Saturday, May 27, 2017

ನನ್ನ ಬಾಲ್ಯ


ಅಧ್ಯಾಯ ೨೪
ನಮ್ಮೂರಿನ ಶಾಲೆಗೆ ಶ್ರೀಕಂಠ ಜೋಯಿಸರ ನಂತರ ಯಾವುದೇ ಮೇಷ್ಟರು ಬಾರದಿದ್ದರಿಂದ ನನ್ನ ಓದು ಎರಡನೇ ತರಗತಿಗೇ ಮುಕ್ತಾಯವಾಗಿತ್ತು. ಪುಟ್ಟಣ್ಣ ನಾಲ್ಕನೇ ತರಗತಿ ಮುಗಿಸಿ ಮನೆ ಸೇರಿದ್ದ. ಅವನ ಮುಂದಿನ ಓದಿನ ಬಗ್ಗೆ ತೀರ್ಮಾನವಾಗಿರಲಿಲ್ಲ. ಅಣ್ಣಯ್ಯನ ಮನೆ ಪಾಠದ ಮೂಲಕ ನಾನು ಮನೆಯಲ್ಲಿದ್ದ ಪುಟ್ಟಣ್ಣನ ನಾಲ್ಕನೇ ತರಗತಿಯ ಪುಸ್ತಕಗಳನ್ನೂ ಓದಿ ಮುಗಿಸಿದ್ದೆನಮಗೆ ತಿಳಿಯದಂತೆ ನಮ್ಮೂರಿಗೆ ವರ್ಗವಾಗಿದ್ದ ಕೆಲವು ಮೇಷ್ಟರುಗಳು ಶಾಲೆಗೆ ಒಂದು ಬಾರಿಯೂ ಭೇಟಿ ಮಾಡದೇ ಹಾಗೇ ಸಂಬಳವನ್ನು ಪಡೆಯುತ್ತಿದ್ದರಂತೆ. ನಮ್ಮಣ್ಣ ಪ್ರಜಾವಾಣಿಯ ವಾಚಕರವಾಣಿಗೆ ಒಂದು ಪತ್ರ  ಬರೆದಾಗ ವಿಷಯ ಹೊರಬಂತು.

ನಾವು ನಮ್ಮೂರಿನಲ್ಲಿ ಒಂದು ಶಾಲೆ ಇತ್ತೆಂಬುದನ್ನೇ ಮರೆಯುವ ಸ್ಥಿತಿಗೆ ತಲುಪಿದ್ದೆವು. ಆಗ ಇದ್ದಕಿದ್ದಂತೆ ನಮ್ಮ ಶಾಲೆಗೆ ಸುಬ್ಬಾಭಟ್ಟ ಎಂಬ ಮೇಷ್ಟರ ಆಗಮನವಾಯಿತು. ಹರಿಹರಪುರದ ಜೆಮಟಿಗೆ ಎಂಬ ಊರಿನ ಸುಬ್ಬಾಭಟ್ಟರು ತಮ್ಮ ಸಂಸಾರದೊಡನೆ ಆಗಮಿಸಿದ್ದರಿಂದ ಅವರು ನಮ್ಮ ಊರಿನಲ್ಲಿ ನೆಲೆವೂರುವರೆಂದು ನಮಗೆ ಸಂತೋಷವಾಯಿತು. ಅವರಿಗೆ ಪುರದಮನೆಯ ಔಟ್ ಹೌಸ್ ನಲ್ಲಿ ನಿಲ್ಲುವ ವ್ಯವಸ್ಥೆಯಾಯಿತು. ನಾನು ನನ್ನ ತಂಗಿ ಲೀಲಾಳ ಒಟ್ಟಿಗೆ ಬೇರೆ ಹುಡುಗರೊಡನೆ ಪುನಃ ಶಾಲೆಗೆ ಹೋಗತೊಡಗಿದೆ. ನಾನು ಮೊದಲೇ ಬರೆದಂತೆ ಪುರದಮನೆಯ ಮುಂಭಾಗದಲ್ಲೆ  ನಮ್ಮ ಶಾಲೆ ಇತ್ತು.

ಸಬ್ಬಾಭಟ್ಟರು ಒಬ್ಬ ಅತ್ಯಂತ ಅನುಭವೀ ಮೇಷ್ಟರಾಗಿದ್ದರು. ಅವರಿಗೆ ಹಿಂದಿನ ಶಾಲೆಗಳಲ್ಲಿ ಒಳ್ಳೆ ಹೆಸರಿತ್ತು. ನನ್ನ ಹೆಸರನ್ನು ಮೂರನೇ ತರಗತಿಯ ಹಾಜರಿ ಪುಸ್ತಕದಲ್ಲಿ ನಮೂದಿಸಲಾಗಿತ್ತು. ಬಹು ಬೇಗನೆ ಸುಬ್ಬಾಭಟ್ಟರಿಗೆ ನನ್ನ ಓದಿನ  ಮಟ್ಟದ  ಅರಿವಾಯಿತು. ಅವರು ಹಾಜರಿ ಪುಸ್ತಕದಲ್ಲಿ ಏನೋ ಗೋಲ್ಮಾಲ್ ಮಾಡಿ ನನ್ನ ಹೆಸರನ್ನು ನಾಲ್ಕನೇ ತರಗತಿಗೆ ಬದಲಾಯಿಸಿ ಬಿಟ್ಟರು. ಅವರು ಅದು ಯಾರ ಕಣ್ಣಿಗೂ ಬೀಳದಂತೆ ನೋಡಿಕೊಂಡಿದ್ದರು. ಆದರೆ ನನ್ನ ದುರಾದೃಷ್ಟಕ್ಕೆ ನಮ್ಮ ಶಾಲೆಗೆ ಭೇಟಿ ನೀಡಿದ ಇನ್ಸ್ಪೆಕ್ಟರ್  ಒಬ್ಬರ ಕಣ್ಣಿಗೆ ಅದು ಬಿದ್ದು ಬಿಟ್ಟಿತುಅವರು ಮೇಷ್ಟರನ್ನು ಜೋರಾಗಿ ತರಾಟೆಗೆ ತೆಗೆದುಕೊಂಡರುನಾನು ನನಗೆ ಪುನಃ ಮೂರನೇ ತರಗತಿಯೇ ಗತಿಯೆಂದು ಭಾವಿಸಿದೆ!

ಆದರೆ ಸುಬ್ಬಾಭಟ್ಟರೇನು ಸಾಮಾನ್ಯ ಮೇಷ್ಟರಾಗಿರಲಿಲ್ಲ. ಅವರು ಇನ್ಸ್ಪೆಕ್ಟರ್ ಅವರಿಗೆ ನನ್ನ ಓದಿನ ಮಟ್ಟವನ್ನು ಸ್ವತಃ ಪರೀಕ್ಷಿಸುವಂತೆ ಚಾಲೆಂಜ್ ಮಾಡಿದರು. ಇನ್ಸ್ಪೆಕ್ಟರ್ ಅವರು ಸ್ವತಃ ಮಾಡಿದ ಪರೀಕ್ಷೆಯಿಂದ ಅವರಿಗೆ ಸುಬ್ಬಾಭಟ್ಟರ ಅಭಿಪ್ರಾಯ ನೂರಕ್ಕೆ ನೂರು ನಿಜವೆಂದು ಅರಿವಾಯಿತು. ಅವರು ನನಗೆ ನಾಲ್ಕನೇ ತರಗತಿಯಲ್ಲಿ ಮುಂದುವರಿಯಲು ಅನಧಿಕೃತವಾಗಿ ಅನುಮತಿ ನೀಡಿದರು. ಆದರೆ ಸುಬ್ಬಾಭಟ್ಟರಿಗೆ ವಿಷಯವನ್ನು ಬೇರೆಯಾರಿಗೂ ತಿಳಿಸದಂತೆ ಎಚ್ಚರಿಕೆ ನೀಡಿದರು.  ನನಗೆ ಆಮೇಲೆ  ತುಂಬಾ ದಿನ ಬೇರೊಬ್ಬ ಇನ್ಸ್ಪೆಕ್ಟರ್ ಬಂದು ನನಗೆ ಪುನಃ ಮೂರನೇ ತರಗತಿಗೆ ತಳ್ಳಿದಂತೆ ಕನಸು ಬೀಳುತ್ತಿತ್ತು.

ಸುಬ್ಬಾಭಟ್ಟರಿಗೆ ನಮ್ಮ ಕುಟುಂಬದ ವಿದ್ಯಾಭ್ಯಾಸ ಮತ್ತು ಓದಿನಲ್ಲಿನ ಆಸಕ್ತಿ ತುಂಬಾ ಹಿಡಿಸಿತು. ಅವರಿಗೆ ಆಗ ಚಂದ್ರಮತಿ ಮತ್ತು ಶಶಿಕಲಾ ಎಂಬ ಚಿಕ್ಕ ಹೆಣ್ಣು ಮಕ್ಕಳಿದ್ದರುಬಹು ಬೇಗನೆ ಅವರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಸ್ನೇಹ ಬೆಳೆಯಿತುಅವರು ನಮ್ಮ ಬಗ್ಗೆ ತೋರಿದ ಆದರ ನೋಡಿ ನಮಗೆ ತುಂಬಾ ಸಂತೋಷವಾಯಿತು. ಅವರು ನಮಗೆ ಪಾಠಗಳಲ್ಲದೆ ಬೇರೆ ಕೆಲವು ಚಟುವಟಿಕೆಗಳನ್ನೂ ಕಲಿಸತೊಡಗಿದರು. ನಮ್ಮ ಅಣ್ಣನ ಕೋರಿಕೆಯ ಮೇಲೆ ಅವರು ನನಗೆ ವಾರ್ಷಿಕ ಪರೀಕ್ಷೆಯ ನಂತರ ನೇ ತರಗತಿಗೆ ಟ್ಯೂಷನ್ ಹೇಳಲೂ ಒಪ್ಪಿಕೊಂಡರು. ಒಟ್ಟಿನಲ್ಲಿ  ಸಮಯದಲ್ಲಿ ನನ್ನ ಓದಿನ ಉತ್ಸಾಹ ಆಕಾಶಕ್ಕೇರಿತ್ತು.

ಆದರೆ ಇದ್ದಕಿದ್ದಂತೆ ಬರಸಿಡಿಲಿನಂತ ಸಮಾಚಾರವೊಂದು ನಮ್ಮ ಕಿವಿಗೆ ಬಿತ್ತು. ಸುಬ್ಬಾಭಟ್ಟರಿಗೆ  ಎರಡು ವರ್ಷ ಟ್ರೈನಿಂಗ್ ಎಂದು ಬೆಳ್ಳಾರೆ ಎಂಬಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಸುಬ್ಬಾಭಟ್ಟರು ಕೇವಲ ಲೋಯರ್ ಸೆಕೆಂಡರಿ ಪಾಸಾಗಿದ್ದರಿಂದ ಅವರಿಗೆ ಟ್ರೈನಿಂಗ್ ಅವಶ್ಯವಾಗಿ ಮಾಡಲೇ ಬೇಕಿತ್ತು ಟ್ರೈನಿಂಗ್ ಯಾವುದೇ ರೀತಿಯಲ್ಲಿ ರದ್ದಾಗುವಂತಿರಲಿಲ್ಲ. ನಮ್ಮ ಕುಟುಂಬಕ್ಕೆ ಇದು ಅತ್ಯಂತ ದುಃಖ್ಖದ ವಿಷಯವಾಗಿತ್ತು. ನಾವೆಲ್ಲರೂ ಕಣ್ಣೀರಿಡುತ್ತಲೇ ಅವರನ್ನು ಬೀಳ್ಕೊಟ್ಟೆವು. ನಮ್ಮ ಶಾಲೆಯ ಬಾಗಿಲು ಪುನಃ ಮುಚ್ಚಿ ಹೋಯಿತು.
---------------------o------------------------o----------------------------------o---------------------------0------------------0------
ನಾನು ಹಿಂದೆಯೇ ಬರೆದಂತೆ ನಮ್ಮ ತಂದೆಯವರು ತಮಗೆ ಶಿಂಗಪ್ಪಯ್ಯನವರು ದಾನವಾಗಿ  ಕೊಟ್ಟಿದ್ದ ಒಂದು ಎಕರೆ ಅಡಿಕೆ ತೋಟ ಮತ್ತು ಒಂದು ಖಂಡುಗ ಗದ್ದೆಯನ್ನು ಶ್ರೀನಿವಾಸಯ್ಯನವರ ಹೆಸರಿಗೆ "ನಂಬಿಕೆ ಖರೀದಿ ಪತ್ರ " ಮಾಡಿ ರಿಜಿಸ್ಟರ್ ಮಾಡಿದ್ದರು. ಅದಕ್ಕೆ ಬದಲಾಗಿ ಶ್ರೀನಿವಾಸಯ್ಯ ನಮ್ಮ ಸಂಸಾರದ ಸಂಪೂರ್ಣ ವಾರ್ಷಿಕ ಖರ್ಚನ್ನು ಹೊರಬೇಕೆಂದು ಒಂದು ಒಳ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದದಲ್ಲಿ  ತಂದೆಯವರು ನಮ್ಮ ದೊಡ್ಡಣ್ಣನೊಡನೆ ಪ್ರತಿದಿನ ಪುರದಮನೆಗೆ ಹೋಗಿ ಜಮೀನಿನ ಮೇಲ್ವಿಚಾರಣೆ ಇತ್ಯಾದಿಗಳನ್ನು ನೋಡಬೇಕೆಂದೂ ಇತ್ತುತೋಟ ನಮ್ಮ ಸುಪರ್ದಿನಲ್ಲಿಯೇ ಇದ್ದು ನಾವು ಬೆಳೆದ  ಅಡಿಕೆಯನ್ನು ಶ್ರೀನಿವಾಸಯ್ಯನವರಿಗೆ ಕೊಡುತ್ತಿದ್ದೆವು. ಆದರೆ ನಮ್ಮ ಜಮೀನಿನ ವಾರ್ಷಿಕ ಬೇಸಾಯ ಮಾಡುವುದನ್ನೇ ನಿಲ್ಲಿಸಲಾಯಿತು. ಬಿದ್ದುಹೋದ ಹಳೇ ಮರಗಳ ಬದಲಿಗೆ ಹೊಸ ಅಡಿಕೆ ಸಸಿಗಳನ್ನು ನೆಡದಿದ್ದರಿಂದ ತೋಟ ಸಂಪೂರ್ಣವಾಗಿ ಹಾಳು ಬಿದ್ದಿತ್ತು.  ನಮ್ಮ ಸಂಸಾರಕ್ಕೆ ತಕ್ಕಷ್ಟು ದಿನಸಿ ಇತ್ಯಾದಿಗಳನ್ನು ಪುರದಮನೆಯಿಂದ ನಮಗೆ ಕೊಡಲಾಗುತ್ತಿತ್ತು. ವ್ಯವಸ್ಥೆ ಕೆಲವು ವರ್ಷ ಚೆನ್ನಾಗಿಯೇ ನಡೆಯಿತು. ಗದ್ದೆಯ ಗೇಣಿಯಾಗಿ ನಮಗೆ ಖಂಡುಗ ಬತ್ತ ಬರುತ್ತಿತ್ತು. ಇದಲ್ಲದೆ ನಮಗೆ ಗೇಣಿಗೆ ಬೆಳವಿನಕೊಡಿಗೆಯವರ ಅರ್ಧ ಎಕರೆ ತೋಟವಿತ್ತು. ಆದರೆ ಅದಕ್ಕೂ  ಸರಿಯಾಗಿ ಬೇಸಾಯ ಮಾಡುತ್ತಿರಲಿಲ್ಲ. ಅದಕ್ಕೆ ನಮ್ಮ ತಂದೆಯ ನಿರಾಸಕ್ತಿಯೇ ಕಾರಣ.

ಶ್ರೀನಿವಾಸಯ್ಯನವರ ಯಜಮಾನಿಕೆಯಲ್ಲಿ ನಮ್ಮ ಗೌರಕ್ಕನ ಮದುವೆ  ಮತ್ತು ಪುಟ್ಟಣ್ಣನ ಉಪನಯನ ಎರಡೂ ಕ್ರಮವಾಗಿ ಆಗುಂಬೆ ಮತ್ತು ಹೊರನಾಡಿನಲ್ಲಿ ವಿಜೃಂಭಣೆಯಿಂದ ನೆರವೇರಿತ್ತು. ಆದರೆ ಅವರ ಮನೆಯಿಂದ  ನಮ್ಮ ಮನೆಗೆ ಬೇಕಾದ ದಿನಸಿ ಇತ್ಯಾದಿಗಳನ್ನು ತರುವ ಕ್ರಮ  ತುಂಬಾ ಮುಜುಗರದ್ದಾಗಿತ್ತು. ವ್ಯವಸ್ಥೆಯೇ ಒಂದು ದಿನ ನಮ್ಮ  ಕುಟುಂಬಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಕಳಚಿ ಬೀಳುವಂತೆ ಮಾಡಿತು. ನಮ್ಮ ತಂದೆಯವರು ಜಮೀನನ್ನು ಶ್ರೀನಿವಾಸಯ್ಯನವರ ಹೆಸರಿಗೆ ಪತ್ರ ಮಾಡುವಾಗ ಅವರು ನಮ್ಮ ಸಂಸಾರದ ಖರ್ಚನ್ನು ಹೊರಬೇಕೆಂದು ಯಾವುದೇ ದಾಖಲೆ ಮಾಡಿರಲಿಲ್ಲತಂದೆಯವರೇನೋ ಇನ್ನು ಮುಂದೆ ತಾವೇ ಜಮೀನು ರೂಢಿಮಾಡುವುದಾಗಿ ತೀರ್ಮಾನಿಸಿದರು. ಆದರೆ ಜಮೀನು ಶ್ರೀನಿವಾಸಯ್ಯನವರ ಹೆಸರಿನಲ್ಲಿದ್ದಿದ್ದರಿಂದ ಅವರು ಯಾವಾಗ ಬೇಕಾದರೂ ಅದರ ಬೆಳೆ ತೆಗೆಯಲು ಬರುವ ಸಾಧ್ಯತೆ ಇತ್ತು.

ಸಮಯದಲ್ಲಿ ನಮ್ಮ ಅಮ್ಮ ನಮ್ಮ ಅಣ್ಣನಿಗೆ ಸಂಸಾರದ ಪೂರ್ಣ ಜವಾಬ್ದಾರಿಯನ್ನು ಹೊರಿಸಿದಳುಅಲ್ಲದೆ ಹಣಕಾಸಿನ ವ್ಯವಹಾರದಲ್ಲಿ ಅವನಿಗೆ ಸಂಪಿಗೇಕೊಳಲು ಗಣೇಶರಾಯರ  ಮಾರ್ಗದರ್ಶನ ಸಿಕ್ಕ್ಕಿತುಗಣೇಶರಾಯರು ನಮ್ಮ ತಂದೆಯ ಸೋದರ ಮಾವನ  ಮಗ. ಯಾವುದೇ ಶಾಲೆಯಲ್ಲಿ ಓದಿಲ್ಲದಿದ್ದರೂ ಅವರು ಹಣಕಾಸಿನ  ವ್ಯವಹಾರದಲ್ಲಿ ತುಂಬಾ ಕುಶಲರಾಗಿದ್ದರುನಮ್ಮ ತೋಟವನ್ನು ಮೂರು ಭಾಗಗಳಾಗಿ ಮಾಡಿ  ಸರದಿಯ ಮೇಲೆ ವಾರ್ಷಿಕ ಬೇಸಾಯ ಮಾಡಲು ಪ್ರಾರಂಭ ಮಾಡಲಾಯಿತುಅಡಿಕೆ ಸಸಿಗಳನ್ನು ನಮ್ಮ ತೋಟದಲ್ಲೇ ಪಾತಿಮಾಡಿ ಬೆಳೆಸಿ ಖಾಲಿಬಿದ್ದ ಸ್ಥಳಗಳನ್ನೆಲ್ಲ ಭರ್ತಿ ಮಾಡಲಾಯಿತುಚಿಕ್ಕಮಗಳೂರು ಮತ್ತು ಕೊಪ್ಪ ಸಂತೆಗಳಿಗೆ ಪ್ರತಿವಾರವೂ ವೀಳ್ಯದೆಲೆ ಮತ್ತು ಬಾಳೆಕಾಯಿ ಕೊಂಡು ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು ತರಲಾಗುತ್ತಿತ್ತು.

ವರ್ಷ ಅಡಿಕೆ ಕೊಯ್ಲಿನ ಸಮಯದಲ್ಲಿ ನಾವು ನಮ್ಮ ಮನೆಯ ಅಡಿಕೆ ಸುಲಿತವಿಲ್ಲದಾಗ ಸಂಪಿಗೆಕೊಳಲು ಮತ್ತು ಕೆಳಗಿನ ಮನೆಗೆ ರಾತ್ರಿ ಅಡಿಕೆ ಸುಲಿತ  ಮಾಡಲು ಹೋಗಲಾರಂಭಿಸಿದೆವು. ಅದರಿಂದ ಸ್ವಲ್ಪ ಹಣ ದೊರೆಯತೊಡಗಿತು. ಇನ್ನೂ ಚಿಕ್ಕವರಾದ ನಾವು ಮೆಟ್ಟುಗತ್ತಿಗಳನ್ನು ರಾತ್ರಿ ಹೆಗಲಮೇಲೆ ಏರಿಸಿಕೊಂಡು ಅಡಿಕೆ ಸುಲಿಯಲು ಹೋಗುತ್ತಿದ್ದುದು ಇಂದು ಕನಸಿನಂತೆ ಕಾಣುತ್ತಿದೆ. ಅಡಿಕೆ ಸುಲಿತದ ಮಧ್ಯದಲ್ಲಿ ದೊಡ್ಡವರು ಊರಿನ ರಾಜಕೀಯ ಹಾಗೂ ಅವರ ಹಳೆಯ ನೆನಪುಗಳ ಬಗ್ಗೆ ಮಾತನಾಡುವುದನ್ನು ಕೇಳುತ್ತಾ ನಾವು ಅರೆನಿದ್ದೆಯಲ್ಲೇ ಅಡಿಕೆ ಸುಲಿಯುತ್ತಿದ್ದೆವು . ಒಮ್ಮೂಮ್ಮೆ ಮನೆಯ ಯಜಮಾನಿ ಸುಲಿತದ ಮಧ್ಯೆ ಎದ್ದು ಅಡಿಗೆ ಮನೆಗೆ ಹೋಗಿ ಚೆಕ್ಕುಲಿ, ಬೋಂಡ , ಇತ್ಯಾದಿಗಳಲ್ಲಿ ಯಾವುದಾದರೂ ಕುರುಕು ತಿಂಡಿ ಹಾಗೂ ಶುಂಠಿ ಬಿಸಿನೀರು ತಂದು ಎಲ್ಲರಿಗೂ ಕೊಡುವ ರೂಢಿಯಿತ್ತು. ಹಾಗಾಗಿ ನಾವು  ಸಂಪಿಗೆಕೊಳಲು ಮತ್ತು ಕೆಳಗಿನ ಮನೆ ಅತ್ತೆಯಂದಿರು ಯಾವಾಗ ಎದ್ದು ಒಳಗೆ ಹೋಗುವರೆಂದು ಅವರ ಕಡೆ ಆಗಾಗ ನೋಡುತ್ತಿದ್ದುದು ನೆನಪಿಗೆ ಬರುತ್ತಿದೆ.
ಪುಟ್ಟಣ್ಣನ ಬೀಡಿ  ವ್ಯಾಪಾರ
ನಮ್ಮ ಕೆಳಗಿನ ಮನೆಯಲ್ಲಿದ್ದ ಚಂದ್ರಣ್ಣ ಮನೆಯಲ್ಲೇ ಬೀಡಿ ಮತ್ತು ಬೆಂಕಿ ಪೊಟ್ಟಣದ ವ್ಯಾಪಾರ ಮಾಡುತ್ತಿದ್ದ. ಅವನು ಸಂಪಿಗೇಕೊಳಲು ಗಣೇಶರಾಯರ  ಸಹೋದರಿಯ ಮಗ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು (ಅಂಬುತೀರ್ಥ ಶ್ಯಾಮರಾಯ ದಂಪತಿಗಳು) ಕಳೆದುಕೊಂಡ ಚಂದ್ರಣ್ಣ ಮತ್ತು ಅಶ್ವತ್ಥಣ್ಣನನ್ನು ಸೋದರ ಮಾವ ಗಣೇಶಯ್ಯನವರೇ ಸಾಕಬೇಕಾಯಿತು. ಚಂದ್ರಣ್ಣನೂ ಸಂಪಿಗೇಕೊಳಲು ಸೇರಿದಾಗ ಅವನ ಬೀಡಿ  ವ್ಯಾಪಾರ ನಿಂತು ಹೋಯಿತು. ಅವನ ಮುಖ್ಯ ಗಿರಾಕಿಗಳು ನಮ್ಮ ತಂದೆ ಮತ್ತು ಮಾವ ಗಣೇಶಯ್ಯನವರೇ! ದಿನಗಳಲ್ಲಿ ಒಂದು ಕಟ್ಟು ಬೀಡಿಗೆ ಎರಡು ಆಣೆ ಮತ್ತು ಒಂದು ಬೆಂಕಿ ಕಡ್ಡಿ ಪೊಟ್ಟಣಕ್ಕೆ ಒಂದು ಆಣೆ ಬೆಲೆ  ಇತ್ತು. ನಾವು ಕೇಳಿದ ಪ್ರಕಾರ ಒಂದು ಡಜನ್ ಬೀಡಿ ಕಟ್ಟನ್ನು ಮಾರಿದರೆ ಒಂದು ಬೀಡಿ ಕಟ್ಟಿನ  ಲಾಭ ಬರುತ್ತಿತ್ತಂತೆ.

ನಮ್ಮ ಪುಟ್ಟಣ್ಣ ನಾಲ್ಕನೇ ತರಗತಿ ಮುಗಿಸಿ ಮನೆ ಸೇರಿದ್ದರಿಂದ ಅವನಿಗೆ ನಮ್ಮ ಮನೆಯಲ್ಲೇ ಬೀಡಿ  ವ್ಯಾಪಾರ ಮಾಡಲು ಏರ್ಪಾಟಾಯಿತುಅಣ್ಣಯ್ಯನಿಂದ ಪುಟ್ಟಣ್ಣ ಲೆಕ್ಕ ಬರೆಯುವ ಕ್ರಮ ತಿಳಿದುಕೊಂಡ. ಸಂಪಿಗೇಕೊಳಲು ಗಣೇಶರಾಯರ ಬೀಡಿ  ಲೆಕ್ಕವನ್ನು ಒಂದು ಖಾಲಿ ಪುಸ್ತಕದಲ್ಲಿ ಬರೆದಿಡ ಬೇಕಿತ್ತು. ಅವರು ಒಂದು ತಿಂಗಳಿಗೊಮ್ಮೆ ಲೆಕ್ಕದ ಮೊತ್ತ ಬರೆಸಿ ಲೆಕ್ಕ ಚುಕ್ತಾ ಮಾಡುತ್ತಿದ್ದರು. ಪುಟ್ಟಣ್ಣನಿಗೆ ಅದು ಅವನ ಜೀವನದ ಮೊದಲ ಹಣಕಾಸಿನ ವ್ಯವಹಾರವಾಗಿತ್ತು. ಅವನು ಅದರಲ್ಲಿ ಎಷ್ಟು ಲಾಭ ಮಾಡಿದನೆಂಬ ರಹಸ್ಯ ಕೇವಲ ಅವನಿಗೆ ಮಾತ್ರ ಗೊತ್ತು!

ವರ್ಷ ಮೊದಲ ಬಾರಿಗೆ ನಮ್ಮ ಮನೆಯಲ್ಲಿ ಬತ್ತವನ್ನು ಇಡಲು ಒಂದು ಖಣಜ ಕಟ್ಟಲಾಯಿತು. ಮೇಲಿನಕೊಡಿಗೆ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರಿಗೆ ಭತ್ತಕ್ಕಾಗಿ ಸ್ವಲ್ಪ ಸಾಲ ಕೊಟ್ಟಿದ್ದರಿಂದ ಅವರು ಕೊಟ್ಟ ಬತ್ತ ಮತ್ತು ನಮಗೆ ಚಿಟ್ಟೆಮಕ್ಕಿ ಮಂಜನಿಂದ ಬಂದ ಐದು ಖಂಡುಗ ಬತ್ತ  ಸೇರಿ ನಮ್ಮ ಬತ್ತದ ಖಣಜ ತುಂಬಿ ಹೋಯಿತು. ಮಳೆಗಾಲಕ್ಕೆ ಬೇಕಾದ ಎಲ್ಲ ಸಾಮಾನುಗಳನ್ನುಬೇಸಿಗೆಯಲ್ಲೇ ತಂದು ಒಣಗಿಸಿ ಶೇಖರಣೆ ಮಾಡಲಾಯಿತುಯುಗಾದಿ ಹಬ್ಬಕ್ಕೆ ಮನೆಯವರಿಗೆಲ್ಲಾ ಹೊಸ ಬಟ್ಟೆ ತರಲು ಸಂಪಿಗೇಕೊಳಲು ಮಾವಯ್ಯನವರ ಹತ್ತಿರ ಪೂರ್ತಿ ಒಂದು ನೂರು ರೂಪಾಯಿ ಠೇವಣಿ ಇಡಲಾಯಿತು. ಒಟ್ಟಿನಲ್ಲಿ ಅಣ್ಣನ ಆಡಳಿತದಲ್ಲಿ ನಮ್ಮ ಮನೆ ನೆಮ್ಮದಿಯನ್ನು ಕಂಡಿತು.

ಆದರೆ ವರ್ಷದ ಅಡಿಕೆ ಕೊಯ್ಲು ಪೂರ್ತಿ ನಮ್ಮ ಕುಟುಂಬದ ನೆತ್ತಿಯ ಮೇಲೆ ಒಂದು ಕತ್ತಿ ನೇತಾಡುತ್ತಿತ್ತುಅದಕ್ಕೆ ಕಾರಣ ಪುರದಮನೆ ಶ್ರೀನಿವಾಸಯ್ಯನವರು ನಮ್ಮ ತೋಟದ ಅಡಿಕೆ ಕೊನೆ ತೆಗೆಸಲು ಬರುತ್ತಾರೆಂದು ಆಗಾಗ ಬರುತ್ತಿದ್ದ ಸುದ್ಧಿಗಳು. ಸಮಾಚಾರ ಕೇಳುತ್ತಲೇ ನಮ್ಮ ತಂದೆಯವರು ಸೂರಿನಿಂದ ಒಂದು ಕತ್ತಿಯನ್ನು ಹೊರತೆಗೆದು ಅಡಿಕೆ ಕೊನೆ ತೆಗೆಯುವನ ಕಾಲನ್ನು ಕಡಿಯಲು ತಯಾರಿ ಮಾಡುತ್ತಿದ್ದರು!  ಆದರೆ ಅದೃಷ್ಟವಶಾತ್ ಪ್ರಸಂಗವೆಂದೂ ಬರಲಿಲ್ಲನಮಗೆ ಮಾತ್ರ ಆಗಾಗ ಅಪ್ಪ ಕೊನೆ ತೆಗೆಯುವನ ಕಾಲು ಕಡಿದಂತೆ ಮತ್ತು ಆಮೇಲೆ ನರಸಿಂಹರಾಜಪುರದ ಕೋರ್ಟಿಗೆ ಅಲೆಯುತ್ತಿದ್ದಂತೆಯೂ ಕನಸು ಬೀಳುತ್ತಿತ್ತು.

ನನಗೆ ಆವೇಳೆಗೆ ಶಾಲೆಗೆ ಹೋಗುತ್ತಿದ್ದ ನೆನಪೇ ಪುನಃ ಜಾರಿಹೋಗತೊಡಗಿತ್ತು. ಆಗ ಇದ್ದಕಿದ್ದಂತೆ ಸಮಾಚಾರ ಒಂದು ಬಂತು. ವಿಶ್ವೇಶ್ವರಯ್ಯ ಎಂಬ ಹೊಸ ಮೇಷ್ಟರು ನಾರ್ವೆಯಿಂದ ನಮ್ಮ ಸ್ಕೂಲಿಗೆ ಬಂದಿರುವರಂತೆ! ಶಾಲೆಯ ಬಾಗಿಲು ಪುನಃ ತೆರೆದಿದೆಯಂತೆಆದರೆ ಶಾಲೆ ಪುರದಮನೆಯಲ್ಲಿ ಇತ್ತು. ಮತ್ತು ಆವೇಳೆಗೆ ನಮ್ಮ ಮತ್ತು ಪುರದಮನೆಯವರ ಭಾಂಧವ್ಯ ಸಂಪೂರ್ಣವಾಗಿ  ಕಡಿದು ಹೋಗಿತ್ತು.
----ಮುಂದುವರಿಯುವುದು ---



Sunday, May 21, 2017

ನನ್ನ ಬಾಲ್ಯ


ಅಧ್ಯಾಯ ೨೩
ಬೆಳವಿನಕೊಡಿಗೆಯವರಿಗೆ ಅಡಿಕೆ ತೋಟದೊಂದಿಗೆ ಕಾಫಿ ತೋಟ ಮತ್ತು ಬತ್ತದ ಗದ್ದೆಗಳೂ ಇದ್ದುವು. ಹೆಚ್ಚಿನ ಗದ್ದೆಗಳು ಗೇಣಿಗೆ  ಕೊಡಲ್ಪಟ್ಟಿದ್ದುವು . ಅದರಲ್ಲಿ ಹೆಚ್ಚಿನವು ಚಿಟ್ಟೆಮಕ್ಕಿ ಎಂಬಲ್ಲಿದ್ದುವು. ಚಿಟ್ಟೆಮಕ್ಕಿಯ ಬಗ್ಗೆ ಬರೆಯದಿದ್ದರೆ ಬೆಳವಿನಕೊಡಿಗೆ ಕಥೆಯೇ ಅಪೂರ್ಣ ಎಂದು ಹೇಳಲೇ ಬೇಕು.

ಚಿಟ್ಟೆಮಕ್ಕಿಯ ಸಂಸಾರಗಳೆಲ್ಲಾ ಮಡಿವಾಳ (ದೋಬಿ) ಕುಲಕ್ಕೆ ಸೇರಿದ್ದುವು ಸಂಸಾರಗಳು ತಲೆತಲಾಂತರದಿಂದ ಬೆಳವಿನಕೊಡಿಗೆ ಜಮೀನನ್ನು ಗೇಣಿ ಮಾಡುತ್ತ ಅವರ ಅಡಿಕೆ ತೋಟದ ಆಕಾರ ಅಂದರೆ ಅಡಿಕೆ ಕೊಯ್ಲಿನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದವು. ಅದಕ್ಕೆ ಅವರಿಗೆ ನಿಗದಿಯಾದ ಹಣವನ್ನು ನೀಡಲಾಗುತ್ತಿತ್ತು. ಕೇವಲ  ಬತ್ತ  ಬೆಳೆದು ಜೀವನ  ಸಾಗಿಸಲಾಗದ್ದರಿಂದ ಅವರು ತಮ್ಮ ಕುಲ ಕಸುಬಾದ ಬಟ್ಟೆ ಒಗೆದು ಕೊಡುವುದು ಮಾತ್ರವಲ್ಲದೆ ನಮ್ಮೂರಿನ ಬೇರೆ ಬೇರೆ ಮನೆಗಳಲ್ಲಿ ಜಮೀನಿಗೆ ಸಂಬಂಧಿಸಿದ ಕೂಲಿ ಕೆಲಸವನ್ನು ಕೂಡ ಮಾಡುತ್ತಿದ್ದರು. ಸಾಮಾನ್ಯವಾಗಿ ಇವರ ಹೆಸರುಗಳು ಕೇವಲ ಎರಡು ಅಕ್ಷರಗಳಲ್ಲಿ ಇರುತ್ತಿದ್ದವು. ಉದಾಹರಣೆಗೆ ಮಂಜ, ತಿಮ್ಮ, ಹೂವರುದ್ರ, ದುಗ್ಗ, ನಾಗ, ಸೂರ ಮತ್ತು ಸಿಂಗ  ಹಾಗೂ ಶೇಷಿ, ರುಕ್ಕಿ, ಬೆಳ್ಳಿ, ಲೋಕಿ, ಚಿನ್ನಿ ಮತ್ತು ಸುಬ್ಬಿ.

ಸಂಸಾರಗಳಿಗೆ ಮಂಜ ಎಂಬುವನು ಮುಖ್ಯಸ್ಥನಾಗಿದ್ದ. ಅವನಿಗೆ ಉಳಿದೆಲ್ಲರಿಗಿಂತ ಹೆಚ್ಚು ಗೇಣಿ ಜಮೀನು  ಇತ್ತುಮಂಜನೊಬ್ಬ ಪರಿಣಿತ ಬೇಟೆಗಾರನೂ ಆಗಿದ್ದ. ನಮ್ಮ ನೆರೆಮನೆಯ ಕಿಟ್ಟಜ್ಜಯ್ಯನವರ ಮೇಲೆ ಕಾಡು  ಹಂದಿಯೊಂದು ಆಕ್ರಮಣ ಮಾಡಿದಾಗ ಅದು ಮಂಜನ ಕೋವಿಗೆ ಬಲಿಯಾಗಿತ್ತು. ನಾವು ನೋಡುವ ವೇಳೆಗೆ ಮಂಜ ಎಂಬತ್ತು ವರ್ಷದ ಮುದುಕನಾಗಿದ್ದ. ಮಂಜನ ಹೆಂಡತಿ ಶೇಷಿ. ಅವರಿಗೆ ರುಕ್ಕಿ ಮತ್ತು ಸುಬ್ಬಿ ಎಂಬ ಹೆಣ್ಣು ಮಕ್ಕಳುಅವರ  ಒಬ್ಬನೇ ಮಗ ತಿಮ್ಮ ತಂದೆಗೆ ಯಾವುದೇ ರೀತಿಯಲ್ಲಿ ಸರಿ ಸಾಟಿಯಾಗಿರಲಿಲ್ಲಹಾಗಾಗಿ  ಸಂಸಾರ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು. ಆದರೆ ಅದನ್ನು ಪುನಃ ಪಡೆಯಲು ಹೋರಾಟ ಮಾಡುತ್ತಲೇ ಇತ್ತು.

ನಮ್ಮ ಬಾಲ್ಯದಲ್ಲಿ ನಾವು ಮಂಜನ ಸಂಸಾರಕ್ಕೂ ಮತ್ತು ಚಿಟ್ಟೆಮಕ್ಕಿಯ ಉಳಿದ ಸಂಸಾರಗಳಿಗೂ ಆಗಾಗ ನಡೆಯುತ್ತಿದ್ದ ಕದನದ ಕಥೆಗಳನ್ನು ಕೇಳಿ ಖುಷಿಪಡುತ್ತಿದ್ದೆವು ಕಥೆಗಳನ್ನು  ಅದರಲ್ಲಿ ಪಾತ್ರವಹಿಸಿದ ಪ್ರಮುಖ ವ್ಯಕ್ತಿಗಳ ಬಾಯಿಂದಲೇ ಕೇಳಿದಾಗ ನಮಗಾಗುತ್ತಿದ್ದ ರೋಮಾಂಚನ ಅಷ್ಟಿಟ್ಟಲ್ಲ. ನಾವು ಕಥೆಗಳಿಗೆ ಚಿಟ್ಟೆಮಕ್ಕಿಯ ಮೊದಲನೇ ಮತ್ತು ಎರಡನೇ ಮಹಾ ಯುದ್ಧಗಳೆಂದು  (ಪಾಣಿಪಟ್ ಯುದ್ಧಗಳಂತೆ)  ಹೇಳುತ್ತಿದ್ದೆವು. ಅಡಿಕೆ ಸುಲಿತ ನಡೆಯುತ್ತಿರುವಾಗ ರಾತ್ರಿಯಲ್ಲಿ ಕಥೆಗಳನ್ನು ಕೇಳುವುದೇ ಒಂದು ಸಂಭ್ರಮದ ವಿಷಯವಾಗಿತ್ತು.

ಚಿಟ್ಟೆಮಕ್ಕಿಯ ಮೊದಲನೇ ಮಹಾಯುದ್ಧ  ತುಂಬಾ ವಿಶಿಷ್ಟದ್ದಾಗಿತ್ತು. ಏಕೆಂದರೆ ಅದು ಸುಬ್ಬನೆಂಬ ಒಂಟಿ ಮಹಾಯೋಧನ ವಿರುದ್ಧ ತುಂಬಾ ಬಲಶಾಲಿಯಾಗಿದ್ದ ಮಂಜನ ಕುಟುಂಬ ನಡೆಸಿದ ಮಹಾಯುದ್ಧವಾಗಿತ್ತು. ನೀವು ಪ್ರಾಯಶಃ ನಂಬಲಾರಿರಿ. ಏಕೆಂದರೆ ಅದರಲ್ಲಿ ವಿಜಯಿಯಾದವನು ಒಂಟಿ ಯೋಧನಾದ  ಸುಬ್ಬನೇ! ಆದರೆ ಯುದ್ಧದಲ್ಲಿ ಸೋತುಹೋದ  ಮಂಜನ ಪ್ರಬಲ  ಸೇನೆಯ ಸೋಲಿಗೆ ಕಾರಣ  ಕಂಡು ಹಿಡಿಯಲು ಯಾವುದೇ ಸಮಿತಿಯನ್ನು ನೇಮಕ ಮಾಡುವ ಅವಶ್ಯಕತೆ ಇರಲಿಲ್ಲ. ಕಾರಣ ತುಂಬಾ ಸ್ಪಷ್ಟವಾಗಿತ್ತು. ಏಕೆಂದರೆ ಮಂಜನ ಸೇನೆ ಯುದ್ಧಕ್ಕೆ ಬರಿಯ ಕೈ ಕಾಲುಗಳನ್ನು ಬಳಸಿದರೆ, ಪರಮವೀರನಾದ ಸುಬ್ಬ ಕಾಲಕ್ಕೆ ತುಂಬಾ ಪ್ರಸಿದ್ಧ ಅಸ್ತ್ರವಾಗಿದ್ದ ದೊಣ್ಣೆಯನ್ನು ಬಳಸಿದ್ದ! ಇಲ್ಲಿ ಕಥೆಯನ್ನು ಸ್ವಲ್ಪ ವಿಶದವಾಗಿ ಹೇಳುವುದು ಒಳಿತೆಂದು ಅನ್ನಿಸುತ್ತಿದೆ.

ಸುಬ್ಬನೊಬ್ಬ  ಆರಡಿ ಎತ್ತರದ ದೃಢಕಾಯ ತರುಣ. ಅವನಿಗೆ ಸಮೀಪದ ಇನ್ನೊಂದು ಊರಿನ ಲೋಕಿ ಎಂಬುವಳೊಡನೆ ಆಗ ತಾನೇ ವಿವಾಹವಾಗಿತ್ತು. ನವದಂಪತಿಗಳು  ವಿವಾಹದ  ಮೊದಲ ದಿನಗಳನ್ನು ತುಂಬಾ ಸಂಭ್ರಮದಿಂದ ಕಳೆಯುತ್ತಿದ್ದರು. ಇದು ಮಂಜನ ಕುಟುಂಬದ ಉರಿಗಣ್ಣಿಗೆ ಬಿತ್ತು. ಹೊಟ್ಟೆ ಕಿಚ್ಚನ್ನು ಸಹಿಸಲಾರದ ಕುಟುಂಬ ಒಂದು ರಾತ್ರಿ ಯಾವುದೇ ಕಾರಣವಿಲ್ಲದೇ ಸುಬ್ಬನ ಮನೆಯ ಮುಂದೆ ಒಟ್ಟಾಗಿ ಸೇರಿ ಕಾಲ್ಕೆರೆದು ಜಗಳ ಪ್ರಾರಂಭಿಸಿತು. ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತು.

ತಮ್ಮ ಮಹಾ ಸೇನೆಯ ಮುಂದೆ ಒಂಟಿ ಸುಬ್ಬ ಏನೂ ಮಾಡಲಾರನೆಂದು ಮಂಜನ ಕುಟುಂಬ ಭಾವಿಸಿತ್ತು. ಆದರೆ ಅವರಿಗೆ ಸುಬ್ಬನ ಸಿಟ್ಟಿನ ಹಾಗೂ ಶಕ್ತಿಯ ಅರಿವಿರಲಿಲ್ಲ. ತಾಳ್ಮೆ ಕಳೆದುಕೊಂಡ ಸುಬ್ಬ ಯಾವುದಾದರೂ ಅಸ್ತ್ರ ಸಿಗುವುದೇ ಎಂದು ಆಚೀಚೆ ನೋಡಿದ. ಆದರೆ ಏನೂ ಸಿಗದಿದ್ದಾಗ ನಿರಾಶನಾಗದೇ ಪಕ್ಕದಲ್ಲಿದ್ದ ಬೇಲಿಯಿಂದ ಒಂದು ಬಲವಾದ ಗೂಟವನ್ನು ಕಿತ್ತು ಹೊರತೆಗೆದ. ಅದನ್ನು ಮಿಂಚಿನ ವೇಗದಲ್ಲಿ ತಿರುಗಿಸುತ್ತಾ ಮಂಜನ ಸೇನೆಯ ಮೇಲೆ ಪ್ರತಿ ದಾಳಿ ಮಾಡಿದ. ಮಂಜನ ಸೇನೆಯ ಮುಂದಿದ್ದ ಒಬ್ಬೊಬ್ಬ ಗಂಡಸಿಗೂ ಸುಬ್ಬನ ದೊಣ್ಣೆಯ ರುಚಿ ತಗಲ ತೊಡಗಿತು. ಸೇನೆಯ ಹಿಂದಿದ್ದ ಹೆಂಗಸರ ಮೇಲೆ ದೊಣ್ಣೆ ಬೀಸುವ ಪ್ರಸಂಗವೇ ಬರಲಿಲ್ಲ. ಏಕೆಂದರೆ ಅವರೆಲ್ಲ ಮನೆ ಸೇರಿ ಬಾಗಿಲು ಭದ್ರ ಮಾಡಿಕೊಂಡರು. ಹೇಡಿಗಳಾದ ಗಂಡಸರು  ದೊಣ್ಣೆಯ ಪೆಟ್ಟಿನ ರುಚಿ ನೋಡುತ್ತಾ ಕಾಲಿಗೆ ಬುದ್ಧಿ ಹೇಳಿದರು. ಏಕಾಂಗಿಯಾದ ಸುಬ್ಬನ ಪರಾಕ್ರಮ ವೀರ ಅಭಿಮನ್ಯುವಿನ ಹೋರಾಟಕ್ಕೇನೂ ಕಡಿಮೆ ಇತ್ತೆಂದು ನಮಗನ್ನಿಸಲಿಲ್ಲ. ಆದರೆ ವೀರ ಅಭಿಮನ್ಯು ತನ್ನ ಪ್ರಾಣವನ್ನೇ ತೆತ್ತಿದ್ದರೆ ಸುಬ್ಬ ಯುದ್ಧದಲ್ಲಿ ಸಂಪೂರ್ಣ ವಿಜಯ ಗಳಿಸಿದ್ದ!

ಚಿಟ್ಟೆಮಕ್ಕಿಯ ಎರಡನೇ ಮಹಾಯುದ್ಧ  ಕೂಡ ತುಂಬಾ ರೋಚಕವಾಗಿತ್ತು. ಬಾರಿ  ಮಂಜನ ಕುಟುಂಬದ ವೈರಿಗಳ ಸಂಖ್ಯೆ ಎರಡರಷ್ಟಾಗಿತ್ತು! ಯುದ್ಧದಲ್ಲಿ ಮಂಜನ  ಸೇನೆ ಅಣ್ಣ ತಮ್ಮಂದಿರಿಬ್ಬರ ಜಂಟಿ ಸೇನೆಯ ಮೇಲೆ ಕಾಳಗ ಮಾಡಿತ್ತು. ಹೂವ ಎಂಬ ಹೆಸರಿನ ಮಧ್ಯ ವಯಸ್ಕನೊಬ್ಬನಿಗೆ ಮಕ್ಕಳಿರಲಿಲ್ಲ. ಅವನು ತನ್ನ ಸಹೋದರಿಯ ಮಕ್ಕಳಿಬ್ಬರನ್ನು ದತ್ತು ಪಡೆದು ಸಾಕಿದ್ದ. ದೊಡ್ಡವನಿಗೆ ಸಿಂಗ (ಸಿಂಹ) ಎಂದು ಮತ್ತು ಚಿಕ್ಕವನಿಗೆ ಸೂರ ಎಂದೂ ನಾಮಕರಣ ಮಾಡಿದ್ದ. ಯಾವುದೊ ಕಾರಣದಿಂದ ಮಂಜನ ಕುಟುಂಬಕ್ಕೆ ಹೂವನ ಮೇಲೆ  ದ್ವೇಷ ಇತ್ತು.

ಒಂದು ರಾತ್ರಿ ಕುಟುಂಬಗಳ ನಡುವಿನ ಕಲಹ ವಿಪರೀತಕ್ಕೇರಿತು. ಆರಂಭದ  ಮಾತಿನ ಜಗಳದಲ್ಲಿ ಮಂಜನ ಕುಟುಂಬದ ಕೈ ಮೇಲಾಯಿತು. ಕಾರಣವಿಷ್ಟೇ. ಹೂವನಿಗೆ ಗಂಟಲಿನ ಕಾಯಿಲೆ ಇದ್ದರಿಂದ ಅವನಿಗೆ ತನ್ನ ಧ್ವನಿ ಏರಿಸಿ ಮಾತನಾಡಲು ಆಗುತ್ತಿರಲಿಲ್ಲ. ಮಂಜನ ಕುಟುಂಬ ತಾವು ಗೆದ್ದೆವೆಂದೇ  ಭಾವಿಸಿತು. ಆದರೆ ಕುಟುಂಬಕ್ಕೆ  ಹೂವನ ಸಾಕು ಮಕ್ಕಳಿಬ್ಬರ ಶೌರ್ಯದ ಅರಿವಿರಲಿಲ್ಲ. ಸಿಂಗ-ಸೂರ ಜೋಡಿಗೆ ತಮ್ಮ ಮಾವನಿಗಾಗುತ್ತಿದ್ದ ಅಪಮಾನವನ್ನು ಸಹಿಸಲಾಗಲಿಲ್ಲ. ಸಿಂಗನು ಸಿಂಹದಂತೆ ಗರ್ಜನೆ ಮಾಡುತ್ತಾ ಶತ್ರುಗಳ ಮೇಲೆ ಜಿಗಿದರೆ, ಸೂರನು ಶೌರ್ಯದಿಂದ ಅವರ ಮೇಲೆ ಎಗರಿದ! ಅಣ್ಣ ತಮ್ಮಂದಿರು ತಮ್ಮ ಕೈಗೆ ಸಿಕ್ಕಿದ ವಸ್ತುಗಳನ್ನೇ (ಪೊರಕೆಗಳೂ ಸೇರಿಅಸ್ತ್ರವಾಗಿ ಬಳಸಿ  ನಡೆಸಿದ ದಾಳಿಗೆ ಮಂಜನ ಸೇನೆ ಬೆದರಿ ಹಿಮ್ಮೆಟ್ಟಿತು. ಅದು ಯಾವ ಬಗೆಯ ಏಟು ತಿಂದಿತ್ತೆಂದರೆ ಪುನಃ ಸೇನೆ ಒಂದಾಗಲೇ ಇಲ್ಲ. ಹಾಗಾಗಿ ಪಾಣಿಪಟ್ ಯುದ್ಧದ ಹಾಗೆ ಮೂರನೇ ಚಿಟ್ಟೆಮಕ್ಕಿ ಯುದ್ಧ ನಡೆಯುವ ಪ್ರಸಂಗವೇ ಬರಲಿಲ್ಲ. ಅದು ಎರಡಕ್ಕೆ ಮುಕ್ತಾಯವಾಗಿ ಮಂಜನ ಕುಟುಂಬದ ಪ್ರಾಮುಖ್ಯತೆ ಕೊನೆಗೊಂಡಿತು.
---------0-----------0------------0------------0-----------0-----------------0-------------0------------0-----------0-
೧೯೫೦ನೇ ದಶಕದ  ಕೊನೆಯ ಭಾಗದಲ್ಲಿ ನಮ್ಮ ಬೆಳವಿನಕೊಡಿಗೆ ಗ್ರಾಮದ ಪುನರುಜ್ಜೀವನ ಆಯಿತೆಂದು ಹೇಳಬೇಕು. ವಯಸ್ಕರ ಶಿಕ್ಷಣ ಸಮಿತಿಯಿಂದ ನಮ್ಮೂರಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆದುವು. ನಮ್ಮೂರಿನ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ವಯಸ್ಕರಿಗಾಗಿ ಒಂದು ರಾತ್ರಿ ಶಾಲೆಯನ್ನೂ ಸ್ವಲ್ಪ ದಿನ ನಡೆಸಲಾಯಿತು. ಶ್ರೀ ವಿದ್ಯಾತೀರ್ಥ ಪುಸ್ತಕ ಭಂಡಾರ ಎಂಬ ಹೆಸರಿನಲ್ಲಿ ಸಾರ್ವಜನಿಕ ಪುಸ್ತಕ ಭಂಡಾರವನ್ನು ಬೆಳವಿನಕೊಡಿಗೆ ಮನೆಯಲ್ಲಿ ಸ್ಥಾಪನೆ ಮಾಡಲಾಯಿತು. ಅದಕ್ಕೆ ಪುಸ್ತಕಗಳನ್ನು ದಾನಮಾಡಿದವರಲ್ಲಿ ಮುಖ್ಯರೆಂದರೆ ಹುರುಳಿಹಕ್ಲು ಲಕ್ಷ್ಮೀನಾರಾಯಣ ರಾವ್, ಬೆಳವಿನಕೊಡಿಗೆ ಎಲ್ಲಪ್ಪಯ್ಯ, ಹೊಸಳ್ಳಿ ತಿಮ್ಮಪ್ಪ ಮತ್ತು ಅದೇಖಂಡಿ ರಾಮಕೃಷ್ಣ ರಾವ್ (ನಮ್ಮಣ್ಣ).  ಬಗ್ಗೆ ಪ್ರಜಾವಾಣಿಯಲ್ಲಿ ಒಂದು ವರದಿ ಕೂಡ ಬಂತು. ನಮಗೆ ನಮ್ಮಣ್ಣನ ಹೆಸರನ್ನು ಪೇಪರಿನಲ್ಲಿ  ಓದಿ ಆದ  ಸಂತೋಷ ಅಷ್ಟಿಟ್ಟಲ್ಲ.

ನಮಗೆ ಬೆಳವಿನಕೊಡಿಗೆ  ಎಲ್ಲಪ್ಪಯ್ಯನವರ ಹೆಸರನ್ನು ಮರೆಯದಿರಲು ಅನೇಕ ಕಾರಣಗಳಿವೆ. ನಾವು ಚಿಕ್ಕವರಾಗಿದ್ದಾಗ ಅವರಿನ್ನೂ ೨೫ ವರ್ಷದ ತರುಣ. ಬೆಳವಿನಕೊಡಿಗೆ ಮನೆಯ ಸಮೀಪದ ಬೆಟ್ಟದ ಬುಡದಲ್ಲಿ ಒಂದು ವಿಶಾಲವಾಗಿ ಹರಡಿದ ಸಂಪಿಗೆ ಮರವಿತ್ತು. ನೆಲದಿಂದ ಕಡಿಮೆ ಎತ್ತರದಲ್ಲಿದ್ದ ಅದರ ಕೊಂಬೆಗಳನ್ನೇರಿ ಹೂವು ಕೊಯ್ಯುವುದು ನಮಗೆ ತುಂಬಾ ಸಂತೋಷದ ಕೆಲಸವಾಗಿತ್ತು. ಒಂದು ದಿನ ಬೆಳಿಗ್ಗೆ ನಾನೂ ಪುಟ್ಟಣ್ಣನೂ ಒಟ್ಟಿಗೆ ಹೂವು ಕೊಯ್ಯುತ್ತಿದ್ದೆವು. ನಾನು ಇದ್ದಕ್ಕಿದ್ದಂತೆ ಕಾಲು ಜಾರಿ ಮರದಿಂದ ಕೆಳಗೆ ಬಿದ್ದೆ. ಬಿದ್ದ ರಭಸಕ್ಕೆ ನನ್ನ ಪ್ರಜ್ಞೆ ತಪ್ಪಿತು. ಪುಟ್ಟಣ್ಣನಿಗೆ ಗಾಬರಿಯಾಗಿ  ಮನೆಯವರಿಗೆ ತಿಳಿಸಲು ಓಡಿ  ಹೋದಯಾರಿಂದಲೋ ವಿಷಯ ತಿಳಿದ ಎಲ್ಲಪ್ಪಯ್ಯನವರು ನನ್ನ ಮುಖಕ್ಕೆ ನೀರು ಚಿಮುಕಿಸಿ  ಎಚ್ಚರಗೊಳಿಸಿ ಹೆಗಲಮೇಲೆ ಹಾಕಿಕೊಂಡು ಮನೆಗೆ ಎತ್ತಿಕೊಂಡು ಹೋದರು. ಆಮೇಲೆ ನನ್ನ ಎಡಕೈನಲ್ಲಿ ಮೂಳೆ ಮುರಿದದ್ದು ಗೊತ್ತಾಗಿ ಕೊಪ್ಪದ ಆಸ್ಪತ್ರೆಗೆ ಹೋಗಬೇಕಾಯಿತು. ಅಲ್ಲಿ ಆಗ ಮುಂದೆ ತುಂಬಾ ಪ್ರಸಿದ್ಧಿ ಪಡೆದ ಡಾಕ್ಟರ್ ಕಾಂತರಾಜ್ ಅವರು ನನ್ನ ಕೈಗೆ ಬ್ಯಾಂಡೇಜ್ ಸುತ್ತಿದ್ದರು. ಅದು ಆಸ್ಪತ್ರೆಗೆ ನನ್ನ ಮೊದಲ ಭೇಟಿಯಾಗಿತ್ತು.

ನಮಗೆ ಬಾಲ್ಯದಲ್ಲಿ ಚಂದಮಾಮ ಕೊಟ್ಟಷ್ಟು ಖುಷಿ ಬೇರೆಯಾವುದರಿಂದಲೂ ದೊರೆತಿರಲಿಲ್ಲ. ನಮ್ಮ ಇಡೀ ಊರಿನಲ್ಲಿ ಕೇವಲ ಎಲ್ಲಪ್ಪಯ್ಯನವರು ಮಾತ್ರ ಅದರ ಚಂದಾದಾರರಾಗಿದ್ದರು. ಅದನ್ನು ಕೊಪ್ಪದಲ್ಲಿದ್ದ  ನ್ಯಾಷನಲ್ ಸ್ಟೋರ್ಸ್ ನಿಂದ ತರಬೇಕಾಗಿತ್ತು. ಎಷ್ಟೋ ಬಾರಿ ನಮ್ಮಣ್ಣ ಅದನ್ನು ಕೊಪ್ಪದಿಂದ ತರುತ್ತಿದ್ದರು. ನಾವು ಅದನ್ನು ಓದಿದ ನಂತರ ಬೆಳವಿನಕೊಡಿಗೆಗೆ  ತಲುಪಿಸುತ್ತಿದ್ದೆವು. ಹಾಗೂ ಅಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ ಹೋದಾಗ ಉಪ್ಪರಿಗೆಯ ಮೇಲಿದ್ದ ಬೀರುವಿನಿಂದ ಎಲ್ಲಾ ಹಳೆಯ ಚಂದಮಾಮಗಳನ್ನು ತೆಗೆದು ಓದುತ್ತಿದ್ದೆವು.

ನಮ್ಮೂರಿನಲ್ಲಿ ಮೊಟ್ಟ ಮೊದಲ ಟರ್ಲಿನ್ ಶರ್ಟ್ ಧರಿಸಿದವರು ಎಲ್ಲಪ್ಪಯ್ಯ. ಅದು ಕಾಲದಲ್ಲಿ ಕೇವಲ ಶ್ರೀಮಂತರು ಮಾತ್ರ ಧರಿಸಬಲ್ಲ ವಸ್ತುವಾಗಿತ್ತು. ಎಲ್ಲಪ್ಪಯ್ಯನವರು ಸ್ಟೈಲಾದ ಶರ್ಟ್ ಧರಿಸಿ ಜೇಬಿನಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಒಂದು ನೂರು ರೂಪಾಯಿನ ನೋಟ್ ಇಟ್ಟುಕೊಂಡು ಓಡಾಡುತ್ತಿದ್ದುದು ಈಗಲೂ ನನ್ನ ಕಣ್ಣಿಗೆ ಬಿದ್ದಂತಾಗುತ್ತಿದೆ. ಹಾಗೆಯೇ ಎಲ್ಲಪ್ಪಯ್ಯನವರ ಮದುವೆ  ಹೊಸನಗರದ ಬೈಸೆಮನೆ ಮಾಧವ ರಾವ್ ಅವರ ಮಗಳಾದ ಲಕ್ಷ್ಮಿಯೊಡನೆ ನಿಶ್ಚಯವಾದಾಗ ನಮ್ಮೂರಿನಿಂದ ದಿಬ್ಬಣ ಎತ್ತಿನ ಗಾಡಿಯಲ್ಲಿ ಬೆಳವಿನಕೊಡಿಗೆಯಿಂದ ಹೊರಟಿದ್ದೂ ನೆನಪಿಗೆ ಬರುತ್ತಿದೆ

ಇಂದು ಎಲ್ಲಪ್ಪಯ್ಯನವರು ನಮ್ಮೊಂದಿಗಿಲ್ಲ.ಅವರ ವ್ಯಕ್ತಿತ್ವ ನಮ್ಮಿಂದ ಕಣ್ಮರೆಯಾಗಿ ಹೋಗಿದೆ. ಹಾಗೆಯೇ ಎಲ್ಲಪ್ಪಯ್ಯ ಎಂಬ  ಹೆಸರೂ ಕೂಡ ಕೊನೆಗೊಂಡಂತೆ ಅನಿಸುತ್ತಿದೆ. ಮೊಮ್ಮಗನಿಗೆ ಅಜ್ಜನ ಹೆಸರಿನ್ನಿಡುವ ಸಂಪ್ರದಾಯ ಈಗ ಇಲ್ಲ. ಹಾಗೆಯೇ ಇಂದಿನ ಹೊಸ ಯುಗದಲ್ಲಿ ಎಲ್ಲಪ್ಪಯ್ಯ ಎಂಬ ಹೆಸರು ಯಾವ ತಂದೆ ತಾಯಿಗಳಿಗೂ ಇಷ್ಟವಾಗುವುದು ಎಂದೂ ಅನಿಸುವುದಿಲ್ಲಬೆಳವಿನಕೊಡಿಗೆ ಮನೆಯ ತಲೆತಲಾಂತರ ಸಂಪ್ರದಾಯ ಇಲ್ಲಿಗೇ ಕೊನೆಗೊಂಡಿರಬಹುದೇ? ಇದನ್ನು ಕಾಲವೇ ನಿರ್ಧರಿಸಬಲ್ಲುದುದೇವರು ಎಲ್ಲಪ್ಪಯ್ಯನವರ ಆತ್ಮಕ್ಕೆ ಶಾಂತಿಯನ್ನೀಯಲಿ.
----ಮುಂದುವರಿಯುವುದು ---