Thursday, May 17, 2018

ಒಂದು ಊರಿನ ಕಥೆ - 14 (ಹೊಕ್ಕಳಿಕೆ)


 (ಹೊಕ್ಕಳಿಕೆ)
ಪೇಪರ್ ಬಾಯ್ ಮತ್ತು ಒಂದಾಣೆ ಕಮಿಷನ್!
ದಿನಗಳಲ್ಲಿ ಬಸವಾನಿಯಲ್ಲಿ ಚಂದ್ರಶೇಖರ ಉಪಾಧ್ಯಾಯರ ಅಂಗಡಿಯ ಒಂದು ಮೂಲೆಯಲ್ಲಿ ಅಂಚೆ ಕಚೇರಿ ಇತ್ತು. ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುಂಡಲೀಕ  ಎಂಬೊಬ್ಬರು ನ್ಯೂಸ್ ಪೇಪರ್ ಏಜನ್ಸಿ ಮಾಡುತ್ತಿದ್ದರು. ಅವರು ನನ್ನ ಮೂಲಕ  ಹೊಕ್ಕಳಿಕೆಗೆ ಮೂರು ಪೇಪರ್ ತಲುಪಿಸುವ ವ್ಯವಸ್ಥೆ ಮಾಡಿದರು. ನಾನು ಪ್ರತಿ ದಿನ ಸಂಜೆ ಅವರಿಂದ ಪೇಪರ್ ಪಡೆದು ದಾರಿಯಲ್ಲಿ ಅದನ್ನು ಓದುತ್ತಾ ಹೊಕ್ಕಳಿಕೆ ತಲುಪುತ್ತಿದ್ದೆ. ಒಂದು ಪೇಪರ್ ಕೃಷ್ಣ ಭಾವನವರ ಮನೆಗೆ ಕೊಡುತ್ತಿದ್ದುದು ನೆನಪಿದೆ. ಪುಂಡಲೀಕ ಆಗಾಗ ನನ್ನ ಕೈಮೇಲೆ ಅಂಗಡಿಯಲ್ಲಿದ್ದ ಬಿಸ್ಕತ್ ಅಥವಾ ಪೆಪ್ಪರಮಿಂಟ್ ಇಡುತ್ತಿದ್ದರು. ಇದಲ್ಲದೆ ಕೃಷ್ಣ ಭಾವ ತಿಂಗಳಿಗೆ ಒಂದಾಣೆ ಕಮಿಷನ್ ನನಗೆ ಒತ್ತಾಯ ಪೂರ್ವಕವಾಗಿ  ಗೋಪಿಯ ಮೂಲಕ ತಲುಪಿಸುತ್ತಿದ್ದರು!

ನಾನು ದಾರಿಯಲ್ಲಿ ಓದುತ್ತಾ  ಬರುತ್ತಿದ್ದ ಪೇಪರ್ ನಲ್ಲಿ ಬಂದ  ಎರಡು ಮುಖ್ಯ ಸಮಾಚಾರಗಳು ನನಗೆ ಇಂದೂ ನೆನಪಿನಲ್ಲಿವೆ. ಮೊದಲನೆಯದು ಆಗ ತುಂಬಾ ಪ್ರಸಿದ್ಧರಾಗಿದ್ದ ಯುನೈಟೆಡ್ ನೇಷನ್ಸ್ ಸೆಕ್ರೆಟರಿ ಜನರಲ್ ಡಾಗ್ ಹ್ಯಾಮ್ಮರ್ ಶೀಲ್ಡ್ ಅವರು ವಿಮಾನ ದುರಂತದಲ್ಲಿ ಮರಣ ಹೊಂದಿದ್ದು. ಇನ್ನೊಂದು ಭಾರತೀಯ ಸೇನೆ ೧೯೬೧ನೇ ಇಸವಿ ಡಿಸೆಂಬರ್ ನಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಗೋವಾ ಪ್ರವೇಶ ಮಾಡಿ ಅದನ್ನು ಅವರಿಂದ ವಶಕ್ಕೆ ಪಡೆದುದು. ಮತ್ತು ಪೋರ್ಚುಗೀಸರು ಗೋವಾದಿಂದ ಪೋರ್ಚುಗಲ್ಲಿಗೆ ಓಡಿಹೋದದ್ದು! ಮೊದಲನೆಯದು ದುಃಖ ಸಮಾಚಾರವಾದರೆ ಎರಡನೆಯದು ಅಷ್ಟೇ ಸಂತಸದ ಸಮಾಚಾರವಾಗಿತ್ತು.
ಪೇಪರ್ ಬಾಯ್ ಮುಷ್ಕರ!
ನಾನು ಹೊಕ್ಕಳಿಕೆ ಹುಡುಗರ ಲೀಡರ್ ಆಗಿ ಪ್ರತಿ ಊಟದ ಮನೆಗಳಲ್ಲೂ ಊಟವಾದ ಮೇಲೆ ಕಬಡ್ಡಿ ಅಥವಾ ಕುಂಟಾಟದಲ್ಲಿ ತೊಡಗುತ್ತಿದ್ದುದು  ಕೆಲವು ಹಿರಿಯರಿಗೆ ಇಷ್ಟವಾಗುತ್ತಿರಲಿಲ್ಲ. ಅವರಲ್ಲಿ  ಕೃಷ್ಣಭಾವನೂ ಒಬ್ಬರಂತೆ. ಅಕ್ಕನಿಗೆ ಅದು ಗೊತ್ತಾಯಿತು. ಅವಳಿಗೆ ಅವಳ ತಮ್ಮನ ಬಗ್ಗೆ ಬೇರೆಯವರು ಟೀಕೆ ಮಾಡುವುದು ಏನೂ ಇಷ್ಟವಾಗುತ್ತಿರಲಿಲ್ಲ.

ಅವಳು ನನಗೆ ನನ್ನ ಆಟಗಳ ಬಗ್ಗೆ ಕಂಪ್ಲೇಂಟ್ ಬರುತ್ತಿದೆಯೆಂದು ಹೇಳಿದಳು. ಹಾಗೂ ನಾನು ಅದನ್ನು ನಿಲ್ಲಿಸಬೇಕೆಂದು ಆಜ್ಞೆ ಮಾಡಿದಳು. ಕಂಪ್ಲೇಂಟ್ ಮಾಡಿದವರಲ್ಲಿ ಕೃಷ್ಣ ಭಾವನ ಹೆಸರೂ ಇರುವುದನ್ನು ಕೇಳಿ ನನ್ನ ಮೈ ಉರಿಯಿತು. ನಾನು ಕೂಡಲೇ ಒಂದು ತೀರ್ಮಾನ ಮಾಡಿದೆ.  ಮಾರನೇ ದಿನವೇ ನಾನು ಪುಂಡಲೀಕ ಅವರಿಗೆ ನಾನು ಇನ್ನು  ಮುಂದೆ ಪೇಪರ್ ಕೊಂಡೊಯ್ಯುವದಿಲ್ಲವೆಂದು ಹೇಳಿ ಬಿಟ್ಟೆ. ಅವರು ಗಾಭರಿಯಿಂದ ನನ್ನ ಕೈಮೇಲೆ ಒಂದಷ್ಟು ಬಿಸ್ಕತ್ ಪ್ಯಾಕೆಟ್ ಮತ್ತು ಪೆಪ್ಪರಮಿಂಟ್  ಇಡಲು ನೋಡಿದರು. ನಾನು ಅವನ್ನು ಹಿಂದಿರುಗಿಸಿ ಬಿಟ್ಟೆ. ನಾನು ಆ ಸಂಜೆ ಪೇಪರ್ ಇಲ್ಲದೇ ಮನೆಗೆ ಬಂದು  ಅಕ್ಕನಿಗೆ ನನ್ನ ತೀರ್ಮಾನ ಹೇಳಿಬಿಟ್ಟೆ. ಅವಳಿಗೆ ಫಜೀತಿಯಾಯಿತು. ನನ್ನಿಂದ ಪೇಪರ್ ತೆಗೆದುಕೊಳ್ಳಲು ಬಂದ ಗೋಪಿಗೆ ನನ್ನ ತೀರ್ಮಾನ ಕೇಳಿ ಇನ್ನೂ ಗಾಬರಿಯಾಯಿತು. ಕೃಷ್ಣಭಾವನಿಗೆ ವಿಷಯ ತಿಳಿದಮೇಲೆ ನನ್ನನ್ನು ಕರೆದು ಗೋಪಿಯ ಮುಂದೆ ರಾಜಿ ಪಂಚಾಯಿತಿ ನಡೆಸಿದರು. ಮತ್ತೂ ನನ್ನ ಪೇಪರ್ ಬಾಯ್ ಕೆಲಸ ಯಥಾಪ್ರಕಾರ  ಮುಂದುವರೆಯಿತು. 
ಹೊಕ್ಕಳಿಕೆಯ ಹೆಸರು ಪೇಪರ್ ನಲ್ಲಿ  ಬಂತು!
ನಾರ್ವೆಯ ನಾಗೇಶ ಭಟ್ಟರು ಹೊಕ್ಕಳಿಕೆಗೆ ಮೇಷ್ಟರಾಗಿ ಬಂದ ಮೇಲೆ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಾರಂಭಿಸಿದವು.  ವರ್ಷ ಆಗಸ್ಟ್ ೧೫ನೇ ತಾರೀಕಿನಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಸಣ್ಣ ಗಣೇಶಯ್ಯನವರು ಅದರ ಬಗ್ಗೆ ವರದಿಯೊಂದನ್ನು ಬರೆದು ನನಗೆ ಕೊಟ್ಟು ಅದನ್ನು ಪುಂಡಲೀಕ ಅವರಿಗೆ ಕೊಟ್ಟು ಪ್ರಜಾವಾಣಿಯಲ್ಲಿ ಪ್ರಕಟಿಸುವಂತೆ ಹೇಳಬೇಕೆಂದು ತಿಳಿಸಿದರು. ನಾನು ಹಾಗೆಯೇ ಮಾಡಿದೆ. ಒಂದು ವಾರದ ಒಳಗೆ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಅದನ್ನು ನೋಡಿ ಊರಿನವರಿಗೆ ಆದ ಖುಷಿ ಅಷ್ಟಿಷ್ಟಲ್ಲ.
ಮೂರನೇ ಮಹಾಚುನಾವಣೆ ೧೯೬೨
೧೯೬೨ನೇ ಇಸವಿಯಲ್ಲಿ ಭಾರತದಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಮೂರನೇ ಮಹಾಚುನಾವಣೆ ನಡೆಯಿತು. ನನಗೆ ಅಲ್ಲಿಯವರೆಗೆ ಚುನಾವಣೆಗಳ ಬಗ್ಗೆ ಯಾವುದೇ ಅರಿವಿರಲಿಲ್ಲ. ಮೈಸೂರಿನ ವಿಧಾನ ಸಭೆಗೆ ಶೃಂಗೇರಿ ಕ್ಷೇತ್ರದಿಂದ ಕಡಿದಾಳ್ ಮಂಜಪ್ಪನವರು ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿ ಸ್ಪರ್ಧಿಯಾಗಿದ್ದರು. ೧೯೫೭ನೇ ಇಸವಿಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಂತೆ. ಮತ್ತು ಸ್ವಲ್ಪ ಕಾಲ ಮುಖ್ಯಮಂತ್ರಿಯೂ ಆಗಿದ್ದರಂತೆ. ಆದರೆ ಅವರು ಭೂಸುಧಾರಣೆ ತರಬೇಕೆಂದು  ಮಾಡಿದ ಪ್ರಯತ್ನ ಅವರನ್ನು ಜಮೀನನ್ನು ಗೇಣಿಗೆ ಕೊಟ್ಟ ಜಮೀನ್ದಾರರ ಶತ್ರುವನ್ನಾಗಿ ಮಾಡಿತ್ತು.

ಹೊಕ್ಕಳಿಕೆಯಲ್ಲಿ ನಮ್ಮೂರಿನಂತೆ ಯಾರೂ ಗೇಣೀದಾರರಿರಲಿಲ್ಲ. ಹಾಗೆಯೇ ದೊಡ್ಡ ಜಮೀನ್ದಾರರೂ ಇರಲಿಲ್ಲ. ಎಲ್ಲರೂ ಸಣ್ಣ ಹಿಡುವಳಿದಾರರೇ ಆಗಿದ್ದರು. ಅವರಲ್ಲಿ ಕೆಲವರು ಗದ್ದೆಯನ್ನು ಗೇಣಿಗೆ ಕೊಟ್ಟಿದ್ದರು. ಆದ್ದರಿಂದ ಎಲ್ಲರೂ ಭೂಸುಧಾರಣೆ  ಕಾನೂನು ತರಬೇಕಿಂದಿದ್ದ ಮಂಜಪ್ಪನವರ ವಿರೋಧಿಗಳೇ ಆಗಿದ್ದರು. ಮೇಷ್ಟ್ರು ನಾಗೇಶ ಭಟ್ಟರೂ ಮಂಜಪ್ಪನವರ ಕಡು ವಿರೋಧಿಯಾಗಿ ಮಾತನಾಡುತ್ತಿದ್ದುದು ನೆನಪಿಗೆ ಬರುತ್ತಿದೆ. ಮಂಜಪ್ಪನವರ  ವಿರುದ್ಧ ಸ್ಪರ್ದಿಸಲು ನರಸಿಂಹರಾಜಪುರದ ಏನ್ ಪಿ ಗೋವಿಂದೇ ಗೌಡ ಎಂಬುವರನ್ನು ನಿಲ್ಲಿಸಲಾಯಿತು. ಬಸವಾನಿ ಮತ್ತು ಗಡಿಕಲ್ಲಿನ ಸುತ್ತಮುತ್ತದ ಹಳ್ಳಿಗಳಲ್ಲಿ ಒಂದೇ ಮನೆಯಲ್ಲಿ ಅಣ್ಣ ಮಂಜಪ್ಪನವರ ಕಡೆ ಇದ್ದರೆ ತಮ್ಮ ಗೋವಿಂದೇ ಗೌಡರ ಕಡೆ ಪ್ರಚಾರ ಮಾಡುತ್ತಿದ್ದುದು ಕಾಣಿಸುತ್ತಿತ್ತು.

ಹೊಳೆಕೊಪ್ಪದ ಚಿನ್ನೇಗೌಡ ಎಂಬುವರು ಕಾಂಗ್ರೆಸ್ ಪರವಾಗಿದ್ದರೆ ಅವರ ತಮ್ಮ ಓಬೇ ಗೌಡರು ಗೋವಿಂದೇ ಗೌಡರ ಪರವಾಗಿದ್ದರು. ಚಿನ್ನೇಗೌಡರ ಮಗಳು ಲಲಿತ ಬಸವಾನಿ ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದಳು. ಚುನಾವಣೆಯ ಕಾವು ತುಂಬಾ ಏರಿಹೋಗಿತ್ತು. ನಾನು ಎಲ್ಲವನ್ನೂ ಆಸಕ್ತಿಯಿಂದ ಗಮನಿಸುತ್ತಿದ್ದೆ. ಎಷ್ಟೋ ಮಂದಿ ಕಡಿದಾಳರು ಬಾರಿ ಸೋಲುವುದು ಗ್ಯಾರಂಟಿ ಎಂದು ತಿಳಿದಿದ್ದರು.  ಚುನಾವಣೆಯ ದಿನ ಓಬೇ ಗೌಡರು ಹೊಕ್ಕಳಿಕೆಯವರಿಗೆ ಗಡಿಕಲ್ಲಿಗೆ ಹೋಗಿ ಓಟುಮಾಡಲು ಒಂದು ವ್ಯಾನಿನ ವ್ಯವಸ್ಥೆ ಕೂಡ ಮಾಡಿದ್ದರು. ಆದರೆ ಚುನಾವಣೆಯ ರಿಸಲ್ಟ್ ನೋಡಿದಾಗ ಕಡಿದಾಳರಿಗೆ ೨೫,೦೦೦ ಹತ್ತಿರ ಮತಗಳು  ಬಂದರೆ ಗೋವಿಂದೇ ಗೌಡರಿಗೆ ಕೇವಲ ,೫೦೦ ಮತಗಳು ಬಂದಿದ್ದವು!
ನನ್ನ ಮೊದಲ ಸ್ಕಾಲರ್ಷಿಪ್ ಮತ್ತು ರಾಮಯ್ಯನವರು ನನ್ನ ಪೋಷಕರಾದದ್ದು!
ನಾನು ಬಸವಾನಿ ಶಾಲೆಯಲ್ಲಿ ಯಾವಾಗಲೂ ತರಗತಿಗೆ ಪ್ರಥಮನಾಗಿರುತ್ತಿದ್ದರೂ ನನಗೆ ಅದಕ್ಕಾಗಿ ಯಾವುದೇ ಬಹುಮಾನಗಳು ಬಂದಿರಲಿಲ್ಲ. ಅಲ್ಲದೇ ನಾನು ಎಂದೂ ಐದು ರೊಪಾಯಿಯಷ್ಟು  ದೊಡ್ಡ ನೋಟನ್ನು ಕೈಯಲ್ಲಿ ಹಿಡಿದಿರಲಿಲ್ಲ. ರಜೆಗೆ ಊರಿಗೆ ಹೋಗಿ ಹಿಂತಿರುಗುವಾಗ ಅಮ್ಮ ಒಂದು ಅಥವಾ ಎರಡರ ನೋಟನ್ನು ಕೈಗಿಡುತ್ತಿದ್ದಳು.  ಹೀಗಿರುವಾಗ ಒಂದು ದಿನ ಹೆಡ್ಮಾಸ್ಟರ್ ರಾಮಪ್ಪನವರು ನನ್ನನ್ನು ಆಫೀಸಿಗೆ ಕರೆದು ನನಗೆ ಮೆರಿಟ್ ಸ್ಕಾಲರ್ಷಿಪ್ ಸರ್ಕಾರದಿಂದ ಬಂದಿದೆ ಎಂದು ತಿಳಿಸಿದಾಗ ನನಗಾದ ಆಶ್ಚರ್ಯ ಮತ್ತು ಸಂತೋಷ ಅಷ್ಟಿಟ್ಟಲ್ಲ. ಹೆಡ್ಮಾಸ್ಟರ್ ಅವರು ನಾನು ಮೈನರ್ ಆದ್ದರಿಂದ ಹಣವನ್ನು ಪಡೆಯಲು ತಂದೆಯವರನ್ನು ಕರೆತರುವಂತೆ ಹೇಳಿದರು. ನಾನು ನಮ್ಮ ತಂದೆ ಬೇರೆ ಊರಿನಲ್ಲಿ ಇದ್ದಾರೆ ಎಂದು ತಿಳಿಸಿದೆ. ಆದ್ದರಿಂದ ಯಾರಾದರೂ ಪೋಷಕರನ್ನು ಕರೆತರುವಂತೆ ಹೇಳಿದರು.

ಯಾವುದೋ ಕಾರಣಗಳಿಂದ ನಮ್ಮ ಭಾವನವರಿಗೆ ನನ್ನೊಡನೆ ಬಸವಾನಿಗೆ ಬರಲಾಗಲಿಲ್ಲ. ಒಂದು ದಿನ ಜನಾರ್ಧನಯ್ಯನವರ ತಮ್ಮ ರಾಮಯ್ಯನವರ ಮುಂದೆ ವಿಷಯ  ಹೇಳಿದಾಗ ಅವರು ತಾವು ಬಂದರೆ ಆಗುವುದೇ ಎಂದು ಕೇಳಿದರು. ಬಗ್ಗೆ ಯೋಚಿಸಿದಾಗ ರಾಮಯ್ಯನವರೇ ನಮ್ಮ ಭಾವನೆಂದು ಹೇಳಿದರೆ ಹೆಡ್ಮಾಸ್ಟರ್ ನಂಬುವರೆಂದು ಗೊತ್ತಾಯಿತು. ಮಾರನೇ ದಿನವೇ ರಾಮಯ್ಯನವರು ನಮ್ಮ ಶಾಲೆಗೆ ಬಂದು ನನ್ನ ಭಾವನೆಂದು ಹೇಳಿ ಸಹಿ ಮಾಡಿದರು. ನಂತರ ಹೆಡ್ಮಾಸ್ಟರ್ ಅವರು ಹಣವನ್ನು ಅವರ ಕೈಗೆ ಕೊಟ್ಟರು. ಅವರಿಂದ ಅದು ನನ್ನ ಕೈಗೆ ಬಂದಾಗ  ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅವು ಮೂರು ೧೦ ರೂಪಾಯಿ ನೋಟುಗಳು! ಅಂದರೆ ಬರೋಬ್ಬರಿ ೩೦ ರೂಪಾಯಿಗಳು! ಮೇಷ್ಟ್ರು ನಾಗೇಶ ಭಟ್ಟರ ಒಂದು ತಿಂಗಳ ಸಂಬಳಕ್ಕೆ ಸಮ! ನನಗೆ ಲಾಟರಿ ಎದ್ದಷ್ಟು ಸಂತೋಷವಾಯಿತು. ಆಮೇಲೆ ಹಣವನ್ನು ಏನು ಮಾಡಿದೆನೆಂದು ಈಗ ಏನೂ ನೆನಪಿಗೆ ಬರುತ್ತಿಲ್ಲ.
----ಮುಂದುವರಿಯುವುದು ---

No comments: