Wednesday, August 23, 2017

ನನ್ನ ಬಾಲ್ಯ


ಅಧ್ಯಾಯ ೩೧
ಮೇಲ್ಕೊಪ್ಪ ಮಂಜುನಾಥ ಮತ್ತು ಚಾರಣಬೈಲ್ ಲಕ್ಷ್ಮೀನಾರಾಯಣ ಬೇಗನೆ ನನ್ನ  ಸ್ನೇಹಿತರಾಗಿಬಿಟ್ಟರು. ಮಂಜು ಸ್ವಲ್ಪ ದಿನ ತನ್ನ ಅಕ್ಕನ ಮನೆಯಾದ ಹುಂಚ ಎಂಬಲ್ಲಿ ಇದ್ದವನಾದ್ದರಿಂದ ಅಲ್ಲಿನ ವಿಷಯ ತುಂಬಾ ಹೇಳುತ್ತಿದ್ದ. ಜೈನರ ಯಾತ್ರಾಕ್ಷೇತ್ರವಾದ ಹುಂಚ ಶಿವಮೊಗ್ಗೆಯ ಸಮೀಪವಿದ್ದು ಅಲ್ಲಿಂದ ಗಾಜನೂರ್ ತುಂಗಾ ಅಣೆಕಟ್ಟು ತುಂಬಾ ಹತ್ತಿರವಂತೆ. ನನಗೆ ಹೊರಪ್ರಪಂಚದ ಅರಿವು ತುಂಬಾ ಕಡಿಮೆಯಿದ್ದರಿಂದ ಅವನು ಹೇಳುತ್ತಿದ್ದದ್ದನ್ನು ಕುತೂಹಲದಿಂದ ಕೇಳುತ್ತಿದ್ದೆ. ಆದರೆ ಮಾರನೇ ವರ್ಷ ಮಂಜು ಓದಲು ಹುಂಚಕ್ಕೆ ಹೋಗಿ ಬಿಟ್ಟ. ಅಲ್ಲಿಗೆ ನನ್ನ ಅವನ ಸ್ನೇಹ ಕೊನೆಗೊಂಡಿತು. ಲಕ್ಷ್ಮೀನಾರಾಯಣನ ತಂದೆಗೆ ಸಾಕಷ್ಟು ಜಮೀನು ಇತ್ತು. ಹಿರಿಯ ಮಗನಾದ ಅವನಿಗೆ ಮನೆಯ ಸ್ವಲ್ಪ ಜವಾಬ್ದಾರಿಯೂ ಇತ್ತು. ಅವನು ೬ನೇ ತರಗತಿಯಲ್ಲಿ ಫೈಲ್ ಆಗಿ ಅವನ ವಿದ್ಯಾಭ್ಯಾಸ ಅಲ್ಲಿಗೆ ಮುಕ್ತಾಯವಾಯಿತು. ಹೀಗೆ ನನ್ನ ಮತ್ತೊಬ್ಬ ಸ್ನೇಹಿತನೂ ನನ್ನಿಂದ ಕಳಚಿಕೊಂಡ. ಪುಟ್ಟಪ್ಪ ನಾಯಕ, ವೆಂಕಟಯ್ಯ, ಪುಟ್ಟಪ್ಪ ಮತ್ತು ಗೋಪಾಲ ಜಗಳಗಂಟಿಗಳಾಗಿದ್ದು ವಿನಾ  ಕಾರಣ  ಜಗಳಕ್ಕೆ ಬರುತ್ತಿದ್ದರು. ಆದರೆ ಶಂಕರಪ್ಪ ಮತ್ತು ತಿಮ್ಮಪ್ಪ ಆಗ ನಮ್ಮ ಸಹಾಯಕ್ಕೆ ಬರುತ್ತಿದ್ದರು. ಅಲ್ಲದೆ ಈ ಜಗಳಗಂಟಿಗಳಿಗೆ ವಿಷ್ಣುವಿನ ದೃಢಕಾಯ ವ್ಯಕ್ತಿತ್ವ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ಆದರೆ ವಿಷ್ಣು ಮತ್ತು ಶಂಕರಪ್ಪ ತುಂಬಾ ದೃಢಕಾಯರಾಗಿದ್ದರೂ ವಾಸ್ತವದಲ್ಲಿ ತುಂಬಾ ಸಾಧುಗಳಾಗಿದ್ದರು. ಆದರೆ ಜಗಳಗಂಟಿಗಳು ಅವರ ತಂಟೆಗೆ ಬರುತ್ತಿರಲಿಲ್ಲ.

ಪುಟ್ಟಪ್ಪನಾಯಕನ ತಂದೆ ವಾಸಪ್ಪ ನಾಯಕರು ಶ್ರೀಮಂತರಾಗಿದ್ದು ಮೇಲ್ಕೊಪ್ಪ ಶಾಲೆಯ ಹತ್ತಿರ ಮನೆ ಮತ್ತು ಒಂದು ಅಂಗಡಿಯ ಬಿಲ್ಡಿಂಗ್ ಕಟ್ಟಿಸಿದರು. ಅಲ್ಲಿ ಹೊಕ್ಕಳಿಕೆಯ ಪುರೋಹಿತರಾಗಿದ್ದ ಚಾರಣ ಬೈಲ್ ವೆಂಕಟಗಿರಿ ಭಟ್ಟರ ತಮ್ಮ ಒಂದು ಅಂಗಡಿ ತೆರೆದ. ನಾವು ಬೇಗನೆ ಅವನ ಸ್ನೇಹಿತರಾಗಿ ಒಮ್ಮೊಮ್ಮೆ ಅವನ ಅಂಗಡಿಯಲ್ಲಿ ಪೆಪ್ಪರ್ ಮಿಂಟ್  ಮತ್ತು  ಸೋಡಾ ಖರೀದಿಸುತ್ತಿದ್ದೆವು. ಪುಟ್ಟಪ್ಪ ನಾಯಕ ೬ನೇ ತರಗತಿಯಲ್ಲಿ ಫೈಲ್ ಆಗಿ ಅವನ ವಿದ್ಯಾಭ್ಯಾಸವೂ  ಅಲ್ಲಿಗೆ ಮುಕ್ತಾಯವಾಯಿತು. ಆ ದಿನಗಳಲ್ಲಿ  ಮೇಷ್ಟರುಗಳು ಚೆನ್ನಾಗಿ ಓದದ ಹುಡುಗರನ್ನು ನಿರ್ದಾಕ್ಷಣ್ಯದಿಂದ  ಫೈಲ್ ಮಾಡಿಬಿಡುತ್ತಿದ್ದರು. ಅವರು ಅದೇ ತರಗತಿಯಲ್ಲಿ ಪುನಃ ಓದಬೇಕಾಗಿತ್ತು.
ಗಿನ್ನೆಸ್ ರೆಕಾರ್ಡ್ ಕನಸು ಭಗ್ನ!
ನನ್ನ ತರಗತಿಯಲ್ಲಿ ನಾಗಭೂಷಣ ಎಂಬ ವಿದ್ಯಾರ್ಥಿ ಇದ್ದ. ಅವನ ಆತ್ಮೀಯ ಸ್ನೇಹಿತ ನಾನು ಈ ಹಿಂದೆಯೇ ಹೇಳಿದ ಕಬಡ್ಡಿ ಕ್ಯಾಪ್ಟನ್ ವಾಸಾಚಾರಿ.  ಈ ಜೋಡಿಯ ವಯಸ್ಸಿಗೂ ಮತ್ತು ನಮ್ಮ ಗುರುಶಾಂತಪ್ಪ ಮೇಷ್ಟರ ವಯಸ್ಸಿಗೂ ಹೆಚ್ಚು ವ್ಯತ್ಯಾಸ ಕಾಣುತ್ತಿರಲಿಲ್ಲ. ಅವರಿಬ್ಬರಲ್ಲೂ ಒಂದು ಸಾಮ್ಯವಿತ್ತು. ಅವರಿಗೆ ತಾವು ಒಂದೊಂದು ತರಗತಿಯಲ್ಲೂ ಎಷ್ಟು ವರ್ಷ ಓದಿದ್ದೇವೆಂದು ಮರೆತು ಹೋಗಿತ್ತು! ನಾನು ಶಾಲೆಗೆ ಸೇರಿದಾಗ ವಾಸಾಚಾರಿ ಎಂಟನೇ ತರಗತಿಗೂ ಮತ್ತು ನಾಗಭೂಷಣ ಆರನೇ ತರಗತಿಗೂ ಅಂಟಿಕೊಂಡು ಬಿಟ್ಟಿದ್ದರು. ಬಸವಾನಿ  ಶಾಲೆಯಲ್ಲಿ ಅವರಿಬ್ಬರೂ ಒಂದು ಗಿನ್ನೆಸ್ ರೆಕಾರ್ಡ್ ಮಾಡಲು ತೀರ್ಮಾನಿಸಿದಂತಿತ್ತು! ಆದರೆ ನಾಗಭೂಷಣನ ರೆಕಾರ್ಡ್ ಒಂದು ವಿಪರೀತ ಪರಿಸ್ಥಿತಿಯ ಕಾರಣ ಸಮಾಪ್ತಿಗೊಂಡಿತು.

ನಾಗಭೂಷಣನ ಗಾಡಿಯ ಚಕ್ರ  ಆರನೇ ತರಗತಿಯಲ್ಲೇ ಗಿರ್ಗುಟ್ಟೆ ಹೊಡೆಯುತ್ತಿರುವಾಗ ಅವನ ನಾಲ್ಕು ವರ್ಷ ಕಿರಿಯ ತಂಗಿ ಶಾಂತಕುಮಾರಿ ಕೂಡಾ ಆರನೇ ತರಗತಿಗೆ ಪ್ರವೇಶ ಮಾಡಿಬಿಟ್ಟಳು! ನಾಗಭೂಷಣನಿಗೆ ಅದು ತುಂಬಾ ಮುಜುಗರ ತಂದಿತು. ಅವನು ಹೇಗೋ ಅದನ್ನು ಸಹಿಸಿಕೊಂಡಿರಲು ಪ್ರಯತ್ನಿಸುತ್ತಿದ್ದ. ಆದರೆ ನಮ್ಮ ಕ್ಲಾಸ್ ಟೀಚರ್ ಗುರುಶಾಂತಪ್ಪನವರು ಅದಕ್ಕೆ ಅವಕಾಶ ಕೊಡಲಿಲ್ಲ. ಆ ದಿನಗಳಲ್ಲಿ ಶಾಲೆಗಳಲ್ಲಿ ಒಂದು ವಿಚಿತ್ರ ಮತ್ತು ಕ್ರೂರ ಶಿಕ್ಷಾ ಕ್ರಮವಿತ್ತು. ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದ ವಿದ್ಯಾರ್ಥಿಗೆ ಸರಿಯಾದ ಉತ್ತರ ಕೊಟ್ಟ ವಿದ್ಯಾರ್ಥಿಯಿಂದ ಮೂಗು ಹಿಡಿದು ಕೆನ್ನೆಗೆ ಹೊಡೆಸಲಾಗುತ್ತಿತ್ತು. ಗುರುಶಾಂತಪ್ಪನವರು ನಾಗಭೂಷಣ ಮತ್ತು ಅವನ ತಂಗಿಗೆ ಒಂದೇ ಪ್ರಶ್ನೆ ಕೇಳುತ್ತಿದ್ದರು. ತಂಗಿ ಸರಿಯಾಗಿ ಉತ್ತರ ಕೊಟ್ಟಾಗ ಅವಳು  ನಾಗಭೂಷಣನ ಕೆನ್ನೆಗೆ ಹೊಡೆಯ ಬೇಕಾಗಿತ್ತು. ಈ ಬಗೆಯ ಅವಮಾನವನ್ನು ತಾಳಲಾರದೆ ನಾಗಭೂಷಣ ತನ್ನ ವಿದ್ಯಾಭ್ಯಾಸವನ್ನು ಆರನೇ ತರಗತಿಗೇ ನಿಲ್ಲಿಸಬೇಕಾಯಿತು. ಹೀಗೆ ಅವನ ಗಿನ್ನೆಸ್ ರೆಕಾರ್ಡ್ ಕನಸು ಭಗ್ನಗೊಂಡಿತು!
ಝೇಂಡು ಝೇಂಡು ಝೇಂಡು ಗುಡು ಗುಡು!
ಕಿರಿಯ ವಿದ್ಯಾರ್ಥಿಗಳಾದ ನಮಗೆ ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ವಿಶೇಷ ಗೌರವ ಹಾಗೂ ಭಯ  ಇದ್ದಿತು. ಆ ತರಗತಿಯಲ್ಲಿ ಓದುತ್ತಿದ್ದ ತಿಮ್ಮಪ್ಪ ಮತ್ತು ಫಣಿಯಪ್ಪ ಎಂಬ ವಿದ್ಯಾರ್ಥಿಗಳು ಒಂದು  ಬ್ಯುಸಿನೆಸ್ ನಲ್ಲಿ ಪೈಪೋಟಿ ನಡೆಸುತ್ತಿದ್ದರು. ನಾನು ಶಾಲೆಗೆ ಸೇರಿದ ದಿನವೇ ಅವರಿಬ್ಬರೂ ನನ್ನನ್ನು ಪ್ರತ್ಯೇಕವಾಗಿ ಭೇಟಿಮಾಡಿ ನನ್ನ “ಆರ್ಡರ್” ಅವರಿಗೇ ಕೊಡಬೇಕೆಂದು ಹೇಳಿ ಹೋಗಿಬಿಟ್ಟರು. ನನಗೆ ಏನೂ ಅರ್ಥವಾಗಲಿಲ್ಲ. ಆಮೇಲೆ ಶ್ರೀಧರಮೂರ್ತಿಯಿಂದ ವಿಷಯ ಏನೆಂದು ತಿಳಿಯಿತು. ಅವರಿಬ್ಬರೂ ತೀರ್ಥಹಳ್ಳಿಯಿಂದ ಟೆಕ್ಸ್ಟ್ ಪುಸ್ತಕಗಳನ್ನು ತಂದು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರಂತೆ. ಒಂದೊಂದು ಪುಸ್ತಕಕ್ಕೂ ಅವರಿಗೆ ಒಂದಾಣೆ ಕಮಿಷನ್ ಕೊಡಬೇಕಿತ್ತಂತೆ.

ನನ್ನ ಅಣ್ಣ ನನಗೆ ಬೇಕಾದ ಎಲ್ಲಾ ಪುಸ್ತಕಗಳನ್ನು ಮೊದಲೇ ತಂದು ಬಿಟ್ಟಿದ್ದ. ಆದ್ದರಿಂದ ನನಗೆ ಕೇವಲ ಹಿಂದಿ ಪುಸ್ತಕದ ಅಗತ್ಯ ಇತ್ತು. ಆದರೆ ಅದನ್ನು ಇಬ್ಬರಲ್ಲಿ ಯಾರ ಮೂಲಕ ತರಿಸಬೇಕೆಂದು ನನಗೆ ತೀರ್ಮಾನಿಸಲಾಗಲಿಲ್ಲ. ಫಣಿಯಪ್ಪ ತುಂಬಾ ಸಭ್ಯ ಮತ್ತು ಸಾಧು ವ್ಯಕ್ತಿಯಾಗಿದ್ದರೆ ತಿಮ್ಮಪ್ಪ ಒಬ್ಬ ಒರಟ ಉಂಡಾಡಿ ಗುಂಡನಂತೆ ಕಾಣುತ್ತಿದ್ದ. ಅವನ ಮುಖದಲ್ಲಿ ಎಂದೂ ನಗೆ ಕಾಣುತ್ತಿರಲಿಲ್ಲ. ಎಲ್ಲರೂ ಕಬಡ್ಡಿ ಆಡುವಾಗ "ಕಬಡ್ಡಿ  ಕಬಡ್ಡಿ " ಎಂದು ಹೇಳುತ್ತಿದ್ದರೆ ತಿಮ್ಮಪ್ಪ ಮಾತ್ರ " ಝೇಂಡು ಝೇಂಡು ಝೇಂಡು ಗುಡು ಗುಡು! ತ್ರೇತ ತ್ರೇತ ತ್ರೇತ ಗುಡು ಗುಡು!" ಎಂದು ರಣಭೈರವನಂತೆ ಕೂಗುತ್ತ ಆಕ್ರಮಣ ಮಾಡುತ್ತಿದ್ದ!  ಅವನಿಗೆ ಆರ್ಡರ್ ಕೊಡದಿದ್ದರೆ ನನ್ನ ಮೇಲೆಯೇ “ಝೇಂಡು ಗುಡು ಗುಡು” ಎಂದು ಆಕ್ರಮಣ ಮಾಡಿಯಾನೆಂದು ನನಗೆ ಭಯವಾಯಿತು. ಆದರೆ ಸಮಸ್ಯೆ ಇದ್ದಕಿದ್ದಂತೆ ಸುಸೂತ್ರವಾಗಿ ಬಗೆ ಹರಿಯಿತು. ಏಕೆಂದರೆ ತೀರ್ಥಹಳ್ಳಿಯಲ್ಲಿ ಹಿಂದಿ ಪುಸ್ತಕಗಳೆಲ್ಲಾ ಆಗಲೇ ಮಾರಾಟವಾಗಿ ಬಿಟ್ಟಿದ್ದವಂತೆ. ನನಗಾಗಿ ಒಂದು ಪುಸ್ತಕ ತರಿಸುವ ಸಂಭವವಿರಲಿಲ್ಲ.  ನಾನು ಆಗಲೇ ಬರೆದಿರುವಂತೆ ನಾಗೇಶ ಭಾವನವರ ಹಳೆಯ ಪುಸ್ತಕ ನನಗೆ ದೊರೆಯಿತು.
ದೇವಪ್ಪನ ಪ್ರಣಯ ಪ್ರಸಂಗ
ಎಂಟನೇ ತರಗತಿಯಲ್ಲಿ ದೇವಪ್ಪನೆಂಬ ಚೆಂದದ ವಿದ್ಯಾರ್ಥಿ ಒಬ್ಬನಿದ್ದ. ಅವನೂ ನಮ್ಮ ಜಗದೀಶನಂತೆ ಲಕ್ಷ್ಮೀಪುರ ಎಂಬ ಹಳ್ಳಿಯವನು. ಆ ಹಳ್ಳಿಯ ಹೆಸರಿನಂತೆ ಅಲ್ಲಿಯವರೆಲ್ಲಾ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶ್ರೀಮಂತರಾಗಿದ್ದರು. ದೇವಪ್ಪನು ಶ್ರೀಮಂತರ ಮಗ ಮಾತ್ರವಲ್ಲ ಓದುವುದರಲ್ಲೂ ಮುಂದಿದ್ದನು. ಆದರೆ ದೇವಪ್ಪ ಇದ್ದಕಿದ್ದಂತೆ ಬೇರೊಂದು ಕಾರಣಕ್ಕಾಗಿ ಪ್ರಸಿದ್ಧಿ ಪಡೆದು ಬಿಟ್ಟನು.

ದೇವಪ್ಪನ ತರಗತಿಯಲ್ಲಿ ಶಾರದೆ ಎಂಬ ಚೆಂದದ ವಿದ್ಯಾರ್ಥಿನಿ ಒಬ್ಬಳಿದ್ದಳು. ಅವಳೂ ಕೂಡ ಶ್ರೀಮಂತ ಮನೆತನದವಳೇ ಆಗಿದ್ದಳು. ಒಂದು ದಿನ ಹೆಡ್ ಮಾಸ್ಟರ್ ವರದಾಚಾರ್ ಅವರು ದೇವಪ್ಪ ಮತ್ತು ಶಾರದೆ ಇಬ್ಬರನ್ನೂ ಆಫೀಸಿಗೆ ಕರೆಸಿ ವಿಚಾರಣೆ ಮಾಡಿದರಂತೆ. ಏಕೆಂದರೆ ಈ ಜೋಡಿಯ ನಡುವೆ ಏನೋ ಚೆಲ್ಲಾಟ ನಡೆಯುತ್ತಿದೆಯೆಂದು ಅವರಿಗೆ ಅಧಿಕೃತ ಮೂಲಗಳಿಂದ ತಿಳಿದು ಬಂದಿತ್ತಂತೆ. ವರದಿಯ ಪ್ರಕಾರ ಈ ಜೋಡಿ ಸಂಜೆ ಶಾಲೆಯಿಂದ ಹಿಂದಿರುಗುವಾಗ ಗುಪ್ತ ಸ್ಥಳವೊಂದರಲ್ಲಿ ಭೇಟಿಯಾಗುತ್ತಿದ್ದರಂತೆ!

ಹೆಡ್ ಮಾಸ್ಟರ್ ಅವರು ಈ ಜೋಡಿಗೆ ಹೇಗೆ ಎಚ್ಚರಿಕೆ ನೀಡಿ ಕಳಿಸಿದರೆಂದು ಯಾರಿಗೂ ತಿಳಿಯಲಿಲ್ಲ. ಆದರೆ ದೇವಪ್ಪ-ಶಾರದೆಯರ ಪ್ರಣಯ ಪ್ರಸಂಗ ಮಿಂಚಿನ ವೇಗದಲ್ಲಿ ಇಡೀ ಶಾಲೆಗೆ ಹಬ್ಬಿ ಬಿಟ್ಟಿತು. ಅದಕ್ಕೆ ಕಾರಣ ಜವಾನ ನಾಗಪ್ಪನೆಂದು ಬೇರೆ ಹೇಳ ಬೇಕಿಲ್ಲ. ಆದರೆ ಶಾಲೆಯಲ್ಲಿ ಪಾಠ ನಡೆಯುತ್ತಿದ್ದರಿಂದ ಸಮಾಚಾರ ಗುಟ್ಟಾಗಿ ಹರಡಿದರೂ ವಿವರಗಳು ಯಾರಿಗೂ ತಿಳಿದಿರಲಿಲ್ಲ.

ನಮ್ಮೊಟ್ಟಿಗೆ ಶಾಲೆಗೆ ಬರುತ್ತಿದ್ದ ಅತ್ತಿಕೊಡಿಗೆ ಗಣಪೆ ಗೌಡರ ಮಗ ತಿಮ್ಮಪ್ಪನೂ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ನಾವೆಲ್ಲಾ  ಅವನಿಂದ ದೇವಪ್ಪ-ಶಾರದೆಯರ ಪ್ರಣಯ ಪ್ರಸಂಗದ  ಪೂರ್ಣ ವಿವರಗಳನ್ನು ಪಡೆಯಲು ಕಾಯುತ್ತಿದ್ದೆವು. ಅವನಿಗೂ ನಮಗೆಲ್ಲ ಅದನ್ನು ಹೇಳುವುದರಲ್ಲಿ ಆಸಕ್ತಿಯಿತ್ತು. ಆದರೆ ನಾವು ನಮ್ಮ ಕುತೂಹಲವನ್ನು ನಮ್ಮೊಡನೆ ಶಾಲೆಗೆ ಬರುತ್ತಿದ್ದ ಏಕೈಕ ವಿದ್ಯಾರ್ಥಿನಿ ವಿಶಾಲಾಕ್ಷಿ ಅವಳ ಮನೆ ತಲುಪುವರೆಗೆ ತಡೆದುಕೊಳ್ಳಬೇಕಾಯಿತು.  ಅವಳು ಹೋದ ಕೂಡಲೇ ತಿಮ್ಮಪ್ಪ ಪೂರ್ತಿ ಪ್ರಸಂಗವನ್ನು ವಿವರವಾಗಿ ಹೇಳತೊಡಗಿದ.

ತಿಮ್ಮಪ್ಪನ ಪ್ರಕಾರ ಇಡೀ ಪ್ರಕರಣವನ್ನು ಬಯಲಿಗೆಳೆದವನು ಏಳನೇ ತರಗತಿಯಲ್ಲಿ ಓದುತ್ತಿದ್ದ ಮಂಜಪ್ಪ ಎಂಬ ವಿದ್ಯಾರ್ಥಿ. ಈ ಮಂಜಪ್ಪ ಮಾಡಿದ  ಕೆಲಸ ಪ್ರಖ್ಯಾತ ಪತ್ತೇದಾರಿ ಕಾದಂಬರಿ ಲೇಖಕ ಎನ್  ನರಸಿಂಹಯ್ಯನವರ ಕಥೆಯಲ್ಲಿ ಬರುತ್ತಿದ್ದ ಪತ್ತೇದಾರ ಪುರುಷೋತ್ತಮನಿಗೇನೂ ಕಡಿಮೆ ಇರಲಿಲ್ಲ. ಏಳನೇ ಮತ್ತು ಎಂಟನೇ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದರಿಂದ ಮಂಜಪ್ಪ ಈ ಜೋಡಿಯ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನಂತೆ. ಬಹು ಬೇಗನೆ ಅವನಿಗೆ ಈ ಜೋಡಿಯ ನಡುವೆ ಏನೋ ಚೆಲ್ಲಾಟ ನಡೆಯುತ್ತಿದೆಯೆಂದು ಗುಮಾನಿ ಬಂದು ಬಿಟ್ಟಿತಂತೆ.

ಮಂಜಪ್ಪ ಶಾಲೆ ಬಿಟ್ಟ ಮೇಲೆ ಈ ಜೋಡಿ ಎಲ್ಲೋ ಸೇರುತ್ತಾರೆಂದು ತೀರ್ಮಾನಿಸಿ ಅವರನ್ನು ಗುಪ್ತವಾಗಿ ಹಿಂಬಾಲಿಸುತ್ತಿದ್ದನಂತೆ. ಅವನ ಅದೃಷ್ಟಕ್ಕೆ ಒಂದು ದಿನ ದೇವಪ್ಪ ಲಕ್ಷ್ಮೀಪುರದ ದಾರಿ ಬಿಟ್ಟು ಬೇರೆ ದಾರಿ ಹಿಡಿದುದು ಕಾಣಿಸಿತಂತೆ. ಅವನನ್ನು ಗುಪ್ತವಾಗಿ ಹಿಂಬಾಲಿಸಿದಾಗ ಸ್ವಲ್ಪ ದೂರದಲ್ಲಿ ಶಾರದೆ ಕಾಯುತ್ತಿರುವುದು ಕಣ್ಣಿಗೆ ಬಿತ್ತಂತೆ . ಅವರಿಬ್ಬರೂ ಕೈ ಕೈ ಹಿಡಿದುಕೊಂಡು ನಿರ್ಜನ  ಪ್ರದೇಶದತ್ತ ತೆರಳಿದರಂತೆ. ತಿಮ್ಮಪ್ಪ ಅಷ್ಟು ಹೇಳಿ ಕಥೆಯನ್ನು ನಿಲ್ಲಿಸಿದ. ಅವನ ಪ್ರಕಾರ ಒಂದು ಹೆಣ್ಣು ಮತ್ತು ಗಂಡು ಕೈ ಕೈ ಹಿಡಿದು ಕೊಳ್ಳುವುದೇ ದೊಡ್ಡ ಅಪರಾಧವಾಗಿತ್ತು.

ಆದರೆ ಮುಂದೇನಾಯಿತೆಂದು ತಿಳಿಯಲು ನಮ್ಮ ಕುತೂಹಲ ಮುಗಿಲು ಮುಟ್ಟಿತ್ತು. ತಿಮ್ಮಪ್ಪನ ಪ್ರಕಾರ ಮಂಜಪ್ಪನಿಗೆ ಅಲ್ಲಿಂದ  ಮುಂದೆ ಜೋಡಿಯನ್ನು ಹಿಂಬಾಲಿಸುವುದು ಅಸಾಧ್ಯವಾದ್ದರಿಂದ ಅವನು ಒಂದು ಮರವನ್ನೇರಿದನಂತೆ. ಅವನಿಗೆ ದೂರದಿಂದಲೇ ಆ ಜೋಡಿ ಒಬ್ಬರನ್ನೊಬ್ಬರು ಆಲಂಗಿಸುವುದು ಕಣ್ಣಿಗೆ ಬಿತ್ತಂತೆ. ಅಷ್ಟರಲ್ಲೇ ಮಂಜಪ್ಪನಿಗೆ ತಾನು ಹತ್ತಿದ ಮರದ  ಒಂದು ಕೊಂಬೆಯಲ್ಲಿ ಕರಡಿಯೊಂದು ಕುಳಿತಂತೆ ಕಾಣಿಸಿ ಭಯಪಟ್ಟು ಮರದಿಂದ ಹಾರಿ ಕಾಲಿಗೆ ಬುದ್ಧಿ ಹೇಳಿದನಂತೆ!
-----ಮುಂದುವರೆಯುವುದು-----



Tuesday, August 15, 2017

ಬಾಲ್ಯಕಾಲದ ವಿಸ್ಮಯ ಪ್ರಪಂಚ


ಮನುಷ್ಯನ ಜೀವನದಲ್ಲಿ ಬಾಲ್ಯಕಾಲ ಎಂಬುದು ಒಂದು ವಿಸ್ಮಯ ಪ್ರಪಂಚ. ಆ ವಿಸ್ಮಯಕ್ಕೆ ಕೊನೆ ಮೊದಲೆಂಬುದಿಲ್ಲ. ಮಗುವಿನ ಮನದಲ್ಲಾಗುವ ಭಯ,ಸಂತೋಷ ಮತ್ತು ಗೊಂದಲಗಳನ್ನು ಬೇರೆಯವರು ಅರಿಯಲಾರರು. ಅದು ತನ್ನದೇ ಆದ ಪ್ರಪಂಚದಲ್ಲಿರುತ್ತದೆ. ತನ್ನ ಸುತ್ತಮುತ್ತ ನಡೆಯುತ್ತಿರುವ ಪ್ರಸಂಗಗಳಿಗೆ ಅದಕ್ಕೆ ಕಾರಣ ತಿಳಿಯುವುದಿಲ್ಲ. ಕಿಟಕಿಯ ಹಿಂದೆ ಸದಾ ಭೂತವೊಂದು ಹೊಂಚು ಹಾಕುವಂತೆ ಅನಿಸುತ್ತದೆ. ಕಿಟಕಿ ಬಾಗಿಲುಗಳ ಕೀರಲು ಶಬ್ದಗಳು ಅದಕ್ಕೆ ಭಯವನ್ನು ತರುತ್ತವೆ. ಅದಕ್ಕೆ ಸದಾ ಕನಸುಗಳು ಬೀಳುತ್ತಿರುತ್ತವೆ. ಎಷ್ಟೋ ಬಾರಿ ಅದಕ್ಕೆ ಕನಸಿಗೂ ನಿಜ ಪ್ರಪಂಚಕ್ಕೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ತನಗೆ ಭಯ ಮತ್ತು ದುಃಖ  ಎನಿಸುವಾಗ  ಅದು ಅಳುತ್ತದೆ. ಹಾಗೆಯೇ ಸಂತಸವೆನಿಸಿದಾಗ ಮುಗುಳ್ನಗುತ್ತದೆ. ಅದಕ್ಕೆ ಅಮ್ಮನ ಮಡಿಲು ಮಾತ್ರಾ ಸದಾ ಕ್ಷೇಮವೆನಿಸುತ್ತದೆ.

ನನ್ನ ಬಾಲ್ಯದಲ್ಲಿ ನಡೆದ ಕೆಲವು ಸಂಗತಿಗಳು ನನ್ನ ಮನದಲ್ಲಿ ಬೇರೂರಿ ಬಿಟ್ಟಿವೆ. ಅವನ್ನು ನನ್ನಿಂದ ಅರ್ಥ ಮಾಡಿಕೊಳ್ಳಲಾಗಲೇ ಇಲ್ಲ. ಬಗ್ಗೆ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಆದರೆ ನನಗೆ ಅವುಗಳಿಗೆ ಉತ್ತರ ತಿಳಿಯಲೇ ಇಲ್ಲ.

ನನ್ನ ಅಮ್ಮನಿಗೆ ನಾನು ಐದನೇ ಮಗುವಾಗಿದ್ದರಿಂದ ಅವಳಿಗೆ ನನ್ನ ಕಡೆ ವಿಶೇಷ ಗಮನ ಕೊಡಲು ವೇಳೆ ಇರುತ್ತಿರಲಿಲ್ಲ. ಅವಳಿಗೆ ಅವಳದ್ದೇ ದಿನ ನಿತ್ಯದ ಕೆಲಸಗಳಿರುತ್ತಿದ್ದವು. ಬಿಡುವನ್ನೇ ಕಾಣದ ಜೀವ ಅವಳದು. ಹಾಗಾಗಿ ನನ್ನ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಇಬ್ಬರು ಅಕ್ಕಂದಿರಿಗೆ ವಹಿಸಲಾಗಿತ್ತು. ನನ್ನ ದೊಡ್ಡಕ್ಕನಾದ ಗೌರಕ್ಕ ಅತ್ಯಂತ ಶಾಂತ ಹಾಗು ತಾಳ್ಮೆಯ ವ್ಯಕ್ತಿ. ಆದರೆ ಚಿಕ್ಕಕ್ಕನಾದ ರುಕ್ಮಿಣಕ್ಕ ಶಿಸ್ತಿನ ಸಿಪಾಯಿ. ಅವಳ ಮುಂದೆ ಯಾವುದೇ ಪೋಲಿತನಕ್ಕೆ ಅವಕಾಶವಿರಲಿಲ್ಲ. ನನಗಿಂತ ಎರಡು ವರ್ಷ ದೊಡ್ಡವನಾದ ಪುಟ್ಟಣ್ಣ ನನಗೆ ಸರ್ವಜ್ಞನಂತೆ ಕಾಣಿಸುತ್ತಿದ್ದ. ಆದರೆ ನಮಗೆಲ್ಲರಿಗಿಂತ ದೊಡ್ಡವನಾದ "ಅಣ್ಣಯ್ಯ" ನಮಗೆಲ್ಲಾ ಸರ್ವಾಧಿಕಾರಿಯಾಗಿದ್ದ. ಅವನ ಮುಂದೆ ನಾವು ತುಟಿ ಪಿಟಕ್ ಎನ್ನುವಂತಿರಲಿಲ್ಲ. ಎಲ್ಲ ವಿಷಯಗಳಿಗೂ ಅವನದೇ ಅಂತಿಮ ತೀರ್ಮಾನವಾಗಿತ್ತು. ಅವನ ಆಸರೆಯಲ್ಲಿ ನಾವು ಯಾವಾಗಲೂ ಸುರಕ್ಷಿತರೆಂಬ ನೆಮ್ಮದಿ  ನಮಗಿತ್ತು.
------o----- --o--- -----o------o-------0-----0------0------0-------0------0-------0--
ಕಾಗಕ್ಕ ಗುಬ್ಬಕ್ಕನ ಕಥೆ
ಆಗಿನ ಕಾಲದ ಎಲ್ಲಾ ಮಕ್ಕಳಂತೆ ನನಗೂ ಅಕ್ಕಂದಿರು ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ನಿದ್ದೆ ಮಾಡಿಸುತ್ತಿದ್ದರು. ಕಥೆ ಕೇಳದೇ ನನಗೆ ನಿದ್ದೆ ಬರುವುದು ಸಾಧ್ಯವೇ ಇರಲಿಲ್ಲವಿಚಿತ್ರವೆಂದರೆ ಕಥೆಯನ್ನು ಪುನಃ ಪುನಃ ಕೇಳಲು ಹೇಗೆ ಸಾಧ್ಯವಾಗುತ್ತಿತ್ತೆಂದುಮತ್ತೂ ವಿಚಿತ್ರವೆಂದರೆ ಕಥೆಯ ಮಧ್ಯದಲ್ಲೇ ನಿದ್ದೆ ಬರುತ್ತಿದ್ದರಿಂದ ಅದರ ಕೊನೆಯನ್ನು ಎಂದೂ ಕೇಳದಿದ್ದುದು. ಆದರೆ ಕಥೆಯ ಉದ್ದೇಶವೇ ಮಕ್ಕಳಿಗೆ ನಿದ್ದೆ ಬರಿಸುವುದಾಗಿತ್ತು. ಹಾಗಾಗಿ ಅಕ್ಕಂದಿರಿಗೆ ಅದರ ಅಂತ್ಯವನ್ನು ಹೇಳುವ ಪ್ರಸಂಗವೇ ಬರುತ್ತಿರಲಿಲ್ಲ. ನನಗೆ ನೆನಪಿನಲ್ಲಿ ಉಳಿದಿರುವುದೂ ಕೂಡಾ ನಾನು ನಿದ್ದೆ ಮಾಡುವವರೆಗಿನ ಕಥೆ ಮಾತ್ರ. ಕಥೆ ಹೀಗಿತ್ತು:

ಕಾಗಕ್ಕ ಮತ್ತು ಗುಬ್ಬಕ್ಕ ನೆರೆಹೊರೆಯವರು. ಕಾಗಕ್ಕನ ಮನೆ ಸಗಣಿಯಿಂದ ಕಟ್ಟಲಾಗಿತ್ತು. ಗುಬ್ಬಕ್ಕನ ಮನೆ ಮೇಣದ್ದು. ಗುಬ್ಬಕ್ಕನಿಗೆ ಕಾಗಕ್ಕ ತನ್ನ ಶತ್ರುವೆಂದು ಗೊತ್ತಿತ್ತು. ಒಂದು ರಾತ್ರಿ ಭಾರೀ ಮಳೆ ಬಂದು ಕಾಗಕ್ಕನ ಸಗಣಿ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಗುಬ್ಬಕ್ಕನ ಮನೆಗೆ ಯಾವುದೇ ಹಾನಿಯಾಗಲಿಲ್ಲ. ಅದು ನೆಮ್ಮದಿಯಿಂದ ನಿದ್ದೆ ಮಾಡುತ್ತಿತ್ತು. ಮನೆಯ ಮೂಲೆಯಲ್ಲಿ ಮೂರು ಮೊಟ್ಟೆಗಳನ್ನು ಹುಲ್ಲಿನೊಳಗೆ ಬೆಚ್ಚಗೆ ಜೋಡಿಸಿಟ್ಟಿತ್ತು.

ಕಾಗಕ್ಕ ಬಂದು ಗುಬ್ಬಕ್ಕನ ಮನೆಯ ಬಾಗಿಲನ್ನು ಪಟಪಟನೆ ಬಡಿದು ಅದರ ನಿದ್ರಾಭಂಗ ಮಾಡಿತು. ನಿರ್ವಾಹವಿಲ್ಲದೆ ಗುಬ್ಬಕ್ಕ ಬಾಗಿಲು ತೆರೆದು ತನ್ನ ಶತ್ರುವನ್ನು ಒಳಗೆ ಬಿಡಬೇಕಾಯಿತು. ಕಾಗಕ್ಕ ತುಂಬಾ ವಿನಯದಿಂದ ತನಗೆ ಮನೆಯ ಮೂಲೆಯಲ್ಲಿ ರಾತ್ರಿ ಮಲಗಿಕೊಳ್ಳಲು ಅವಕಾಶ ಕೇಳಿಕೊಂಡಿತು. ಗುಬ್ಬಕ್ಕ ಅದಕ್ಕೆ ಒಪ್ಪಿಗೆ ನೀಡಿ ಪುನಃ ನಿದ್ದೆ ಮಾಡಲಾರಂಭಿಸಿತು.

ಮಧ್ಯ ರಾತ್ರಿ ಗುಬ್ಬಕ್ಕನಿಗೆ "ಕುಟುಂ" ಎಂಬ ಶಬ್ದ ಕೇಳಿ ಎಚ್ಚರವಾಯಿತು. ಕಣ್ಣು ತೆರೆದು ನೋಡುವಾಗ ಕಾಗಕ್ಕ ಏನೋ ತಿನ್ನುತ್ತಿರುವುದು ಕಾಣಿಸಿತು. ಅದು ಗುಬ್ಬಕ್ಕನಿಗೆ ತಾನು ಬರುವಾಗ ನೆಲಗಡಲೆ ಕಾಯಿಗಳನ್ನು ತಂದಿದ್ದೆನೆಂದೂ ಅದರಲ್ಲಿ ಒಂದನ್ನು ತಿಂದುದಾಗಿಯೂ ತಿಳಿಸಿತು. ಗುಬ್ಬಕ್ಕ ಪುನಃ ನಿದ್ದೆ ಮಾಡಿತು. ಆದರೆ ಸ್ವಲ್ಪ ಸಮಯದ ನಂತರ ಅದಕ್ಕೆ ಪುನಃ "ಕುಟುಂ" ಎಂಬ ಶಬ್ದ ಕಿವಿಗೆ ಬಿದ್ದಿತು. ಕಾಗಕ್ಕ ತಾನು ಎರಡನೇ ನೆಲಗಡಲೆ ಕಾಯಿ ತಿಂದುದಾಗಿ ಹೇಳಿದ್ದರಿಂದ ಗುಬ್ಬಕ್ಕ ನಿದ್ದೆಗೆ ಹಿಂದಿರುಗಿತು. ಇದೇ  ಪ್ರಸಂಗ ಪುನಃ ಮುಂದುವರೆದು ಕಾಗಕ್ಕ ತಾನು ತಂದ ಮೂರನೇ ನೆಲಗಡಲೆ ಕಾಯಿ ತಿಂದು ಮುಗಿಸಿದ್ದಾಗಿ ಹೇಳುವುದರಲ್ಲಿ ಕೊನೆಗೊಂಡಿತು.

ಗುಬ್ಬಕ್ಕ ಬೆಳಿಗ್ಗೆ ಎದ್ದು ನೋಡುವಾಗ ಕಾಗಕ್ಕ ಹೊರಟು ಹೋಗಿರುವುದು ಗೊತ್ತಾಯಿತು. ಹಾಗೆಯೇ ಅದು ಮೂಲೆಯಲ್ಲಿಟ್ಟಿದ್ದ ಮೊಟ್ಟೆಗಳ ಕಡೆ ಕಣ್ಣು ಹಾಯಿಸಿದಾಗ ಅವು ಕಣ್ಮರೆ ಆಗಿರುವುದು ಗೊತ್ತಾಯಿತು. ತನ್ನ ವೈರಿಯನ್ನು ಮನೆ ಒಳಗೆ ಬಿಟ್ಟಿದ್ದಕ್ಕೆ ಅದಕ್ಕೆ ಸಿಕ್ಕ ಪ್ರತಿಫಲ ತನ್ನ ಮೊಟ್ಟೆಗಳ ನಾಶಒಂದೊಂದು "ಕುಟುಂಶಬ್ದಕ್ಕೆ ಒಂದೊಂದು ಮೊಟ್ಟೆ ಬಲಿಯಾಗಿತ್ತು!

ನನ್ನ ದೃಷ್ಟಿಯಲ್ಲಿ ಕಾಗಕ್ಕ ಗುಬ್ಬಕ್ಕನ ಕಥೆ ಕನ್ನಡ ಜಾನಪದ ಸಾಹಿತ್ಯದಲ್ಲಿ ಮಕ್ಕಳಿಗೆ ಹೇಳುವ ಪ್ರಪ್ರಥಮ ಹಾಗೂ ಅತ್ಯಮೂಲ್ಯ ಕಥೆ. ಅಜ್ಜಿ ತನ್ನ ಮೊಮ್ಮಕ್ಕಳಿಗೆ ಹೇಳುವ ಮೊಟ್ಟ  ಮೊದಲ ಕಥೆಯೇ ಕಥೆ. ಸ್ವಲ್ಪ ವರ್ಷಗಳ ಆಚೆ ನಾನು ನನ್ನ ಅಕ್ಕಂದಿರಿಬ್ಬರೊಡನೆ ಕಥೆಯ ಅಂತ್ಯ ಹೇಗಾಯಿತೆಂದು ಕೇಳಿದೆ. ನನ್ನ ದೃಷ್ಟಿಯಲ್ಲಿ ಗುಬ್ಬಕ್ಕ ಖಂಡಿತವಾಗಿ ಕಾಗಕ್ಕನ ಮೇಲೆ ಸೇಡು ತೀರಿಸಿಕೊಂಡಿರಬೇಕು. ಆಶ್ಚರ್ಯವೆಂದರೆ ಇಬ್ಬರೂ ಕೂಡ ತಮಗೆ ಕಥೆಯ ಅಂತ್ಯ ಖಂಡಿತವಾಗಿಯೂ ಗೊತ್ತಿಲ್ಲವೆಂದೂ ಹಾಗೆಯೇ ಅವರು ಅದನ್ನು ತಿಳಿಯುವ ಗೋಜಿಗೆ ಹೋಗಲಿಲ್ಲವೆಂದೂ ತಿಳಿಸಿಬಿಟ್ಟರು!

ಒಟ್ಟಿನಲ್ಲಿ ಕಥೆಯ ಅಂತ್ಯ  ಮಗುವಿನ ಎಳೇ ಮನಸ್ಸಿನ ತೀರ್ಮಾನಕ್ಕೆ ಬಿಡಲಾಗಿತ್ತು. ಅದು ಕನಸಿನ ಲೋಕಕ್ಕೆ ಹೋಗುವ ಮುನ್ನ ಅಪೂರ್ಣ ಕಥೆ ಮಾತ್ರ ಕೇಳಿರುತ್ತಿತ್ತು. ಹೀಗೆ ಅಂತ್ಯ ಕಾಣದ ಕಥೆ ತನ್ನ ಉದ್ದೇಶವನ್ನು ತೀರಿಸಿಕೊಳ್ಳುತ್ತಿತ್ತು.
ಹುಂ ಅಂದರೆ ಮೇಲೆ ಬರ್ತಾನೇನು?
ಕಾಗಕ್ಕ ಗುಬ್ಬಕ್ಕನ ಕಥೆ  ಅರ್ಧದಲ್ಲೇ ಮುಕ್ತಾಯಗೊಂಡರೆ ಇನ್ನೊಂದು ಕಥೆ ಪ್ರಾರಂಭದಲ್ಲೇ ಮುಕ್ತಾಯಗೊಳ್ಳುತ್ತಿತ್ತು ಕಥೆ ಉಂಟುಮಾಡುತ್ತಿದ್ದ ಹತಾಶೆ ಅಥವಾ ಕಿರಿಕಿರಿ ಅಷ್ಟಿಟ್ಟಲ್ಲ. ವಿಚಿತ್ರವೆಂದರೆ ಹತಾಶೆಯೇ  ಮಗುವು ನಿದ್ದೆಗೆ ಹೋಗಲು ಕಾರಣವಾಗುತ್ತಿತ್ತುಪ್ರಶ್ನೆಯಲ್ಲೇ ಮುಕ್ತಾಯಗೊಳ್ಳುತ್ತಿದ್ದ ಕಥೆ ನಿಜವಾಗಿಯೂ ಒಂದು ಕಥೆಯೇ ಎಂಬುದೂ ಕೂಡ ಒಂದು ಪ್ರಶ್ನೆಯಾಗಿತ್ತು!

ಅಕ್ಕ ಒಂದು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಹೇಳಲು ಪ್ರಾರಂಭಿಸುತ್ತಿದ್ದಳು. ನಾನು ಯಥಾಪ್ರಕಾರ ಹೂಗುಟ್ಟುತ್ತಾ ಹೋಗುತ್ತಿದ್ದೆ. ನಾನು ಕಥೆಯಲ್ಲಿ ಮಗ್ನನಾಗಿರುವಾಗ ಕಥಾನಾಯಕ ಅಕಸ್ಮಾತ್  ಒಂದು ಬಾವಿಯಲ್ಲಿ ಬಿದ್ದುಬಿಡುತ್ತಿದ್ದ. ಅಲ್ಲಿಗೆ ಅಕ್ಕ ಕಥೆ ನಿಲ್ಲಿಸಿ ಬಿಡುತ್ತಿದ್ದಳು. ನಾನು ಹೂಂ ಎಂದು ಹೇಳಿದಾಗ ಅಕ್ಕ ಹೂಂ ಅಂದರೆ ಅವನು ಮೇಲೆ ಬರ್ತಾನೇನು? ಎಂದು ಮರು ಪ್ರಶ್ನೆ ಹಾಕುವಳು. ಆಗ ನಾನು ಮುಂದೆ ಹೇಳಕ್ಕಾ ಎಂದರೆ ಅವಳು ಪುನಃ ಮುಂದೆ ಹೇಳಕ್ಕಾ ಎಂದರೆ ಅವನು ಮೇಲೆ ಬರ್ತಾನೇನು? ಎಂದು ಕೇಳುವಳು. ನಾನು ಗೊತ್ತಿಲ್ಲ ಎಂದರೆ ಪುನಃ ಗೊತ್ತಿಲ್ಲ ಎಂದರೆ ಅವನು ಮೇಲೆ ಬರ್ತಾನೇನು? ಎನ್ನುವಳು. ಹೀಗೆ ನಾನು ಯಾವುದೇ ಬಗೆಯಲ್ಲಿ ಕಥೆ ಮುಂದುವರಿಸಲು ಹೇಳಿದರೂ ಅದು ಪ್ರಶ್ನೆಯಲ್ಲಿ ಮುಕ್ತಾಯಗೊಳ್ಳುತ್ತಿತ್ತು.
ಐರಾವತದ ಕಥೆ
ನನ್ನ ದೊಡ್ಡ ಅಕ್ಕನಾದ ಗೌರಕ್ಕ ಮದುವೆಯಾಗಿ ಗಂಡನ ಮನೆಗೆ ತೆರಳಿದಾಗ ನಮಗಾದ ಬೇಸರ ಮತ್ತು ದುಃಖ ಅಷ್ಟಿಷ್ಟಲ್ಲ. ಪ್ರತಿ ಬಾರಿಯೂ ಅವಳು ತವರಿಗೆ ಬಂದು ವಾಪಾಸ್ ಹೋಗುವಾಗ ಅವಳ ಅಗಲಿಕೆ ಸಹಿಸಲಾಗದೆ ನಾವೆಲ್ಲ ಅಳತೊಡಗುತ್ತಿದ್ದೆವು. ಆಗ ಒಮ್ಮೆ ರುಕ್ಮಣಕ್ಕ ನಮ್ಮ ಬೇಸರ ಪರಿಹಾರಕ್ಕೆ ಒಂದು ಕಥೆ ಹೇಳಿದಳು. ನನ್ನ ಬಾಲ್ಯದಲ್ಲಿ ನಾನು ಕೇಳಿದ ಅತ್ಯಂತ ಸ್ವಾರಸ್ಯಕರ ಕಥೆ ಅದಾಗಿತ್ತು ಕಥೆ ಹೀಗಿತ್ತು:

ರಂಗಣ್ಣನೆಂಬ ರೈತ ತನ್ನ ಹೊಲದಲ್ಲಿ ಪ್ರತಿ ವರ್ಷವೂ ಕಬ್ಬು ಬೆಳೆಯುತ್ತಿದ್ದ. ಒಂದು ವರ್ಷ ಅವನ ಹೊಲದಲ್ಲಿ ಕಬ್ಬಿನ ಬಂಪರ್ ಬೆಳೆ ಬಂದಿತ್ತು. ಕೊಯ್ಲಿನ ಕಾಲ ಸಮೀಪಿಸುತ್ತಿದ್ದಂತೆ ರಂಗಣ್ಣನಿಗೆ ವರ್ಷ ಬರಲಿರುವ ಆದಾಯ ನೆನಸಿ ಸಂತಸ ಬರುತ್ತಿತ್ತು. ಆದರೆ ಒಂದು ಬೆಳಿಗ್ಗೆ ಹೊಲಕ್ಕೆ ಹೋದಾಗ ಅವನಿಗೊಂದು ಆಘಾತ ಕಾದಿತ್ತು. ಯಾವುದೊ ಪ್ರಾಣಿ ಸ್ವಲ್ಪ ಕಬ್ಬನ್ನು ತಿಂದು ಹೋದದ್ದು ಕಣ್ಣಿಗೆ ಬಿತ್ತು . ರಂಗಣ್ಣ ರಾತ್ರಿ ಹೊಲದಲ್ಲೇ ಕಾವಲಿರಬೇಕೆಂದು ತೀರ್ಮಾನಿಸಿದ.

ರಾತ್ರಿ ರಂಗಣ್ಣ ಹೊಲದ ಒಂದು ಎತ್ತರದ ಭಾಗದಲ್ಲಿ ಕೋವಿಯೊಡನೆ ಕುಳಿತು ಕಾಯುತ್ತಿದ್ದ. ಮಧ್ಯ ರಾತ್ರಿಯಲ್ಲಿ ಅವನಿಗೆ ಆಕಾಶದಿಂದ ಬೆಳ್ಳನೆ ಹೊಳೆಯುತ್ತಿದ್ದ ಆನೆಯೊಂದು ಅವನ ಹೊಲದ ಮಧ್ಯೆ ಇಳಿಯುತ್ತಿರುವುದು ಕಾಣಿಸಿತು. ಅದು ಕೂಡಲೇ ಕಬ್ಬನ್ನು ಮುರಿದು ಸವಿಯಲಾರಂಭಿಸಿತು. ರಂಗಣ್ಣ ಕೋವಿಯನ್ನು ಕೆಳಗಿಟ್ಟು ಆನೆಯ ಬಳಿಗೆ ಹೋಗಿ ಅದಕ್ಕೆ ನಮಸ್ಕಾರ ಮಾಡಿ ಬೆಳೆಯನ್ನು ನಾಶ ಮಾಡಬಾರದೆಂದು ವಿನಂತಿ ಮಾಡಿಕೊಂಡ. ಆನೆ ಅವನ ವರ್ತನೆಯಿಂದ ಖುಷಿಗೊಂಡು ತಾನು ದೇವೇಂದ್ರನ ವಾಹನವಾದ ಐರಾವತವೆಂದೂ ಮತ್ತು ಅವನ ಹೊಲದ ಕಬ್ಬು ಅದಕ್ಕೆ ತುಂಬಾ ಇಷ್ಟವಾಯಿತೆಂದೂ ಹೇಳಿತು. ಹಾಗೆಯೇ ಅವನಿಗೆ ತಾನು ಹಿಂತಿರುಗುವಾಗ ತನ್ನ ಬಾಲ  ಹಿಡಿದುಕೊಂಡು ಸ್ವರ್ಗಕ್ಕೆ ಬರುವಂತೆ ಆಹ್ವಾನಿಸಿತು.

ರಂಗಣ್ಣನ ಆನಂದಕ್ಕೆ ಪಾರವೇ ಇರಲಿಲ್ಲ. ಅವನು ಐರಾವತದ ಬಾಲವನ್ನು ಹಿಡಿದುಕೊಂಡು ಸ್ವರ್ಗಕ್ಕೆ ಭೇಟಿ ನೀಡಿದ. ಅಲ್ಲಿ ಅಷ್ಟ ದಿಕ್ಪಾಲಕರನ್ನು ಹಾಗೂ ಅಪ್ಸರೆಯರನ್ನು ನೋಡಿ ಅವನ ಖುಷಿಗೆ ಮಿಗಿಲಿರಲಿಲ್ಲ. ಐರಾವತ ಕುಬೇರನಿಂದ ರಂಗಣ್ಣನಿಗೆ ಒಂದು ಚೀಲ ತುಂಬಾ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕೊಡಿಸಿತು. ಹಾಗೆಯೇ ಅವನನ್ನು ತನ್ನ ಬಾಲದಲ್ಲಿ ಜೋಡಿಸಿಕೊಂಡು ಪುನಃ ಹೊಲದೊಳಗೆ ಇಳಿಸಿ ಸ್ವರ್ಗಕ್ಕೆ ಹಿಂದಿರುಗಿತು.

ರಂಗಣ್ಣ ಬೆಳಗಾಗುವಾಗ ಮನೆ ತಲುಪಿದ. ಹೆಂಡತಿ ರಂಗಮ್ಮನ ಕೈಗೆ ಆಭರಣಗಳ ಚೀಲ ಕೊಟ್ಟು ರಾತ್ರಿ ನಡೆದ ಕಥೆಯನ್ನು ವಿಸ್ತಾರವಾಗಿ ಹೇಳಿದ. ಹಾಗೆಯೇ ವಿಷಯವನ್ನು ರಹಸ್ಯವನ್ನಾಗಿ ಇಡಬೇಕೆಂದೂ ಬೇರಾರಿಗೂ ತಿಳಿಸಬಾರದೆಂದೂ ಎಚ್ಚರಿಸಿದ. ಆದರೆ ರಂಗಮ್ಮನಿಗೆ ಗುಟ್ಟನ್ನು ಒಂದು ದಿನವೂ ತನ್ನಲ್ಲೇ ಇಟ್ಟುಕೊಳ್ಳಲು ಆಗಲಿಲ್ಲ. ಅವಳು ತನ್ನ ನೆರೆಮನೆಯ ನಿಂಗಮ್ಮನಿಗೆ ತಾನೊಂದು ಗುಟ್ಟನ್ನು ಹೇಳುವುದಾಗಿಯೂ ಅದನ್ನು ಬೇರಾರಿಗೂ ಹೇಳಬಾರದೆಂದೂ ಆಣೆ ಹಾಕಿಸಿಕೊಂಡು ಐರಾವತದ ಕಥೆಯನ್ನು ಹೇಳಿಬಿಟ್ಟಳು. ಹೀಗೆಯೇ ಗುಟ್ಟು ರಟ್ಟಾಗುತ್ತ ಸಂಜೆಯ ವೇಳೆಗೆ ಇಡೀ ಊರಿಗೆ ಹಬ್ಬಿ ಬಿಟ್ಟಿತು.

ರಂಗಮ್ಮನಿಗೆ ಇದ್ದಕಿದ್ದಂತೆ ಒಂದು ಐಡಿಯಾ ಹೊಳೆಯಿತು. ತಾನೂ ಕೂಡ ಏಕೆ ರಾತ್ರಿ ಗಂಡನೊಡನೆ ಸ್ವರ್ಗಕ್ಕೆ ಭೇಟಿ ಕೊಡಬಾರದೆಂದು. ಅವಳು ಗಂಡನೊಡನೆ ಅವನು ಆನೆಯ ಬಾಲವನ್ನು ಹಿಡಿದುಕೊಂಡಾಗ ತಾನು ಅವನ ಕಾಲು ಹಿಡಿದು ನೇತಾಡುತ್ತಾ ಸ್ವರ್ಗಕ್ಕೆ ಬರುತ್ತೇನೆಂದು ದಂಬಾಲು ಬಿದ್ದಳು. ರಂಗಣ್ಣ ನಿರ್ವಾಹವಿಲ್ಲದೆ ಒಪ್ಪಿಗೆ ನೀಡಿದ. ಅದನ್ನು ಪುನಃ ಗುಟ್ಟಾಗಿಡುವಂತೆ ಹೇಳಿದ. ಆದರೆ ಗುಟ್ಟು ಮೊದಲು ನಿಂಗಮ್ಮನಿಗೆ ರಟ್ಟಾಗಿ ನಂತರ ಇಡೀ ಊರಿಗೇ ರಟ್ಟಾಯಿತು. ಇಡೀ ಊರಿನ ಪ್ರತಿ ಮನೆಯಿಂದ ಒಬ್ಬ ಹೆಂಗಸು ಸ್ವರ್ಗ ಪ್ರಯಾಣಕ್ಕೆ ತಯಾರಾಗಿ ಬಿಟ್ಟಳು!

ಅಂದಿನ ಮಧ್ಯ ರಾತ್ರಿ ಐರಾವತ ಯಥಾ ಪ್ರಕಾರ ರಂಗಣ್ಣನ ಹೊಲದಲ್ಲಿ ಇಳಿದು ಕಬ್ಬನ್ನು ತಿನ್ನಲಾರಂಭಿಸಿತು. ಅದು ವಾಪಾಸ್ ತನ್ನ ಆಕಾಶ ಪ್ರಯಾಣ ಪ್ರಾರಂಭಿಸುವಾಗ  ರಂಗಣ್ಣ ಅದರ ಬಾಲ ಹಿಡಿದುಕೊಂಡ. ರಂಗಮ್ಮ ಅವನ ಕಾಲನ್ನು ಹಿಡಿದುಕೊಂಡರೆ ನಿಂಗಮ್ಮ ಅವಳ ಕಾಲನ್ನು ಹಿಡಿದುಕೊಂಡಳು. ಹೀಗೆ ಒಬ್ಬರ ಕಾಲನ್ನು ಒಬ್ಬರು ಹಿಡಿದುಕೊಂಡು ಊರಿನ ಹೆಂಗಸರೆಲ್ಲಾ ಸ್ವರ್ಗದತ್ತ ಪ್ರಯಾಣಿಸಿದರು.

ಆದರೆ ಹೆಂಗಸರ ಬಾಯಿಗೆ ಬೀಗ ಹಾಕುವರಾರು? ಸ್ವಲ್ಪ ಸಮಯದ ನಂತರ ಐರಾವತದ ಬಾಲಕ್ಕೆ ಅಂಟಿದ ಸರಮಾಲೆಯ ತುತ್ತ ತುದಿಯಲ್ಲಿದ್ದ ಹೆಂಗಸಿಗೆ ಒಂದು ಅನುಮಾನ ಬಂತು. ಅಷ್ಟೊಂದು ಮಂದಿಗೆಲ್ಲಾ ಕೊಡುವಷ್ಟು ಆಭರಣಗಳು ಕುಬೇರನ ಕಣಜದಲ್ಲಿ ಇರಬಹುದೇ ಎಂದು. ಅವಳ ಪ್ರಶ್ನೆ ಒಬ್ಬರಿಂದ ಒಬ್ಬರಿಗೆ ದಾಟುತ್ತಾ ರಂಗಣ್ಣನಿಗೆ ತಲುಪುತ್ತದೆ. ಅವನು ಎಲ್ಲರಿಗೂ ಸಿಗುವಷ್ಟು ಆಭರಣಗಳು ಕುಬೇರನ ಹತ್ತಿರ ಉಂಟೆಂದು ಹೇಳಿದ್ದು ಪುನಃ ಒಬ್ಬರಿಂದ ಒಬ್ಬರಿಗೆ ದಾಟುತ್ತಾ ತುದಿಯಲ್ಲಿದ್ದವಳಿಗೆ ತಲುಪುತ್ತದೆ.

ಆದರೆ ಹೆಂಗಸಿನ ಕುತೂಹಲ ಅಲ್ಲಿಗೇ ಮುಗಿಯಲಿಲ್ಲ. ಅವಳು ಪುನಃ ಕುಬೇರನ ಹತ್ತಿರ ಸುಮಾರು ಎಷ್ಟು ನಿಧಿ ಇರಬಹುದೆಂದು ಪ್ರಶ್ನೆ ಹಾಕುತ್ತಾಳೆ. ಅದು ಯಥಾ ಪ್ರಕಾರ ರಂಗಣ್ಣನಿಗೆ ತಲುಪಿದಾಗ ಅವನಿಗೆ ತುಂಬಾ ಕೋಪ ಬರುತ್ತದೆ. ಅವನು ಕೋಪದಲ್ಲಿ ಕುಬೇರನ ಹತ್ತಿರ ಪ್ರತಿಯೊಬ್ಬರೂ ತಮ್ಮ ಎರಡೂ ಕೈಗಳಲ್ಲಿ ಬಾಚಿಕೊಳ್ಳಲಾಗದಷ್ಟು ನಿಧಿ ಇರುವುದೆಂದು ಹೇಳಲು ಆನೆಯ ಬಾಲದಿಂದ ತನ್ನೆರಡೂ ಕೈಗಳನ್ನು ಹೊರ ತೆಗೆಯುತ್ತಾನೆ. ಮತ್ತೇನಿದೆ? ಬಾಲಕ್ಕೆ ಜೋಡಿಸಿದ್ದ ಸರಮಾಲೆ ಕಳಚಿ ಊರಿನ ಕೆರೆಯೊಳಗೆ ಬಿದ್ದು ಬಿಡುತ್ತದೆ. ಹೀಗೆ ಊರಿನವರ ಸ್ವರ್ಗಯಾತ್ರೆ ಕೆರೆಯಲ್ಲಿ ಕೊನೆಗೊಳ್ಳುತ್ತದೆ. ಐರಾವತ ಪುನಃ ಎಂದೂ ರಂಗಣ್ಣನ ಹೊಲದಲ್ಲಿ ಕಾಣಿಸಿಕೊಳ್ಳುವುದಿಲ್ಲ.