Tuesday, July 23, 2024

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೫

 


ಅಧ್ಯಾಯ

ನಾನು ನಮ್ಮ ಪಠ್ಯಪುಸ್ತಕಗಳ ಬಗ್ಗೆ ಬರೆಯುವಾಗ ಸನ್ಮಾನ್ಯ ಬಿ ಎಂ ಶ್ರೀಕಂಠಯ್ಯನವರು (ಬಿಎಂಶ್ರೀ) ಬರೆದ ಎರಡು ಅತ್ಯಂತ ಶ್ರೇಷ್ಠ ಪದ್ಯಗಳ ಬಗ್ಗೆ ಬರೆಯಲೇಬೇಕು. ಅವುಗಳೆಂದರೆ ಕಾರಿ ಹೆಗ್ಗಡೆಯ ಮಗಳು ಮತ್ತು ಕರುಣಾಳು ಬಾ ಬೆಳಕೆ. ಮೊದಲನೆಯದು ಥಾಮಸ್ ಕ್ಯಾಮ್ಪ್ ಬೆಲ್ ಅವರ  ಲಾರ್ಡ್ ಉಲಿನ್ಸ್ ಡಾಟರ್ ಮತ್ತು ಎರಡನೆಯದು ನ್ಯೂಮನ್ ಅವರ  ಲೀಡ್ ಕೈಂಡ್ಲಿ ಲೈಟ್ ಇಂಗ್ಲಿಷ್ ಕವನಗಳ ಕನ್ನಡ ರೂಪಾಂತರಗಳು. ಮೊದಲ ಪದ್ಯ ನಮ್ಮ ಆರನೇ ತರಗತಿಯ ಪುಸ್ತಕದಲ್ಲಿದ್ದರೆ, ಎರಡನೆಯದು ನಮ್ಮ ಅಕ್ಕಂದಿರ ನಾಲ್ಕನೇ ತರಗತಿಯ ಪುಸ್ತಕದಲ್ಲಿತ್ತು. ಆಗಿನ್ನೂ ಚಿಕ್ಕವರಾಗಿದ್ದ ನಾವು,ನಮಗೆ ತುಂಬಾ ಇಷ್ಟಕರವಾಗಿದ್ದ ಅವುಗಳನ್ನು ಬಾಯಿಪಾಠ ಮಾಡಿ ನಮ್ಮ ತಮ್ಮಂದಿರು ಮತ್ತು  ಅಕ್ಕಂದಿರ ಮಕ್ಕಳನ್ನು ತೊಟ್ಟಿಲಲ್ಲಿ ತೂಗುವಾಗ ಜೋಗುಳವಾಗಿ ಹಾಡುತ್ತಿದ್ದೆವು.   ಹಾಗೆಯೇ ಈ ಎರಡು ಪದ್ಯಗಳ ಪ್ರತಿ ಸಾಲುಗಳೂ ಇಂದಿಗೂ ನಮ್ಮ ನೆನಪಿನಲ್ಲಿವೆ.

ಸನ್ಮಾನ್ಯ ಬಿಎಂಶ್ರೀ (೧೮೮೪-೧೯೪೬) ಅವರನ್ನು, ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳನ್ನು ಪರಿಗಣಿಸಿ, “ಕನ್ನಡದ ಕಣ್ವ” ಎಂದು ಕರೆಯಲಾಗುತ್ತಿತ್ತು. ಅವರ ಸಾಹಿತ್ಯ ಪ್ರೌಢಿಮೆ ಮತ್ತು ಕವಿತ್ವದ ಸಾಮರ್ಥ್ಯ ಯಾವ ಮಟ್ಟದ್ದಾಗಿತ್ತೆಂದರೆ, ಎರಡು ಕವನಗಳು ಅವುಗಳ ಇಂಗ್ಲಿಷ್ ಮೂಲಕ್ಕಿಂತಲೂ ತುಂಬಾ ಉತ್ತಮವಾಗಿವೆಯೆಂದು ಎಲ್ಲರ ಅಭಿಪ್ರಾಯವಾಗಿತ್ತು. ನಾನು ಎರಡು ಮೂಲ ಇಂಗ್ಲಿಷ್ ಕವನಗಳನ್ನು ಮತ್ತು ಬಿಎಂಶ್ರೀ ಅವರು ಮಾಡಿದ ಅವುಗಳ ರೂಪಾಂತರಗಳನ್ನು, (ಓದುಗರು ಶ್ರೀಯವರ ಸಾಹಿತ್ಯ ಹಿರಿಮೆಯನ್ನು ಅರಿಯುವಂತಾಗಲು) ಕೆಳಗೆ  ಕೊಟ್ಟಿರುತ್ತೇನೆ. ಶ್ರೀ ಅವರ ಇಂಗ್ಲಿಷ್ ಗೀತೆಗಳು ಎಂಬ ಕವನ ಸಂಕಲನ ಅಂದಿನ ಎಷ್ಟೋ ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡಿದುದು ಮಾತ್ರವಲ್ಲ, ಒಂದು ಹೊಸ ಬಗೆಯ ಭಾವನಾತ್ಮಕ ಶೈಲಿಯ ಕವನಗಳ ರಚನೆಗೆ ಒಂದು ಭದ್ರ ಬುನಾದಿಯನ್ನು ಹಾಕಿತೆಂದು ಹೇಳಲೇಬೇಕು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಬಿಎಂಶ್ರೀ  ಅವರು, ಕುವೆಂಪು ಮತ್ತು ಜಿ ಪಿ ರಾಜರತ್ನಂ ಅವರಿಗೆ ಕನ್ನಡದಲ್ಲಿ ಬರವಣಿಗೆ ಮಾಡಲು ಪ್ರೋತ್ಸಾಹ ನೀಡಿದ್ದನ್ನು ಮರೆಯುವಂತಿಲ್ಲ. ಕರುಣಾಳು ಬಾ ಬೆಳಕೆ ಎಂಬ ಗೀತೆ ಇಂದಿಗೂ ಎಷ್ಟು ಪ್ರಸಿದ್ಧಿ ಹೊಂದಿದೆಯೆಂದರೆ, ಯಾವುದೇ ಕನ್ನಡ ಭಾವಗೀತೆ ಕಾರ್ಯಕ್ರಮ ಕವನವನ್ನು ಹಾಡಿಸದೇ ಪೂರ್ಣಗೊಳ್ಳಲಾಗದು ಎಂದು ಹೇಳಲೇಬೇಕು.

ಕಾರಿ ಹೆಗ್ಗಡೆಯ ಮಗಳು ನಮ್ಮ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದರೆ, ನಮಗೆ ಇಂದಿಗೂ ಕೂಡ ಕಾರಿ ಹೆಗ್ಗಡೆಯ ಮಗಳು ತನ್ನ ಪ್ರೀತಿಯ ತಂದೆ ಮತ್ತು ಪ್ರಿಯಕರ ಇವರ ನಡುವೆ ಯಾರನ್ನು ಅಗಲಬೇಕು ಮತ್ತು ಯಾರನ್ನು ಆರಿಸಿಕೊಳ್ಳಬೇಕು ಎಂಬ ಸಂದಿಗ್ದತೆಯನ್ನು  ಎದುರಿಸಬೇಕಾದ ಸನ್ನಿವೇಶ ಕಣ್ಣಮುಂದೆ ಕಟ್ಟಿದಂತಿದೆ. ನಮ್ಮ ಪುಸ್ತಕದಲ್ಲಿದ್ದ ಚಿತ್ರವೊಂದರಲ್ಲಿ ಕಾರಿ ಹೆಗ್ಗಡೆಯ ಮಗಳು ಕಡಲಿನ ನಡುವೆ  ಹಾಯುತ್ತಿದ್ದ ದೋಣಿಯೊಂದರಲ್ಲಿ ನಿಂತು, ತನ್ನ ಒಂದು ಕೈಯಿಂದ  ಪ್ರಿಯಕರನ ಸೊಂಟವನ್ನು ಬಳಸಿ, ಇನ್ನೊಂದು ಕೈ ಚಾಚಿ ತನ್ನ ತಂದೆಗೆ ನಿರ್ವಾಹವಿಲ್ಲದೇ  ವಿದಾಯ ಹೇಳುತ್ತಿರುವ ದೃಶ್ಯ ಇಂದಿಗೂ ನಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಹಾಗೆಯೇ ಕಡಲಿನ ಪ್ರವಾಹದ ಅಲೆಗಳು ದೋಣಿಯನ್ನು ತಂದೆಯಿಂದ ದೂರ ಒಯ್ಯುತ್ತಿರುವ ಸನ್ನಿವೇಶ ತುಂಬಾ ಪರಿಣಾಮಕಾರಿಯಾಗಿತ್ತು.

ಕಾರಿ ಹೆಗ್ಗಡೆಯ ಮಗಳು

 

ಪಡುವ ದಿಬ್ಬದ ಗೌಡನೊಬ್ಬನು

ಬಿಡದೆ ತೊರೆಯನ ಕೂಗಿಕೊಂಡನು

ತಡೆಯದೀಗಲೆ ಗಡುವ ಹಾಯಿಸು

ಕೊಡುವೆ ಕೇಳಿದ ಹೊನ್ನನು

 

ಆರು ನೀವೀ ಕರುಗಿ ಮೊರೆಯುವ

ನೀರ ಕಾಯಲ ಹಾಯುವರು

ಪಡುವ ದಿಬ್ಬದ ಗೌಡ ನಾನೀ

ಮಡದಿ ಕಾರಿಯ ಕುವರಿಯು

 

ಓಡಿ ಬಂದೆವು ಮೂರು ದಿವಸ

ಜಾಡ ಹಿಡಿದು ಹಿಂದೆ ಬಂದರು

ನಮ್ಮನೀ ಕಣಿವೆಯಲಿ ಕಂಡರೆ

ಚಿಮ್ಮಿ ಹರಿವುದು ನೆತ್ತರು

 

ಹತ್ತಿ ಕುದುರೆಯ ತರುಬಿ ಬರುವರು

ಮುತ್ತಿ ಕೊಂಡರೆ ನನ್ನ ಕೊಲುವರು

ಘೋರ ದುಃಖದ ನಾರಿಯನು ಬಳಿ

ಕಾರು ನಗಿಸಲು ಬಲ್ಲರು?

 

ಆಗ ಅಂಜದೆ ತೊರೆಯನೆಂದನು

ಬೇಗ ಜೀಯಾ ಓಡ ತರುವೆನು

ಸುಡಲಿ ಹೊನ್ನು ಬೆಡಗಿ ನಿನ್ನೀ

ಮಡದಿಗೋಸುಗ ಬರುವೆನು

 

ಆದುದಾಗಲಿ ಮುದ್ದಿನರಗಿಣಿ

ಗಾದ ಗಂಡವ ಕಾದು ಕೊಡುವೆನು

ಕಡಲು ನೊರೆಗಡೆದೆದ್ದು ಕುದಿಯಲಿ

ಗಡುವ ಹಾಯಿಸಿ ಬಿಡುವೆನು

 

ತೂರು ಗಾಳಿಗೆ ಕಡಲು ಕುದಿಯಿತು

ನೀರ ದೆವ್ವಗಳರಚಿಕೊಂಡವು

ಹೆಪ್ಪು ಮೋಡದ ಹುಬ್ಬು ಗಂಟಿಗೆ

ಕಪ್ಪಗಾದವು ಮುಖಗಳು

 

ಕೆರಳಿ ಕೆರಳಿ ಗಾಳಿ ಚೆಚ್ಚಿತು

ಇರುಳು ಕತ್ತಲೆ ಕವಿದು ಮುಚ್ಚಿತು

ಕಣಿವೆ ಇಳಿವರ ಕುದುರೆ ಕತ್ತಿಯ

ಖಣಿಖಣಿ ಧ್ವನಿ ಕೇಳಿತು

 

ಏಳು ಬೇಗೇಳಣ್ಣ ಎಂದಳು

ಹೂಳಿಕೊಳಲಿ ನನ್ನ ಕಡಲು

ಮುಳಿದ ಮುಗಿಲ ತಡೆಯಬಲ್ಲೆ

ಮುಳಿದ ತಂದೆಯ ತಡೆಯೆನು

 

ಇತ್ತ ಕರೆಮೊರೆ ಹಿಂದಕಾಯಿತು

ಅತ್ತ ತೆರೆಮೊರೆ ಸುತ್ತಿಕೊಂಡಿತು

ಆಳ ಕೈಯಲಿ ತಾಳಬಹುದೇ

ಏಳು ಬೀಳಿನ ಕಡಲದು

 

ಅಲೆಗಳಬ್ಬರದಲ್ಲಿ ಮೀಟಿ

ಮುಳಗುತಿಹರು ಏಳುತಿಹರು

ಕರೆಗೆ ಬಂದ ಕಾರಿ ಹೆಗ್ಗಡೆ

ಕರಗಿ ಮುಳಿಸು ಅತ್ತನು

 

ತೊಂಡು ತೆರೆಗಳ ಮುಸುಕಿನಲ್ಲಿ

ಕಂಡು ಮಗಳ ಕರಗಿ ಹೋದ

ಒಂದು ಕೈ ನೀಡಿದಳು ನೆರವಿಗೆ

ಒಂದು ತಬ್ಬಿತು ನಲ್ಲನ

 

ಮರಳು ಮರಳು ಮಗಳೆ ಎಂದ

ಮೊರೆಯುವ ಕಾಯಲ ಗಂಟಲಿಂದ

ಮರೆತೆ ಒಪ್ಪಿದೆ ನಿನ್ನ ನಲ್ಲನ

ಮರಳು ಕಂದಾ ಎಂದನು

 

ಮರಳಬಹುದೇ? ಹೋಗಬಹುದೇ?

ಕರೆಯ ತೆರೆಯಪ್ಪಳಿಸಿ ಹೊಯ್ದು

ಹೊರಳಿ ಹೋದವು ಮಗಳ ಮೇಲೆ

ಕೊರಗಿನಲಿ ಅವನುಳಿದನು

                 ------ಬಿ. ಎಂ. Shree

ಕರುಣಾಳು ಬಾ ಬೆಳಕೆ ಒಂದು ಭಾವಗೀತೆಯಾಗಿ ಹಾಡಲ್ಪಡುತ್ತಿದ್ದರೂ, ಅದು ನಿಜದಲ್ಲಿ ಒಂದು ಪ್ರಾರ್ಥನಾ ಗೀತೆಯಾಗಿದೆ. ಅಲ್ಲದೇ ಅದು ಯಾವುದೇ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಮತ್ತು ಕೇವಲ ಬೆಳಕನ್ನು ಧ್ಯಾನಿಸಿ ಬರೆದ ಗೀತೆಯಾಗಿದೆ.

ಪ್ರಾರ್ಥನೆ

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ,

ಕೈ ಹಿಡಿದು ನಡೆಸೆನ್ನನು.

ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,

ಕೈ ಹಿಡಿದು ನಡೆಸೆನ್ನನು.

ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು

ಕೇಳೆನೊಡನೆಯೆ - ಸಾಕು ನನಗೊಂದು ಹೆಜ್ಜೆ

 

ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,

ಕೈ ಹಿಡಿದು ನಡೆಸು ಎನುತ.

ನನ್ನ ದಾರಿಯ ನಾನೆ ನೋಡಿ ಹಿಡಿದೆನು ಇನ್ನು

ಕೈ ಹಿಡಿದು ನಡೆಸು ನೀನು

ಮಿರುಗು ಬಣ್ಣಕೆ ಬೆರೆತು, ಭಯ ಮರೆತು ಕೊಬ್ಬಿದೆನು;

ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ

 

ಇಷ್ಟು ದಿನ ಸಲಹಿರುವೆ ಮೂರ್ಖನನು; ಮುಂದೆಯೂ

ಕೈ ಹಿಡಿದು ನಡೆಸದಿಹೆಯಾ?

ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾಯ್ಡು

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು

ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ?

---ಬಿ. ಎಂ. Shree

 

ಗೀತೆ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ, ಏಕಾಂತತೆಯಲ್ಲಿ ಅದನ್ನು ಕೇಳುತ್ತಿದ್ದರೆ ನಮ್ಮನ್ನು ಅದು ಬೇರೊಂದು ಲೋಕಕ್ಕೇ ಒಯ್ದಂತೆ ಭಾಸವಾಗುತ್ತದೆ. ಈ ಗೀತೆ ತುಂಬಾ ಗಾಯಕಿಯರಿಂದ  ಸುಶ್ರಾವ್ಯವಾಗಿ ಹಾಡಲ್ಪಟ್ಟಿದೆ. ಅದರಲ್ಲಿ ಮುಖ್ಯವಾಗಿ ನೆನಪಿಗೆ ಬರುವ ಪ್ರಸಿದ್ಧ ಹೆಸರುಗಳೆಂದರೆ ರತ್ನಮಾಲ ಪ್ರಕಾಶ್, ಎಂ ಡಿ ಪಲ್ಲವಿ, ಬಿ ಆರ್ ಛಾಯ ಮತ್ತು ಜಯಂತಿ ನಾಡಿಗ್.  ಇವರ ಹಾಡುಗಳನ್ನು ಯೂ ಟ್ಯೂಬಿನಲ್ಲಿ ಈ ಕೆಳಕಂಡ ಲಿಂಕ್ ಗಳ ಮೂಲಕ ಕೇಳಬಹುದು:

1.   https://www.youtube.com/watch?v=R7ILuJ6inaI

2.  https://sonichits.com/video/MD_Pallavi/Karunalu_ba_belake

3.  https://gaana.com/song/karunaalu-baa-belake-3

4. https://www.youtube.com/watch?v=-KmsiqfzN7M

 

ವಿಚಿತ್ರವೆಂದರೆ, ಈ ಎಲ್ಲಾ ಗಾಯಕಿಯರು ಗೀತೆಯ ಕೆಳಕಂಡ ಸಾಲುಗಳನ್ನು ನಿರ್ಲಕ್ಷಿಸಿದ್ದಾರೆ (ಹಾಡಿಲ್ಲ):

ನನ್ನ ದಾರಿಯ ನಾನೆ ನೋಡಿ ಹಿಡಿದೆನು ಇನ್ನು

ಕೈ ಹಿಡಿದು ನಡೆಸು ನೀನು

ಮಿರುಗು ಬಣ್ಣಕೆ ಬೆರೆತು, ಭಯ ಮರೆತು ಕೊಬ್ಬಿದೆನು;

ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ

ಮಾನ್ಯ  ಬಿಎಂಶ್ರೀ ಅವರ ಗೀತೆಯ ಮುಖ್ಯ ಸಾಲುಗಳನ್ನು ಗಾಯಕಿಯರು ನಿರ್ಲಕ್ಷಿಸಿರುವುದಕ್ಕೆ ಕಾರಣಗಳು ತಿಳಿಯುವುದಿಲ್ಲ. ಮಾತ್ರವಲ್ಲ. ಈ ಎಲ್ಲಾ ಗಾಯಕಿಯರು  ಬಲು ದೂರ ನೋಟವನು ಕೇಳನೊಡನೆಯೆ - ಸಾಕು ನನಗೊಂದು ಹೆಜ್ಜೆ ಅಥವಾ ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ ಎಂದು ಕವಿತೆಯ ಸಾಲೊಂದನ್ನು ತಪ್ಪಾಗಿ ಹೇಳಿರುವುದಕ್ಕೂ ಯಾವುದೇ ಕಾರಣಗಳು ಕಾಣುವುದಿಲ್ಲ. ಅದನ್ನು ಬಲು ದೂರ ನೋಟವನು ಕೇಳೆನೊಡನೆಯೆ - ಸಾಕು ನನಗೊಂದು ಹೆಜ್ಜೆ ಎಂದು ಹಾಡಬೇಕಿತ್ತು. ಗೀತೆಯ ಇಂಗ್ಲಿಷ್ ಮೂಲದಲ್ಲಿರುವ “I donot ask to see the distant scene – One step is enough for me” ಎಂಬ ಸಾಲುಗಳು ಈ ಅರ್ಥವನ್ನು ಬಲು ಸ್ಪಷ್ಟವಾಗಿ ನೀಡುತ್ತವೆ.

ನಾನು ಈ ಅಧ್ಯಾಯವನ್ನು ಮೇಲಿನ ಎರಡು ಮೇರುಕೃತಿಗಳನ್ನು ರಚಿಸಿದ ಸನ್ಮಾನ್ಯ ಕವಿವರ್ಯ ಬಿ.ಎಂ.ಶ್ರೀಕಂಠಯ್ಯ (ಬಿಎಂಶ್ರೀ ) ಅವರ ಮುಡಿಗಳಿಗೆ ಅರ್ಪಿಸುತ್ತಿದ್ದೇನೆ.

----------------------ಮುಂದುವರಿಯುವುದು----------------

No comments: