರಿಯಾದ್ದರಿಂದ ನಾವು ಅಲ್ಲಿಯೇ ಊಟಮಾಡಿ ಮಲಗುವ ಪರಿಸ್ಥಿತಿ ಬಂತು.

ಆ ಸಮಯದಲ್ಲಿ ಲಕ್ಷ್ಮೀನಾರಾಯಣ ರಾವ್  ಅವರು ತಮ್ಮ ಮಕ್ಕಳಿಗೆ ಮನೆಯಲ್ಲೇ ಪಾಠಮಾಡಲು ಪ್ರೈವೇಟ್ ಟೀಚರ್ ಒಬ್ಬರನ್ನು ಏರ್ಪಾಟು ಮಾಡಿದ್ದರು. ವಿಠ್ಠಲಶೆಟ್ಟಿ ಎಂಬ ಈ ಮೇಷ್ಟರು ಉತ್ತಮವಾಗಿ ಇಂಗ್ಲಿಷ್ ಪಾಠ ಕೂಡ ಮಾಡುತ್ತಾರೆಂದು ಪ್ರಸಿದ್ಧರಾಗಿದ್ದರು. ಅವರು ಈ ಮುಂದೆ ಬೆಳವಿನಕೊಡಿಗೆ ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದರು. ಆ ಮಕ್ಕಳೆಲ್ಲಾ ಶಿವಮೊಗ್ಗೆ ಸೇರಿದಮೇಲೆ ಅವರು ಹುರುಳಿಹಕ್ಲಿಗೆ ಬಂದಿದ್ದರು.  ರಾತ್ರಿಯಲ್ಲಿ ಅವರು ನಮ್ಮ ಮುಂದೆ ಮನೆಯ ಹುಡುಗರಿಗೆ ಪರೀಕ್ಷೆ ಮಾಡತೊಡಗಿದರು. ಆ ಹುಡುಗರು ಜಯಪುರದಲ್ಲಿ ಮಿಡ್ಲ್ ಸ್ಕೂಲ್ ಪರೀಕ್ಷೆಗೆ ಹೋಗುವರಿದ್ದರು. 

ಆ ಹುಡುಗರು ಕೆಲವು ಸಾಮಾನ್ಯ ಪ್ರಶ್ನೆಗಳಿಗೂ ತೃಪ್ತಿಕರ ಉತ್ತರ ನೀಡದ್ದರಿಂದ ಮೇಷ್ಟರಿಗೆ  ಸ್ವಲ್ಪ ಕೋಪ ಬಂತು. ಆಗ ಅವರು ವಿಶ್ವೇಶ್ವರಯ್ಯನವರ ಹತ್ತಿರ ನನ್ನ ಇಂಗ್ಲಿಷ್ ಪರೀಕ್ಷೆ ಮಾಡಲು ಅನುಮತಿ ಕೇಳಿದರು. ಮೇಷ್ಟರು ಕೂಡಲೇ ಒಪ್ಪಿಗೆ ನೀಡಿದರು. ವಿಠ್ಠಲ ಶೆಟ್ಟರು ಕೇಳಿದ ಪ್ರಶ್ನೆಗಳಿಗೆಲ್ಲ ನಾನು ಪಟಪಟನೆ ಉತ್ತರ ನೀಡಿಬಿಟ್ಟೆ. ಅವರು ತುಂಬಾ ಖುಷಿಪಟ್ಟು ವಿಶ್ವೇಶ್ವರಯ್ಯನವರಿಗೆ ಅಭಿನಂದಿಸಿದರು. ಆದರೆ ಮೇಷ್ಟರು ಆ ಅಭಿನಂದನೆಗೆ ನಾನು ಪಾತ್ರನೆಂದು ಹೇಳಿ ಬಿಟ್ಟರು. ನನ್ನ ಹಳೆಯ ನೆನಪುಗಳನ್ನು ಮೆಲುಕುಹಾಕುವಾಗ  ಅಂದಿನ ಘಟನೆ  ನನ್ನ ಜೀವಮಾನದ ಒಂದು ಅತ್ಯಂತ ತೃಪ್ತಿಕರ ಸನ್ನಿವೇಶವಾಗಿತ್ತೆಂದು ಅನಿಸುತ್ತದೆ.

ಅದು ೧೯೫೯ನೇ ಇಸವಿ ಮಾರ್ಚ್ ತಿಂಗಳು. ನನ್ನ ವಾರ್ಷಿಕ ಪರೀಕ್ಷೆಗೆ ನಾರ್ವೆಗೆ ಹೋದಾಗ ಮೇಷ್ಟರ ಮನೆಯಲ್ಲೇ ನಾನು ನಿಲ್ಲಬೇಕೆಂದು ಮೇಷ್ಟರು ಮೊದಲೇ ಷರತ್ತು ಹಾಕಿಬಿಟ್ಟಿದ್ದರು. ಅಂತೆಯೇ ನಾನು ಮೇಷ್ಟರೊಡನೆ ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನ ಅವರ ಮನೆ ತಲುಪಿದೆ. ಮೇಷ್ಟರ ಮನೆ ತುಂಗಾನದಿಯ ದಂಡೆಯಲ್ಲಿದ್ದ ನಾರ್ವೆ ಅಗ್ರಹಾರದಲ್ಲಿತ್ತು. ಮನೆಯವರೆಲ್ಲ ನನ್ನನ್ನು ಅತ್ಯಂತ ಆತ್ಮೀಯತೆಯಿಂದ ಸ್ವಾಗತಿಸಿದರು. ವಿಶ್ವೇಶ್ವರಯ್ಯನವರ ತಂದೆ-ತಾಯಿ ಅವರದ್ದು ತುಂಬಾ ದೊಡ್ಡ ಸಂಸಾರ. ಅವರಿಗೆ ಒಂಬತ್ತು ಮಕ್ಕಳು. ದೊಡ್ಡ ಮಗಳಿಗೆ ಮದುವೆಯಾಗಿತ್ತು. ವಿಶ್ವೇಶ್ವರಯ್ಯನವರ ತಮ್ಮ ಕೂಡ ಸ್ಕೂಲ್ ಮಾಸ್ಟರ್ ಆಗಿದ್ದರು. ಮೂರನೇ ಮಗ ಗುರುಮೂರ್ತಿ ಚಿಕ್ಕಮಗಳೂರಿನಲ್ಲಿ ಡಿಪ್ಲೊಮಾ ಓದುತ್ತಿದ್ದ. ಮೇಷ್ಟರ ತಂದೆ ಹತ್ತಿರದ ಊರಿನಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದರು.

ನನ್ನ ಜೀವಮಾನದಲ್ಲಿ ನಾನು ಮೊದಲಬಾರಿ ಬೇರೊಂದು ಕುಟುಂಬದ ಮನೆಯಲ್ಲಿ ತಂಗಿದ್ದೆ. ಆದರೆ ಮೇಷ್ಟರ ಅಮ್ಮನೂ ಸೇರಿ ಮನೆಮಂದಿಯೆಲ್ಲಾ ನನ್ನಗೆ ತೋರಿಸಿದ ಪ್ರೀತಿ ವಾತ್ಸಲ್ಯವನ್ನು ನಾನೆಂದೂ ಮರೆಯುವಂತಿಲ್ಲ. ನಾನು ಆ ಬಗೆಯ ಪ್ರೀತಿಗೆ ಅರ್ಹನೇ ಎಂದು ನನಗೇ ಸಂಶಯ ಬಂದಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಆದಿನಗಳಲ್ಲಿ ಯಾವ ಹಳ್ಳಿಗಳಲ್ಲೂ ವಿದ್ಯುತ್ ಇರಲಿಲ್ಲ. ಮೇಷ್ಟರ ಮನೆಯಲ್ಲಿ ನಾನು ಮೊದಲ ಬಾರಿ ವಿದ್ಯುತ್ ದೀಪಗಳನ್ನು ಕಂಡೆ. ನನಗೆ ಸ್ವಿಚ್ ಮುಟ್ಟಲೂ ಭಯವಾಗುತ್ತಿತ್ತು!

ಮೇಷ್ಟರು ನನ್ನನ್ನು ಅಗ್ರಹಾರದ ಪಕ್ಕದಲ್ಲಿದ್ದ ಹೆಡ್ ಮಾಸ್ಟರ್ ಹಿರಣ್ಣಯ್ಯನವರ ಮನೆಗೆ ಕರೆದುಕೊಂಡು ಹೋದರು. ಹಿರಣ್ಣಯ್ಯನವರು ಆ ಕಾಲದಲ್ಲಿ ಇಡೀ ಚಿಕ್ಕಮಗಳೂರು ಜಿಲ್ಲೆಗೇ ಪ್ರಸಿದ್ಧ ಮೇಷ್ಟರಾಗಿದ್ದರು. ಅವರು ಶಾಲೆಯಲ್ಲಿ ನಡೆಯುವ ನಾಟಕಗಳಲ್ಲಿ ವಹಿಸುತ್ತಿದ್ದ ಪಾತ್ರಗಳು ಪ್ರಖ್ಯಾತ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯನವರಿಗೇನೂ ಕಡಿಮೆಯಾದಾಗಿರಲಿಲ್ಲ. ಅವರು ನನ್ನ ಹತ್ತಿರ ಮೇಷ್ಟರು ನನ್ನ ಮೆರಿಟ್ ಬಗ್ಗೆ ಎಲ್ಲ ಹೇಳಿರುವುದಾಗಿಯೂ ಅದನ್ನು ಅವರೇ ಖುದ್ದಾಗಿ ಮಾರನೇ ದಿನ  ಪರೀಕ್ಷಿಸುವುದಾಗಿಯೂ ಹೇಳಿದರು.
----ಮುಂದುವರಿಯುವುದು ---
ವಿ ಕೃಷ್ಣಮೂರ್ತಿ
೬ನೇ ಜೂನ್ ೨೦೧೭




Saturday, June 3, 2017

ನನ್ನ ಬಾಲ್ಯ


ಅಧ್ಯಾಯ ೨೫
ನಮ್ಮೂರ  ಶಾಲೆಗೆ ಹೊಸ ಮೇಷ್ಟರು ಬಂದಿದ್ದರೂ ನನ್ನನ್ನು ಪುನಃ ಶಾಲೆಗೆ ಕಳಿಸಲು ನಮ್ಮ ತಂದೆಯವರು ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ. ಒಂದು ದಿನ ಸ್ವತಃ ವಿಶ್ವೇಶ್ವರಯ್ಯನವರೇ ನಮ್ಮ ಮನೆಗೆ ಆಗಮಿಸಿ ನನ್ನನ್ನು ತಂಗಿಯೊಡನೆ ಶಾಲೆಗೆ ಕಳಿಸಬೇಕೆಂದು ಕೇಳಿಕೊಂಡರು. ತಂದೆಯವರು ಊರಿನ ಬೇರೆ ಹಿರಿಯರೊಡನೆ ಮಾತಾಡಿ ನಮಗೆ ಶಾಲೆಗೆ ಹೋಗಲು ಅನುಮತಿ ನೀಡಿದರು. ನಾನು ಪುನಃ ನಮ್ಮ ನೆರೆಯ ಉಳಿದ ಹುಡುಗರೊಡನೆ ಶಾಲೆಗೆ ಹೋಗತೊಡಗಿದೆ. ನನ್ನ ತಮ್ಮ ಮಾಧವನನ್ನೂ ಶಾಲೆಗೆ ಸೇರಿಸಲಾಯಿತು. ಆದರೆ ಆವೇಳೆಗೆ  ಅರ್ಧ ವರ್ಷವೇ ಕಳೆದು ಹೋಗಿತ್ತು.

ವಿಶ್ವೇಶ್ವರಯ್ಯ ಬಂದ  ಮೇಲೆ ನಮ್ಮ ಶಾಲೆಯಲ್ಲಿ ಹಲವು ಬದಲಾವಣೆಗಳಾದುವು. ಅಲ್ಲಿಯವರೆಗೆ ನಾವು ಬೆಳಿಗ್ಗೆ ಪ್ರಾರ್ಥನೆಗೆ ಮೈಸೂರು ರಾಜ್ಯಗೀತೆಯಾದ "ಕಾಯೋ ಶ್ರೀಗೌರಿ ಕರುಣಾ ಲಹರಿ ತೋಯಜಾಕ್ಷಿ ಶಂಕರೀಶ್ವರೀ” ಎಂಬ ಗೀತೆಯನ್ನು ಹಾಡುತ್ತಿದ್ದೆವು. ಹಾಗೂ ಪ್ರತಿ ವರ್ಷ ಮೈಸೂರು ಮಹಾರಾಜರ ವರ್ಧಂತಿಯನ್ನು (ಜನ್ಮ ದಿನ) ಅವರ ಪೋಟೋಗೆ ಮಾಲೆ  ಹಾಕಿ ಕೊಬ್ಬರಿ ಪುಡಿಯೊಡನೆ ಸಕ್ಕರೆ ಮಿಕ್ಸ್ ಮಾಡಿ ಹಂಚುವುದರೊಡನೆ ಆಚರಿಸಲಾಗುತ್ತಿತ್ತು. ಮಹಾರಾಜರು ಆಡಳಿತವನ್ನು ಬಿಟ್ಟುಕೊಟ್ಟು ರಾಜ್ಯಪಾಲ ಪದವಿಯನ್ನು ಒಪ್ಪಿಕೊಂಡ ಮೇಲೆ ಈ ಆಚರಣೆಗಳು ನಿಂತು ಹೋದವು.

ವಿಶ್ವೇಶ್ವರಯ್ಯನವರು SSLC ಪಾಸ್ ಮಾಡಿದ್ದರು. ಪಾಠಗಳನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದರು.  ಅವರು ಬೆಳಗಿನ ಪ್ರಾರ್ಥನೆಗೆ  ವಂದೇ ಮಾತರಂ ಹಾಡಿಸತೊಡಗಿದರು. ಹಾಗೂ ಸ್ವಾತಂತ್ರ ದಿನಾಚರಣೆ ಮತ್ತು ಗಣತಂತ್ರ ದಿನ ಆಚರಿಸ ತೊಡಗಿದರು. ನಮ್ಮ ಶಾಲೆಗೆ ಆಗ ಯಾವುದೇ ಆಟದ  ಮೈದಾನ ಇರಲಿಲ್ಲ. ಆದ್ಧರಿಂದ ವಾರದಲ್ಲಿ ಎರಡು ದಿನ ನಮ್ಮನ್ನು ಶಾಲೆಯಿಂದ ದೂರದ ಬಯಲಿಗೆ ಕರೆದುಕೊಂಡು ಹೋಗಿ ಡ್ರಿಲ್ ಮಾಡಿಸುತ್ತಿದ್ದರು. ಅವರ ತಮ್ಮ ಚಂದ್ರಿ (ಚಂದ್ರಶೇಖರ) ನಾರ್ವೆ ಮಿಡ್ಲ್ ಸ್ಕೂಲ್ ನಲ್ಲಿ ಓದುತ್ತಿದ್ದ. ಅವನು ಫ್ಯಾನ್ಸಿ ಡ್ರೆಸ್, ಮಿಮಿಕ್ರಿ , ಇತ್ಯಾದಿಗಳಲ್ಲಿ ತುಂಬಾ ಪರಿಣಿತನಾಗಿದ್ದ. ಮೇಷ್ಟರು  ಅವನನ್ನು ನಮ್ಮ ಶಾಲೆಗೆ ಕರೆಸಿ ಅವನಿಂದ ವಿವಿಧ ವಿನೋದಾವಳಿ ಮಾಡಿಸುತ್ತಿದ್ದರು. ಒಟ್ಟಿನಲ್ಲಿ  ಶಾಲೆ ತುಂಬಾ ಏಳಿಗೆಯನ್ನು ಕಂಡಿತು.

ಬೇಗನೆ ನನ್ನ ನಾಲ್ಕನೇ ತರಗತಿ ಮುಕ್ತಾಯಗೊಂಡಿತು. ಬೇಸಿಗೆ ರಜ ಮುಗಿದನಂತರ ನಾನು ಮಿಡ್ಲ್ ಸ್ಕೂಲ್ ಓದಲು ಬೇರೆ ಊರಿಗೆ ಹೋಗಬೇಕಿತ್ತು. ಆದರೆ ಅಣ್ಣ ನನಗೆ ನಮ್ಮೂರ ಶಾಲೆಗೇ ಹೋಗುತ್ತಿರುವಂತೆ ಹೇಳಿದ. ಆದರೆ ನಾನು ಪುನಃ ಶಾಲೆಗೆ ಏಕೆ ಬರುತ್ತಿರುವೆನೆಂದು ಮೇಷ್ಟರಿಗೆ ಅರ್ಥವಾಗಲಿಲ್ಲ. ಅಣ್ಣನಿಗೆ ಪುರದಮನೆಯಲ್ಲಿದ್ದ ಶಾಲೆಗೆ ಬರಲಾಗದಿದ್ದರಿಂದ ಪತ್ರಮುಖೇನ ಮೇಷ್ಟರಿಗೆ ನನಗೆ ಐದನೇ ತರಗತಿಯ ಟ್ಯೂಷನ್ ಮಾಡುವಂತೆ ಕೇಳಿಕೊಂಡ. ಮೇಷ್ಟರು ತಮ್ಮ ಫೀ ಎಷ್ಟೆಂದು ಕೂಡಾ ಹೇಳದೆ ಪಾಠ ಹೇಳಲು ಒಪ್ಪಿಕೊಂಡರು. ನನಗೆ  ಜೆ ಸಿ ರೋಲೋ ಅವರು ಬರೆದ ಐಡಿಯಲ್ ಇಂಗ್ಲಿಷ್ ರೀಡರ್ ಮೂಲಕ ಇಂಗ್ಲಿಷ್ ಪಾಠ ಪ್ರಾರಂಭ ಮಾಡಲಾಯಿತು. ಆದರೆ ನನಗೊಂದು ಸಮಸ್ಯೆ ಎದುರಾಯಿತು. ಅಣ್ಣ ಮತ್ತು ಮೇಷ್ಟರು ಎಷ್ಟೇ ಪ್ರಯತ್ನಪಟ್ಟರೂ ನನಗೆ ಚರಿತ್ರೆ ಮತ್ತು ಭೂಗೋಳ ಪಠ್ಯ ಪುಸ್ತಕಗಳು ದೊರೆಯಲಿಲ್ಲ. ಹಾಗಾಗಿ ನನ್ನ ಟ್ಯೂಷನ್ ಇಂಗ್ಲಿಷ್, ಕನ್ನಡ ಮತ್ತು ಅಂಕಗಣಿತಕ್ಕೆ ಸೀಮಿತವಾಯಿತು.

ಈ ನಡುವೆ ಇದ್ದಕ್ಕಿದ್ದಂತೆ ವಿಶ್ವೇಶ್ವರಯ್ಯನವರ ನಡವಳಿಕೆಯಲ್ಲಿ ತುಂಬಾ ಬದಲಾವಣೆ ಕಂಡು ಬಂತು. ಅವರು ವಿದ್ಯಾರ್ಥಿಗಳಿಗೆ ಸಣ್ಣ ಸಣ್ಣ ತಪ್ಪುಗಳಿಗೂ ಕೂಡಾ ಕಠಿಣ ಶಿಕ್ಷೆ ನೀಡತೊಡಗಿದರು. ಅವರು ಏಕೆ ಹಾಗೆ  ಮಾಡುತ್ತಿದ್ದಾರೆಂದು ನಮಗೆ ಅರ್ಥವಾಗಲೇ ಇಲ್ಲ. ಶಾಲೆಗೆ ಸ್ವಲ್ಪ ತಡವಾಗಿ ಬಂದರೂ ಮಕ್ಕಳನ್ನು ಒಳಗೆ ಸೇರಿಸದೆ ಹೊರಗೇ ಕೊಳೆಹಾಕಿ ನಂತರ ಒಳಗೆ ಬಿಡತೊಡಗಿದರು. ನಾನು ಅದನ್ನು ಗಮನಿಸುತ್ತಿದ್ದೆ. ನನಗೆ ಅದು ಸ್ವಲ್ಪವೂ ಇಷ್ಟವಾಗಲಿಲ್ಲ. ಹಾಗೂ ನಾನೇನಾದರೂ ಸ್ವಲ್ಪ ತಡವಾಗಿ ಬಂದರೆ ಏನಾಗಬಹುದೆಂದು ಯೋಚಿಸುತ್ತಿದ್ದೆ. ಆ ಅವಕಾಶ ಬಹು ಬೇಗನೆ ಬಂತು.

ನಾನು ನಮ್ಮ ನೆರೆಹೊರೆಯ ಮಕ್ಕಳೂ ಸೇರಿ ಸುಮಾರು ೧೦ ವಿದ್ಯಾರ್ಥಿಗಳೊಡನೆ ದಿನವೂ ಶಾಲೆಗೆ ಹೋಗುತ್ತಿದ್ದೆ. ಈ ತಂಡಕ್ಕೆ ನಾನೇ  ನಾಯಕನಾಗಿದ್ದೆ. ನಾವು ಪ್ರತಿದಿನ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಪುನಃ ಶಾಲೆಗೆ ಹೋಗುತ್ತಿದ್ದೆವು. ಒಂದು ಮಧ್ಯಾಹ್ನ ನಮ್ಮ ಕೆಳಗಿನ ಮನೆಯಲ್ಲಿ ಯಾವುದೋ ಊಟವಿದ್ದರಿಂದ ನಾವು ಮಧ್ಯಾಹ್ನ ಶಾಲೆಗೆ ಹಿಂದಿರುಗುವುದು ಸ್ವಲ್ಪ ತಡವಾಯಿತು. ನಾನು ಮಾಮೂಲಿನಂತೆ ಉಳಿದ ಮಕ್ಕಳೊಡನೆ  ಸೀದಾ ಶಾಲೆಯ ಒಳಗೆ ಪ್ರವೇಶ ಮಾಡಲು ಹೋದೆ.  ಆದರೆ ಮೇಷ್ಟರು ನನಗೆ ಹೊರಗೇ ನಿಲ್ಲುವಂತೆ ಆಜ್ಞೆ ಮಾಡಿದರು. ಅಲ್ಲಿಯವರೆಗೆ ನಾನು ಯಾವುದೇ ಶಿಕ್ಷೆಗೆ ಪಾತ್ರನಾಗುವನಲ್ಲವೆಂಬ ಹೆಮ್ಮೆಯಲ್ಲಿದ್ದೆ. ಆದರೆ ನನ್ನ ಹೆಮ್ಮೆ ಆದಿನ ಮುರಿದು ಬಿತ್ತು.  ನಾನು ನನ್ನ ತಾಳ್ಮೆ ಕಳೆದುಕೊಂಡದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನಾನು ಒಂದರೆಕ್ಷಣವೂ ಯೋಚಿಸದೇ ಶಾಲೆಯ ಮೆಟ್ಟಿಲಿಂದ ಹಿಂದಿರುಗಿ ನನ್ನ ತಂಡಕ್ಕೆ ನನ್ನನ್ನು ಹಿಂಬಾಲಿಸುವಂತೆ ಆಜ್ಞಾಪಿಸಿ ಶಾಲೆಯಿಂದ ಹೊರಟು ಬಿಟ್ಟೆ. ಪುರದಮನೆ ಮತ್ತು ಶಾಲೆ ಒಂದು ಗುಡ್ಡದ ಬುಡದಲ್ಲಿದ್ದು ಗುಡ್ಡ ಹತ್ತಿದನಂತರ ರಸ್ತೆ ಸಿಗುತ್ತಿತ್ತು. ನಮ್ಮ ತಂಡ ನನ್ನೊಡನೆ ಸೀದಾ ಗುಡ್ಡದ ಮೇಲೆ ಏರತೊಡಗಿತು. ನಾವು  ಸ್ವಲ್ಪವೂ ತಿರುಗಿ ನೋಡದೇ ಮನೆಯ ದಾರಿ ಹಿಡಿದೆವು. ಮೇಷ್ಟರು ನಾನು ಈ ರೀತಿ "ದಂಗೆಯೆದ್ದು" ನನ್ನ ಸೇನೆಯೊಡನೆ ಮನೆಯ ದಾರಿ ಹಿಡಿಯುವೆನೆಂದು ಕನಸ್ಸಿನಲ್ಲೂ ಎಣಿಸಿರಲಿಕ್ಕಿಲ್ಲ.  ಅವರು ಬೇಗನೆ ಶಾಲೆಯಿಂದ ಹೊರಬಂದು ಆಗಲೇ ಗುಡ್ಡದ ತುದಿ ಸೇರಿದ್ದ ನಮ್ಮನ್ನು ಕೈಬೀಸಿ ಗಟ್ಟಿಯಾಗಿ ಕರೆಯತೊಡಗಿದರು.  ಈ ತಮಾಷೆಯನ್ನು ಪುರದಮನೆಯ ಕುಟುಂಬದವರೆಲ್ಲಾ ಹೊರಬಂದು ನೋಡತೊಡಗಿದರು. ಮೇಷ್ಟರ ಗಾಬರಿಗೆ ಇನ್ನೊಂದು ಕಾರಣವಿತ್ತು. ನಮ್ಮ ಕುಟುಂಬಕ್ಕೂ ಪುರದಮನೆಯವರಿಗೂ ಮನಸ್ತಾಪವಿದ್ದರಿಂದ ಮೇಷ್ಟರು ಪುರದಮನೆಯವರ ಚಿತಾವಣೆಯಿಂದ ನಮ್ಮನ್ನು ಶಾಲೆಯಿಂದ ಹೊರಹಾಕಿದರೆಂದು ಊರಿನವರು ಭಾವಿಸಬಹುದಾಗಿತ್ತು.

ಗುಡ್ಡದ ತುದಿಯಿಂದ ನಮಗೆ ಮೇಷ್ಟರು ಕೈಬೀಸಿ ಕರೆಯುತ್ತಿದ್ದುದು ಮತ್ತು ಪುರದಮನೆಯವರು ನೋಡುತ್ತಿರುವುದೂ ಕಾಣುತ್ತಿತ್ತು. ಆದರೆ ನಾನು  ಅದನ್ನು ಲಕ್ಷ ಮಾಡದೇ ಸೀದಾ ನಮ್ಮ ಕೆಳಗಿನ ಮನೆಯನ್ನು ನಮ್ಮ ತಂಡದೊಡನೆ ತಲುಪಿದೆ. ಅಲ್ಲಿ ಸಂತರ್ಪಣೆ ಊಟ ಮುಗಿದು ಗಂಡಸರೆಲ್ಲಾ ಇಸ್ಪೀಟ್ ಆಟದಲ್ಲಿ ತೊಡಗಿದ್ದರು. ಅವರು ಆಟವನ್ನು ನಿಲ್ಲಿಸಿ ಶಾಲೆಯಿಂದ ಅಷ್ಟು ಬೇಗ  ವಾಪಾಸ್ ಬರಲು ಕಾರಣ ಕೇಳಿದರು. ನಾನು ಅವರಿಗೆ ನಾವು ಊಟ ಮುಗಿಸಿ ಹೋದಾಗ ಕೇವಲ ೪-೫ ನಿಮಿಷಗಳು ತಡವಾದುದಕ್ಕೆ ಮೇಷ್ಟರು ನಮಗೆ ಶಾಲೆಯ ಒಳಗೆ ಪ್ರವೇಶವಿಲ್ಲದಂತೆ ಮಾಡಿದರೆಂದು ಹೇಳಿದೆ. ಹಾಗೆಯೇ ಈ ರೀತಿ ನಾವು ತಡವಾದದ್ದು ಅದು ಮೊದಲನೇ ಬಾರಿಯೆಂದೂ ಆದ್ದರಿಂದ ನಮಗೆ ಆ ಬಗೆಯ ಶಿಕ್ಷೆ ಸರಿಯಲ್ಲವೆಂದೂ ಹೇಳಿದೆ.
ನನ್ನ ಅಭಿಪ್ರಾಯಕ್ಕೆ ಅಲ್ಲಿದ್ದ ಎಲ್ಲಾ ಹಿರಿಯರ ಸಮರ್ಥನೆ ಸಿಕ್ಕಿತು. ಅಲ್ಲದೆ ನಮ್ಮಣ್ಣನ ಪ್ರಕಾರ ನಾನು ಕೇವಲ ಟ್ಯೂಷನ್ ವಿದ್ಯಾರ್ಥಿಯಾದ್ದರಿಂದ ನನಗೆ ಶಾಲೆಯ ನಿಗದಿತ  ಸಮಯಕ್ಕೆ ಅಲ್ಲಿರಬೇಕಾದ ಅವಶ್ಯಕತೆ ಇರಲಿಲ್ಲ. ಒಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಮೇಷ್ಟರ ಈ ವಿಚಿತ್ರ ವರ್ತನೆಗೆ ಪುರದಮನೆ ಶ್ರೀನಿವಾಸಯ್ಯನವರೇ ಕಾರಣ ಎಂದಾಗಿತ್ತು. ಆದರೆ ವಾಸ್ತವದಲ್ಲಿ ಶ್ರೀನಿವಾಸಯ್ಯನವರಿಗೂ ಮೇಷ್ಟರ ವರ್ತನೆಗೂ ಯಾವುದೇ ಸಂಬಂಧವಿರಲಿಲ್ಲ. ನನ್ನ ಅಣ್ಣ ಕೂಡಲೇ ಮೇಷ್ಟರಿಗೆ ಒಂದು ಪತ್ರ ಬರೆದು  ನನ್ನ ಕೈಯಲ್ಲಿ ಕೊಟ್ಟ. ಅದನ್ನು ನಾನು ಮಾರನೇ ದಿನ ಮೇಷ್ಟರಿಗೆ ಕೊಡಬೇಕಿತ್ತು.

ನನಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ. ಅಷ್ಟೊಂದು ದಿನ ಅತ್ಯಂತ ಉತ್ತಮ ಮಟ್ಟದಲ್ಲಿದ್ದ  ನನ್ನ ಮತ್ತು ಮೇಷ್ಟರ ಸಂಬಂಧ ಈ ರೀತಿ ಒಮ್ಮೆಯೇ ಬಿಗಡಾಯಿಸಬಹುದೆಂದು ನಾನು ಕನಸ್ಸಿನಲ್ಲೂ ಎಣಿಸಿರಲಿಲ್ಲ. ಅವರ ವಿರುದ್ಧವಾಗಿ ನನ್ನ ನಡೆತ ಸರಿಯೇ ತಪ್ಪೇ ಎಂಬ ಸಂದಿಗ್ಧ ನನ್ನನ್ನು ರಾತ್ರಿಯೆಲ್ಲಾ ಕಾಡಿತು.
----ಮುಂದುವರಿಯುವುದು ---