Tuesday, March 31, 2020

ಬಾಲ್ಯ ಕಾಲದ ನೆನಪುಗಳು – ೭೪


ನಮ್ಮ ಮಳೆಗಾಲಕ್ಕೆ ಮುನ್ನಿನ ಕೆಲಸಗಳು

ಆ ಕಾಲದ ನಮ್ಮ ಮಲೆನಾಡು ಭಾಗದಲ್ಲಿ ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳುಗಳು ತುಂಬಾ ನಿರ್ಣಾಯಕ ತಿಂಗಳುಗಳಾಗಿದ್ದವು. ತುಂಗೆಯ ಉಪನದಿಯಾದ ಸೀತಾನದಿ ಬಿ ಜಿ ಕಟ್ಟೆಯ ಹತ್ತಿರ ಹರಿಯುತ್ತಿದ್ದು ನಮ್ಮ ಹಳ್ಳಿಗಳ ಜನರನ್ನು  ಸುಮಾರು ಆರು ತಿಂಗಳು ಕೊಪ್ಪಮತ್ತು ಜಯಪುರಕ್ಕೆ ಹೋಗದಂತೆ ತನ್ನ ಪ್ರವಾಹದಿಂದ ತಡೆದು ಬಿಡುತ್ತಿತ್ತು. ನದಿಗೆ ಅಡ್ಡಲಾಗಿ ಸೇತುವೆ ಕಟ್ಟುವ ಕೆಲಸ ಆಗ ಕೇವಲ ಪ್ರಾರಂಭವಾಗಿತ್ತು ಅಷ್ಟೇ. ಮುತ್ತೂರ ಗಂಡಿ ಎಂಬಲ್ಲಿ ದೋಣಿಯಲ್ಲಿ ನದಿ ದಾಟಬಹುದಾಗಿದ್ದರೂ ಸಾಮಾನುಗಳನ್ನು ಸಾಗಿಸಲಾಗುತ್ತಿರಲಿಲ್ಲ. ಹಾಗಾಗಿ ಸುಮಾರು ಆರು ತಿಂಗಳಿಗೆ ಬೇಕಾಗುವ ಸಾಮಾನುಗಳನ್ನು ಬೇಸಿಗೆಯಲ್ಲೇ ಜೋಡಿಸಿಟ್ಟುಕೊಳ್ಳಬೇಕಿತ್ತು. ಇದಲ್ಲದೇ ಇನ್ನೂ ಕೆಲವು ಕೆಲಸಗಳನ್ನು ಬೇಸಿಗೆಯಲ್ಲೇ ಮಾಡಬೇಕಿತ್ತು. ಪುಟ್ಟಣ್ಣ ಮತ್ತು ನಾನು ತಂದೆಯವರೊಡನೆ ಸೇರಿ ಮಾಡಿ ಮುಗಿಸಲೇ ಬೇಕಾದ ಕೆಲಸಗಳ ಒಂದು ವೇಳಾ  ಪಟ್ಟಿಯನ್ನೇ ತಯಾರಿಸಿ ಅದರಂತೆ ಕೆಲಸ ಮಾಡಲು ಪ್ರಾರಂಭಿಸಿದೆವು.

ನಮ್ಮ ಮೊಟ್ಟ ಮೊದಲಿನ ಕಾರ್ಯ ಒಂದು ವರ್ಷಕ್ಕೆ ಅಡಿಗೆಮನೆ ಒಲೆಗೆ, ಬಚ್ಚಲೊಲೆಗೆ, ಜಾನುವಾರುಗಳ ಮುರುವಿನ ಒಲೆಗೆ ಮತ್ತು ಅಡಿಕೆ ಬೇಯಿಸುವ ಒಲೆಗೆ ಸಾಕಾಗುವಷ್ಟು ಕಟ್ಟಿಗೆ (ಸೌದೆ ಮತ್ತು ಕುಂಟೆ) ಕಾಡಿನಿಂದ ಕಡಿದು ಒಣಗಿಸಿ ಮನೆಗೆ ಸಾಗಿಸಿ ಉಡಿ ಕಟ್ಟಿ ಜೋಡಿಸಿಡುವುದು. ನಮ್ಮ ಊರಿನಲ್ಲಿ ಆಗ ಎಲ್ಲ ಅಡಿಕೆ ತೋಟಗಳ ಮೇಲ್ಭಾಗದಲ್ಲಿದ್ದ ಕಾಡಿನ ಒಂದು ಭಾಗವನ್ನು ಅವರವರ ಜಮೀನಿಗೆ ತಕ್ಕನಾಗಿ ಹೊಲ ಎಂಬ ಹೆಸರಿನಲ್ಲಿ ಕ್ರಮವಾಗಿ ಹಂಚಲಾಗಿತ್ತು. ಈ ಹೊಲದಲ್ಲಿ ಮರಗಳನ್ನು ಕಡಿಯುವಂತಿರಲಿಲ್ಲ. ಆದರೆ ಮರಗಳ ಸೊಪ್ಪು ಮತ್ತು ಬೇರೆ ಪೊದೆಗಳನ್ನು ಕಡಿದು ತೋಟದ ಬೇಸಾಯಕ್ಕೆ ಬಳಸಬಹುದಾಗಿತ್ತು. ಇದಲ್ಲದೇ ಇನ್ನು ಸ್ವಲ್ಪ ಕಾಡನ್ನು ದರಗಿನ ಹಾಡ್ಯ ಎಂದು ಹಂಚಲಾಗಿತ್ತು. ಅಲ್ಲಿ ಮರಗಳನ್ನಾಗಲೀ ಅವುಗಳ ಸೊಪ್ಪನ್ನಾಗಲೀ ಕಡಿಯುವಂತಿರಲಿಲ್ಲ. ಆದರೆ ಬೇಸಿಗೆಯಲ್ಲಿ ಮರಗಳಿಂದ ಉದುರಿದ ತರಗೆಲೆಗಳನ್ನು ಜಾನುವಾರುಗಳ ಕೊಟ್ಟಿಗೆಗೆ ಬಳಸಬೇಕಿತ್ತು. ತರಗೆಲೆಗಳನ್ನು ಗುಡಿಸಿ ಅವನ್ನು ಬಿದಿರಿನ ಜಲ್ಲೆಗಳಲ್ಲಿ ತುಂಬಿ ಮನೆಗೆ ತಂದು ಕೊಟ್ಟಿಗೆಯಲ್ಲಿ ಸುರಿದು ಹರಡಲಾಗುತ್ತಿತ್ತು. ಪುಟ್ಟಣ್ಣ ಮತ್ತು ನಾನು ಈ ಕೆಲಸವನ್ನು ಮಾಡುವುದು ಮತ್ತು ಕೊಟ್ಟಿಗೆ ಗೊಬ್ಬರ ತೆಗೆದು ಗೊಬ್ಬರದ ಗುಂಡಿಗೆ ತಲುಪಿಸುವ ಕೆಲಸವನ್ನೂ ಮಾಡತೊಡಗಿದೆವು.

ನಮ್ಮ ದರಗಿನ ಹಾಡ್ಯವನ್ನು ದಾಟಿ ಬೆಟ್ಟದ ಮೇಲೆ ಮುಂದೆ ಹೋದರೆ ಅಲ್ಲಿ ಓರಣಕಲ್ ಎಂಬ ಗುಹೆಯಿಂದ ಆಚೆಗೆ ದಟ್ಟವಾದ ಕಾಡು ಇತ್ತು. ಒಂದು ಕಾಲದಲ್ಲಿ ಈ ಓರಣಕಲ್ ಗುಹೆಯಲ್ಲಿ ಹುಲಿಗಳು ವರ್ಷಕ್ಕೊಮ್ಮೆ ಬಂದು ಕ್ಯಾಂಪ್ ಮಾಡಿ ನಮ್ಮ ಜಾನುವಾರುಗಳ ಮೇಲೆ ಆಕ್ರಮಣ  ಮಾಡುತ್ತಿದ್ದವು.  ಅಲ್ಲಿನ ಕಾಡಿನಲ್ಲಿ ನಾವು ಮರಗಳನ್ನು ಕಡಿಸಿ ವರ್ಷಕ್ಕೆ ಬೇಕಾಗುವಷ್ಟು ಕಟ್ಟಿಗೆ ಮಾಡಿಸಿ ಅವು ಒಣಗಿದ ನಂತರ ಮನೆಗೆ ತರಬೇಕಾಗಿತ್ತು. ನಾವು ಸುಬ್ಬ ಎಂಬ ಆಳಿಗೆ ಹಣ ಕೊಟ್ಟು ಮರ ಕಡಿಸಿ ಸೌದೆ ಮಾಡಿಸಿದೆವು. ಅವನ್ನು ನಮ್ಮ ಮನೆಗೆ ಸ್ವಲ್ಪ ದೂರದವರೆಗೆ ಎತ್ತಿನ ಗಾಡಿಯಲ್ಲಿ ತರಬಹುದಾಗಿತ್ತು. ಆದರೆ ಆ ವರ್ಷ ನಮಗೆ ಗಾಡಿ ಬಾಡಿಗೆ ಕೊಡಲು ಹಣವಿರದಿದ್ದರಿಂದ ಪುಟ್ಟಣ್ಣ ಮತ್ತು ನಾನು ತಂದೆ ಮತ್ತು ತಾಯಿಯವರೊಡನೆ ಸೇರಿ ತಲೆಯ ಮೇಲೆಯೇ ಹೊತ್ತು ಮನೆಗೆ ತಲುಪಿಸಿದೆವು.

ಇನ್ನೊಂದು ಬೇಸಿಗೆಯ ಮುಖ್ಯ ಕಾರ್ಯವೆಂದರೆ ನಮ್ಮ  ತೋಟದಲ್ಲಿ ಕೂಡಿಟ್ಟ ಅಡಿಕೆ ಸೋಗೆಯನ್ನು ಕಡಿದು ಸೋಗೆ ಮತ್ತು ಹಾಳೆಯನ್ನು ಬೇರ್ಪಡಿಸಿ ಕಟ್ಟು ಕಟ್ಟಿ ಮನೆಗೆ ತರುವುದು. ನಮಗೆ ಆ ಕೆಲಸ ಮಾಡಲು ಒಂದು ವಾರಕ್ಕೂ ಹೆಚ್ಚು ಕಾಲ ಬೇಕಾಯಿತು. ಸೋಗೆಯನ್ನು ನಮ್ಮ ಮನೆ, ಅದಕ್ಕೆ ಸೇರಿದ ಕೊಟ್ಟಿಗೆ ಮತ್ತು ಜಾನುವಾರುಗಳ ಕೊಟ್ಟಿಗೆಗೆ ಹೊಚ್ಚಬೇಕಾಗಿತ್ತು. ಆ ವಾರ್ಷಿಕ ಕೆಲಸವನ್ನು ನಮ್ಮೂರಿನಲ್ಲಿ ಸಾಮೂಹಿಕವಾಗಿ ಮಾಡುವ ಕ್ರಮವಿತ್ತು. ನಾವು ನಿರ್ಧರಿಸಿದ ದಿನ ಪ್ರತಿಯೊಂದು ಮನೆಯಿಂದಲೂ ಒಬ್ಬರು ಬಂದು ಬೆಳಗಿನಿಂದ ಸಂಜೆಯವರೆಗೆ ದುಡಿದು ಈ ಕೆಲಸ ಮುಗಿಸುತ್ತಿದ್ದರು. ನಾವು ಮುಂದೆ ಅದೇ ರೀತಿ ಅವರ ಮನೆಗೆ ಸೋಗೆ ಹೊಚ್ಚಲು ಹೋಗಬೇಕಾಗಿತ್ತು. ಆದರೆ ಮನೆಗೆ ಸೋಗೆ ಹೊಚ್ಚುವ ಕೆಲಸ ಕೇವಲ ಪರಿಣಿತರಿಂದ ಮಾತ್ರಾ ಸಾಧ್ಯವಿತ್ತು.  ಹೊಸಳ್ಳಿ ವೆಂಕಪ್ಪಯ್ಯ,ಬೆಳವಿನಕೊಡಿಗೆ ತಿಮ್ಮಪ್ಪಯ್ಯ ಮತ್ತು ವೆಂಕಪ್ಪಯ್ಯ, ಬಾಳೆಹಿತ್ತಲು ಗಣಪತಯ್ಯ, ಮುಂತಾದವರು ಈ ಕಾರ್ಯದಲ್ಲಿ ನುರಿತಿದ್ದರು. ನಾವು ಏಪ್ರಿಲ್ ತಿಂಗಳ ಕೊನೆಯಲ್ಲಿ ಈ ದೊಡ್ಡ ಕಾರ್ಯ ಮುಗಿಸಲು ಸಾಧ್ಯವಾಯಿತು.

ಬೇಸಿಗೆಯ ವೇಳೆಗೆ ನಮಗೆ ಕೆಲವು ದೈನಂದಿನ ಕೆಲಸಗಳಿದ್ದವು. ಅವುಗಳಲ್ಲಿ ಮುಖ್ಯವಾದದ್ದು ನಮ್ಮೂರ ಕೆರೆಗಳಿಂದ ನಮ್ಮ ತೋಟಕ್ಕೆ ಸರದಿಯ ಮೇಲೆ ಹಂಚಲಾಗುತ್ತಿದ್ದ ನೀರನ್ನು ಬೆಳಿಗ್ಗೆ ಮತ್ತೆ ಸಂಜೆ ಕಾಲುವೆಗಳ ಮೂಲಕ ತೋಟಕ್ಕೆ ಹಾಯಿಸುವುದು. ನಮ್ಮ ತೋಟಕ್ಕೆ ಮೂರು ಕೆರೆಗಳಿಂದ ಸರದಿಯ ಮೇಲೆ ನೀರು ಹಾಯಿಸುತ್ತಿದ್ದೆವು. ಮಳೆಗಾಲ ಶುರುವಾಗುವ ಮೊದಲು ಕೆರೆಗಳ ಕಟ್ಟೆ ಒಡೆದು ನೀರನ್ನು ಹಳ್ಳಕ್ಕೆ ಹರಿಸಲಾಗುತ್ತಿತ್ತು. ಪ್ರತಿ ವಾರದ ಕೊನೆಯ ವೇಳೆಗೆ ನಾವು ನಮ್ಮ ತಂದೆಯವರಿಗೆ ಕೊಪ್ಪದ ಸಂತೆಗೆ ಹೋಗಲು ಬಾಳೆ ಕಾಯಿ ಮತ್ತು ಹಣ್ಣು ಮತ್ತು ವೀಳ್ಯದೆಲೆ ಕೊಯ್ದು ಎಣಿಸಿ ಕೌಳಿಗೆ ಮಾಡಿ ಕೊಡುವುದು ಹಾಗೂ ಅವನ್ನು ಬಿ ಜಿ ಕಟ್ಟೆಯವರೆಗೆ ತಲೆಯ ಮೇಲೆ ಹೊತ್ತುಕೊಂಡು ಹೋಗಿ ತಲುಪಿಸುವ ಕೆಲಸ ಮಾಡುತ್ತಿದ್ದೆವು.

ಗಣೇಶ ಭಾವನ ಗಾಡಿಯಲ್ಲಿ ಬಂತು ಆರು ತಿಂಗಳಿಗೆ ಬೇಕಾದ ಸಾಮಾನು
ನಾವು ಎಷ್ಟೇ ಕೆಲಸ ಮಾಡಿದರೂ ನಮಗೆ ನಮ್ಮ ಸಂಸಾರದ ಆ ವರ್ಷದ ಮಳೆಗಾಲಕ್ಕೆ ಬೇಕಾಗುವ ಮುಖ್ಯ ಸಾಮಾನುಗಳನ್ನು ಖರೀದಿಸುವ ವ್ಯವಸ್ಥೆ ಮಾಡುವುದು ಸಾಧ್ಯವಿರಲಿಲ್ಲ. ಆಗ ನಮ್ಮ ಸಹಾಯಕ್ಕೆ ಬಂದವರು ನಮ್ಮ ತಂದೆಯ ಸೋದರಳಿಯ ಗಣೇಶ ಭಾವ. ನಮ್ಮ ತಂದೆಯವರು ಒಂದು ದಿನ ಸುಮ್ಮನೆ ಕರಿಗೆರಸಿಗೆ ಹೋಗಿ ಗಣೇಶ ಭಾವನವರನ್ನು ಭೇಟಿಯಾದರು. ಅವರು ಗಣೇಶ ಭಾವನಿಗೆ ತಮ್ಮ ಕಷ್ಟ ಸುಖಗಳ ಬಗ್ಗೆ ಹೇಳಬೇಕಾದ ಅವಶ್ಯಕತೆಯೇ ಬರಲಿಲ್ಲ. ಭಾವನವರು ನಮ್ಮ ತಂದೆಯವರು ಹೊರಡುವಾಗ ಅವರನ್ನು ತಮ್ಮ ಎತ್ತಿನ ಗಾಡಿಯಲ್ಲಿ ಕೂರಿಸಿ ಕೈಗೆ ಒಂದು ಪತ್ರ ಕೊಟ್ಟು ಅದನ್ನು ಕೊಪ್ಪದಲ್ಲಿ ಸಿದ್ದಿ ಸಾಹೇಬರಿಗೆ ಕೊಡುವಂತೆ ಹೇಳಿದರು. ಪತ್ರವನ್ನು ನೋಡಿದ ಸಿದ್ದಿ ಸಾಹೇಬರು ನಮಗೆ ಆರು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು (ಬೆಲ್ಲ, ಎಣ್ಣೆ, ಬೇಳೆ ಇತ್ಯಾದಿ)  ಗಾಡಿಗೆ ತುಂಬಿಸಿದ್ದಲ್ಲದೇ ಅದರಲ್ಲಿ ಬರೆದಂತೆ ೧೦೦ ರೂಪಾಯಿಯನ್ನು ಸಂಸಾರದ ಬೇರೆ ಖರ್ಚುಗಳಿಗಾಗಿ ನಮ್ಮ ತಂದೆಯವರ ಕೈಯಲ್ಲಿ ಇಟ್ಟು ಬಿಟ್ಟರು. ಸಂಜೆಯಾಗುವಾಗ ತಂದೆಯವರು ಸಾಮಾನು ತುಂಬಿದ ಗಾಡಿಯೊಡನೆ ನಮ್ಮ ಮನೆ ತಲುಪಿದ್ದರು. ಅಲ್ಲಿಗೆ ನಮ್ಮ ಮಳೆಗಾಲದ ಸಾಮಾನುಗಳ ಅವಶ್ಯಕತೆಯ ಏರ್ಪಾಟು ಮುಗಿದು ಹೋಗಿತ್ತು!

ನಮ್ಮ ಗುಡ್ಡೇತೋಟದ ಪಯಣ ಮತ್ತು ನೆಹರು ಅವರ ನಿಧನ
ಮೇ ತಿಂಗಳ ಕೊನೆಯ ಭಾಗ ಸಮೀಪಿಸುತ್ತಿದ್ದಂತೆ ನಮಗೆ ಬೇಸಿಗೆ ರಜೆ ಕಳೆದು ನಾವು ವಾಪಾಸ್ ಶಾಲೆಗೆ ಹಾಜರಾಗ ಬೇಕೆಂಬ ವಿಷಯ ಗೋಚರವಾಗ ತೊಡಗಿತು. ಆದರೆ ನನಗೆ ಯಥಾ ಪ್ರಕಾರ ಶಿವಮೊಗ್ಗೆಗೆ ಪ್ರಯಾಣ ಮಾಡುವ ಮುನ್ನ ಜೋಡಿಸಿಕೊಳ್ಳಬೇಕಾದ ಹಣದ ಸಮಸ್ಯೆ ಎದುರಾಯಿತು. ಆಗ ನಮಗೆ ನಮ್ಮ ಸಮಾಜದ ಕೆಲವು ಶ್ರೀಮಂತರು ನನಗೆ ಹಾಸ್ಟೆಲಿನಲ್ಲಿ ಸೀಟಿಗೆ ತೊಂದರೆ ಆದಾಗ ಹಣದ ಸಹಾಯ ಮಾಡುವುದಾಗಿ ಹೇಳಿದ್ದು ನೆನಪಾಯಿತು. ಮುಖ್ಯವಾಗಿ ಗುಡ್ಡೇತೋಟದ ಕೃಷ್ಣರಾಯರು ಒಮ್ಮೆ ನಮ್ಮ  ಹಾಸ್ಟೆಲಿಗೆ ಬಂದಾಗ ನನ್ನ ಹತ್ತಿರ ನಮ್ಮ  ಸಮಾಜದ ಶ್ರೀಮಂತರಿಂದ ಸ್ವಲ್ಪ ಹಣ ಕೊಡುಗೆ ಪಡೆದುಕೊಂಡು ಕೂಡಿಟ್ಟುಕೊಂಡರೆ ಮುಂದೆ ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದೆಂದು ಹೇಳಿದ್ದುದು ನೆನಪಿನಲ್ಲಿತ್ತು.

ನಮ್ಮ ತಂದೆಯವರು ನನ್ನನ್ನು ಕರೆದುಕೊಂಡು ಕೆಲವು ಮುಖ್ಯ ವ್ಯಕ್ತಿಗಳ ಮನೆಗೆ ಹೋಗಿ ನನ್ನ ವಿದ್ಯಾಭ್ಯಾಸಕ್ಕಾಗಿ ಕೊಡುಗೆ ಕೇಳಿಕೊಳ್ಳುವುದಾಗಿ ತೀರ್ಮಾನಿಸಿದರು. ಗುಡ್ಡೇತೋಟದ ಕೃಷ್ಣರಾಯರು ನನಗೆ ಸಹಾಯ ಮಾಡುವ ಬಗ್ಗೆ ಹಿಂದೆಯೇ ಹೇಳಿದ್ದರಿಂದ ಮೊದಲು ಅವರ ಮನೆಗೆ ಹೋಗುವುದೆಂದು ತೀರ್ಮಾನಿಸಿದರು. ಅಂತೆಯೇ ನಾವು ನಮ್ಮ  ಮನೆಯಿಂದ ಹೊರಟು ಜಯಪುರ ಮಾರ್ಗವಾಗಿ ಗುಡ್ಡೇತೋಟದ ಪ್ರಯಾಣ ಪ್ರಾರಂಭಿಸಿದೆವು. ಆದರೆ ನಾವು ಕಾಲ್ನಡಿಗೆಯಲ್ಲಿ ಜಯಪುರ ತಲುಪಿದಾಗ ಅಲ್ಲಿನ ಹೋಟೆಲ್ ಮತ್ತು ಅಂಗಡಿಗಳೆಲ್ಲಾ ಮುಚ್ಚಿದ್ದು ಕಂಡು ನಮಗೆ ಆಶ್ಚರ್ಯವಾಯಿತು. ಅಂದು ೧೯೬೪ನೇ ಇಸವಿಯ ಮೇ ೨೭ನೇ ತಾರೀಕು ಆಗಿತ್ತು. ನಮಗೆ ಆ ದಿನ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರು ಅವರು ತೀರಿಕೊಂಡಿರುವರೆಂಬ ಸಮಾಚಾರ ಗೊತ್ತಾಯಿತು.
------- ಮುಂದುವರಿಯುವುದು-----

Friday, March 27, 2020

ಬಾಲ್ಯ ಕಾಲದ ನೆನಪುಗಳು – ೭೩


ನನ್ನ ಕೈಯಲ್ಲೇನೋ ಸ್ಕಾಲರ್ಷಿಪ್ ಹಣದ ಒಂದು ಪುಟ್ಟ ಗಂಟೇ ಬಂದು ಬಿಟ್ಟಿತ್ತು. ಆದರೆ ನನಗೆ ಎಷ್ಟೋ ಬಾಕಿ ತೀರಿಸ ಬೇಕಿತ್ತು. ಮೊಟ್ಟ  ಮೊದಲು ನಾನು ಹಾಸ್ಟೆಲ್ ಫೀ ಬಾಕಿ ತೀರಿಸಿ ಬಿಟ್ಟೆ. ಅಷ್ಟಲ್ಲದೇ ಒಂದು ತಿಂಗಳ ಫೀ ಅಡ್ವಾನ್ಸ್ ಪೇಮೆಂಟ್ ಕೂಡ ಮಾಡಿಬಿಟ್ಟೆ. ಆದರೆ ನನ್ನದೊಂದು ಅತಿ ಮುಖ್ಯ ಹಳೇ ಬಾಕಿ ತೀರ್ಮಾನ ಮಾಡುವುದಿತ್ತು. ಅದೇ ಅರುಣಾಚಲಂ ಮೇಷ್ಟ್ರ ಒಂದು ತಿಂಗಳ ಮೆಸ್  ಚಾರ್ಜ್ ೩೦ ರೂಪಾಯಿ. ಆಗ ನನಗೆ ದಿನವೇ ಬುಧವಾರ ಎಂದು ಗಮನಕ್ಕೆ ಬಂತು. ಅಂದು ಸಂಜೆ  ಸ್ಕೌಟ್ ಭವನದಲ್ಲಿ ಮೇಷ್ಟ್ರು ಹಾಜರಿರುವರೆಂದು ನನಗೆ ಗ್ಯಾರಂಟಿಯಾಗಿ ಗೊತ್ತಿತ್ತು. ನಾನು ತಡ ಮಾಡದೇ ಅಲ್ಲಿಗೆ ಹೋಗಿ ಅವರನ್ನು ಅವರನ್ನು ಭೇಟಿಯಾದೆ.

ಅವರ ಹಳೇ ಬಾಕಿಯನ್ನು ತೀರಿಸಿಬಿಡಬೇಕೆಂಬ ನನ್ನ ಉತ್ಸಾಹ ಮತ್ತು ಉದ್ವೇಗವನ್ನು ನೋಡಿ ಅವರಿಗೆ ಸ್ವಲ್ಪ ಆತಂಕವೇ ಆಯಿತು. ನನ್ನ ಅರೋಗ್ಯ ಸರಿ ಇರುವುದೇ ಎಂದು ವಿಚಾರಿಸಿದರು. ಆಗ ನಾನು ನನಗೆ ೧೦೦ ರೂಪಾಯಿ ಸಂಸ್ಕೃತ ಸಬ್ಜೆಕ್ಟ್ ಮೆರಿಟ್ ಸ್ಕಾಲರ್ಷಿಪ್ ಬಂದಿರುವುದೆಂದೂ ಮತ್ತು ಅವರ ೩೦ ರೂಪಾಯಿ ಬಾಕಿಯನ್ನು ತೀರಿಸಲು ಬಂದಿರುವುದಾಗಿ ಹೇಳಿದೆ. ನೀವು ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಮೇಷ್ಟ್ರು ನನ್ನಿಂದ ಪೇಮೆಂಟ್ ಬಾಕಿ ಇರುವುದು ಅವರಿಗೆ ಗೊತ್ತೇ ಇರಲಿಲ್ಲವೆಂದು ಹೇಳಿದರು! ಆದರೆ ನಾನೇ ಅದನ್ನು ಹೇಳುತ್ತಿರುವುದರಿಂದ ಹಣವನ್ನು ಸ್ವೀಕರಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದರು. ಹಾಗೂ ನನಗೆ ಸ್ಕಾಲರ್ಷಿಪ್ ಪಡೆದುದಕ್ಕೆ ಅಭಿನಂದನೆ ಮಾಡಿದರು. ಆಗ ನನ್ನ ಕಣ್ಣಲ್ಲಿ ನೀರು ಬಂದು ಬಿಟ್ಟಿತು.

ಓಂ! ಶ್ರೀ ಗುರುಭ್ಯೂ ನಮಃ
ದೊಡ್ಡ ಮೊತ್ತದ ಹಣ ಕೈ ಸೇರಿದ ಖುಶಿಯಲ್ಲಿದ್ದ  ನನಗೆ ಇದ್ದಕ್ಕಿದ್ದಂತೇ ನನಗೆ ಸ್ಕಾಲರ್ಷಿಪ್ ದೊರೆಯಲು ಮೂಲ ಕಾರಣ ಯಾರು ಎಂಬುದು ಅರಿವಿಗೆ ಬಂತು. ಅವರು ಬೇರಾರೂ ಅಲ್ಲ. ನನ್ನ ಸಂಸ್ಕೃತ ಮೇಷ್ಟ್ರು ನಂಜುಂಡ ಶಾಸ್ತ್ರಿಯವರು. ಅವರು ನನಗೆ  ಯಾವಾಗಲೂ ೧೦೦ಕ್ಕೆ ೯೦ ರಿಂದ ಮೇಲ್ಪಟ್ಟು ಅಂಕಗಳನ್ನು ಕೊಡುತ್ತಿದ್ದರು. ನಾನು ನನ್ನ ಆನ್ಸರ್ ಪೇಪರಿನಲ್ಲಿ ಒಮ್ಮೆ ಅವರು ನನಗೆ ೧೦೦ಕ್ಕೆ ೧೧೭ ಅಂಕಗಳನ್ನು ಕೊಟ್ಟು ಆಮೇಲೆ ಅದನ್ನು ಕಟ್ ಮಾಡಿ ೯೮ಕ್ಕೆ ತಂದಿಟ್ಟದ್ದನ್ನು ಕೂಡ ನೋಡಿದ್ದೆ! ಕಾರಣವಿಷ್ಟೇ. ಶಾಸ್ತ್ರಿಗಳು ಯಾವುದೇ ಪ್ರಶ್ನೆಗಳಿಗೆ ಇಂತಿಷ್ಟು ಅಂಕಗಳೆಂದು ಪ್ರಶ್ನೆ ಪತ್ರಿಕೆಯಲ್ಲಿ ನಿಗದಿ ಮಾಡಿರುತ್ತಿರಲಿಲ್ಲ. ನಾವು ಬರೆದ ಉತ್ತರಗಳಿಗೆ ಅವರ ತೀರ್ಮಾನದ ಪ್ರಕಾರ ಅಂಕಗಳನ್ನು ಹಾಕುತ್ತಾ  ಹೋಗಿ ಕೊನೆಗೆ ಒಟ್ಟು ಅಂಕಗಳು ಎಷ್ಟು ಬಂದವೆಂದು ಲೆಕ್ಕ ಮಾಡುತ್ತಿದ್ದರು. ಹಾಗಾಗಿ ನನಗೆ ೧೦೦ಕ್ಕೂ ಹೆಚ್ಚು ಅಂಕಗಳು ಒಮ್ಮೆ ಬಂದುದರಲ್ಲಿ ಆಶ್ಚರ್ಯವೇನಿರಲಿಲ್ಲ. ಹಾಗಾದುದನ್ನು ಕಂಡ ಮೇಲೆ ಕೆಲವು ಪ್ರಶ್ನೆಗಳಿಗೆ ಅಂಕಗಳನ್ನು  ಕಡಿಮೆ ಮಾಡಿ  ೧೦೦ರ ಒಳಗೆ ತಂದಿದ್ದರು ಅಷ್ಟೇ! ಪ್ರಾಯಶಃ ಸರ್ಕಾರದ ವಿದ್ಯಾ ಇಲಾಖೆಯವರಿಗೆ ನಾನು ಸಂಸ್ಕೃತ ಸಬ್ಜೆಕ್ಟಿನಲ್ಲಿ  ತೆಗೆದುಕೊಳ್ಳುತ್ತಿದ್ದ ಅಂಕಗಳನ್ನು ನೋಡಿ ನಾನೊಬ್ಬ ಬೃಹಸ್ಪತಿ ಇರಬೇಕು ಎಂದು ತೀರ್ಮಾನಿಸಿ ೧೦೦ ರೂಪಾಯಿ ಸ್ಕಾಲರ್ಷಿಪ್ ಮಂಜೂರು ಮಾಡಿದ್ದರೆ ಅದರಲ್ಲಿ ಆಶ್ಚರ್ಯವೇನಿರಲಿಲ್ಲ!

ನಾನು ಸಂಜೆಯೇ ಶಾಸ್ತ್ರಿಗಳ ದುರ್ಗಿಗುಡಿಯ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದೆ. ನನಗೆ ಸ್ಕಾಲರ್ಷಿಪ್ ಬಂದ ವಿಷಯ ತಿಳಿದು ಅವರಿಗೆ ತುಂಬಾ ಸಂತೋಷವಾಯಿತು. ನಾನು ಅವರ ಕೈಮೇಲೆ ೧೦ ರೂಪಾಯಿ ಇಟ್ಟು ದೀರ್ಘ ದಂಡ ನಮಸ್ಕಾರ ಮಾಡಿಬಿಟ್ಟೆ. ಕೇವಲ ೩೦ ರೂಪಾಯಿ ತಿಂಗಳ ಸಂಬಳದಲ್ಲಿ ಸಂಸಾರ ನಡೆಸುತ್ತಿದ್ದ  ಶಾಸ್ತ್ರಿಯವರ ಸಂಸಾರದ ಬವಣೆಯ ಬಗ್ಗೆ ನಾನು ಹಿಂದೆಯೇ ಬರೆದಿದ್ದೇನೆ.

ನಕ್ರ ಪೂಜಾರಿಯ ಸತ್ಯನಾರಾಯಣ ಪೂಜೆ
ಬಾರಿ ಕ್ರಿಸ್ಮಸ್ ರಜೆಗೆ ಊರಿಗೆ ಹೋಗುವಾಗ ನಾನು ತುಂಬಾ ಉತ್ಸಾಹದಿಂದಿದ್ದೆ. ಆದರೆ ನಾನು ಮನೆ ತಲುಪಿದಾಗ ಅಲ್ಲಿ ತಂಗಿ ಮತ್ತು ತಮ್ಮಂದಿರು ಮಾತ್ರ ಇದ್ದರು. ಪುಟ್ಟಣ್ಣನಿನ್ನೂ ರಜೆಗೆ ಊರಿಗೆ ಬಂದಿರಲಿಲ್ಲ. ತಂದೆ ತಾಯಿಯರು ಕನಮಡ್ಲು ಎಂಬಲ್ಲಿ ನಕ್ರ ಪೂಜಾರಿ ಎಂಬ ಮೇಸ್ತ್ರಿ ಮತ್ತು ಜಮೀನ್ದಾರ ನಡೆಸಿದ್ದ ಸತ್ಯನಾರಾಯಣ ಪೂಜೆಗೆ ಅಡಿಗೆ ಮಾಡಲು ಹೋಗಿದ್ದರು. ವಿವಿಧ ವಿದ್ಯೆಗಳಲ್ಲಿ ಪಳಗಿದ್ದ ನಮ್ಮ ತಂದೆಯವರು ಪಾಕಶಾಸ್ತ್ರ ಪ್ರವೀಣರೂ ಆಗಿದ್ದರು.
ನಕ್ರ ಪೂಜಾರಿ ನಮ್ಮೂರಿಗೆ ದಕ್ಷಿಣ ಕನ್ನಡದಿಂದ ಆಳುಗಳನ್ನು ಕರೆತಂದು ಅಡಿಕೆ ತೋಟಗಳಲ್ಲಿ ಕೆಲಸ ಮಾಡಿಸುವ ಮೇಸ್ತ್ರಿಯಾಗಿದ್ದ. ಪುರದಮನೆ ಶ್ರೀನಿವಾಸಯ್ಯನವರು ಅವನಿಗೆ ತಮಗೆ ಕನಮಡಿಲಿನಲ್ಲಿ ಇದ್ದ ಬತ್ತದ ಗದ್ದೆಯನ್ನು ಗೇಣಿಗೆ ಕೊಟ್ಟು ಅಲ್ಲಿದ್ದ ಮನೆಯಲ್ಲಿಯೇ ವಾಸ  ಮಾಡುವ ಏರ್ಪಾಟು ಮಾಡಿದ್ದರು. ಮುಂದೆ ಭೂಸುಧಾರಣೆ ಕಾನೂನು ಬಂದಾಗ ಶ್ರೀನಿವಾಸಯ್ಯನವರ ಗದ್ದೆ ಸಂಪೂರ್ಣವಾಗಿ ನಕ್ರ ಪೂಜಾರಿಯ ಒಡೆತನಕ್ಕೆ ಬಂದು ಅವನೊಬ್ಬ ಶ್ರೀಮಂತ ಜಮೀನ್ದಾರನಾಗಿ ಬಿಟ್ಟ. ನಮ್ಮ ತಂದೆಯವರ ಬಗ್ಗೆ ತುಂಬಾ ಗೌರವ ತೋರಿಸುತ್ತಿದ್ದ ನಕ್ರ ಪೂಜಾರಿ ಅವರು ಮಾಡಿದ ಕೆಲಸಕ್ಕೆ ಒಳ್ಳೆಯ ಪೇಮೆಂಟ್ ಮಾಡುವುದರಲ್ಲಿ ಸಂಶಯವೇ ಇರಲಿಲ್ಲ.  ಸ್ಕಾಲರ್ಷಿಪ್ ಬಂದ ಶುಭ ಸಮಾಚಾರವನ್ನು ತಂದೆ ತಾಯಿಯರಿಗೆ ತಿಳಿಸುವ ಆತುರದಲ್ಲಿದ್ದ ನನಗೆ ಅವರು ಸಂಸಾರಕ್ಕಾಗಿ ಮಾಡುತ್ತಿದ್ದ ಹೋರಾಟವನ್ನು ಗಮನಿಸಿ ತುಂಬಾ ಕಸಿವಿಸಿಯಾಯಿತು.

ಅಂದು ಸಂಜೆಯ ವೇಳೆಗೆ ತಾಯಿ ತಂದೆಯರು ಕನಮಡಿಲಿನಿಂದ ವಾಪಾಸ್ ಬಂದರು. ನಕ್ರ ಪೂಜಾರಿ ಅವರ ಕೆಲಸಕ್ಕೆ ಒಳ್ಳೆಯ ಸಂಭಾವನೆ ಕೊಟ್ಟಿದ್ದರಿಂದ ಅವರು ಖುಷಿಯಲ್ಲಿದ್ದುದು ಕಾಣಿಸಿತು. ನಾನು  ಅವರಿಗೆ ನನಗೆ  ಸ್ಕಾಲರ್ಷಿಪ್ ಬಂದ ವಿಷಯ ತಿಳಿಸಿದಾಗ ಅವರ ಖುಷಿ ಇನ್ನೂ ಹೆಚ್ಚಾಯಿತು. ಒಟ್ಟಿನಲ್ಲಿ ಇನ್ನು ಮುಂದೆ ಅವರು ನನಗೆ ವರ್ಷದ ವಿದ್ಯಾಭ್ಯಾಸಕ್ಕೆ ಹಣ  ನೀಡಬೇಕಾದ ಅವಶ್ಯಕತೆ ಇರಲಿಲ್ಲ. ಮಾರನೇ ದಿನ ಪುಟ್ಟಣ್ಣನೂ ರಜೆಗೆ ಊರಿಗೆ ಬಂದ. ಬೆಳವಿನಕೊಡಿಗೆ ಮತ್ತು ಗೋಳಿಕಟ್ಟೆ ಜಮೀನ್ದಾರರು ನಮಗೆ ಗೇಣಿ ಮಾಫಿ ಮಾಡದಿದ್ದರಿಂದ ನಮ್ಮ ತಂದೆಯವರು ಕೇವಲ ವೀಳ್ಯದೆಲೆ ಮತ್ತು ಬಾಳೆ ಹಣ್ಣಿನ ಮಾರಾಟದಿಂದ ವರ್ಷ ನಮ್ಮ ಸಂಸಾರ ನಿರ್ವಹಿಸಬೇಕಾಗಿತ್ತು. ಪುಟ್ಟಣ್ಣ ಮತ್ತು ನಾನು ಮುಂದೆ ಬರುವ ಬೇಸಿಗೆ ರಜೆಯಲ್ಲಿ ತಂದೆಯವರಿಗೆ ಸಂಪೂರ್ಣ ಸಹಾಯ ಮಾಡಬೇಕೆಂದು ತೀರ್ಮಾನಿಸಿದೆವು.

ಶಿವಮೊಗ್ಗ ಸುಬ್ಬಣ್ಣ
ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು ನಮ್ಮ ಶಾಲೆಗೆ ಒಳ್ಳೊಳ್ಳೆ ವಿದ್ವಾಂಸರನ್ನು ಕರೆಸಿ ಕಾರ್ಯಕ್ರಮಗಳನ್ನು ಮಾಡಿಸುತ್ತಿದ್ದರು. ಹಾಗೆ ಕರೆಸಿದವರಲ್ಲಿ ನನಗೆ ತುಂಬಾ ನೆನಪು ಬರುವುದು ಉದಯೋನ್ಮುಖ ಸುಗಮ ಸಂಗೀತ ಕಲಾವಿದರಾಗಿದ್ದ ಶಿವಮೊಗ್ಗ ಸುಬ್ಬಣ್ಣ (ಸುಬ್ರಹ್ಮಣ್ಯ) ಅವರದ್ದು. ಆಗಿನ್ನೂ ೨೫ ವರ್ಷ ವಯಸ್ಸಿನ ತರುಣ ಸುಬ್ಬಣ್ಣ ಬಿಕಾಂ ಪದವೀಧರರಾಗಿ ಇನ್ಕಮ್ ಟ್ಯಾಕ್ಸ್ ಪ್ರಾಕ್ಟೀಸ್ ಆರಂಭಿಸಿದ್ದರು. ಆದರೆ ಆಗಲೇ ಅವರು ತಮ್ಮ ಮಧುರ ಕಂಠದಲ್ಲಿ ಹಾಡುತ್ತಿದ್ದ ಭಾವಗೀತೆಗಳು ಪ್ರಸಿದ್ಧಿ ಪಡೆದಿದ್ದವು. ಶ್ರೀನಿವಾಸಮೂರ್ತಿಯವರು ಸುಬ್ಬಣ್ಣನವರ ಪರಿಚಯವನ್ನು ತುಂಬಾ ಚೆನ್ನಾಗಿ ಮಾಡಿಕೊಟ್ಟರು. ಕಾರ್ಯಕ್ರಮ ಕೂಡ ತುಂಬಾ ಚೆನ್ನಾಗಿ ನಡೆಯಿತು.

ಜಾನ್ ಎಫ್ ಕೆನೆಡಿ  ಅಮೆರಿಕಾದ ೩೫ನೇ ಅಧ್ಯಕ್ಷ
ನನ್ನ ನೆನಪಿಗೆ ಬರುವ ಇನ್ನೊಂದು ಮುಖ್ಯ ಕಾರ್ಯಕ್ರಮ ಅಮೆರಿಕಾದ ಆಗಿನ ಅತ್ಯಂತ ಪ್ರಸಿದ್ಧ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನೆಡಿ  ಅವರ ಕೊಲೆಯಾದಾಗ ನಡೆದ ಶೋಕ ಸಭೆ. ಆಗಿನ್ನೂ ೪೬ನೇ ವಯಸ್ಸಿನ ಕೆನೆಡಿಯವರು ನಮ್ಮಂತ ಚಿಕ್ಕವರಿಗೂ ಅತ್ಯಂತ ಆಕರ್ಷಣೀಯ ವ್ಯಕ್ತಿಯಾಗಿದ್ದರು. ೨೨ನೇ ನವೆಂಬರ್ ೧೯೬೩ರಂದು ಅಮೆರಿಕಾದ ಡಲ್ಲಾಸ್ ನಲ್ಲಿ ಓಪನ್ ಕಾರಿನಲ್ಲಿ ತನ್ನ ಪತ್ನಿ ಜಾಕೆಲಿನ್ ಒಡನೆ ಜನಗಳ ಮಧ್ಯ ಸಾಗುತ್ತಿದ್ದ ಕೆನೆಡಿಯವರನ್ನು ಹಾರ್ವೆ ಓಸ್ವಾಲ್ಡ್ ಎನ್ನುವ ಹಂತಕ ಗುಂಡಿಕ್ಕಿ ಕೊಂದು ಬಿಟ್ಟಿದ್ದ. ವಿಚಿತ್ರವೆಂದರೆ ಈ ಕೊಲೆಗಾರನನ್ನು ಜಾಕ್ ರೂಬಿ ಎನ್ನುವ ಇನ್ನೊಬ್ಬ ಹಂತಕ ಕೇವಲ ಎರಡು ದಿನಗಳ ನಂತರ ಗುಂಡಿಕ್ಕಿ ಕೊಂದು ಬಿಟ್ಟ!  ನಮ್ಮ ಹೆಡ್ ಮಾಸ್ಟರ್ ಶ್ರೀನಿವಾಸಮೂರ್ತಿಯವರು ನಮಗೆ ಕೆನೆಡಿಯ  ಬಗ್ಗೆ ಸಂಪೂರ್ಣ ವಿವರಗಳನ್ನು ಹೇಳುತ್ತಾ ಅವರ ಕೊಲೆಯಾದ ಸಂಗತಿಯನ್ನು ತಿಳಿಸುವಾಗ ಅತ್ತೇ ಬಿಟ್ಟರು. ಅವರ ಮಾತುಗಳು ನಮ್ಮ ಮೇಲೆ ಎಷ್ಟು ಪ್ರಭಾವ ಬೀರಿದವೆಂದರೆ ನಮ್ಮ ಕಣ್ಣುಗಳಲ್ಲೂ ನೀರು   ಹರಿಯ ತೊಡಗಿತು.

ನನ್ನ ಕ್ರಿಕೆಟ್ ಕಾಮೆಂಟರಿ ಹುಚ್ಚು
ಹಾಸ್ಟೆಲಿನಲ್ಲಿ ಪ್ರತಿ ನಿತ್ಯ ಇಂಗ್ಲಿಷ್ ನ್ಯೂಸ್ ಪೇಪರ್ ಓದುವಾಗ ನಾನು ಕ್ರಿಕೆಟ್ ಪಂದ್ಯಗಳ  ಬಗ್ಗೆ ಕೂಡ ಓದುತ್ತಿದ್ದೆ. ನನಗೆ ೬ನೇ ತರಗತಿಯಲ್ಲಿ ಓದುವಾಗ ಜಾಮ್ ಸಾಹಿಬ್ ಆಫ್  ನವಾನಗರ್ ಎಂಬ ಇಂಗ್ಲಿಷ್ ಪಾಠ ಕ್ರಿಕೆಟ್ ಬಗ್ಗೆ ಇತ್ತು. ಅದರಲ್ಲಿ ಹಜಾರೆ ಎಂಬ ಆಟಗಾರ ಪ್ರಪಂಚದ ೧೧ ಜನ ಉತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬನೆಂದಿತ್ತು. ಆದರೆ ನನಗಾಗ ಕ್ರಿಕೆಟ್ ಆಟದ ಗಂಧ ಗಾಳಿ ಇರಲಿಲ್ಲ. ನಮ್ಮ ಹಾಸ್ಟೆಲಿನಲ್ಲಿ ನನ್ನ ರೂಮ್ ಮೇಟ್ ಅನಂತ ಮತ್ತು ಇನ್ನು ಕೆಲವು ಹುಡುಗರು ಶಿವಮೊಗ್ಗೆಯ ಹತ್ತಿರವಿದ್ದ ಮತ್ತೂರಿನವರಾಗಿದ್ದರು. ಅವರಿಗೆಲ್ಲ ಕ್ರಿಕೆಟ್ ಎಂದರೆ ಜೀವ ಮತ್ತು ಅವರದೇ ಒಂದು ಕ್ರಿಕೆಟ್ ಟೀಮ್ ಕೂಡ ಇತ್ತು. ನಾನು ಅವರೊಡನೆ ಸೇರಿಕೊಂಡು ಕ್ರಿಕೆಟ್ ಆಟದ ಬಗ್ಗೆ ವಿವರವಾಗಿ ತಿಳಿದುಕೊಂಡೆ. ಅವರು ನನಗೆ ಸದ್ಯದಲ್ಲೇ ಇಂಗ್ಲಿಷ್ ಕ್ರಿಕೆಟ್ ಟೀಮ್ ಇಂಡಿಯಾಕ್ಕೆ ಐದು ಟೆಸ್ಟ್ ಮ್ಯಾಚ್ ಸೀರೀಸ್ ಆಡಲು ಬರುವುದೆಂದು ತಿಳಿಸಿದರು. ಹಾಗೆಯೇ ನಾನು ರಜೆಯ ದಿನಗಳಲ್ಲಿ ರೇಡಿಯೋದಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳಬಹುದೆಂದೂ ಹೇಳಿದರು. ಅಷ್ಟು ಮಾತ್ರವಲ್ಲ. ಅವರು ನನಗೆ ಕಾಮೆಂಟರಿ ಕೇಳಲೂ ಕೂಡ ಏರ್ಪಾಟು ಮಾಡಲು ಒಪ್ಪಿದರು.

ಆ ವರ್ಷ ಜನವರಿ ತಿಂಗಳಲ್ಲಿ ಮೈಕ್ ಸ್ಮಿಥ್ ಕ್ಯಾಪ್ಟನ್ ಆಗಿದ್ದ ಇಂಗ್ಲಿಷ್ ಟೀಮ್ ಭಾರತಕ್ಕೆ ಬಂತು. ನನ್ನ ಮತ್ತೂರು ಸ್ನೇಹಿತರು ನಮ್ಮ ಹಾಸ್ಟೆಲ್ ವಾರ್ಡನ್ ಮಂಗಳಮೂರ್ತಿಯವರೊಡನೆ ಒಳ್ಳೆ ವ್ಯವಸ್ಥೆ ಮಾಡಿ ನನ್ನನ್ನು ಅವರೊಡನೆ ವಾರ್ಡನ್ ಅವರ ಮನೆಯಲ್ಲೇ ಕಾಮೆಂಟರಿ ಕೇಳುವ ಹಾಗೆ ಮಾಡಿ ಬಿಟ್ಟರು. ಆ ಟೀಮಿನೊಡನೆ ಆಡಿದ ಐದು ಟೆಸ್ಟ್ ಮ್ಯಾಚ್ ಕೂಡ ಡ್ರಾದಲ್ಲಿ ಮುಕ್ತಾಯವಾದುವು. ಆದರೆ ನನಗೆ ಬುಧಿ ಕುಂದರನ್ ಅವರು ಮದ್ರಾಸ್ ಟೆಸ್ಟಿನಲ್ಲಿ ೧೯೨ ರನ್ ಹೊಡೆದುದನ್ನು ಮತ್ತು ಹನುಮಂತ್ ಸಿಂಗ್ ತನ್ನ ಮೊದಲ ಟೆಸ್ಟಿನಲ್ಲಿಯೇ ಸೆಂಚುರಿ ಬಾರಿಸಿದುದನ್ನೂ ಕಾಮೆಂಟರಿ ಮೂಲಕ ಕೇಳುವ ಸೌಭಾಗ್ಯ ಒದಗಿ ಬಂತು. ಅಲ್ಲಿಂದ ನನ್ನ ಕ್ರಿಕೆಟ್ ಕಾಮೆಂಟರಿ ಹುಚ್ಚು ಆರಂಭವಾಯಿತು.
ನನ್ನ ಕೈಯಲ್ಲಿದ್ದ ಸ್ಕಾಲರ್ಷಿಪ್ ಹಣ ನಮ್ಮ ಮಾರ್ಚ್ ತಿಂಗಳ ವಾರ್ಷಿಕ ಪರೀಕ್ಷೆ ಮುಗಿಯುವ ವೇಳೆಗೆ ಸಂಪೂರ್ಣವಾಗಿ ಖರ್ಚಾಯಿತು. ಆದರೆ ಹಿಂದಿನ ವರ್ಷದ ಹಾಗೆ ಯಾವುದೇ ಬಾಕಿ ಇಲ್ಲದಂತೆ ಹಾಸ್ಟೆಲಿನ ಹಾಗೂ ಶಾಲೆಯ ಫೀ ಸಂಪೂರ್ಣವಾಗಿ ಕಟ್ಟಿ ನಾನು ಊರಿಗೆ ಹೊರಟು  ಬಿಟ್ಟೆ.
------- ಮುಂದುವರಿಯುವುದು-----